Get Updates
Get notified of breaking news, exclusive insights, and must-see stories!

ಭಿಕ್ಷೆ ಮತ್ತು ಭಿಕ್ಷುಕ : ಇನ್ನೊಂದು ಜಿಜ್ಞಾಸೆ

ಕುಂಭಾಸಿ ಶ್ರೀನಿವಾಸ ಭಟ್‌ ರವರ ‘ಅಮೆರಿಕದಲ್ಲಿ ಭಿಕ್ಷುಕರು ನಾಪತ್ತೆ? ಯಾಕೆ ಹೀಗೆ?’ ಎಂಬ ಸರಳವಾದ ಪ್ರಶ್ನೆಗೆ ಸರಳವಾದ ಉತ್ತರವಿದ್ದ ಹಾಗೆ ಕಾಣುವುದಿಲ್ಲ. ಆದರೆ ಅವರ ಈ ಪ್ರಶ್ನೆಯಲ್ಲೇ ಹಲವೆರಡು ಉತ್ತರಗಳಿವೆ. ಅವರ ಮಗಳ ಪ್ರಶ್ನೆಗಳಲ್ಲೂ ಉತ್ತರದ ಹಲವು ಸೂಚನೆಗಳಿವೆ. ಈಗ ಒಂದೊಂದಾಗಿ ಅವುಗಳನ್ನು ತೆಗೆದುಕೊಳ್ಳೋಣ.

ಭಾರತದಲ್ಲಿ ಬೇಡುವರ ಸಂತತಿ ದೊಡ್ಡದು, ಏಕೆಂದರೆ ಅದು ಭಾರತದ ಜನಸಂಖ್ಯೆಯ ಮೇಲೆ ಆಧಾರಿತ. ಜನಸಂಖ್ಯೆಗೆ ತಕ್ಕಂತೆ ಭಿಕ್ಷುಕರ ವಿಭಾಗ ದೊಡ್ಡದಾಗಿರುವುದು.

ಅಮೇರಿಕಾದಲ್ಲಿ ಭಿಕ್ಷುಕರು ಏಕೆ ನಾಪತ್ತೆ? ಅದಕ್ಕೆ ಅನೇಕ ಕಾರಣ ಗಳಿವೆ. ಮೊದಲನೆಯದಾಗಿ ಅಮೆರಿಕಾದ ಜನಸಂಖ್ಯೆ ಭಾರತಕ್ಕಿಂತಾ ಕಡಿಮೆ. ಎರಡನೆಯದಾಗಿ ಅಮೆರಿಕಾ ಭೂವಿಸ್ತೀರ್ಣ ಭಾರತಕ್ಕಿಂತಾ ಬಹಳ ದೊಡ್ಡದು. ಆಮೆರಿಕಾದಲ್ಲಿ ನಗರಗಳೂ, ಪಟ್ಟಣಗಳೂ ಮತ್ತು ಊರುಗಳು ಬಹಳವಾಗಿವೆ. ಅಂದರೆ ಭಾರತದಲ್ಲಿರುವುದಕ್ಕಿಂತಾ ಕಡಿಮೆ ಸಂಖ್ಯೆಯ ಭಿಕ್ಷುಕರು ಅಮೆರಿಕಾದಲ್ಲಿ ಎಲ್ಲಾ ಊರುಗಳಲ್ಲೂ ಚದುರಿಹೋಗಿದ್ದಾರೆ. ಭಿಕ್ಷುಕರು ಕಾಣದಿದ್ದರೂ ಭಿಕ್ಷುಕರು ಅಮೆರಿಕಾದಲ್ಲಿಲ್ಲ ಎನ್ನುವುದಕ್ಕಾಗುವುದಿಲ್ಲ. ಸರಿಯಾಗಿ ನೋಡಿದರೆ ಅವರು ಕಾಣುವರು.

ಇವುಗಳಿಗೆಲ್ಲಕ್ಕಿಂತಲೂ ಮುಖ್ಯವಾದ ಅಂಶವೇನೆಂದರೆ, ಅಮೆರಿಕಾ ಮತ್ತು ಇತರ ಮುಂದುವರೆದ ದೇಶಗಳಲ್ಲಿ ಸರಕಾರದ ಮತ್ತು ಸರಕಾರೇತರ ಸಮಾಜಪಾಲನಾ ಸಂಸ್ಥೆಗಳು ಅನೇಕವಿವೆ. ಈ ಮುಂದುವರೆದ ದೇಶಗಳಲ್ಲಿ ಈ ಸಮಾಜಪಾಲನಾ ಸಂಸ್ಥೆಗಳು ಎಲ್ಲಾ ಪ್ರಜೆಗಳನ್ನು ಬಡತನದ ಹಂತಕ್ಕಿಂಥ ಮೇಲಿಡುವ ಕಾರ್ಯಕ್ರಮಗಳಲ್ಲಿ ನಿರತರಾಗಿರುತ್ತವೆ.

ಈ ಮುಂದುವರಿದ ದೇಶಗಳಲ್ಲಿ ಸೋಷಿಯಲ್‌ ಸೆಕ್ಯೂರಿಟಿ ಅಥವಾ ಸಾಮಾಜಿಕ ಭರವಸೆಯ ಹಣವನ್ನು ಈ ಬಡತನದ ಮಟ್ಟಕ್ಕಿಂತ ಕೆಳಗಿರುವವರಿಗೆ ಪಾವತಿ ಮಾಡುತ್ತಾರೆ. ಅಂದರೆ ಎಲ್ಲರನ್ನೂ ಭಿಕ್ಷುಕರ ಮಟ್ಟದಿಂದ ಮೇಲಿರಲು ಪ್ರೇರೇಪಿಸುತ್ತಾರೆ. ಇನ್ನು ಅಂಗವಿಕಲರೂ ಮತ್ತು ಇತರ ಉದ್ಯೋಗ ಮಾಡಲಾಸಕ್ತರಿಗೆ, ವಿಶೇಷವಾದ ಹಣವನ್ನು ಸರಕಾರವು ಕೊಡುತ್ತದೆ. ಅಂದರೆ ಇದಕ್ಕೆಲ್ಲಾ ಒಂದಕ್ಕೊಂದು ಹೊಂದಿಕೊಂಡಿರುವ ಅನೇಕ ಸಂಸ್ಥೆಗಳೂ ಮತ್ತು ಅವುಗಳಲ್ಲಿ ಕೆಲಸಮಾಡುವ ಉದ್ಯೋಗಿಗಳ ದೊಡ್ಡ ಸಿಬ್ಬಂದಿಯೇ ಇರುತ್ತವೆ. ಇವುಗಳಿಗೆ ಹಣವು ಸುಂಕ, ಕಂದಾಯ ಮತ್ತು ತೆರಿಗೆಗಳಿಂದ ಸರಕಾರವು ಜನಗಳಿಂದ ವಸೂಲು ಮಾಡುತ್ತದೆ. ಅಂದರೆ ಇದೂ ಒಂದು ತರಹದ ಭಿಕ್ಷೆ. ಜನಸಾಮಾನ್ಯರಿಂದ ಅವರಿಗೆ ಇಷ್ಟವಿರಲೀ ಅಥವಾ ಇಷ್ಟವಿಲ್ಲದಿರಲೀ ಸರಕಾರ ಮತ್ತು ಇತರ ಸೇವಾಸಂಸ್ಥೆಗಳು ಮುಂದುವರಿದ ದೇಶಗಳಲ್ಲಿ ಈ ಅಜ್ಞಾತ ಭಿಕ್ಷುಕರಿಗೆ ಹಣವನ್ನು ಕೊಡುತ್ತವೆ. ಅಂದರೆ ಈ ಸರಕಾರ ಮತ್ತು ಖಾಸಗೀ ಸಾಮಾಜಿಕ ಸಂಸ್ಥೆಗಳಿಲ್ಲದಿದ್ದರೆ ಈ ಮುಂದುವರೆದ ದೇಶಗಳಲ್ಲೂ ಭಿಕ್ಷುಕರು ಭಾರತದಲ್ಲಿ ಕಾಣುವಷ್ಟೇ ಕಾಣಿಸುತ್ತಿದ್ದರು.

ಆದರೆ ಭಾರತದಲ್ಲಿರುವ ಸ್ಥಿತಿಯನ್ನು ಬೇರೆಯ ಕೋನದಿಂದ ನೋಡಿದರೆ ಅದರಲ್ಲಿ ಏನೂ ತಪ್ಪಿಲ್ಲ ಎಂದು ನನಗನಿಸುವುದು. ಜನಗಳಿಂದ ಕಡ್ಡಾಯವಾಗಿ ಹಣವನ್ನು ವಸೂಲು ಮಾಡಿ ಅದನ್ನು ಬಡವರಿಗೆ ಹಂಚಲು ಅಗಾಧವಾದ ಸಂಸ್ಥೆಗಳನ್ನು ಸೃಷ್ಟಿಸಿ ಅವುಗಳನ್ನು ನಡೆಸಲು ಅಪಾರ ಹಣ ವೆಚ್ಚ ಮಾಡಿ, ಕೊನೆಗೆ ಆ ಬಡವನಿಗೆ ಆ ಹಣದ ಒಂದು ಸಣ್ಣ ಭಾಗವನ್ನು ಕೊಡುವುದು ಸರಿಯೋ ಅಥವ ಭಾರತದಲ್ಲಿರುವಂತೆ ಆ ಬಡವರಿಗೂ, ಭಿಕ್ಷುಕರಿಗೂ ಮತ್ತು ಅಂಗವಿಕಲರಿಗೆ ಜನರು ಸಂತೋಷದಿಂದ ನೇರವಾಗಿ ಹಣವನ್ನು ಕೊಡುವುದು ಒಳ್ಳೆಯದೋ? ಈ ಎರಡು ಸಂದರ್ಭಗಳಲ್ಲೂ ಹಣವನ್ನು ನಿರುಪಯೋಗ ಮಾಡುವ ಮಾರ್ಗಗಳಿವೆ. ಆದರೆ ಮುಂದುವರೆದ ದೇಶಗಳಲ್ಲಿ ಅಂಗವಿಕಲರಿಗೆ ಮತ್ತು ಮನೋವಿಕಲರಿಗೆ ಆಸ್ಪತ್ರೆಗಳ ಮತ್ತು ಇತರ ಸೌಲಭ್ಯಗಳು ಸಾಮಾನ್ಯವಾಗಿ ದೊರೆಯುವುದು. ಭಾರತದಲ್ಲೂ ಸರಕಾರ ಮತ್ತು ಖಾಸಗೀ ಸಂಸ್ಥೆಗಳನೇಕವು ಅತ್ಯಂತ ಹೆಮ್ಮೆದಾಯಕ ಕಾರ್ಯಗಳನ್ನು ಕೈಗೊಂಡಿವೆ. ಜನಸಂಖ್ಯೆ, ಅನಾರೋಗ್ಯ, ಅಜ್ಞಾನಗಳಿಂದ ಮುಂದುವರೆದ ದೇಶಗಳ ಮಟ್ಟಕ್ಕೆ ಬರಲು ಭಾರತವು ಇನ್ನೂ ಹಲವು ವರುಷಗಳು ಹಿಡಿಯುವುದು.

ಪಾಶ್ಚ್ಚಿಮಾತ್ಯದೇಶಗಳಲ್ಲಿ ಅನೇಕ ವರುಷಗಳ ಜೀವನ ಮಾಡಿದವರಿಗೆ ಭಾರತಕ್ಕೆ ಬಂದು ನೋಡಿದಾಗ ಬಡವರೂ ಮತ್ತು ಅಲ್ಪ ಆದಾಯವುಳ್ಳವರು ನಿತ್ಯಜೀವನಕ್ಕೆ ಮಾಡುವ ಕಸುಬುಗಳನ್ನು ನೋಡಿದರೆ ಆಶ್ಚರ್ಯವೂ ಮತ್ತು ಒಂದು ಬಗೆಯ ಹೆಮ್ಮೆಯೂ ಆಗುವುದು. ಪುನಃ ಚಲಾವಣಾ ಅಂದರೆ ರೀಸೈಕ್ಲಿಂಗ್‌ ಮಾಡುವ ಅನೇಕ ವಿಧಾನಗಳನ್ನು ಭಾರತದಲ್ಲಿ ನೋಡಬಹುದು. ಹಳೇ ಪೇಪರಿನಿಂದ ಹಿಡಿದು ಹಳೇಕಂಪ್ಯೂಟರುಗಳ ಬೇಡವಾದ ಭಾಗಗಳನ್ನು ಪುನರುಪಯೋಗಮಾಡುವ ಚಮತ್ಕಾರ ಭಾರತದಲ್ಲಿ ನೋಡಬಹುದು. ಮಧ್ಯಾಹ್ನದ ಬಿಸಿಲಿನಲ್ಲಿ ಹರುಕಲು ಚೀಲದಲ್ಲಿ ಬೀದಿಯಲ್ಲಿ ಬಿದ್ದಿರುವ ಪ್ಲಾಸ್ಟಿಕ್‌ ಚೀಲ ಮತ್ತು ಇತರ ಪದಾರ್ಥಗಳನ್ನು ಆರಿಸಿ ಅವುಗಳನ್ನು ಕರಗಿಸಿ ಬಕೆಟ್‌ ಮತ್ತು ಬಿಂದಿಗೆಗಳನ್ನು ಮಾಡುವ ಜನರನ್ನು ಭಾರತದಲ್ಲಿ ನೋಡುವಿರಿ.

ಈಗೀಗ ಪುನರ್‌-ಪರಿವರ್ತನೆ ಮಾಡುವ ಕಾರ್ಯಗಳನ್ನು ಅಮೆರಿಕಾ ಮತ್ತು ಇತರ ಪಾಶ್ಚಿಮಾತ್ಯ ದೇಶಗಳಲ್ಲೂ ನೋಡಬಹುದು. ಆದರೆ ಇವುಗಳೆಲ್ಲಾ ಹತ್ತಾರು ಶಾಖೆಗಳಿರುವ ದೊಡ್ಡದೊಡ್ಡ ಸಂಸ್ಥೆಗಳಿಂದ ಕೈಗೊಳ್ಳಲ್ಪಟ್ಟಿವೆ. ಆದರೆ ಭಾರತದಲ್ಲಿ ಕಾಣಬರುವಂತಹ ಸಾಮಾನ್ಯ ವ್ಯಕ್ತಿಗಳ ಈ ಪುನರ್ಚಲಾವಣೆಯ ಕಸುಬನ್ನು ಮುಂದುವರೆದ ದೇಶಗಳಲ್ಲಿ ನೋಡಲು ಸಾಧ್ಯವಿಲ್ಲ. ಈ ಕಸುಬು ಅಂತಹದ್ದೇನೂ ಸುಲಭವಲ್ಲ. ಇದಕ್ಕಿಂತಲೂ ದೇವಸ್ಥಾನಗಳ ಮುಂದೆ ಭಿಕ್ಷೆ ಬೇಡುವುದು ಸುಲಭ ಮತ್ತು ಹೆಚ್ಚು ವರಮಾನದಾಯಕ. ಆದರೆ ಈ ವ್ಯಕ್ತಿಗಳು ಏಕೆ ಈ ಕಷ್ಟಕರವಾದ ಕೆಲಸವನ್ನು ಹುಡುಕಿಕೊಂಡಿದ್ದಾರೆ? ಇದು ಅನಿವಾರ್ಯವೇ? ಆದರೆ ಹಾಗೆ ತೋರುವುದಿಲ್ಲ. ಈ ವ್ಯಕ್ತಿಗಳು ಸ್ವತಂತ್ರವಾಗಿರಲು ಬಯಸಿರಬಹುದು. ಸ್ವಂತವಾದ ಕಸುಬನ್ನು ಮಾಡಲು ಇಚ್ಚಿಸಿರಬಹುದು. ಎಲ್ಲಕ್ಕಿಂತಲೂ ಅವರಿಗೆ ಆತ್ಮಗೌರವವಿರಬಹುದು.

ಪಾಶ್ಚಿಮಾತ್ಯ ದೇಶಗಳಲ್ಲಿ ವೈಯಕ್ತಿಕವಾಗಿ ಮಾಡುವ ಪುನಃಚಲಾವಣಾ ಕಸುಬನ್ನು ಮಾಡುವ ಅವಶ್ಯಕತೆ ಇರುವುದಿಲ್ಲ. ಏಕೆಂದರೆ ಪಾಶ್ಚಿಮಾತ್ಯ ದೇಶಗಳಲ್ಲಿ ಇದಕ್ಕಿಂತಲೂ ಸುಲಭವಾದ ರೀತಿಯಲ್ಲಿ ಹಣವನ್ನು ಗಳಿಸಬಹುದು. ಅದೇನೆಂದರೆ ಸೋಷಿಯಲ್‌ ಸೆಕ್ಯೂರಿಟಿ ಆಫೀಸಿನಲ್ಲಿ ಹೆಸರನ್ನು ನೊಂದಾಯಿಸಿ ಪ್ರತಿವಾರವೂ ಹಣವನ್ನು ವಸೂಲು ಮಾಡಬಹುದು.

ಆದರೆ ಇನ್ನೊಂದು ವಿಚಾರ ನೋಡಿ. ಪಾಶ್ಚಿಮಾತ್ಯ ದೇಶಗಳಲ್ಲಿರುವ ಹಾಗೆ ಭಾರತದಲ್ಲಿ ಇದ್ದಕ್ಕಿದ್ದಂತೆ ಈ ಸೋಷಿಯಲ್‌ ಸೆಕ್ಯೂರಿಟಿ ಬಂದಿತೆಂದು ಊಹೆ ಮಾಡಿಕೊಳ್ಳಿ. ಆಗ ಭಾರತದಲ್ಲಿ ಈ ಪುನರ್‌-ಚಲಾವಣಾ ಮಾಡುವವರು ಇರುತ್ತಾರೆಯೇ? ಇದಕ್ಕೆ ಉತ್ತರ ಕಷ್ಟ.


ಕುಂಭಾಸಿ ಲೇಖನ-
ಸರಳ ಪ್ರಶ್ನೆ, ಸುಲಭ ಉತ್ತರ ಇದೆಯೆ?

ಇದನ್ನೂ ಓದಿ-
ಜಾಲಭಿಕ್ಷುಕಿ ಬಂದಳೋ ಭಿಕ್ಷಕೆ...


ಮುಖಪುಟ / ಎನ್‌ಆರ್‌ಐ

More From
Prev
Next
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+