ಏಪ್ರಿಲ್ 16 ರಿಂದ ದೆಹಲಿಯಲ್ಲಿ ಕನ್ನಡ ಭಾಷಿಕರ ರಾಷ್ಟ್ರೀಯ ಸಮ್ಮೇಳನ
ಬೆಂಗಳೂರು : ಕನ್ನಡ ಮಾತಾಡುವವರ 19ನೇ ರಾಷ್ಟ್ರೀಯ ಸಮ್ಮೇಳನ ಏಪ್ರಿಲ್ 16ರಿಂದ ಎರಡು ದಿನಗಳ ಕಾಲ ನವ ದೆಹಲಿಯಲ್ಲಿ ನಡೆಯಲಿದೆ ಎಂದು ಸಮ್ಮೇಳನದ ಸಂಚಾಲಕ ಹಾಗೂ ದೆಹಲಿ ಕನ್ನಡಿಗ ಪತ್ರಿಕೆ ಸಂಪಾದಕ ಎಂ.ಬಿ.ಸಾಮಗ ತಿಳಿಸಿದ್ದಾರೆ.
ನಗರದಲ್ಲಿ ಭಾನುವಾರ ಸುದ್ದಿಗೋಷ್ಠಿ ನಡೆಸಿದ ಅವರು ಈ ವಿಷಯ ತಿಳಿಸಿದರು. ದೆಹಲಿ ಕನ್ನಡ ಪತ್ರಿಕೆ ಈ ಸಮ್ಮೇಳನವನ್ನು ಆಯೋಜಿಸಿದ್ದು, ದೇಶದ 1000ಕ್ಕೂ ಹೆಚ್ಚು ಕಲಾವಿದರು, ಪ್ರೊಫೆಸರ್ಗಳು ಹಾಗೂ ಕನ್ನಡ ಒಕ್ಕೂಟಗಳ ಪ್ರತಿನಿಧಿಗಳು ಇದರಲ್ಲಿ ಭಾಗವಹಿಸಲಿದ್ದಾರೆ. ಮುಜರಾಯಿ ಖಾತೆ ಸಚಿವೆ ಸುಮಾ ವಸಂತ್ ಸಮ್ಮೇಳನ ಉದ್ಘಾಟಿಸಲಿದ್ದಾರೆ. ವಿಜ್ಞಾನಿ ಹಾಗೂ ಧಾರಾವಾಡ ಕೃಷಿ ವಿಶ್ವವಿದ್ಯಾಲಯದ ಮಾಜಿ ಉಪ ಕುಲಪತಿ ಎಂ.ಮಹದೇವಪ್ಪ ಸಮ್ಮೇಳನದ ಅಧ್ಯಕ್ಷತೆ ವಹಿಸಲಿದ್ದಾರೆ.
ಕೇಂದ್ರ ಜಾಗೃತಿ ಆಯುಕ್ತ ಎನ್.ವಿಠ್ಠಲ್ ಸ್ಮರಣ ಸಂಚಿಕೆಯನ್ನು ಬಿಡುಗಡೆ ಮಾಡುವರು. ಕರ್ನಾಟಕ ಸಾಂಸ್ಕೃತಿಕ ಹಬ್ಬವನ್ನು ಬೆಂಗಳೂರು ಮೇಯರ್ ಕೆ.ಚಂದ್ರಶೇಖರ್ ಉದ್ಘಾಟಿಸುವರು ಎಂದು ಸಾಮಗ ಹೇಳಿದರು.
ಬೆಂಗಳೂರು ವಿಶ್ವವಿದ್ಯಾಲಯದ ಮಾಜಿ ಉಪ ಕುಲಪತಿ ಎನ್.ಆರ್.ಶೆಟ್ಟಿ ಹಾಗೂ ವಿದೇಶಾಂಗ ವ್ಯವಹಾರಗಳ ಸಚಿವಾಲಯದ ವಕ್ತಾರೆ ನಿರುಪಮಾ ರಾವ್ ಅವರಿಗೆ ಉತ್ತಮ ದೆಹಲಿ ಕನ್ನಡಿಗ ಪ್ರಶಸ್ತಿ ಪ್ರದಾನ ಮಾಡಲಾಗುವುದು. ಪಂಜಾಬ್ ರಾಷ್ಟ್ರೀಯ ಬ್ಯಾಂಕ್ನ ಕಾರ್ಯಕಾರಿ ನಿರ್ದೇಶಕ ಟಿ.ಎಸ್.ನಾರಾಯಣಸ್ವಾಮಿ ಉತ್ತಮ ಬ್ಯಾಂಕರ್ ಪ್ರಶಸ್ತಿಗೆ ಆಯ್ಕೆಯಾಗಿದ್ದಾರೆ. ರಾಷ್ಟ್ರೀಯ ಮತ್ತು ಅಂತರರಾಷ್ಟ್ರೀಯ ಮಟ್ಟದಲ್ಲಿ ಕನ್ನಡ ಸಂಸ್ಕೃತಿಯನ್ನು ಹರಡುವುದು ಈ ಸಮ್ಮೇಳನದ ಉದ್ದಿಶ್ಯ ಎಂದರು.
(ಇನ್ಫೋ ವಾರ್ತೆ)