ಆಜ್ ಕಹೇಂಗೆ ದಿಲ್ಕಾ ಫಸಾನಾ... ಜಾನ್ಭಿ ಲೇಲೇ...
ಈ ಮದುವೆಗೆ ಕಿಶೋರನ ತಂದೆ-ತಾಯಿಯರ ಸಮ್ಮತಿಯಿರಲಿಲ್ಲ. ಮದುವೆಯ ನಂತರ ಆಪರೇಷನ್ನಿಗೆಂದು ಲಂಡನ್ನಿಗೆ ತೆರಳಿದ ದಂಪತಿಗಳಿಗೆ ನಿರಾಶೆ ಕಾದಿತ್ತು. ಆಪರೇಷನ್ ಮಾಡಿದರೂ ಪ್ರಯೋಜನವಿಲ್ಲ, ಇರುವಷ್ಟು ದಿನ ಸಂತೋಷವಾಗಿರಿ ಎಂದು ವೈದ್ಯರಿಂದ ರಿಪೋರ್ಟ್ ಬಂದಿತ್ತು.
ಅದ್ಭುತ! ಅದ್ಭುತ!! ಅದ್ಭುತ!!!
ಇಷ್ಟರಲ್ಲಿದಿಲೀಪ್ಕುಮಾರ್ ಜೊತೆ ನಟಿಸಿದ ‘ಮೊಗಲ್ ಏ- ಅಜಾಮ್(1960)’ ಚಿತ್ರ ತೆರೆಕಂಡಿತು. ಮೊಗಲ್ ಏ ಅಜಾಮ್ ಗಲ್ಲಾ ಪೆಟ್ಟಿಗೆಯಲ್ಲಿ ಹೆಚ್ಚು ಹಣ ಗಳಿಸಿತ್ತು. ಅಕ್ಬರ್, ಸಲೀಮ್ ಪಾತ್ರದಲ್ಲಿ ಪೃಥ್ವಿರಾಜ್ ಕಪೂರ್, ದಿಲೀಪ್ಕುಮಾರ್ ಉತ್ತಮ ಅಭಿನಯ ನೀಡಿದರೆ, ಮಧುಬಾಲ ತನ್ನ ನಟನೆಯಿಂದ ಅನಾರ್ಕಲಿಯನ್ನು ಮತ್ತೆ ಜೀವಂತಗೊಳಿಸಿದಳು. ಮಧುಬಾಲ ಅಮರಳೆನಿಸಿದಳು. ಪ್ಯಾರ್ ಕಿಯಾ ತೋ ಡರ್ ನಾ ಕ್ಯಾ ಎಂದು ಪ್ರೇಮಿಗಳಿಗೆ ಪ್ರೇಮಿಸಿ, ಹೆದರಬೇಡಿ ಎಂದು ಅಭಯವನಿತ್ತಳು. ಅನಾರ್ಕಲಿಯನ್ನು ಜೈಲಿನಲ್ಲಿಟ್ಟಾಗ ಅವಳ ಮೊಗದಲ್ಲಿ, ಕಣ್ಗಳಲ್ಲಿ ನೋವು ಮೂಡಲು, ಆ ದೃಶ್ಯಕ್ಕೆ ನೈಜತೆ ತರಲು ಮಧುಬಾಲ ಶೂಟಿಂಗ್ ಮುಗಿಯುವ ತನಕ ಊಟವನ್ನು ಮಾಡದೆ, ಕೈಗಳಿಗೆ ಪ್ಲಾಸ್ಟಿಕ್ ಸಲಾಕೆ, ಚೈನುಗಳನ್ನು ಬಳಸದೆ ಅಂದಿನ ಕಾಲದಲ್ಲಿ ಕೈದಿಗಳಿಗೆ ಹಾಕುತ್ತಿದ್ದ ನಿಜ ಚೈನುಗಳನ್ನೇ ಕಟ್ಟಿಕೊಂಡಳಂತೆ.
‘ಪ್ಯಾರ್ ಕಿಯಾ ತೋ ಡರ್ ನಾ ಕ್ಯಾ, ಜಬ್ ಪ್ಯಾರ್ ಕಿಯಾ ತೋ ಡರ್ ನಾ ಕ್ಯಾ’ ಇದು ಮೊಗಲ್ ಏ-ಆಜಮ್ ನ ಅನಾರ್ಕಲಿಯ ಬಾಯಲ್ಲಿ ಉಲಿದ ಹಾಡು. ಪ್ರೇಮಿಸಿದ ಮೇಲೆ ಹೆದರಿಕೆ ಏಕೆ ಎಂದು ಸಾರಿದ್ದು ಅನಾರ್ಕಲಿಯಲ್ಲ. ಅವಳ ಪಾತ್ರವನ್ನು ಜೀವಂತಗೊಳಿಸಿದ, ಪ್ರೇಮಿಗಳ ಹೃದಯದಲ್ಲಿ ಕಿಚ್ಚನ್ನು ಹೊತ್ತಿಸಿದ, ಚಿತ್ರರಸಿಕರ ಮನೆಯಲ್ಲಿ ಜೀವಂತವಿರುವ ಮಧುಬಾಲ.
ಇದೇ ಸಮಯದಲ್ಲಿ ತೆರೆಕಂಡ ಭರತ್ಭೂಷಣ್ ಜೊತೆ ನಟಿಸಿದ ಸಂಗೀತ ಪ್ರಾಧಾನ್ಯ ಚಿತ್ರ ‘ಬರಸಾತ್ ಕಿ ರಾತ್’ ಹೆಸರು ಮಾಡಿತು. ಇತ್ತ ಮಧುಬಾಲಾಳ ಆರೋಗ್ಯ ಹದಗೆಟ್ಟಿತ್ತು. ಹಾಗೂ ಧೃತಿಗೆಡದೆ 1961ರಲ್ಲಿ ‘ಝುಮ್ರೂ’, ‘ಪಾಸ್ಪೋರ್ಟ್’, ‘ಬಾಯ್ಫ್ರೆಂಡ್’, (1962)ರಲ್ಲಿ ‘ಹಾಫ್-ಟಿಕೆಟ್’ ಚಿತ್ರಗಳು ತೆರೆಕಂಡವು. 1964ರಲ್ಲಿ ರಾಜ್ಕಪೂರ್ ಜೊತೆ ‘ಚಾಲಾಕ್’ ಚಿತ್ರದ ಮೊದಲ ದೃಶ್ಯ ಸೆಟ್ಟಿನಲ್ಲೇ ರಕ್ತ ಕಾರಿ ಅಲ್ಲೇ ಕುಸಿದ ಮಧುಬಾಲ ಮತ್ತೆ ಶೂಟಿಂಗಿನತ್ತ ಬರಲಾಗಲೇ ಇಲ್ಲ.
ಯಾತನೆಯ ಕಡೆಯ ದಿನಗಳು
ಆರೋಗ್ಯ ಕೈ ಕೊಟ್ಟಿತ್ತು, ಅಭಿನಯ ಕೈ ಬಿಟ್ಟಿತ್ತು, ಸಂಸಾರದಲ್ಲೂ ಬಿರುಕು ಮೂಡಿತ್ತು. ಮನ ನೊಂದಿತ್ತು. ತಂದೆ, ಒಡಹುಟ್ಟಿದವರ ಆರೈಕೆಯಲ್ಲಿ, ಹಾಸಿಗೆ ಹಿಡಿದು ಐದು ವರುಷ ಮಲಗಿದಲ್ಲಿ ದಿನ ದೂಡಿದಳು ಮಧುಬಾಲಾ. ನಟನೆ ಶುರು ಮಾಡಿದ ದಿನದಿಂದಲೂ ನಿಗದಿತ ವೇಳೆಗೆ ಸರಿಯಾಗಿ ಶೂಟಿಂಗಿಗೆ ಬರುತ್ತಿದ್ದ ಮಧುಬಾಲಾಳ ಜೀವನ ಯಾತ್ರೆ ಕೂಡ ಕೆಲವೇ ದಿನಗಳೆಂದು ನಿಗದಿತವಾದದ್ದು ವಿಷಾದನೀಯ.
9 ವರುಷದಿಂದ ಪ್ರಾರಂಭಗೊಂಡ ತನ್ನ ಚಿತ್ರರಂಗದ ಪಯಣದಲ್ಲಿ ‘ಮೋಹೆ ಪನ್ ಘಟ್ ಪೆ ‘ಮಧುಬಾಲ’ ಚೇಡ್ ಗಯೋರೇ ಎಂದು, ‘ಆಯಿಯೇ ಮೆಹೆರ್ ಬಾ, ಭೇಟಿಯೇ ಜಾನೆ ಜಾ’ ಎಂದು ತನ್ನ ನಟನೆಯ ಕೌಶಲ್ಯದಲಿ, ನಗುವಿನ ಮೋಡಿಯಲ್ಲಿ, ಸೌಂದರ್ಯದ ಮತ್ತಿನಲ್ಲಿ ಎಲ್ಲರನ್ನೂ ಛೇಡಿಸಿ, ಮುಳುಗಿಸಿ, ಮನ ತಣಿಸಿದ ಚೆಲುವೆಯ ಜೀವ ಫೆಬ್ರವರಿ 23, 1969ರಂದು ತನ್ನ ಇಹಲೋಕ ಯಾತ್ರೆಗೆ ಕೊನೆ ಹಾಡಿತ್ತು. ರಸಿಕರ ಹೃದಯದಲ್ಲಿ ಪ್ರೇಮದ ದೀಪ ಹೊತ್ತಿಸಿದ ಚಿತ್ರರಂಗದ ಸುಂದರ ದೀಪ ನಂದಿತ್ತು.












Click it and Unblock the Notifications