ಅಮೆರಿಕನ್ನಡತಿ ವಿಮಲಾ ಚನ್ನಬಸಪ್ಪನವರಿಗೆಬೆಂಗಳೂರಿನಲ್ಲಿ ಆತ್ಮೀಯ ಸನ್ಮಾನಗಳು
*ಶಿಕಾರಿಪುರ ಹರಿಹರೇಶ್ವರ
ಹುಟ್ಟಿದ ಊರಿನಿಂದ ದೂರದ ಅಮೇರಿಕದಲ್ಲಿ ನೆಲಸಿ, ಹಲವು ವರ್ಷಗಳಿಂದ ನಡೆಸಿದ ಕನ್ನಡ ಚಟುವಟಿಕೆಗಳಿಗಾಗಿ ಮತ್ತು ಅವರ ಬಹುಮುಖ ಪ್ರತಿಭೆಯ ವ್ಯಕ್ತಿತ್ವಕ್ಕಾಗಿ ವಿಮಲಾ ಚನ್ನಬಸಪ್ಪ ಅವರಿಗೆ ಕರ್ನಾಟಕದ ರಾಜಧಾನಿಯಲ್ಲಿ ಆತ್ಮೀಯ ಸನ್ಮಾನಗಳು ಇತ್ತೀಚೆಗೆ ನಡೆದವು. ಕನ್ನಡ ಸಾಹಿತ್ಯ ನೃತ್ಯ, ಸಂಗೀತ ಕ್ಷೇತ್ರಗಳಲ್ಲಿ ವಿಶೇಷ ಪರಿಣತಿ ಉಳ್ಳ ವಿಮಲಾ ಅವರು ಈ ಭಾರತೀಯ ಕಲೆಗಳನ್ನು ಅಮೆರಿಕಾದಲ್ಲಿ ಪ್ರದರ್ಶಿಸಿ, ಪ್ರಸರಿಸುವ ಮೂಲಕ ಅಮೆರಿಕನ್ನಡಿಗರಿಗೆ ಗೌರವ ತಂದಿದ್ದಾರೆ ಎಂದೂ, ಅಮೆರಿಕನ್ನಡಿಗರ ಸಾಧನೆಯತ್ತ ಕರ್ನಾಟಕದ ಗಮನ ಸೆಳೆದಿದ್ದಾರೆ ಎಂದೂ ಈ ಪುರಸ್ಕಾರಗಳು ಸಂದವು. ಬೆಂಗಳೂರಿನ ಹೊಂಬಾಳೆ ಪ್ರತಿಭಾರಂಗ ಮತ್ತು ಉಪಾಸನಾ - ಈ ಎರಡು ಸಂಸ್ಥೆಗಳು ವಿಮಲಾ ಅವರನ್ನು ಸನ್ಮಾನಿಸಿ ಗೌರವ ಫಲಕ ಮತ್ತು ಅಭಿನಂದನ ಪತ್ರ ನೀಡಿ ಸನ್ಮಾನಿಸಿದವು.
ಹೊಂಬಾಳೆ ಪ್ರತಿಭಾರಂಗದಲ್ಲಿ ಸನ್ಮಾನ :
ಹೊಂಬಾಳೆ ಪ್ರತಿಭಾ ರಂಗ ಫಲ್ಗುಣರ ನಾಯಕತ್ವದಲ್ಲಿ ತನ್ನ ಹಲವು ಮೌಲಿಕ ಕಾರ್ಯಕ್ರಮಗಳನ್ನು ನಡೆಸಿ ಬೆಂಗಳೂರಿನ ಕಲಾವಲಯದಲ್ಲಿ ಒಂದು ಭದ್ರ ಸ್ಥಾನ ಪಡೆದುಕೊಂಡಿದೆ. ಜನಪದ ಗೀತೆ, ವಚನ, ಚಿತ್ರಗೀತೆ, ಭಾವಗೀತೆ- ಹೀಗೆ ಸಂಗೀತದ ಹಲವು ವಿಭಾಗಗಳಲ್ಲಿ ಪ್ರತಿಭಾವಂತರನ್ನು ಶೋಧಿಸಿ, ಮುಂದೆ ಹೆಚ್ಚಿನ ತರಬೇತು ನೀಡಿ, ಭಾವೀ ಪೀಳಿಗೆಯ ಕಲಾವಿದರನ್ನು ಪ್ರೋತ್ಸಾಹಿಸುವ ಪ್ರಯತ್ನ ಹೊಂಬಾಳೆಯದು. ಅದು ಮೇ ತಿಂಗಳ 18ರಿಂದ 27ರ ಪೂರ್ತಿ ‘ಪ್ರತಿಭೋತ್ಸವ’ ಎಂಬ ಒಂಬತ್ತು ದಿನಗಳ ದೀರ್ಘ ಕಾರ್ಯಕ್ರಮ ನಡೆಸಿತು. ಹತ್ತನೆಯ ದಿನ, ನಗರದ ಹಿರಿಯರೆಲ್ಲರ ಎದುರಿಗೆ ಗೆದ್ದವರಿಗೆ ಬಹುಮಾನ ನೀಡಿ ಯುವ ಪ್ರತಿಭೆಗಳಿಂದ ಆಕರ್ಷಕವಾದ ಗಾಯನ ಕಾರ್ಯಕ್ರಮವನ್ನು ಹೊಂಬಾಳೆ ನಡೆಸಿತು. ಆ ದಿನ ವಿಮಲಾ ಅವರನ್ನು ವೇದಿಕೆಗೆ ಆಹ್ವಾನಿಸಿ, ಸಭೆಗೆ ಪರಿಚಯ ಮಾಡಿಕೊಟ್ಟು ಅವರನ್ನು ಸನ್ಮಾನಿಸಲಾಯಿತು. ಹೊಂಬಾಳೆಯ ಪರವಾಗಿ ಅವರನ್ನು ಹೆಸರಾಂತ ಕವಿ ಎನ್. ಎಸ್. ಲಕ್ಷ್ಮೀ ನಾರಾಯಣ ಭಟ್ಟರು ಸನ್ಮಾನಿಸಿದರು. ‘ಅಮೇರಿಕದಲ್ಲಿದ್ದರೂ ತವರು ನಾಡನ್ನು ಮರೆಯದೆ ಅವರು ಮಾಡಿದ ಸೇವೆಯನ್ನು ಜೀವಮಾನವಿಡೀ ಕಲಾರಾಧನೆ ಮಾಡುತ್ತಿರುವುದನ್ನು’ ಕೃತಜ್ಞತೆಯಿಂದ ಸ್ಮರಿಸುವ ಗೌರವ ಫಲಕವನ್ನು ವಿಮಲಾ ಅವರಿಗೆ ನೀಡಲಾಯಿತು. ಎರಡು ರಾಷ್ಟ್ರಗಳಲ್ಲಿನ ಕನ್ನಡಿಗರ ನವಡುವಣ ಸಂಬಂಧ ಬೆಸೆಯುವ ಈ ಕಾರ್ಯಕ್ರಮವನ್ನು ರವೀಂದ್ರ ಕಲಾಕ್ಷೇತ್ರದಲ್ಲಿ ಅಂದು ಕಿಕ್ಕಿರಿದಿದ್ದ ಸಭಿಕರೆಲ್ಲ ಬಹಳ ಮೆಚ್ಚಿಕೊಂಡರು. ಒಂಬತ್ತು ದಿನಗಳ ಈ ದೀರ್ಘ ಉತ್ಸವದಲ್ಲಿ ಬೆಂಗಳೂರಿನ ಮೇಯರ್ ಪ್ರೇಮಾ ಕಾರಿಯಪ್ಪ, ಎಚ್.ಕೆ. ನಾರಾಯಣ, ಬಿ.ಕೆ. ಸುಮಿತ್ರ, ಶಿವಮೊಗ್ಗ ಸುಬ್ಬಣ್ಣ, ರಾಜು ಅನಂತ ಸ್ವಾಮಿ. ವೈ.ಕೆ. ಮುದ್ದುಕೃಷ್ಣ, ಪುತ್ತೂರು ನರಸಿಂಹ ನಾಯಕ್, ಯಶವಂತ ಹಳಿಬಂಡಿ, ಸಂಗೀತಾ ಕಟ್ಟಿ, ವೇಮಗಲ್ ನಾರಾಯಣ ಸ್ವಾಮಿ, ಬಾನಂದೂರು ಕೆಂಪಯ್ಯ, ಅಪ್ಪಗೆರೆ ತಿಮ್ಮರಾಜು ಮೊದಲಾದ ಪ್ರಸಿದ್ಧ ಕಲಾವಿದರು ಪಾಲುಗೊಂಡಿದ್ದರು. ಕಡೆಯ ದಿನ ಜಿ.ಪಿ. ರಾಮಣ್ಣ ಇಡೀ ಕಾರ್ಯಕ್ರಮವನ್ನು ಆಕರ್ಷ ಕ ರೀತಿಯಲ್ಲಿ ನಿರ್ವಹಿಸಿದರು.
ಉಪಾಸನಾ ಅಭಿನಂದನ
ಜೂನ್ 9ನೇ ದಿನಾಂಕ ಬೆಂಗಳೂರಿನ ಉಪಾಸನಾ ಸಂಸ್ಥೆ ತನ್ನ ಎರಡನೆಯ ವಾರ್ಷಿಕೋತ್ಸವವನ್ನು ವಿಜೃಂಭಣೆಯಿಂದ ಆಚರಿಸಿತು. ಉತ್ತಮ ಸ್ವರ ಸಂಯೋಜಕರು ಆಗಿದ್ದು, ನಾಳಿನ ಹಿರಿಯ ಭರವಸೆಯಾಗಿರುವ ಮತ್ತು ಎಂಭತ್ತು ಜನ ಕಿರಿಯ ಕಲಾವಿದರ ಸಂಗೀತ ಶಾಲೆಯನ್ನು ನಡೆಸಿಕೊಂಡು ಬರುತ್ತಿರುವ ಜೆ. ಮೋಹನ್ ಅವರು ಈ ಸಂಸ್ಥೆಯ ಸ್ಥಾಪಕರು. ತಮ್ಮ ಗುರುವಾಗಿದ್ದ ದಿವಂಗತ ಜಿ.ವಿ. ಅತ್ರಿಯವರ ಹೆಸರಿನಲ್ಲಿ ‘ಅತ್ರಿ ಪ್ರಶಸ್ತಿ’ಯನ್ನು ಸ್ಥಾಪಿಸಿ, ಅದನ್ನು ಸುಗಮ ಸಂಗೀತದ ಯುವ ಪೀಳಿಗೆಯ ಶ್ರೇಷ್ಠ ವ್ಯಕ್ತಿಗೆ ನೀಡುವ ಮತ್ತು ಹಿರಿಯರೊಬ್ಬರನ್ನು ಸನ್ಮಾನಿಸುವ ಕಾರ್ಯಕ್ರಮ ಅದು. ಈ ಕಾರ್ಯಕ್ರಮವೂ ರಸಿಕ ಸಭಿಕರಿಂದ ತುಂಬಿ ಹೋಗಿದ್ದ ರವೀಂದ್ರ ಕಲಾಕ್ಷೇತ್ರದಲ್ಲಿಯೇ ಜರುಗಿತು. ಜೆ. ಮೋಹನ್ ಸ್ವರ ಸಂಯೋಜಿಸಿ ಹಾಡಿರುವ ಮತ್ತು ಇತರರಿಂದ ಹಾಡಿಸಿರುವ ‘ಉಪಾಸನಾ’ ಎಂಬ ಧ್ವನಿ ಸುರುಳಿಯನ್ನು ಮತ್ತು ಒಂದು ಸ್ಮರಣ ಸಂಚಿಕೆಯನ್ನು ಅಂದು ಬಿಡುಗಡೆ ಮಾಡಲಾಯಿತು. ಸ್ಮರಣ ಸಂಚಿಕೆಯಲ್ಲಿ ಪುತಿನ, ಎನ್. ಎಸ್. ಲಕ್ಷ್ಮೀನಾರಾಯಣ ಭಟ್ಟ, ಚಂಪಾ, ಮತ್ತು ಲಕ್ಷ್ಮಣರಾವ್ ಅವರ ಕವಿತೆಗಳಿವೆ. ‘ಸಾ ರೆ ಗಾ ಮ’ ಖ್ಯಾತಿಯ ಪ್ರತಿಭಾವಂತ ಗಾಯಕಿ ಅರ್ಚನಾ ಉಡುಪರಿಗೆ ಆ ದಿನ ಅತ್ರಿ ಪ್ರಶಸ್ತಿ ನೀಡಲಾಯಿತು. ವಿಮಲಾ ಅವರನ್ನು ವೇದಿಕೆಗೆ ಆಹ್ವಾನಿಸಿ ಸಭಿಕರಿಗೆ ಅವರ ಪರಿಚಯ ನೀಡಿ ಗೌರವ ಸಲ್ಲಿಸಲಾಯಿತು. ಸಂಸ್ಥೆಯ ಪರವಾಗಿ ಹೆಸರಾಂತ ಸುಗಮ ಸಂಗೀತ ಗಾಯಕ ಶಿವಮೊಗ್ಗ ಸುಬ್ಬಣ್ಣ ಅವರು ವಿಮಲಾ ಅವರಿಗೆ ಹೂ , ಹಣ್ಣು, ಗೌರವ ಫಲಕ ನೀಡಿದರು. ಮೋಹನ್ ಸನ್ಮಾನ ಪತ್ರ ನೀಡಿ ಶಾಲು ಹೊದಿಸಿ ವಿಮಲಾ ಅವರನ್ನು ಗೌರವಿಸಿದರು. ಆಗ ವಿಮಲಾ ಅವರ ಮೇಲೆ ಮೇಲಿನಿಂದ ಹೂಮಳೆ ಕರೆದಿದ್ದು ಕಣ್ಣು ಸೆಳೆಯುವಂತಿತ್ತು. ತಮ್ಮ ಧ್ವನಿ ಸುರುಳಿಯಲ್ಲಿ ವಿಮಲಾ ಅವರೇ ಹಾಡಿರುವ ಅವರದೇ ಕವಿತೆಯನ್ನು ಸನ್ಮಾನ ಹೊತ್ತಿನಲ್ಲಿ ನುಡಿಸಲಾಯಿತು. ವಿಮಲಾ ಸ್ವಲ್ಪ ಹೊತ್ತು ಮಾತನಾಡಿ ಒಂದು ವಚನವನ್ನು ಸೊಗಸಾಗಿ ಓದಿದರು.
ದೂರದರ್ಶನ ಆಕಾಶವಾಣಿ ಪ್ರಸಾರ -
ಈ ಸಂಭ್ರಮದ ಕಾರ್ಯಕ್ರಮವನ್ನು ಮಾರನೆಯ ದಿನ ಬೆಂಗಳೂರು ದೂರದರ್ಶನ ತನ್ನ ಸುದ್ದಿ ಸಂಚಿಕೆಯಲ್ಲಿ ನಾಡಿಗೆಲ್ಲ ಪ್ರಸಾರ ಮಾಡಿತು. ಸನ್ಮಾನದ ದಿನವೇ ಬೆಳಗಿನ ಉದಯವಾಣಿ ಪತ್ರಿಕೆಯಲ್ಲಿ ವಿಮಲಾ ಅವರ ವ್ಯಕ್ತಿತ್ವ ಕುರಿತು ಪ್ರೊ. ಎನ್. ಎಸ್. ಎಲ್. ಭಟ್ಟರು ಬರೆದ ಲೇಖನವೊಂದು ಲಕ್ಷಾಂತರ ಕನ್ನಡಿಗರ ಗಮನ ಸೆಳೆಯಿತು. ಜೂನ್ 19ರಂದು ಬೆಂಗಳೂರು ಆಕಾಶವಾಣಿ ವಿಮಲಾ ಅವರ ಸಂದರ್ಶನ ಕಾರ್ಯಕ್ರಮವನ್ನು ಪ್ರಸಾರ ಮಾಡಿತು. ಪ್ರಸಿದ್ಧ ಗಾಯಕಿ ಮಾಲತಿ ಶರ್ಮ ಅವರು ವಿಮಲಾರ ಜೊತೆ ಸಂವಾದ ನಡೆಸಿದರು.
ವಿಮಲಾ ಚನ್ನಬಸಪ್ಪ ಅವರು ಬೆಂಗಳೂರಿಗೆ ಹೋದದ್ದು ಸ್ವಂತ ಕೆಲಸವೊಂದಕ್ಕೆ. ಆದರೆ ಈಚೆಗೆ ಅವರ ಸಾಧನೆಯನ್ನು ಅರಿತುಕೊಂಡ ರಾಜಧಾನಿಯ ಸಂಘಸಂಸ್ಥೆಗಳು ಈ ಪ್ರವಾಸವನ್ನು ಅವರ ಒಂದು ವಿಜಯ ಯಾತ್ರೆಯಾಗಿ ಪರಿವರ್ತಿಸಿದ್ದು ಅ ತ್ಯಂತ ಸಂತೋಷದ ಸಂಗತಿ !
ವಾರ್ತಾ ಸಂಚಯ
ಮುಖಪುಟ / ಸಾಹಿತ್ಯ ಸೊಗಡು












Click it and Unblock the Notifications