ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ನಮಗೆ ನಗೆ ಬಗೆ ತಿಳಿಸಿದ ಚಿಕಾಗೊ ವಸಂತೋತ್ಸವ!

By Staff
|
Google Oneindia Kannada News


ಎರಡನೇ ದಿನ..

ಬಿಸಿ ಬಿಸಿ ಇಡ್ಲಿಯ ಬೆಳಗಿನ ಉಪಹಾರದ ನಂತರ ಪ್ರಾರಂಭವಾಗಿದ್ದು ಸಮ್ಮೇಳನದ ಎರಡನೇ ದಿನದ ಕಾರ್ಯಕ್ರಮಗಳು. ಕನ್ನಡ ಸಾಹಿತ್ಯ ರಂಗದ ವಸಂತೋತ್ಸವದ ಮತ್ತೊಂದು ಉದ್ಧೇಶಗಳಲ್ಲೊಂದಾದ ‘ಸಾಹಿತ್ಯ ಗೋಷ್ಠಿ’ ಕಾರ್ಯಕ್ರಮ ಬರಹಗಾರರ, ಸಾಹಿತ್ಯಾಸಕ್ತರ ಹಾಗೂ ಕಾರ್ಯಕ್ರಮ ವ್ಯವಸ್ಥಾಪಕರ ಮನ ಗೆದ್ದಿತ್ತು.

ಕಾರ್ಯಕ್ರಮ ವ್ಯವಸ್ಥಾಪಕರ ಮನಗೆದ್ದಿದ್ದು ಅಚ್ಚುಕಟ್ಟಾಗಿ ಕೊಟ್ಟಸಮಯದಲ್ಲಿ ಕಾರ್ಯಕ್ರಮವನ್ನು ನಡೆಸಿಕೊಟ್ಟಿದ್ದು. ಕಾರ್ಯಕ್ರಮ ನಿರ್ವಾಹಕರಾಗಿದ್ದವರು ಅಮೆರಿಕ ಕನ್ನಡಿಗರಲ್ಲಿ ಪರಿಚಿತ ಲೇಖಕಿದ್ವಯರು, ಜ್ಯೋತಿ ಮಹದೇವ್‌ ಮತ್ತು ತ್ರಿವೇಣಿ ರಾವ್‌. ಬರಹಗಾರರ ಮೆಚ್ಚುಗೆ ಗಳಿಸಿದ್ದು ಎಲ್ಲ ಬರಹಗಾರರಿಗೆ ತಮ್ಮ ಬರಹವನ್ನು ಮಂಡಿಸಲು ಪೂರ್ಣ ಕಾಲಾವಕಾಶ ದೊರತಿದ್ದು. ಸಾಹಿತ್ಯಾಸಕ್ತರ ಮನ ಗೆದ್ದಿದ್ದು ಬರಹಗಾರರ ನಗೆ ಬರಹಗಳು, ಕವನಗಳು ಮತ್ತು ಹನಿಗವನಗಳು.

ನಂತರ ನಡೆದ ಕಾರ್ಯಕ್ರಮ ಅಮೆರಿಕ ಕನ್ನಡದ ಸಾಹಿತ್ಯದಲ್ಲಿ ಒಂದು ಮೈಲಿಗಲ್ಲೇ ಎನ್ನಬೇಕು. ಅಮೆರಿಕೆಯಲ್ಲೇ ಪ್ರಕಟಿತಗೊಂಡು ಅಮೆರಿಕೆಯಲ್ಲೇ ಮೊದಲ ಬಾರಿಗೆ ಬಿಡುಗಡೆಯಾದ ಪ್ರಥಮ ಕನ್ನಡ ಪುಸ್ತಕ ‘ತುಳಸೀ ವನ’. ದಳದಳವಾಗಿ ದಟ್ಸ್‌ ಕನ್ನಡ.ಕಾಂನಲ್ಲಿ ಪ್ರತಿ ಬುಧವಾರ ಓದುಗರಿಗೆ ಒಪ್ಪಿಸುವ ‘ತುಳಸೀವನ’ ಅಂಕಣಗಳನ್ನು ಒಟ್ಟಾಗಿ ಒದೇ ಪುಸ್ತಕಲ್ಲಿ ತಂದಿರುವವರು ಅದರ ಲೇಖಕಿ ತ್ರಿವೇಣಿ ರಾವ್‌. ಪುಸ್ತಕದ ಬಿಡುಗಡೆ ಮಾಡುತ್ತಾ ಮಾತನಾಡಿದ ಅ. ರಾ. ಮಿತ್ರಾರವರು ತ್ರಿವೇಣಿಯವರ ಬರಹದ ಶೈಲಿಯನ್ನು ಹಾಡಿಕೊಂಡಾಡಿದರು. ಇನ್ನು ಕೆಲವೇ ದಿವಸಗಳಲ್ಲಿ ಈ ಪುಸ್ತಕ ಕರ್ನಾಟಕದ ಪುಸ್ತಕ ಅಂಗಡಿಗಳಲ್ಲೂ ಲಭ್ಯವಾಗಲಿದೆ.

ಪ್ರತಿ ಸಮ್ಮೇಳನದಲ್ಲೂ ಒಬ್ಬ ಮುಖ್ಯ ಅತಿಥಿಯನ್ನು ಕರೆಸುವುದು ಸಾಹಿತ್ಯ ರಂಗದ ವಾಡಿಕೆ. ಆದರೆ ಈ 3ನೇ ಸಮ್ಮೇಳನಕ್ಕೆ ಮತ್ತೊಬ್ಬ ವಿಶೇಷ ಅತಿಥಿಯ ಆಗಮನ ಎಲ್ಲರಲ್ಲೂ ಹರ್ಷತಂದಿತ್ತು. ‘ಅಮೆರಿಕಾದ ಅನಿವಾಸಿ ಕನ್ನಡಿಗರ ಸಾಹಿತ್ಯ ಸೃಷ್ಟಿ’ಯ ಬಗ್ಗೆ ತಮ್ಮ ಅನಿಸಿಕೆಗಳನ್ನು ಹಂಚಿಕೊಂಡ ವಿಮರ್ಶಕ ಎಚ್‌ ಎಸ್‌ ರಾಘವೇಂದ್ರ ರಾವ್‌ರವರು, ‘. . . . ನಿಮ್ಮ ಕಷ್ಟ ಸುಖಗಳನ್ನು ಊಹಿಸಿಕೊಳ್ಳೂವ ಮತ್ತು ಅದರ ಆಚೆಗೆ ನಿಂತು ಕರ್ನಾಟಕದ ಇಂದಿನ ಸಾಂಸ್ಕೃತಿಕ ಸನ್ನಿವೇಶದ ಬೆಳಕಿನಲ್ಲಿ ನಿಮ್ಮ ಬರವಣಿಗೆಯನ್ನು ನೋಡುವ ಕೆಲಸದಲ್ಲಿ ನಾನು ಆಸಕ್ತನಾಗಿದ್ದೇನೆ’ ಎಂದು ಭಾಷಣ ಆರಂಭಿಸಿದರು.

ತಮ್ಮ ಭಾಷಣದಲ್ಲಿ ಕರ್ನಾಟಕ ಓದುಗರು ಅನಿವಾಸಿಕನ್ನಡಿಗ ಬರಹಗಾರರಿಂದ ನಿರೀಕ್ಷಿಸುವ ಬರಹಗಳ ಬಗ್ಗೆ ಅನುಕ್ರಮವಾಗಿ ವಿವರಿಸಿದಾಗ ಅಮೆರಿಕದ ಬರ್ಹಗಾರರೊಂದಿಗೆ ಸಾಹಿತ್ಯಾಸಕ್ತರೆಲ್ಲಾ ತದೇಕಚಿತ್ತರಾಗಿ ಕೇಳಿದರು. ‘ಅವರು ಸಾಹಿತಿಗಳು, ನಾವು ಅಲ್ಲವಾ ಎಂಬ ಭ್ರಮೆಗೆ ವಿದಾಯ ಹೇಳಿ ಅಮೆರಿಕ ಹಾಗೂ ಇಲ್ಲಿಯ ಕನ್ನಡಿಗರ ಬಗ್ಗೆ ಬಲ್ಲ ನಿಮ್ಮಿಂದಲೇ ಅಂತಹ ಸಾಹಿತ್ಯ ಸಾಧ್ಯ ಎಂಬ ಮಾತನ್ನು ಒತ್ತಿ ಹೇಳಿದರು.

ವಸಂತೋತ್ಸವದ ಕಡೆಯ ಕಾರ್ಯಕ್ರಮ ಮುಖ್ಯ ಅತಿಥಿಗಳೊಡನೆ ಸಂವಾದ ಕಾರ್ಯಕ್ರಮ. ಕನ್ನಡ ಸಾಹಿತ್ಯದ ಬಗ್ಗೆ ಆಗುಹೋಗಿನ ಬಗೆ ಬಗೆಯ ಪ್ರಶ್ನೆಗಳ ಸುರಿಮಳೆಯೇ ಬಿದ್ದಿತ್ತು.

‘ಈ ಐಟಿ ಬಿಟಿ ಕಾರ್ಪೋರೇಟ್‌ ಸಾಹಿತ್ಯ ಅವಸರದ ಸಾಹಿತ್ಯ. ಧ್ಯಾನ ಇಲ್ಲದೆ ರಚಿಸಿದ ಸಾಹಿತ್ಯ ಬೇರೆ ಸಾಹಿತ್ಯದ ಪರಂಪರೆಗಳ ಜೊತೆ ನಿಲ್ಲುವ ಲಕ್ಷಣಗಳು ಕಡಿಮೆ ಅನ್ನೋದು ವಿಮರ್ಶಕರ ಅಂಬೋಣ. - ನಿಮ್ಮ ಅಭಿಪ್ರಾಯ’ ಎನ್ನುವ ಪ್ರಶ್ನೆ ಅಮೆರಿಕ ಕನ್ನಡಿಗರ ಸಾಹಿತ್ಯದ ಬಗ್ಗೆ ಇರುವ ಕಾಳಜಿಯನ್ನು ಎತ್ತಿ ತೋರುವಂತಿತ್ತು.

‘‘ಕೊರವಂಜಿ’’ ನಿಯತಕಾಲಿಕೆ, ಹಾಸ್ಯವನ್ನು ಹವ್ಯಾಸದಿಂದ ವೃತ್ತಿಯಾಗಿ ಅಮೆರಿಕೆಯ ರೀತಿ ಬೆಳೆಯುವ ಪ್ರವೃತ್ತಿ ಬಗ್ಗೆ, ಪುಸ್ತಕದ ಅಂಗಡಿಗಳಲ್ಲಿ ಕನ್ನಡ ಪುಸ್ತಕ ಮಾರಾಟವಾಗದ ಸಮಯದಲ್ಲಿ ಕನ್ನಡದ ಭವಿಷ್ಯದ ಬಗ್ಗೆ, ಐಟಿ ಯುಗದ ಮತ್ತು ಇಂಗ್ಲಿಷ್‌ನ ಪ್ರಭಾವ ಕನ್ನಡ ಹಾಸ್ಯದ ಮೇಲಿನ ಪ್ರಭಾವದ ಪ್ರಶ್ನೆಗಳು ಪ್ರಮುಖವಾಗಿದ್ದವು.

ಸುಲಲಿತವಾಗಿ ಪ್ರಶ್ನೆಗಳಿಗೆಲ್ಲಾ ಉತ್ತರಿಸಿದ ಅ ರಾ ಮಿತ್ರಾರವರ ಉತ್ತರದಲ್ಲಿನ ಹಾಸ್ಯ ಬೆರಿಕೆ ಎಲ್ಲರಿಗೂ ಮುದ ಕೊಟ್ಟಿತ್ತು. ಈ ಕಾರ್ಯಕ್ರಮವನ್ನು ನಿಗದಿತ ವೇಳೆಯಲ್ಲಿ ಅಚ್ಚುಕಟ್ಟಾಗಿ ನಡೆಸಿಕೊಟ್ಟವರು ಕನ್ನಡ ಸಾಹಿತ್ಯ ರಂಗದ ಉಪಾಧ್ಯಕ್ಷರಾದ ವಲ್ಲೀಶ ಶಾಸ್ತ್ರಿಯವರು. ಸಮ್ಮೇಳನದ ಅಧ್ಯಕ್ಷರಾಗಿದ್ದ ನಳಿನಿ ಮಯ್ಯಾರವರ ವಂದಾನಾರ್ಪಣೆಯ ನಂತರ ವಿದ್ಯಾರಣ್ಯ ಕನ್ನಡ ಕೂಟದ ಸದಸ್ಯರ ಸುಮಧುರ ವಿದಾಯ ಗೀತೆಯಾಂದಿಗೆ ಮೂರನೇ ಸಮ್ಮೇಳನಕ್ಕೆ ತೆರೆ ಬಿತ್ತು.

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X