ದೀವಳಿಗೆ ಜೊತೆ ಕನ್ನಡ ಹಣತೆ ಬೆಳಗಿದ ಸಿಂಗಪುರ ಕನ್ನಡ ಸಂಘ
* ರಾಜೇಶ್, ಸಿಂಗಪುರ
ಒಂದು ಬೆಳಕಿನ ಹಬ್ಬ ದೀಪಾವಳಿ, ಇನ್ನೊಂದು ನಾಡಹಬ್ಬ ಕನ್ನಡ ರಾಜ್ಯೋತ್ಸವ. ನವಂಬರ 9 ರಂದು ಸಿಂಗಪುರ ಕನ್ನಡ ಸಂಘದಲ್ಲಿ ದೀಪಾವಳಿ ಮತ್ತು ನಾಡಹಬ್ಬದ ಸಂಭ್ರಮ. ಒಮ್ಮೆಗೇ ಎರಡು ಹಬ್ಬ. ದುಪ್ಪಟ್ಟು ಸಂಭ್ರಮ.
ವೈಷ್ಣವೀ ಶಶಿಕಾಂತರಿಂದ ‘ನಮ್ಮಮ್ಮ ಶಾರದೆ’ ಎಂಬ ಪ್ರಾರ್ಥನಾ ಕೃತಿಯಾಂದಿಗೆ ಕಾರ್ಯಕ್ರಮ ಶುರುವಾಯಿತು. ಸಿಂಗಪುರದ ಚಿಣ್ಣರು ‘ಕರ್ನಾಟಕ ಪರಿಚಯ’ ಎಂಬ ಕಿರು ನಾಟಕವನ್ನು ಪ್ರದರ್ಶಿಸಿದರು. ಕರ್ನಾಟಕದ ವಿವಿಧ ಜಿಲ್ಲೆಗಳ ವಿಶೇಷತೆ, ಭಾಷಾ ವೈವಿಧ್ಯತೆಗಳನ್ನು ಮಕ್ಕಳು ನಾಟಕದಲ್ಲಿ ಬಣ್ಣಿಸಿದರು. ಪುಟಾಣಿ ಅಖಿಲೇಶ್ ವಿಜಯ್ಕುಮಾರ್ನ ಮುದ್ದಾದ ಹಾಡು ಎಲ್ಲರ ಮೆಚ್ಚುಗೆ ಗಳಿಸಿತು.
ನಂತರ ಬೆಂಗಳೂರಿನ ಪ್ರಸಿದ್ಧ ಗಾಯಕಿ, ಲೇಖಕಿ, ಬಿ.ಹೆಚ್.ಎಸ್. ಪ್ರಥಮ ದರ್ಜೆ ಕಾಲೇಜ್ನ ಕನ್ನಡ ವಿಭಾಗದ ಮುಖ್ಯಸ್ಥೆ ಅನಸೂಯಾ ದೇವಿಯ ಹಾಗೂ ಅವರ ಸೊಸೆ ವೈಷ್ಣವೀ ಶಶಿಕಾಂತ್ ಕನ್ನಡ ಸುಗಮ ಸಂಗೀತ ಹಾಗೂ ಸಿನಿಮಾ ಹಾಡುಗಳನ್ನು ಸುಶ್ರಾವ್ಯವಾಗಿ ಹಾಡಿ ಪ್ರೇಕ್ಷಕರನ್ನು ಮುದಗೊಳಿಸಿದರು.
ಸಿಂಗಾರ ಪ್ರಶಸ್ತಿ
ಹಬ್ಬದ ಸಂಭ್ರಮದ ಸಂದರ್ಭದಲ್ಲಿ 2001 ಇಸವಿಯ ‘ಸಿಂಗಾರ ಪ್ರಶಸ್ತಿ’ಯನ್ನು 4 ಮಂದಿ ಕನ್ನಡದ ಮಕ್ಕಳಿಗೆ ವಿತರಿಸಲಾಯಿತು. ಕಲಿಕೆ, ಕ್ರೀಡೆ ಹಾಗೂ ಇತರೇ ಚಟುವಟಿಕೆಗಳಲ್ಲಿ ಗಣನೀಯ ಸಾಧನೆಯನ್ನು ತೋರಿದ ಕನ್ನಡ ಸಂಘದ ಮಕ್ಕಳಿಗೆ- 2000 ಇಸವಿಯಿಂದ ಸಿಂಗಾರ ಪ್ರಶಸ್ತಿಯನ್ನು ನೀಡುವ ಮೂಲಕ ಕನ್ನಡ ಸಂಘ ಸನ್ಮಾನಿಸುತ್ತಿದೆ.
ಸಂಘದ ಮಹಿಳೆಯರು ಮುತುವರ್ಜಿಯಿಂದ ಸಿಹಿತಿನಿಸುಗಳನ್ನು ತಯಾರಿಸಿ ಕಾರ್ಯಕ್ರಮದಲ್ಲಿ ಭಾಗವಹಿಸಿದವರ ಬಾಯಿ ಸಿಹಿಗೊಳಿಸಿದ್ದು ಹಬ್ಬದ ಇನ್ನೊಂದು ವೈಶಿಷ್ಟ್ಯ.
ಅಂದಹಾಗೆ, ಸಂಘದ ಅಧ್ಯಕ್ಷ ಗುರುಪ್ರಕಾಶ್ ವಂದಿಸಿದರು. ರವಿ ಕಾರ್ಯಕ್ರಮ ನಿರ್ವಹಿಸಿದರು.
ಮುಖಪುಟ / ಸಾಹಿತ್ಯ ಸೊಗಡು











Click it and Unblock the Notifications