ಕಾವೇರಿ ರೈತರ ಹೋರಾಟಕ್ಕೆ ಅಮೆರಿಕ ‘ಅಕ್ಕ’ನ ಬೆಂಬಲ!
ಕಾವೇರಿ ನ್ಯಾಯಮಂಡಳಿ ತೀರ್ಪಿಗೆ ಹೊರನಾಡ ಕನ್ನಡಿಗರು ಅತೃಪ್ತಿ ವ್ಯಕ್ತಪಡಿಸಿದ್ದಾರೆ. ಅಮೆರಿಕ ಕನ್ನಡ ಕೂಟಗಳನ್ನು ಪ್ರತಿನಿಧಿಸುವ ‘ಅಕ್ಕ’ ಸಂಘಟನೆ, ನ್ಯಾಯಮಂಡಳಿ ತೀರ್ಪನ್ನು ಖಂಡಿಸಿದೆ. ಈ ಕುರಿತು ಅದು ತನ್ನ ನಿಲುವನ್ನು ಮಂಗಳವಾರ ಪ್ರಕಟಿಸಿದೆ. ‘ಅಕ್ಕ’ ಬಳಗದ ಅಭಿಪ್ರಾಯ ಸಾರ ಹೀಗಿದೆ...
ಕಾವೇರಿ ನ್ಯಾಯ ಮಂಡಳಿ ನೀಡಿರುವ ತೀರ್ಪು ನಮ್ಮೆಲ್ಲಾ ಅನಿವಾಸಿ ಕನ್ನಡಿಗರಿಗೆ ದಿಗ್ಭ್ರಮೆಯನ್ನುಂಟು ಮಾಡಿಸಿದೆ. ನ್ಯಾಯ ಮಂಡಳಿಗೆ ಸರ್ಕಾರದಿಂದ ಸೂಕ್ತ ಪೂರಕ ಮಾಹಿತಿಯನ್ನು ಒದಗಿಸಿದ್ದಾಗ್ಯೂ ಕೂಡಾ ನ್ಯಾಯ ಮಂಡಳಿಯು ಇದನ್ನು ಗಣನೆಗೆ ತೆಗೆದುಕೊಳ್ಳದೇ ತನ್ನ ಆದೇಶವನ್ನು ಯಾಂತ್ರಿಕವಾಗಿ ಹೊರಡಿಸಿರುವುದು ನಿಜಕ್ಕೂ ವಿಷಾದನೀಯ.
ನ್ಯಾಯ ಮಂಡಳಿಯ ಈ ದೋಷಪೂರಿತ ಕ್ರಮವನ್ನು ಮತ್ತೆ ನ್ಯಾಯಮಂಡಳಿಗೆ ಮನವರಿಕೆ ಮಾಡಿಕೊಡುವುದು ನಮ್ಮೆಲ್ಲರ ಆದ್ಯ ಕರ್ತವ್ಯವಾಗಿದೆ. ನ್ಯಾಯ ಮಂಡಳಿಯ ತೀರ್ಪು ಮೇಲು ನೋಟಕ್ಕೆ ಕೇವಲ ಕಾವೇರಿ ನದಿ ಪಾತ್ರದ ಜನರಿಗೆ ಮಾತ್ರ ಬಾಧಕವಾಗಬಹುದೆಂಬ ವಾದವಿದ್ದರೂ, ಈ ದೋಷಪೂರಿತ ಆದೇಶದಿಂದ ಕರ್ನಾಟಕದ ಜನತೆಗೆ ಮುಂಬರುವ ದಿನಗಳಲ್ಲಿ ಅನ್ಯಾಯವಾಗುವ ಸೂಚನೆ ಸಿಕ್ಕಿದೆ. ಮುಂಬರುವ ದಿನಗಳಲ್ಲಿ ಉದ್ಭವಿಸಬಹುದಾದ, ಇನ್ನಿತರ ಜಲವಿವಾದಗಳ ಬಗ್ಗೆ ಈ ಪ್ರಕರಣದ ಬೆಳವಣಿಗೆಯನ್ನು ಪಾಠವಾಗಿಟ್ಟುಕೊಂಡು, ಒಕ್ಕೊರಲಿನಿಂದ ಪ್ರತಿಭಟಿಸುವುದು ಅನಿವಾರ್ಯ.
ವಾಸ್ತವವಾಗಿ ಕಾವೇರಿಯು ಸಮಸ್ತ ಕನ್ನಡಿಗರ ಅವಶ್ಯಕತೆಗಳನ್ನು ಪೂರೈಸುವ ಜೀವನದಿಯಾಗಿದ್ದು, ನ್ಯಾಯಮಂಡಳಿಯ ಈ ತೀರ್ಪು ಪ್ರಪಂಚದಾದ್ಯಂತ ಸಿಲಿಕಾನ್ ಸಿಟಿ ಎಂದು ಖ್ಯಾತಿಗೊಂಡಿರುವ ಬೆಂಗಳೂರಿನ ಸಮಗ್ರ ಬೆಳವಣಿಗೆಗೆ ಮಾರಕವಾಗಿ ರಾಜ್ಯದ ಆರ್ಥಿಕ ಸ್ಥಿತಿಗತಿಗಳ ಮೇಲೆ ಗಂಭೀರ ಪರಿಣಾಮವನ್ನುಂಟು ಮಾಡುತ್ತದೆಂಬದರಲ್ಲಿ ಸಂದೇಹವಿಲ್ಲ.
ಈಗಾಗಲೇ ನಮ್ಮೆಲ್ಲರ ಹೆಮ್ಮೆಯ ಪ್ರತೀಕವಾದ ಸಿಲಿಕಾನ್ ಖ್ಯಾತಿಯ ಬೆಂಗಳೂರು ಅಂತಾರಾಷ್ಟ್ರಿಯ ಮಟ್ಟದಲ್ಲಿ ತನ್ನದೇ ಆದ ಛಾಪನ್ನು ಮೂಡಿಸಿದೆ. ಮೂಲಭೂತವಾಗಿ ಈ ಶೀಘ್ರಗತಿಯ ಬೆಳವಣೆಗೆಗಳು ಕೇವಲ ಮಾಹಿತಿ/ಜೈವಿಕ ತಂತ್ರಜ್ಞಾನದ ಮೇಲೆ ಕೇಂದ್ರೀಕೃತವಾಗಿದ್ದು, ಮುಂದಿನ ದಿನಗಳಲ್ಲಿ ಈ ತೀರ್ಪಿನಿಂದಾಗಿ ತೀವ್ರತರದ ಕುಡಿಯುವ ನೀರಿನ ಕೊರತೆಯಿಂದ ಈ ಶೀಘ್ರಗತಿಯ ಬೆಳವಣಿಗೆಗಳು ಸ್ಥಗಿತಗೊಳ್ಳುವ ಸಾಧ್ಯತೆಯನ್ನು ತಳ್ಳಿಹಾಕುವಂತಿಲ್ಲ.
ನ್ಯಾಯಮಂಡಳಿಯ ಈ ಅವೈಜ್ಞಾನಿಕ ತೀರ್ಪಿನ ವಿರುದ್ದ ಒಕ್ಕೊರಲಿನಿಂದ ಪ್ರತಿಭಟಿಸುತ್ತಿರುವ ರೈತರು ಮತ್ತಿತರ ಸಮೂಹಗಳ ಶಾಂತಿಯುತ ಪ್ರತಿಭಟನೆಯನ್ನು ನಮ್ಮೆಲ್ಲ ಅನಿವಾಸಿ ಕನ್ನಡಿಗರ ಹಾಗೂ ‘ಅಕ್ಕ’ ಬಳಗ ಸಂಪೂರ್ಣವಾಗಿ ಬೆಂಬಲಿಸುತ್ತದೆ.
‘ಅಕ್ಕ’ ಬಳಗವು ದೈಹಿಕವಾಗಿ ನಿಮ್ಮಿಂದ ದೂರವಿದ್ದರೂ ಮಾನಸಿಕವಾಗಿ, ಈ ಕಾವೇರಿ ಹೋರಾಟದಲ್ಲಿ ನಿಮ್ಮೊಂದಿಗೆ ಇದ್ದೇವೆ. ಹೋರಾಟವನ್ನು ಅಂತಿಮ ಗುರಿಯತ್ತ ಕೊಂಡೊಯ್ಯೋಣ.
ಇಂತಿ,
ರಮೇಶ್ ಗೌಡ,
ಅಧ್ಯಕ್ಷ, ಅಕ್ಕ,
ಡೆಟ್ರಾಯಿಟ್, ಮಿಚಿಗನ್, ಅಮೆರಿಕ.












Click it and Unblock the Notifications