ಸಿಡಿಲಿನ ಮರಿಗಳು ನಾವು : ವಾಷಿಂಗ್ಟನ್ನಲ್ಲಿ ಕಾವೇರಿ ಮಕ್ಕಳ ಮರಿಸೈನ್ಯ!
- ಶ್ರೀವತ್ಸ ಜೋಶಿ; ಮೇರಿಲ್ಯಾಂಡ್
ಪ್ರತಿಷ್ಠಿತ ‘ ಫ್ರೆಡ್ಡಿ ಮ್ಯಾಕ್ ಫೌಂಡೇಶನ್ ನ್ಯಾಷನಲ್ ಯುತ್ ಸರ್ವೀಸ್ ಅವಾರ್ಡ್’ ಅನ್ನು ಬಗಲಿಗೆ ಹಾಕಿಕೊಂಡಿರುವ ಕಾವೇರಿ ಯುವಸಮಿತಿ, ರಾಷ್ಟ್ರರಾಜಧಾನಿಯಲ್ಲಿ ವರ್ಷದುದ್ದಕ್ಕೂ ಪರಿಸರಸಂರಕ್ಷಣೆ, ಆರೋಗ್ಯಾಭಿವೃದ್ಧಿ, ನೈರ್ಮಲ್ಯ, ವನಮಹೋತ್ಸವ, ಸುಂದರೀಕರಣ ಮತ್ತು ಹೆಚ್ಚುಹೆಚ್ಚು ಜನರಿಗೆ ಇದರ ಸೌಲಭ್ಯ, ಸೌಕರ್ಯ ಕಲ್ಪಿಸುವ ‘ ಸಮಾಜಸೇವೆ’ ಕಾರ್ಯಕ್ರಮವನ್ನು ಹಮ್ಮಿಕೊಂಡಿದೆ. ಸುಮಾರು 40ಕ್ಕೂ ಹೆಚ್ಚು ಬೇರೆಬೇರೆ ಯುವಸಮಿತಿಗಳು ‘ ಗ್ರಾಂಟ್’ಗಾಗಿ ಅರ್ಜಿಸಲ್ಲಿಸಿದ್ದರೂ 750 ಡಾಲರ್ಗಳ ಪ್ರತಿಷ್ಠೆಯ ಗ್ರಾಂಟ್ಅನ್ನು ಗೆದ್ದವರು ಕಾವೇರಿ ಬಾಲಕ-ಬಾಲಕಿಯರು. ಡಿಸಿ, ಮೇರಿಲ್ಯಾಂಡ್, ವರ್ಜೀನಿಯಾ ಪ್ರದೇಶದ ಕನ್ನಡಿಗರ ಹೆಮ್ಮೆಯ ಕಣ್ಮಣಿಗಳು.
ಏಪ್ರಿಲ್ 17ರ ಕಾರ್ಯಕ್ರಮ ಈ ಯೋಜನೆಗೆ ಚಾಲನೆ ನೀಡುವ ಕಾರ್ಯಕ್ರಮ. ಅದರ ಹಿಂದಿನ ದಿನ ಏಪ್ರಿಲ್ 16ರಂದು ಸಂಜೆ 4ರಿಂದ 6ರವರೆಗೆ ವಾಷಿಂಗ್ಟನ್ ಡಿಸಿಯ ಸಿಟಿ ಮ್ಯೂಸಿಯಂ ವಠಾರದಲ್ಲಿ ‘ ರಾಷ್ಟ್ರೀಯ ಯುವಸೇವಾ ದಿನಾಚರಣೆ’ ಸಂಭ್ರಮದಿಂದ ನಡೆಯಲಿದೆ. ಗ್ರಾಂಟ್ ವಿಜೇತ ಕಾವೇರಿ ಸಮಿತಿಗೆ ಅವತ್ತಿನ ಸಭೆಯಲ್ಲಿ ವಿಶೇಷ ಪುರಸ್ಕಾರ. ಡಿಸಿ ಸರಕಾರದ ವಿವಿಧ ಇಲಾಖೆಗಳ ಉನ್ನತ ಅಧಿಕಾರಿಗಳಿಂದ ಬೆನ್ನುತಟ್ಟಿ ಪ್ರೋತ್ಸಾಹದ ಮಾತುಗಳು.
ಕಾವೇರಿ ಯುವಸಮಿತಿಯ ಪ್ರಸಕ್ತ ಸಾಲಿನ ಅಧ್ಯಕ್ಷ ಮಾ। ಸಂದೇಶ್ ಶ್ರೀನಿವಾಸ್ (2002ರಲ್ಲಿ ಡಿಸಿ ಸರಕಾರದಿಂದ ‘ ಅತ್ಯುತ್ತಮ ಸರಕಾರಿ ನೌಕರ’ ಪ್ರಶಸ್ತಿ ಗಳಿಸಿದ ಡಾ।ವಿ. ಶ್ರೀನಿವಾಸ್ ಅವರ ಸುಪುತ್ರ ಸಂದೇಶ್) ಹೇಳುವಂತೆ ಈ ಒಂದು ಅವಕಾಶದಿಂದ ಪ್ರಾಥಮಿಕ ಮತ್ತು ಪ್ರೌಢಶಾಲೆಯಲ್ಲಿ ಕಲಿಯುತ್ತಿರುವ ನಮ್ಮ ಕನ್ನಡಿಗ ಮಕ್ಕಳಿಗೆ ಶೈಕ್ಷಣಿಕ ವರ್ಷಕ್ಕೆ ಅಗತ್ಯವಾದ ‘ ಸರ್ವೀಸ್ ಲರ್ನಿಂಗ್’ ಅಂಕಗಳು ಲಭಿಸುವುದು ಮಾತ್ರವಲ್ಲದೆ ‘ ಕಾವೇರಿ ಯುವಸಮಿತಿಯೆಂದರೆ ಬರೀ ಮೂಕಪ್ರೇಕ್ಷಕ ಸಂಸ್ಥೆಯಲ್ಲ, ಅದೊಂದು ಚೈತನ್ಯದ ಚಿಲುಮೆ, ಈ ನಗರವನ್ನು ವಾಸ್ತವ್ಯಕ್ಕೆ ಆಹ್ಲಾದಕರವಾಗಿ ಮಾಡುವುದಕ್ಕೆ ಪಣತೊಟ್ಟ ಸೇವಾಮನೋಭಾವದವರ ಒಕ್ಕೂಟ...’ ಎಂಬ ‘ ಸಂದೇಶ’ ಸ್ಪಷ್ಟವಾಗಿ ಎಲ್ಲ ಸಂಬಂಧಿತ ವ್ಯಕ್ತಿ-ಸಂಘ-ಸಂಸ್ಥೆ-ಸರ್ಕಾರಗಳಿಗೆ ತಲುಪಿಸಿದಂತಾಗುತ್ತದೆ. ಈ ಪ್ರೋಜೆಕ್ಟ್ಗೆ ಸಂದೇಶ್ ಟೀಮ್ಲೀಡರ್ ಮತ್ತು ಕೋ-ಅರ್ಡಿನೇಟರ್ ಆಗಿರುತ್ತಾನೆ.
ಏಪ್ರಿಲ್ 17ರ ಒಂದುದಿನದ ಶ್ರಮದಾನದ ನಂತರ ವರ್ಷವಿಡೀ ಇನ್ನೂ ಏನೇನು ಪ್ಲಾನ್ ಇದೆ ಈ ಮಕ್ಕಳ ಸೈನ್ಯದಲ್ಲಿ?
ಲೈಬ್ರರಿಯ ಪರಿಸರವನ್ನು ಸ್ವಚ್ಛಗೊಳಿಸುವುದು, ಬಯಲು ಸಮತಟ್ಟು ಮಾಡುವುದು, ಕೊಳೆತ ಎಲೆ ಮರಮಟ್ಟುಗಳನ್ನು ತೆಗೆಯುವುದು, ಕಳೆಕೀಳುವುದು, ಹೂಗಿಡಗಳನ್ನು ನೆಡುವುದು, ಅತ್ಯಾಧುನಿಕ ಸಲಕರಣೆಗಳಿಂದ ಪರಿಸರಪ್ರದೂಷಣೆಯ ಮಾಪನ ಮಾಡಿ ಸೂಕ್ತ ಕ್ರಮಗಳನ್ನು ಶಿಫಾರಸು ಮಾಡುವುದು, ಮರ್ಕ್ಯೂರಿ ಕಂಟಾಮಿನೇಷನ್ನಂತಹ ಅಪಾಯಗಳ ಮುನ್ಸೂಚನೆ ಮಾಹಿತಿ ಕ್ರೋಢೀಕರಿಸುವುದು, ಪೈಂಟ್ನಿಂದ ಹಿಡಿದು ಕುಡಿಯುವ ನೀರಿನವರೆಗೆ ಸರ್ವವ್ಯಾಪಿಯಾದ ವಿಪರೀತ ಸೀಸದ ಅಂಶವನ್ನು ಕಡಿಮೆಗೊಳಿಸಲು ಕ್ರಮಕೈಗೊಳ್ಳುವುದು, ಸರಕಾರಿ ಅಧಿಕಾರಿಗಳ ಸಹಯೋಗದೊಂದಿಗೆ ಮೊಬೈಲ್ ಹೆಲ್ತ್ ವ್ಯಾನ್, ರಕ್ತಪರಿಕ್ಷೆಯ-ಆರೋಗ್ಯ ತಪಾಸಣೆಯ ಶಿಬಿರಗಳು... ಹೀಗೆ ಸಾಧಿಸುತ್ತೇವೆಂದುಕೊಂಡಿರುವುದು ಬಹಳಷ್ಟು ಇದೆ. ಸಾಧಿಸಿಯೇ ತೀರುತ್ತೇವೆಂಬ ಉತ್ಸಾಹವೂ ಇದೆ. ಈ ಮಕ್ಕಳ ಸೈನ್ಯಕ್ಕೆ ಬೆನ್ನುತಟ್ಟಿ ಪ್ರೋತ್ಸಾಹಿಸುವುದು ನಾವೆಲ್ಲ ಮಾಡಬಹುದಾದ ಒಳ್ಳೆಯ ಕೆಲಸ.
ಮಾ।ಸಂದೇಶ್ ಶ್ರೀನಿವಾಸ್ ಸಂಪರ್ಕ ವಿಳಾಸ : [email protected]