ಗದುಗಿನ ವೀರನಾರಾಯಣನ ಕಿಂಕರ
‘‘ ಕುಮಾರ ವ್ಯಾಸ ಭಕ್ತ ಕವಿ. ದಿನವೂ ತನ್ನ ಆರಾಧ್ಯ ದೇವ ಶ್ರೀ ವೀರನಾರಾಯಣ ಸ್ವಾಮಿಯ ದೇವಸ್ಥಾನದ ಮುಂದಿನ ಕೊಳದಲ್ಲಿ ಮಿಂದು, ಒದ್ದೆ ಬಟ್ಟೆಯಲ್ಲಿ ದೇವಳದ ಮುಖಮಂಟಪದಲ್ಲಿ ನಿಂತು ಭಕ್ತಿ ವಶನಾಗಿ ಭಾರತ ಕಥಾಮೃತವನ್ನು ಹೇಳುತ್ತಿದ್ದ, ತಾನುಟ್ಟ ಬಟ್ಟೆ ಒಣಗುವ ತನಕ -ಎನ್ನುತ್ತಾರೆ. ನಾನೂ ಇವತ್ತು ಈ ಭಾರತದ ಬಗ್ಗೆ ಮಾತನಾಡುತ್ತೇನೆ, ನನ್ನ ಗಂಟಲು ಒಣಗುವ ತನಕ ...’’ ಹೀಗೆ ಸರಳವಾಗಿ ಹೇಳತೊಡಗಿದ ಸಾಹಿತಿ ಡಾ. ಸಾಶಿಮ ಅವರ ಪಾಂಡಿತ್ಯ ತುಂಬಿದ ವಾಗ್ಝರಿಯಲ್ಲಿ ಶ್ರೋತೃವೃಂದ ಮಂತ್ರಮುಗ್ಧವಾಯಿತು. ‘‘ ಪಂಪ - 10ನೇ ಶತಕದ ಆದಿಕವಿ. ಕುಮಾರವ್ಯಾಸ - 14ನೇ ಶತಕದ ಆದಿಕವಿ. ಆದರೆ ಇವರಿಬ್ಬರೂ ನಮ್ಮ ಕನ್ನಡ ಸಾಹಿತ್ಯದ ದಿಗ್ಗಜಗಳು. ಹಿಮಾಚಲ ಶ್ರೇಣಿಯಲ್ಲಿರುವ ಮೌಂಟ್ ಎವರೆಸ್ಟ್ ಮತ್ತು ಕಾಂಚನಗಂಗಾ ಶಿಖರಗಳ ಹಾಗೆ. ಸಕಲ ಕಾಲಕ್ಕೂ ಸಲ್ಲುವ ಶ್ರೇಷ್ಠ ಕವಿಗಳು. ಇವರ ಮಹಾಕಾವ್ಯಗಳೋ, ಕನ್ನಡದ ಹೆಮ್ಮೆಯ ಕೃತಿಗಳು. ಇಂತಹ ಮಹೋನ್ನತ ಕೃತಿಗಳ ಬಗ್ಗೆ ಇಂದು ಕೆಲವು ಮಾತು ಹೇಳಬೇಕಾಗಿರುವುದು ನನಗೆ ಖುಷಿ ಕೊಡುತ್ತದೆ. ’’ಎಂದು ನಮ್ರವಾಗಿ ನುಡಿದರು.
ಕಲಿತವರ ಕಲ್ಪವೃಕ್ಷ ಹಾಗೂ ಕಲಿಯದವರ ಕಾಮಧೇನು
‘‘ ಪಂಪ ಕಲಿತವರ ಕಲ್ಪವೃಕ್ಷ, ಕುಮಾರವ್ಯಾಸ ಕಲಿಯದವರಿಗೂ ಕಾಮಧೇನು. ಯಾಕೆಂದರೆ ಪಂಪನಲ್ಲಿ ಆಸ್ಥಾನದ ಗೌರವವಿದೆ, ಸಂಸ್ಕಾರದ ನಾಜೂಕುತನವಿದೆ, ಆದ್ದರಿಂದ ಆತ ಹಿತ ಮಿತ ವಚನಕಾರ. ಆದರೆ ಕುಮಾರವ್ಯಾಸನಿಗೆ ಯಾವುದೇ ಗುರುಮನೆ-ಅರಮನೆಗಳ ಆಶ್ರಯವಿರಲಿಲ್ಲ. ಹಂಗೂ ಇರಲಿಲ್ಲ. ಆತ ಸ್ವತಂತ್ರ. ದೇವಸನ್ನಿಧಿಯಲ್ಲಿ ಮನಸ್ಸಿಗೆ ತೋಚಿದ ಹಾಗೆ ತನ್ನ ವಿಶಿಷ್ಟ ಜನಪದ ಶೈಲಿಯಲ್ಲಿ ಕಥೆ ಹೇಳಿದವ, ಸ್ವಲ್ಪ ವಾಚಾಳಿಯೆಂದರೂ ಸರಿ. ಆದರೆ ಇಲ್ಲಿ ಕಾಣುವ ನಾಟಕೀಯತೆ, ಜೀವಂತಿಕೆ ಪಂಪನಲ್ಲಿ ಕಂಡುಬರುವುದಿಲ್ಲ. ಅವನದು ಭಾಷಣ ಶೈಲಿ, ಇವನದು ಸಂಭಾಷಣಾ ಶೈಲಿ. ಇಬ್ಬರೂ ಆರಿಸಿಕೊಂಡ ಕಥೆ ಒಂದೇ ಆದರೂ, ಕಥೆಯನ್ನು ಹೆಣೆದ ರೀತಿ ಬೇರೆ. ಮೂಲದ ಅಸ್ಥಿಪಂಜರ ಒಂದೇ ಆದರೂ, ಅದರ ಮೇಲೆ ಹೊದಿಸಿರೋ ಹೊದಿಕೆ ಅವರ ಸ್ವಂತಿಕೆಯದ್ದು. ಅದೇ ಕಥೆಯ ‘ಥೀಮ್’ . ಪಂಪನ ‘ಥೀಮ್’ ಸ್ನೇಹ. ಆತನ ಮತ್ತು ಅರಸ ಅರಿಕೇಸರಿಯ ಗಾಢವಾದ ಸ್ನೇಹ ಕಾವ್ಯದ ತುಂಬ ವ್ಯಾಪಿಸಿದೆ. ಆದರೆ ಕುಮಾರ ವ್ಯಾಸನ ‘ಥೀಮ್’ ಭಕ್ತಿ. ಆತನ ಆರಾಧ್ಯ ದೈವದ ಮೇಲೆ ಆತನಿಗಿರುವ ಭಕ್ತಿ. ಒಮ್ಮೊಮ್ಮೆ ಎಲ್ಲೆ ಮೀರಿ ಹರಿವ ನೆರೆ ತುಂಬಿದ ಹೊಳೆಯಂತೆ, ಕಾವ್ಯದಲ್ಲಿ ಹರಡಿಕೊಂಡಿದೆ. ಆದರೆ ಪಂಪನಲ್ಲೂ ಭಕ್ತಿಯಿದೆ, ಅದು ಆತನ ಇನ್ನೊಂದು ಕಾವ್ಯ ಆದಿಪುರಾಣಕ್ಕೆ ಸೀಮಿತವಾಗಿದೆ. ಅಲ್ಲಿ ಆತನ ಧಾರ್ಮಿಕತೆಗೆ ಸಂಬಂಧಿಸಿದ ವಿಷಯವಾಗಿ, ಆತನ ಭಕ್ತಿಯನ್ನು ಕಾಣಬಹುದು’’ ಎಂದು ಪ್ರೊಫೆಸರ್ ಮರುಳಯ್ಯನವರು ಆದಿಪುರಾಣದತ್ತ ತುಸು ಹೊರಳಿ, ಆ ಕಥೆಯನ್ನು ಸ್ವಾರಸ್ಯಕರವಾಗಿ ವಿವರಿಸಿದರು.
ರಾಜ್ಯಮೋಹದ ಧಿಕ್ಕಾರ ಹಾಗೂ ಸ್ವೀಕಾರ
‘‘ ‘ಆದಿಪುರಾಣ’ದಲ್ಲಿ ರಾಜ್ಯ ಮೋಹದ ಧಿಕ್ಕಾರವನ್ನು ಕಂಡರೆ ‘ ವಿಕ್ರಮಾರ್ಜುನ ವಿಜಯ’ ರಾಜ್ಯಮೋಹವೇ ಮುಖ್ಯವಾಗುಳ್ಳ ಕಾವ್ಯ... ’’ ಎಂದು ಹೇಳುತ್ತಾ ಮರುಳಯ್ಯನವರು ಮತ್ತೆ ಪಂಪ ಭಾರತದತ್ತ ಹೊರಳಿದರು. ‘‘ ಪಂಪ ಪ್ರತಿಮೆಗಳ ಚಿತ್ರಕಾರ. ಬಹಳ ಸಮರ್ಥವಾಗಿ ಶಬ್ದ ಚಿತ್ರಣಗಳನ್ನು ಕೊಟ್ಟಾತ. ಒಂದು ಉದಾಹರಣೆಯೆಂದರೆ, ಶಂತನು ಬೇಟೆಗೆ ಹೋಗಿದ್ದಲ್ಲಿ ಯೋಜನಗಂಧಿಯನ್ನು ಕಂಡು ಮೋಹಿಸಿದ್ದು, ಆಕೆಯನ್ನು ವರಿಸಲು ಮುಂದಾದ ಸಂದರ್ಭದ ಸುದೀರ್ಘ ವಿವರಣೆಯನ್ನು ಎಷ್ಟು ಸೂಕ್ಷ್ಮವಾಗಿ ಕವಿ ಹೇಳಿದ್ದಾನೆಂದರೆ.... ‘ಮೃಗಯಾ ವ್ಯಾಜೆದಿನೊರ್ಮೆ ಶಂತನು ತೊಳಲ್ತರ್ಪಂ ಪಳಂಚಲ್ಕೆ, ತನ್ಮೃಗಶಾವಾಕ್ಷೆಯ ಕಂಪುತಟ್ಟಿ ಮಧುಪಂಬೊಲ್ ಪೋಗಿ, ನೋಡಿ, ಕಂಡುಂ, ಒಲ್ದು, ದಿಟ್ಟೆಂ ಪಿಡಿವಂತೆವೋಲ್ ಕೈಯ್ಯಂ ಪಿಡಿದು ನೀಂ ಬಾ ಪೋಪಂ ಎಂದಂಗೆ ತತ್ಕನ್ಯಕ್ಕೆ ನಾಂಚಿ, ಬೇಡುವೊಡೆ ನೀವೆಮ್ಮಯ್ಯನ ಬೇಡಿರೆ’ ಎಂದ ಈ ಪದ್ಯದಲ್ಲಿ ಪಂಪ ಬೃಹತ್ತಾದ ಒಂದು ಚಿತ್ರಣ ಕಟ್ಟಿಕೊಟ್ಟಿದ್ದಾನೆ. ಭಾವ ಭಾಷೆಯ ಸಂಲಗ್ನ ಎಷ್ಟು ಸಮರ್ಥವಾಗಿದೆ ಎಂಬುದನ್ನು ಗಮನಿಸಬೇಕು. ಇಂಥೊಂದು ಸಂದರ್ಭದ ಅಖಂಡತೆಯನ್ನೂ ಸುಸಂಸ್ಕೃತಿಯ ನಾಜೂಕುತನವನ್ನೂ ಪಂಪನೊಬ್ಬನೇ ತೋರಬಲ್ಲ . ನಾನೂ ಬೇರೆಷ್ಟೋ ಸಾಹಿತ್ಯವನ್ನು ಓದಿದ್ದೇನೆ, ಆದರೆ ಈ ಪದ್ಯದ ಸೌಂದರ್ಯ ಬೇರೆಲ್ಲೂ ಕಂಡಿಲ್ಲ. ಇದು ಕುಮಾರವ್ಯಾಸನಿಂದ ಬರಲಿಲ್ಲ .
‘ಮುಂದೆ ಭಾರತದ ಕಥೆ ಎರಡೂ ಕವಿಗಳ ಕೈಯಲ್ಲಿ ಸುಂದರವಾಗಿಯೇ ಮೂಡಿದೆ.
ಮುಖಪುಟ / ಸಾಹಿತ್ಯ ಸೊಗಡು












Click it and Unblock the Notifications