ಪ್ರೀತಿಯ ಕವಿಯ ಸಾಂಸ್ಕೃತಿಕ ರಾಯಭಾರ
(ಇನ್ಫೋ ಇನ್ಸೈಟ್)
ಪಂಪ ಪ್ರಶಸ್ತಿ ವಿಜೇತ ಕನ್ನಡ ಕವಿ ಡಾ.ಜಿ.ಎಸ್.ಶಿವರುದ್ರಪ್ಪ ಅವರ ಅಮೇರಿಕಾ ಯಾತ್ರೆ, ಅಲ್ಲಿನ ಅನಿವಾಸಿ ಕನ್ನಡಿಗರ ಪಾಲಿಗೆ ಸಾಂಸ್ಕೃತಿಕ ಹಬ್ಬವಾಗಿ ಪರಿಣಮಿಸಿದೆ. ಕನ್ನಡ ಸಾಹಿತ್ಯದ ಎಲ್ಲ ಸ್ಥಿತ್ಯಂತರಗಳನ್ನು ಅರಗಿಸಿಕೊಂಡ ಹಾಗೂ ಎಲ್ಲ ಸಾಹಿತ್ಯ ಪ್ರಕಾರಗಳಲ್ಲೂ ಮುಂಚೂಣಿಯಲ್ಲಿರುವ ಜಿಎಸ್ಎಸ್ ಸೋಲರಿಯದ ಸಾಹಿತಿ. ಸದ್ಯಕ್ಕೆ ನಮ್ಮ ಸಾಂಸ್ಕೃತಿಕ ರಂಗದಲ್ಲಿನ ಹಿರೀಕರಲ್ಲೊಬ್ಬರು. ಅಂಥವರೊಂದಿಗಿನ ಸಾಂಗತ್ಯ, ಹಬ್ಬವಲ್ಲದೆ ಮತ್ತೇನು?
ಮನೆಗಳಲ್ಲಿ ಮಹಡಿ ಮನೆ ಹೇಗೋ ‘ಮರಗಳಲ್ಲಿ ತೆಂಗಿನಮರ’ ಎನ್ನುವ ಜಿ.ಎಸ್.ಶಿವರುದ್ರಪ್ಪ ಅವರ ಕವನದ ಸಾಲು ಅವರ ವ್ಯಕ್ತಿತ್ವಕ್ಕೂ ಹೊಂದಿಕೊಳ್ಳುವುದು ವಿಶೇಷ. ಜಾಗತೀಕರಣ, ಉದಾರೀಕರಣದ ವೇಗಕ್ಕೆ ಕನ್ನಡ ಕಾವ್ಯ ಹೊಂದಿಕೊಳ್ಳುತ್ತಿಲ್ಲ ಎನ್ನುವ ಈ ಹೊತ್ತಿನ ದೂರಿನ ನಡುವೆ ನಾವು ಮತ್ತೆ ಜಿ.ಎಸ್.ಎಸ್. ಅವರಲ್ಲಿಗೇ ಹೊರಳುವುದು ಅವರ ಕಾವ್ಯದ ಹೆಚ್ಚುಗಾರಿಕೆಗೆ ಸಾಕ್ಷಿ . ನವೋದಯ, ನವ್ಯ, ಬಂಡಾಯ ಎಲ್ಲವೂ ಅವರ ದಾರಿಯಲ್ಲಿ ವ್ಯಕ್ತವೇ. ಹಣತೆಯಿಂದ ವ್ಯಕ್ತಮಧ್ಯದವರೆಗೆ ಅವರು ಬೆಳಗಿದ ಸಾಲುಸಾಲು ದೀಪಗಳ ಬೆಳಕು ಸದಾ ಪ್ರಜ್ವಲ.
ಕವಿ, ವಿಮರ್ಶಕ, ಚಿಂತಕ.. ಎಲ್ಲಕ್ಕೂ ಮೀರಿ ಶಿವರುದ್ರಪ್ಪ ಸಜ್ಜನರು. ಜಿಎಸ್ಎಸ್ ಅವರ ಕಾವ್ಯ ಹಾಗೂ ಸಜ್ಜನಿಕೆಯಲ್ಲಿ ಹೆಚ್ಚು ವ್ಯತ್ಯಾಸವೇನೂ ಇಲ್ಲ . ಬೆಂಗಳೂರಿನ ಉಸಿರುಗಟ್ಟಿಸುವ ವಾತಾವರಣದ ನಡುವೆ ಜೀವಂತಿಕೆಯ ಬೆಳ್ಳಿಗೆರೆ ಕಾಣಿಸುವುದೇ ಶಿವರುದ್ರಪ್ಪನವರಂಥ ಹಿರೀಕರಿಂದ. ಅವರ ಕಾವ್ಯದ ಬಗೆಗೆ ತಕ್ಕಡಿ ತೂಗುವ ಮಂದಿಯಿಂದ ಒಡಕು ಮಾತುಗಳಿರಬಹುದಾದರೂ, ಸಜ್ಜನಿಕೆಯ ಬಗ್ಗೆ ಯಾರಿಂದಲೂ ಎರಡು ಮಾತು ಕೇಳಿಸದು. ಅಂಥ ಹಿರಿಯ ಕವಿ- ಸಜ್ಜನ ಮನೆ ಬಾಗಿಲಿಗೆ ಬಂದಾಗ ಅನಿವಾಸಿ ಕನ್ನಡಿಗರು ಪುಳಕಗೊಳ್ಳುವುದರಲ್ಲಿ ಏನಚ್ಚರಿ? ಬಹಳಷ್ಟು ಮಂದಿಯ ಪಾಲಿಗೆ ಹಳ್ಳಿಯಲ್ಲಿನ ತೋಟ ಮನೆಗೆ ಬಂದಂತೆ ಅನ್ನಿಸಿದರೂ ಅಚ್ಚರಿಯಿಲ್ಲ .
ಪ್ರೀತಿಯ
ಕವಿಯಿಂದ
ಸಾಂಸ್ಕೃತಿಕ
ರಾಯಭಾರ
ಇತ್ತೀಚೆಗಷ್ಟೇ
ಮುಖಪುಟ
/
ಸಾಹಿತ್ಯ
ಸೊಗಡು