ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಉತ್ತರ ಕ್ಯಾಲಿಫೋರ್ನಿಯಾದಲ್ಲಿ ಗಣಪತಿ ಹಬ್ಬದ ಸಡಗರ

By Staff
|
Google Oneindia Kannada News

*ಸುಕುಮಾರ್‌ ರಘುರಾಮ್‌, ಸ್ಯಾಕ್ರಮೆಂಟೋ, ಕ್ಯಾಲಿಫೋರ್ನಿಯಾ

ಶನಿವಾರ ಆಗಸ್ಟ್‌ 25ರಂದು ಉತ್ತರ ಕ್ಯಾಲಿಫೋರ್ನಿಯಾದ ಕನ್ನಡಿಗರೆಲ್ಲರಿಗೂ ಸಂಭ್ರಮವೋ ಸಂಭ್ರಮ. ಅಂದು ಕನ್ನಡ ಕೂಟದ ಗಣೇಶನ ಹಬ್ಬದ ಸಮಾರಂಭ. ಪಾಲೋ ಆಲ್ಟೋದಲ್ಲಿನ ಸ್ಪಾನ್ಗೆನ್ಬರ್ಗ್‌ ಥಿಯೇಟರ್‌ ಸಭಾಂಗಣ ತುಂಬಿ ತುಳುಕಾಡಿ, ಹಬ್ಬದ ವಾತಾವರಣದಿಂದ ಕಂಗೊಳಿಸುತ್ತಿತ್ತು.

ಗಣೇಶನ ಪೂಜೆಯಾಂದಿಗೆ ಕಾರ್ಯಕ್ರಮ ಪ್ರಾರಂಭವಾಯಿತು. ಸನ್ನಿವೇಲ್‌ ದೇವಸ್ಥಾನದ ಪ್ರಧಾನ ಪುರೋಹಿತರಾದ ಗಜಾನನ ಜೋಷಿಯವರು ಕನ್ನಡ ಕೂಟದ ಪರವಾಗಿ ಎಸ್‌. ಕೆ. ಹರಿಹರೇಶ್ವರ ಮತ್ತು ನಾಗಲಕ್ಷ್ಮಿಯವರಿಂದಲೂ, ಕನ್ನಡ ಕೂಟದ ಚಿಣ್ಣರಿಂದಲೂ ಗಣೇಶನ ಪೂಜೆಯನ್ನು ಮಾಡಿಸಿದರು. ಇಲ್ಲೇ ಹುಟ್ಟಿ ಬೆಳೆದ ಮಕ್ಕಳಿಗೆ ನಮ್ಮ ಸಂಸ್ಕೃತಿ, ವಿಚಾರಗಳನ್ನು ಮನದಟ್ಟು ಮಾಡಿಸುವುದೇ ಇದರ ಉದ್ದೇಶ. ಬಣ್ಣ ಬಣ್ಣದ ಬಟ್ಟೆಗಳನ್ನು ಧರಿಸಿ ಬಂದ ಹತ್ತಾರು ಮಕ್ಕಳು ಗಣೇಶನಿಗೆ ನಮಿಸುವುದನ್ನು ನೋಡಿದ ತಾಯಿತಂದೆಯರ ಸಂತೋಷಕ್ಕೆ ಪಾರವೇ ಇರಲಿಲ್ಲ.

ಸಾಂಸ್ಕೃತಿಕ ಕಾರ್ಯಕ್ರಮವು ಜ್ಯೋತಿ ಸತೀಶ್‌ ಅವರ ಪ್ರಾರ್ಥನೆಯಾಂದಿಗೆ ಪ್ರಾರಂಭವಾಯಿತು. ‘ಗಣಪತಿ ಹಬ್ಬವನ್ನಂತೂ ಭರ್ಜರಿಯಾಗಿ ಆಚರಿಸುತ್ತಿದ್ದೇವೆ. ಆದರೆ ಗಣಪತಿ ಯಾರು ? ಅವನು ಹೇಗೆ ಬಂದ ? ಅವನ ಅಪ್ಪ ಅಮ್ಮ ಯಾರು ?’ - ಮುಂತಾದ ಪ್ರಶ್ನೆಗಳು ಸಹಜವಾಗಿ ಮಕ್ಕಳ ತಲೆಯನ್ನು ಕೊರೆಯುತ್ತಿರುತ್ತವೆ. ಇವಕ್ಕೆಲ್ಲ ಉತ್ತರ ನೀಡಿದ್ದು, ಮಕ್ಕಳೇ ಅಭಿನಯಿಸಿದ ನೃತ್ಯ- ನಾಟಕ ‘ಗಣೇಶನ ಸೃಷ್ಟಿ’. ಎಷ್ಟೆಲ್ಲ ಮಕ್ಕಳನ್ನು ಒಟ್ಟುಗೂಡಿಸಿ ಇದನ್ನು ನಿರ್ದೇಶಿಸಿದವರು ಉಷಾ ಶೇಖರ್‌. ನಂತರ ರಶ್ಮಿ ಅಶೋಕ್‌ ಕುಮಾರ್‌ ಸಂಯೋಜಿಸಿದ ಜನಪದ ನೃತ್ಯ ಹಾಗೂ ಪ್ರಮೀಳಾ ಶಿವಶಂಕರ್‌ ನಿರ್ದೇಶಿಸಿದ ಕೋಲಾಟ ಜನರ ಮನಸ್ಸನ್ನು ಸೂರೆಗೊಂಡಿತು.

ಮಧುರ ಮಧುರವೀ ಮಂಜುಳಗಾನ..

ಮಧುರವಾದ ಕನ್ನಡ ಚಿತ್ರಗೀತೆಗಳನ್ನು ಕೇಳಿದರೆ ಯಾರು ತಾನೆ ಮೈಮರೆಯುವುದಿಲ್ಲ ? ಆನಂದ್‌, ಶ್ರೀ ರಂಜಿನಿ ಮತ್ತು ವೃಂದದವರು ಕನ್ನಡದ ಮೂರು ಉತ್ತಮ ಚಿತ್ರಗೀತೆಗಳನ್ನು ಹಾಡಿ ಜನರನ್ನು ಹುಚ್ಚೆಬ್ಬಿಸಿದರು. ‘ತಂನಂ ತಂನಂ’, ‘ನಗುವ ನಯನ’, ಹಾಗೂ ‘ಸಂಗೀತವೇ’ ಅತ್ಯಂತ ಇಂಪಾಗಿ ಮೂಡಿ ಬಂದವು.

ಪ್ರತಿಯಾಂದು ಕನ್ನಡ ಕೂಟದ ಕಾರ್ಯಕ್ರಮದಲ್ಲೂ ಉತ್ತರ ಕ್ಯಾಲಿಫೋರ್ನಿಯಾದ ಇಬ್ಬರು ಗಣ್ಯರನ್ನು ಸನ್ಮಾನಿಸುವುದು ಈ ವರ್ಷದ ಯುಗಾದಿಯಿಂದ ಪ್ರಾರಂಭವಾದ ಹೊಸ ಪದ್ಧತಿ. ಈ ಬಾರಿಯ ಯುಗಾದಿಯಂದು ಪ್ರಖ್ಯಾತ ಸಾಹಿತಿ ಹರಿಹರೇಶ್ವರ ಹಾಗೂ ಸಂಗೀತಗಾರ ನಚಿಕೇತ ಶರ್ಮರನ್ನು ಕನ್ನಡ ಕೂಟವು ಸನ್ಮಾನಿಸಿತ್ತು. ಈ ಬಾರಿ ಸಂಗೀತಗಾರ ಹಾಗೂ ರಂಗಕರ್ಮಿ ವಾದಿರಾಜ ಭಟ್‌ ಮತ್ತು ಖ್ಯಾತ ಉದ್ಯಮಿ ಬಿ.ವಿ. ಜಗದೀಶ್‌ ಸನ್ಮಾನಿತಗೊಂಡರು. ನಂತರ ಡಾ. ಕುಸುಮ ಭಟ್‌ ಅವರು ತಮ್ಮ ಹಾಸ್ಯ ಕವನವೊಂದನ್ನು ವಾಚಿಸಿದರು. ಆಶಾ ಭಟ್‌ ಅವರು ಬರೆದ ‘ಬಾರೋ ಹನುಮಂತರಾಯ’ ಕವಿತೆಯನ್ನು ಹಾಡಿದವರು ಛಾಯಾ ಶ್ರೀನಿವಾಸನ್‌, ಪ್ರೇಮಲತಾ ಹೆಗಡೆ ಹಾಗೂ ಸುಜಾತಾ ಭಟ್‌.

ಕನ್ನಡವೆಂದರೆ ಬರಿ ನುಡಿಯಲ್ಲ ...!

ಕನ್ನಡ ಕೂಟದ ಚರಿತ್ರೆಯಲ್ಲೇ ವಿಶಿಷ್ಟವಾದ ಕಾರ್ಯಕ್ರಮ ‘ರಸಪ್ರಶ್ನೆ’. ಆಗಸ್ಟ್‌ 18ರಂದು ರಸಪ್ರಶ್ನೆಯ ಮೊದಲ ಸುತ್ತಿನಲ್ಲಿ ತೇರ್ಗಡೆಯಾದ ನಾಲ್ಕು ತಂಡಗಳು ಈ ಸಂಜೆ ರಂಗದ ಮೇಲಿದ್ದವು. ರಸಪ್ರಶ್ನೆಯನ್ನು ನಡೆಸಿಕೊಟ್ಟವರು ಸುಕುಮಾರ್‌ ರಘುರಾಮ್‌ ಮತ್ತು ರಾಘವೇಂದ್ರ ಹೆಬ್ಬಳಲು. ಈ ಕೊನೆಯ ಹಂತದಲ್ಲಿ ಶ್ರವಣ ಹಾಗೂ ದೃಶ್ಯ ಮಾದ್ಯಮಗಳನ್ನೂ ಒಳಗೊಂಡಂತೆ, ಒಟ್ಟು ಎಂಟು ಸುತ್ತುಗಳಿದ್ದವು. ಸಾಹಿತ್ಯ, ಕಲೆ, ಚರಿತ್ರೆ, ಚಲನಚಿತ್ರ, ಕ್ರೀಡೆ ಮುಂತಾದ ವೈವಿಧ್ಯ ವಿಷಯಗಳನ್ನು ಕುರಿತ ಪ್ರಶ್ನೆಗಳಿದ್ದವು. ಅಜಯ್‌ ಕೇಣಿ, ಸೌಜನ್ಯಾ ಕೇಣಿ, ಹಾಗೂ ಪ್ರಮೀಳಾ ಶಿವಶಂಕರ್‌ ಅವರನ್ನು ಒಳಗೊಂಡ ‘ಗಣೇಶ’ ತಂಡ ಮೊದಲ ಸ್ಥಾನ ಪಡೆದು 150 ಡಾಲರ್‌ ಗೆದ್ದಿತು. ವೀಣಾಗೌಡ, ಯೋಗೇಶ್‌ ದೇವರಾಜ್‌, ಮತ್ತು ಜಗದೀಶ್‌ ಮೈಯ ಅವರನ್ನೊಳಗೊಂಡ ‘ಜ್ಞಾನ’ ತಂಡ ಎರಡನೆಯ ಬಹುಮಾನವನ್ನು ಗಳಿಸಿತು. ‘ಜ್ಞಾನ’ ತಂಡದವರು ಗೆದ್ದ ಎಪ್ಪತ್ತೆೈದು ಡಾಲರ್‌ಗಳನ್ನು ‘ಶಂಕರ ನೇತ್ರಾಲಯ ಪ್ರತಿಷ್ಠಾನ’ಕ್ಕೆ ದಾನ ಮಾಡಿದರು.


ಮುಖಪುಟ / ಸಾಹಿತ್ಯ ಸೊಗಡು
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X