ವಸಂತೋತ್ಸವ - ಅಮೃತದಂತಹ ಒಂದು ನೆನಪು!
ಮೇ ತಿಂಗಳಿನ ಇಪ್ಪತ್ತೊಂಭತ್ತರಂದು ಫಿಲಿಡೆಲ್ಫಿಯಾದಲ್ಲಿ ನಡೆದ ವಸಂತೋತ್ಸವ, ಆ ಕಾರ್ಯಕ್ರಮದಲ್ಲಿ ಭಾಗವಹಿಸಿದವರ ಮನಸ್ಸಿನಲ್ಲಿ ಅನೇಕ ಕಾಲ ಉಳಿಯಬಹುದಾದಂತಹ ಒಂದು ಶಾಶ್ವತ ಸಿಹಿನೆನಪು! ಈ ಕಾರ್ಯಕ್ರಮದ ಸುದೀರ್ಘವಾದ ಪಟ್ಟಿಯನ್ನು ನೋಡಿ ಇತರರಿಗೆ ಹೇಗನ್ನಿಸಿತೋ ಏನೋ, ನನಗಂತೂ ಗಾಬರಿಯಾಗಿದ್ದು ನಿಜ. ಏಕೆಂದರೆ ಒಂದೇ ಜಾಗದಲ್ಲಿ ಐದು ನಿಮಿಷ ಕೂಡ ಗಂಭೀರವಾಗಿ ಕುಳಿತುಕೊಳ್ಳಲಾರದ ನನ್ನಂತಹ ಚಂಚಲ ಮನಸ್ಕರಿಗೆ ಘಂಟೆಗಟ್ಟಲೆ ಇದ್ದ ಮುಖ್ಯ ಅತಿಥಿಗಳ ಭಾಷಣದ ಒಂದೇ ಕಾರ್ಯಕ್ರಮವೇ ಸಾಕಾಗಿತ್ತು - ಬೆದರಿಸಿ ಮೂರ್ಛೆ ಬರಿಸಲು! ಇಷ್ಟು ಸಾಲದೆಂಬಂತೆ ಅದರ ಜೊತೆಗೆ, ಮೊದಲೇ ಹೆದರಿದವರ ಮೇಲೆ ಹಲ್ಲಿ ತಂದು ಎಸೆದಂತೆ ಇಂತದ್ದೇ ಚಿಕ್ಕ-ಪುಟ್ಟ ಹಲವಾರು ಭೀಷಣ ಭಾಷಣಗಳು! ಅದರೆ ನನ್ನ ಭಯ ನಿಷ್ಕಾರಣವಾಗಿತ್ತೆಂದು ನನಗೆ ತಿಳಿದಿದ್ದು ಅನಂತರವೇ.
ಈ ಕಾರ್ಯಕ್ರಮಕ್ಕಾಗಿ ಕರ್ನಾಟಕದಿಂದ ಆಗಮಿಸಿದ್ದ ಕುವೆಂಪುರವರ ಪ್ರಿಯ ಶಿಷ್ಯ ಡಾ. ಪ್ರಭುಶಂಕರರ ಭಾಷಣ ಅಂದಿನ ಶ್ರೋತೃಗಳೆಲ್ಲರ ಪಾಲಿಗೆ ಸಾಹಿತ್ಯದ ರಸಯಾತ್ರೆಯೇ ಸರಿ. ತಿಳಿಹಾಸ್ಯದೊಡನೆ ಕೂಡಿದ, ಸರಳ, ಸುಂದರವಾದ ನುಡಿಗಳಲ್ಲಿದ್ದು ಪಂಡಿತ-ಪಾಮರರೆಲ್ಲರಿಗೂ ಹಿತವಾಗುವಂತಿತ್ತು - ಸವಿಜೇನಿನೊರತೆಯ ಆ ಭಾಷಣ. ಕೇಳುತ್ತಿದ್ದವರಿಗೆ ಸಮಯ ಸರಿದಿದ್ದೇ ತಿಳಿಯಲಿಲ್ಲ. ಅವರು ಮತ್ತೂ ಒಂದು ತಾಸು ಮಾತಾಡಿದರೂ ತಾಳ್ಮೆಯಿಂದ ಕುಳಿತು ಕೇಳಲು ಸಭಿಕರು ತಯಾರಿದ್ದರೂ - ವಲ್ಲೀಶ ಶಾಸ್ತ್ರಿಯವರಿಂದ ‘ಘಂಟಾನಾಯಕ' ಎಂದು ಬಿರುದಾಂಕಿತರಾದ ಶ್ರೀ ಜಯರಾಮ ಉಡುಪರು ‘ಕಾಲದ ಹಕ್ಕಿ ಹಾರುತಿದೆ ನೋಡಿದಿರಾ?' ಎನ್ನುತ್ತಾ ‘ಕಾಲನ ಗಂಟೆ' ಯನ್ನು ಬಾರಿಸಿಯೇಬಿಟ್ಟಿದ್ದರು!
ಸಾಧಾರಣವಾಗಿ ಕವಿಗಳು ಎಂದರೆ ಕೇಳುಗರ ಕಿವಿಗಳನ್ನು ಕೊರೆಯುತ್ತಾರೆ ಎಂಬುದು ಜನಸಾಮಾನ್ಯರ ನಡುವೆ ಪ್ರಚಲಿತವಿರುವ ಒಂದು ಜೋಕು. ಅದಕ್ಕೆ ತಕ್ಕಂತೆ ಕವಿಗೋಷ್ಠಿಗಳು ಜನರೇ ಇಲ್ಲದೆ ನೊಣ ಹೊಡೆಯುವುದು ಜೋಕೇನಲ್ಲ ! ಆದರೆ ಈ ಮಾತಿಗೆ ಅಪವಾದದಂತಿತ್ತು - ಇಲ್ಲಿ ಮೈ.ಶ್ರೀ. ನಟರಾಜರ ಅಧ್ಯಕ್ಷತೆಯಲ್ಲಿ ನಡೆದ ಸಾಹಿತ್ಯ ಗೋಷ್ಠಿ. ಸಾಹಿತ್ಯಾಸಕ್ತ , ಉತ್ಸಾಹಿ ಶ್ರೋತೃಗಳು ತೋರಿಸುತ್ತಿದ್ದ ಉತ್ತೇಜಕ ಪ್ರತಿಕ್ರಿಯೆ, ಪ್ರಚಂಡ ಕರತಾಡನಗಳು ಉದಯೋನ್ಮುಖ ಕವಿ, ಕವಯಿತ್ರಿಯರನ್ನು ಹುರಿದುಂಬಿಸುವಂತಿತ್ತು. ಕನ್ನಡ ಜನಗಳು ಕೈಬಿಚ್ಚಿ ಚಪ್ಪಾಳೆ ಕೂಡ ಹೊಡೆಯದ ಕೃಪಣರು ಎನ್ನುವ ಮಾತೂ ಕೂಡ ಇಲ್ಲಿ ಹುಸಿಯಾಗಿಹೋಯಿತು! ನಂತರದ ವಿರಾಮ ಸಮಯದಲ್ಲಿಯೂ ಬರಹಗಾರರು ಅಭಿಮಾನಿಗಳ ಮೆಚ್ಚಿಗೆ, ಅಭಿನಂದನೆ, ಪ್ರಶಂಸೆಗಳ ಸುರಿಮಳೆಯಲ್ಲಿ ಮಿಂದು ಧನ್ಯರಾಗಿಹೋದರು!
ದಿನವಿಡೀ ನಡೆದ ಕಾರ್ಯಕ್ರಮಗಳದ್ದೇ ಒಂದು ತೂಕವಾದರೆ, ‘ಕಾವೇರಿ' ಕನ್ನಡಕೂಟದ ಕಲಾವಿದರು ನಡೆಸಿಕೊಟ್ಟ ‘ಬೆರಳ್ಗೆ ಕೊರಳ್' ನಾಟಕದ್ದೇ ಇನ್ನೊಂದು ತೂಕ. ನಿರ್ದೇಶಕ ತಾವರೆಕೆರೆ ಶ್ರೀಕಂಠಯ್ಯನವರು ಅದೆಲ್ಲಿಂದ ಹುಡುಕಿ ತಂದರೋ? ಈ ಅಭಿಜಾತ ಅನರ್ಘ್ಯ ಪ್ರತಿಭೆಗಳನ್ನು! ಒಂದು ಮಗುವಿನ ತಂದೆಯಾಗಿದ್ದರೂ, ಎಳೆಯ ಬಾಲಕನೊಬ್ಬನ ಹಾಲು ಹಾಲು ಮುಗ್ಧತೆಯನ್ನು ಮುಖದ ಮೇಲೆ ಹಾಗೆಯೇ ಉಳಿಸಿಕೊಂಡಿರುವ, ಏಕಲವ್ಯನ ಪಾತ್ರಧಾರಿ - ರವಿ ಹರಪನಹಳ್ಳಿಯವರು ಅಬ್ಬೆ, ಅಬ್ಬೆ ಎಂದು ಲಲ್ಲೆಗರೆಯುತ್ತಿದ್ದರೆ, ಅಬ್ಬೆಯ ಪಾತ್ರಧಾರಿ ಸುಮಾ ಮುರಳಿಧರ್ ಅವರು ಬಚ್ಚಾ....ಬಚ್ಚಾ..... ಎಂದು ಹಲುಬುತ್ತಿದ್ದರೆ ನನ್ನ ಕರುಳಿನಲ್ಲಿ ಎಂತದೋ ಅಲ್ಲೋಲಕಲ್ಲೋಲ! ‘ಒಂದು ಬಿನ್ನಹ ಹುಲಿಯೇ ಕೇಳು, ಕಂದನಿರುವನು ದೊಡ್ಡಿಯಾಳಗೆ' - ಎನ್ನುತ್ತಾ ಚಂಡವ್ಯಾಘ್ರನ ಮುಂದೆ ಅಂಗಲಾಚುತ್ತಾ ನಿಂತ ಪುಣ್ಯಕೋಟಿಯಂತೆ ನನ್ನ ಮನಸ್ಸೆಲ್ಲಾ ದೂರದ ಶಿಕಾಗೋ ಮನೆಯಲ್ಲಿ ಬಿಟ್ಟುಬಂದಿದ್ದ ನನ್ನ ಚಿಕ್ಕ ಮಕ್ಕಳ ಹಿಂದೆ ಮುಂದೆ ಸುತ್ತಾಡತೊಡಗಿತು!
ವಿಪ್ರ ವಟುವಿನ ತೇಜಸ್ಸಿನಿಂದ ಬೆಳಗುತ್ತಿದ್ದ ಅಶ್ವತ್ಥಾಮ, ಶಿಷ್ಯನ ಕೈಬೆರಳನ್ನು ಪಡೆದೂ ಹರುಷ ಪಡದೆ, ಪಶ್ಚಾತ್ತಾಪದ ಬೆಂಕಿಯಲ್ಲಿ ಬೆಂದು ಹೋಗುತ್ತಿದ್ದ ದ್ರೋಣಾಚಾರ್ಯ, ಹೆಚ್ಚು ಮಾತಿಲ್ಲದೆ ಮುಖಭಾವದಲ್ಲೇ ಅಹಂಕಾರ, ಗರ್ವಗಳನ್ನು ಸಮರ್ಥವಾಗಿ ವ್ಯಕ್ತಪಡಿಸುತ್ತಿದ್ದ ಅರ್ಜುನ - ಪ್ರತಿಯಾಬ್ಬರೂ ಕೂಡ ಆ ಕ್ಷಣದಲ್ಲಿ ತಾವು ತಾವಾಗಿರದೆ, ತಾವು ವಹಿಸುತ್ತಿದ್ದ ಪಾತ್ರಗಳಲ್ಲಿ ಪರಕಾಯ ಪ್ರವೇಶ ಮಾಡಿಬಿಟ್ಟಿದ್ದಾರೇನೋ ಎಂದು ನನಗೆ ಅನ್ನಿಸುತ್ತಿತ್ತು. ನಾಟಕದ ಕೊನೆಯ ದೃಶ್ಯದಲ್ಲಿ ಏಕಲವ್ಯನ ಕತ್ತರಿಸಿದ ಹೆಬ್ಬೆರಳನ್ನು ಕಂಡು ಅವನ ಅಬ್ಬೆ ಮಾಡುವ ಕರುಳು ಕತ್ತರಿಸುವಂತಹ ಆಕ್ರಂದನಕ್ಕೆ ಮರುಗಿದ ಅದೆಷ್ಟೋ ಪ್ರೇಕ್ಷಕರ ಕಣ್ಣಾಲಿಗಳು ಕಂಬನಿಯಿಂದ ಹೊಳೆಯುತ್ತಿದ್ದುದನ್ನು ಆ ಕತ್ತಲಿನಲ್ಲಿಯೂ ನಾನು ಕಂಡುಬಿಟ್ಟೆ ! ಈ ನಾಟಕವನ್ನು ಮೆಚ್ಚಿ, ಯಾರಾದರೂ ಬಹುಮಾನ ಕೊಡುವುದಾದರೆ ಅದು ಒಂದೇ - ಮೊದಲನೆಯ ಬಹುಮಾನ. ಅದರಲ್ಲಿ ನಟ-ನಿರ್ದೇಶಕ-ತಂತ್ರಜ್ಞರಿಂದ ಹಿಡಿದು ನೋಡುಗರಿಗೂ ಸರಿಸಮ ಪಾಲು! ಎಲ್ಲರಿಗೂ ಪೀಸ್-ಪೀಸ್!
ನಾನು ಭಾವಜೀವಿ. ಎಂತಹ ಬರಡುನೆಲವನ್ನೂ ಬಿಡದೆ ಪ್ರೀತಿಯ ಪಸೆಗಾಗಿ ಕೆದರುವ ಅಶಾಜೀವಿ. ಸಹಜವಾಗಿಯೇ ನನ್ನಲ್ಲಿ ತವರಿನ ನೆನಪುಗಳು ತುಳುಕಾಡುವುದು ಹೆಚ್ಚು ! ಈಗಲೂ ಹಾಗೆಯೇ ಹೇಳಬೇಕೆಂದರೆ - ಬಹುದಿನಗಳ ನಂತರ ತವರಿಗೆ ಹೋದ ಹೆಣ್ಣುಮಗಳೊಬ್ಬಳು, ಅಣ್ಣ-ತಮ್ಮಂದಿರು ನೀಡಿದ ಉಡುಗೊರೆಗಳ ಭಾರಕ್ಕೆ ಹಿಗ್ಗಿ ಹೋಗುವಂತೆ ನಾನು ಕೂಡ ಈ ವಸಂತದ ಸಂಭ್ರಮದ ಹಬ್ಬದಲ್ಲಿ ಭಾಗವಹಿಸಿ, ಅಲ್ಲಿಯ ನಗು, ಹರಟೆ, ಕೀಟಲೆ, ತುಂಟಾಟದ ಮಧುರನೆನಪುಗಳಿಂದ ಭಾರವಾದ ಮನಸ್ಸು , ಗರಿಯಷ್ಟೇ ಹಗುರವಾದ ಹೃದಯ ಹೊತ್ತು ಮತ್ತೆ ನನ್ನೂರಿಗೆ, ನನ್ನವರಲ್ಲಿಗೆ ಹಿಂತಿರುಗಿದೆ!!
-
Gas Booking New Rules: ಎಲ್ಪಿಜಿ ಗ್ಯಾಸ್ ಬುಕ್ಕಿಂಗ್ನಲ್ಲಿ ಹೊಸ ನಿಯಮ, ಎಷ್ಟು ದಿನಕ್ಕೆ ಸಿಗುತ್ತೆ ಗ್ಯಾಸ್ ಸಿಲಿಂಡರ್ -
Ram Gopal Varma: ದಾವೂದ್ ಇಬ್ರಾಹಿಂ ಇಲ್ಲದಿದ್ದರೆ ನಾನು ಬದುಕು ಕಟ್ಟಿಕೊಳ್ಳುತ್ತಿರಲಿಲ್ಲ: ನಿರ್ದೇಶಕ ರಾಮ್ ಗೋಪಾಲ್ ವರ್ಮಾ -
Asha Bhosle Kannada Songs: ಆಶಾ ಭೋಸ್ಲೆ ಹಾಡಿದ ಕನ್ನಡದ ಹಾಡುಗಳು: ಕರ್ನಾಟಕದ ಜನರ ಮನ ಗೆದ್ದ ಖ್ಯಾತ ಗಾಯಕಿ -
Banana Price: ತಮಿಳುನಾಡು ಬಿಸಿಗಾಳಿ ಎಫೆಕ್ಟ್ಗೆ ಕುಸಿದ ಬಾಳೆಹಣ್ಣು ಧಾರಣೆ: ಬೆಂಗಳೂರಿನಲ್ಲಿ ಕೆ.ಜಿಗೆ 7 ರೂಪಾಯಿ -
Summer Specail Train: ಮೈಸೂರಿನಿಂದ ಇಲ್ಲಿಗೆ ವಿಶೇಷ ಎಕ್ಸ್ಪ್ರೆಸ್ ರೈಲು, 3 ರಾಜ್ಯಗಳಿಗೆ ಅನುಕೂಲ -
April 12 Horoscope: 12 ರಾಶಿಗಳಿಗೆ ಇಂದು ಹಣ-ಪ್ರೇಮದಲ್ಲಿ ಅದೃಷ್ಟ ಯಾರಿಗೆ? ಸಂಪೂರ್ಣ ವಿವರ -
IPL 2026: ಗಿಲ್ ಮತ್ತು ಬಟ್ಲರ್ ಸ್ಫೋಟಕ ಬ್ಯಾಟಿಂಗ್, ಎಲ್ಎಸ್ಜಿ ಮಣಿಸಿದ ಗುಜರಾತ್ ಟೈಟಾನ್ಸ್ -
Asha Bhosle: ಭಾರತೀಯ ಸಿನಿಮಾ ರಂಗದ ಖ್ಯಾತ ಗಾಯಕಿ ಆಶಾ ಭೋಸ್ಲೆ ಇನ್ನಿಲ್ಲ, ಸಂಗೀತ ರಾಣಿ ಎಂದೇ ಖ್ಯಾತಿ -
Karnataka Train: ಕಲಬುರಗಿ - ಕಲ್ಯಾಣ ಕರ್ನಾಟಕದಲ್ಲಿ ರೈಲು ಪ್ರಯಾಣಿಕರ ನಿತ್ಯ ಪರದಾಟ: ಸಿದ್ದು ಮಠಪತಿ ಬರಹ -
Vijay: ನಟ, ರಾಜಕಾರಣಿ ವಿಜಯ್ ಮಹತ್ವದ ಟ್ವೀಟ್ - ಅಪ್ರಬುದ್ಧ ರಾಜಕಾರಣಿ ಎಂದ ಡಿ.ಕೆ ಶಿವಕುಮಾರ್ Tamil Nadu Assembly Election -
Bhagyalakshmi Serial: ಕೊನೆಗೂ ಭಾಗ್ಯಲಕ್ಷ್ಮೀ - ಆದಿ ಮದುವೆ, ಮೂರು ಕುಟುಂಬಗಳನ್ನು ಒಂದು ಮಾಡುವ ಟಾಸ್ಕ್ -
Transfer: ಕರ್ನಾಟಕ ಶಿಕ್ಷಕರಿಗೆ ಸಿಹಿ ಸುದ್ದಿ: ವರ್ಗಾವಣೆ ನಿಯಮಗಳಲ್ಲಿ ಮಹತ್ವ ಬದಲಾವಣೆ, ಯಾರು ಅರ್ಹರು?












Click it and Unblock the Notifications