ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಕೆಸಿಎ: ಪ್ರಜಾಪ್ರಭುತ್ವದ ಇನ್ನೊಂದು ಅಧ್ಯಾಯ

By Staff
|
Google Oneindia Kannada News
  • ದಟ್ಸ್‌ಕನ್ನಡ ಬ್ಯೂರೊ
ಅನಿವಾಸಿ ಕನ್ನಡಿಗರು ತಮ್ಮ ಊರು ಕೇರಿಗಳಲ್ಲಿ ಕನ್ನಡ ಸಂಘಗಳನ್ನು ಕಟ್ಟಿಕೊಳ್ಳುವುದು ವಾಡಿಕೆ. ಹೀಗೆ ತಲೆ ಎತ್ತಿ ನಿಂತಿರುವ ಕೆಲವು ಕನ್ನಡ ಸಂಘ ಸಂಸ್ಥೆಗಳಲ್ಲಿ ಪ್ರಜಾಪ್ರಭುತ್ವ ವ್ಯವಸ್ಥೆ ಸಮರ್ಪಕವಾಗಿ ಕಾರ್ಯನಿರ್ವಹಿಸುತ್ತಿಲ್ಲ ಎನ್ನುವ ಮಾತಿದೆ. ಜಗತ್ತಿನಾದ್ಯಂತ ಮೈಚಾಚಿಕೊಂಡಿರುವ ಹಲವಾರು ಕನ್ನಡ ಕೂಟಗಳಲ್ಲಿ ಅನೂಚಾನವಾಗಿ ಕೆಲವರದ್ದೇ ಪಾರುಪತ್ಯ ನಡೆಯುತ್ತಿದೆಯೆಂದು ಆಯಾ ಕನ್ನಡ ಸಂಘದ ಸದಸ್ಯರು ತಮ್ಮತಮ್ಮಲ್ಲೇ ಬೇಜಾರುಪಟ್ಟುಕೊಳ್ಳುತ್ತಾರೆ. ಹಾಗಾಗಿ ಹೊಸಬರಿಗೆ ಅವಕಾಶಗಳು ಕಡಿಮೆ. ಇದರ ಪರಿಣಾಮ ಕನ್ನಡ ಸಂಘಗಳಲ್ಲಿ ಪಾಚಿಕಟ್ಟಿಕೊಂಡಿದೆ ಎನ್ನುವ ಅಪಸ್ವರಗಳು ಹಲವು ದಿಕ್ಕಿನಿಂದ ಕೇಳಿಬರುತ್ತವೆ. ಕನ್ನಡ ಸಂಘಕ್ಕೊಂದು ಸಂವಿಧಾನ, ಹೊಸ ಸವಾಲುಗಳಿಗೆ ಅನುಗುಣವಾಗಿ ಸಂವಿಧಾನಕ್ಕೆ ತಿದ್ದುಪಡಿ, ಸಂವಿಧಾನಕ್ಕೆ ತಕ್ಕಂತೆ ಕೆಲಸ ಕಾರ್ಯ ಹಾಗೂ ಕಾಲಕಾಲಕ್ಕೆ ಚುನಾವಣೆಗಳು ತಪ್ಪದೆ ನಡೆಯಬೇಕೆಂದು ಅನೇಕ ಸದಸ್ಯರು ಆಶಿಸುತ್ತಾರೆ.

ಕನ್ನಡ ಸದಸ್ಯರು ಹೆಚ್ಚು ಸಂಖ್ಯೆಯಲ್ಲಿರುವ ಹಾಗೂ ಕ್ರಿಯಾಶೀಲ ಕನ್ನಡಿಗರೇ ತುಂಬಿರುವ ಕನ್ನಡ ಕೂಟಗಳನ್ನು ಹೊಂದಿರುವ ದೇಶ ಉತ್ತರ ಅಮೆರಿಕ. ಅಲ್ಲಿನ ಕೆಲವು ಕನ್ನಡ ಕೂಟಗಳಲ್ಲಿ ಪ್ರಜಾಪ್ರಭುತ್ವ ವ್ಯವಸ್ಥೆಗೆ ಸಂಚಕಾರ ಬಂದಿರುವ ಆರೋಪಗಳು ಪೂರ್ಣ ನಿಜವೂ ಅಲ್ಲ , ಪೂರ್ಣ ಸುಳ್ಳೂ ಅಲ್ಲ. ಕನ್ನಡ ನಾಡಿನ ಹೊರಗೆ ಅತ್ಯಂತ ಹೆಚ್ಚು ಕನ್ನಡ ಸಂಘಗಳನ್ನು ಹೊಂದಿರುವ ಅಮೆರಿಕೆಯಲ್ಲಿ ಅನೇಕ ಕನ್ನಡ ಕೂಟ/ ಸಂಘಗಳು ಪ್ರಜಾಪ್ರಭುತ್ವದ ರೀತಿನೀತಿಗಳನ್ನು ತಪ್ಪದೆ ಪಾಲಿಸುತ್ತವೆ ಎಂಬ ಪ್ರಶಂಸೆಗೆ ಪಾತ್ರವಾಗಿರುವುದುಂಟು. ದಕ್ಷರು ಮತ್ತು ದೂರದೃಷ್ಟಿ ಹೊಂದಿರುವ ಪದಾಧಿಕಾರಿಗಳು ನೆಲೆಗೊಂಡಿರುವ ಸಂಘಗಳಲ್ಲಂತೂ ಡೆಮಾಕ್ರಸಿಯ ಲವಲವಿಕೆ ಎದ್ದು ಕಾಣುತ್ತದೆ.

ಈ ಪೈಕಿಯ ಕನ್ನಡ ಸಂಘಗಳಲ್ಲಿ ಒಂದೆನಿಸಿರುವ ದಕ್ಷಿಣ ಕ್ಯಾಲಿಫೋರ್ನಿಯ ಕನ್ನಡ ಸಂಘ ಇವತ್ತು ಸುದ್ದಿಯಲ್ಲಿದೆ.

ಎರಡು ವರ್ಷಗಳಿಗೊಮ್ಮೆ ನಡೆಯುವ ನಿರ್ದೇಶಕ ಮಂಡಳಿ ಸದಸ್ಯರ ಚುನಾವಣೆಗಳು ಏಪ್ರಿಲ್‌ 17ರಂದು ನಡೆಯಲಿದೆ. ಅಂದೇ ಯುಗಾದಿ ಹಬ್ಬಾಚರಣೆ ಕಾರ್ಯಕ್ರಮವೂ ಏರ್ಪಾಟಾಗಿದೆ. KCA ಕನ್ನಡ ಕೂಟದ 9 ಮಂದಿ ನಿರ್ದೇಶಕ ಸ್ಥಾನಗಳಿಗೆ ಈ ಬಾರಿ 12 ಮಂದಿ ಆಕಾಂಕ್ಷಿಗಳಿದ್ದಾರೆ. 2002-04 ನೇ ಸಾಲಿನಲ್ಲಿ ಇಬ್ಬರು ಕನ್ನಡತಿಯರು (ಜಯಂತಿ ಮತ್ತು ಲಕ್ಷ್ಮಿ ಕೃಷ್ಣಮೂರ್ತಿ) ನಿರ್ದೇಶಕರಾಗಿ ಕಾರ್ಯನಿರ್ವಹಿಸಿದ್ದರು. 2004-06 ಸಾಲಿನ ಸ್ಪರ್ಧಾ ಕಣದಲ್ಲೂ ಇಬ್ಬರು ಮಹಿಳಾಮಣಿಗಳಿದ್ದಾರೆ. ಮಹಿಳಾ ಪ್ರಾತಿನಿಧ್ಯ ಅದೇಕೊ ಏರುತ್ತಿಲ್ಲ !

ಕೆಸಿಎ ಕನ್ನಡ ಸಂಘದ ಏಳಿಗೆಗೆ ದುಡಿಯಲು ಕಂಕಣ ಬದ್ಧವಾಗಿರುವ ಸ್ಪರ್ಧಿಗಳ ಸ್ಥೂಲ ಪರಿಚಯ ಮಾಡಿಕೊಡುವ ಪ್ರಯತ್ನವನ್ನು ದಟ್ಸ್‌ಕನ್ನಡ ಮಾಡಿದೆ. ಸ್ವತಃ ತಾವೇ ಅಭ್ಯರ್ಥಿಯಾಗಿರುವ ಉತ್ಸಾಹಿ ಕನ್ನಡಿಗ ವಲ್ಲೀಶ ಶಾಸ್ತ್ರಿ ರವಾನಿಸಿರುವ ಕ್ಯಾಂಡಿಡೇಟ್‌ಗಳ ಕಿರು ಪರಿಚಯ ಇಲ್ಲಿದೆ- ಓದಿ.

12 ಮಂದಿ ಅಭ್ಯರ್ಥಿಗಳ ಪೈಕಿ 9 ಮಂದಿಯ ಪರಿಚಯ ಮತ್ತು ಅವರ ಭಾವಚಿತ್ರಗಳನ್ನು ಮವಾಸು ಅವರ ಚಿತ್ರ-ವರದಿಯಲ್ಲಿ ಕಾಣುವಿರಿ. ಉಳಿದ ಮೂರು ಮಂದಿ ಯಾರು ? ಕನ್ನಡ ಕೂಟದ ಅಧಿಕೃತ ವೆಬ್‌ಜಾಲ ನೋಡಿ.

ಮುಖಪುಟ / ಎನ್‌ಆರ್‌ಐ

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X