ಪ್ರಜೆಗಳಿಗೆ ವ್ಯಾಕ್ಸಿನ್ ಕಡ್ಡಾಯವಲ್ಲ! ಟೆಕ್ಸಾಸ್ ಗವರ್ನರ್ ವಿಚಿತ್ರ ಆದೇಶ!
ವಾಷಿಂಗ್ಟನ್, ಅಕ್ಟೋಬರ್ 13: ಜಗತ್ತು ಒಂದ್ಕಡೆ ಮೆಲ್ಲಗೆ ಕೊರೊನಾ ಕಂಟಕದಿಂದ ಬಚಾವ್ ಆಗುವಾಗಲೇ, ಅಮೆರಿಕದ ಟೆಕ್ಸಾಸ್ ರಾಜ್ಯದ ರಾಜ್ಯಪಾಲ ವಿಚಿತ್ರ ಆದೇಶವೊಂದನ್ನ ನೀಡಿದ್ದಾರೆ. ಅಮೆರಿಕದಲ್ಲಿ ಕೊರೊನಾ ವಿರುದ್ಧದ ಹೋರಾಟಕ್ಕೆ ದೊಡ್ಡ ತಿರುವು ನೀಡಿರುವ ವ್ಯಾಕ್ಸಿನೇಷನ್ಗೆ ಖುದ್ದು ರಾಜ್ಯಪಾಲನೇ ಅಡ್ಡಿಯಾಗಿದ್ದಾನೆ. ಹೌದು, ಟೆಕ್ಸಾಸ್ ರಾಜ್ಯಪಾಲ ಗ್ರೇಗ್ ಅಬಾಟ್ ಕಡ್ಡಾಯ ವ್ಯಾಕ್ಸಿನೇಷನ್ ಆದೇಶಕ್ಕೆ ತಡೆ ನೀಡಿದ್ದಾರೆ.
ಟೆಕ್ಸಾಸ್ನಲ್ಲಿ ಜನರು ಕಡ್ಡಾಯವಾಗಿ ವ್ಯಾಕ್ಸಿನ್ ಹಾಕಿಸಿಕೊಳ್ಳಬೇಕಿಲ್ಲ ಎಂದು ಗ್ರೇಗ್ ಅಬಾಟ್ ತಿಳಿಸಿದ್ದಾರೆ. ಅತ್ತ ಅಮೆರಿಕ ಅಧ್ಯಕ್ಷ ಜೋ ಬೈಡನ್ ದೇಶಾದ್ಯಂತ ವ್ಯಾಕ್ಸಿನೇಷನ್ ವೇಗ ಹೆಚ್ಚಿಸಲು ಹಲವು ಕ್ರಮ ಕೈಗೊಂಡಿದ್ದಾರೆ. ಆದರೆ ರಿಪಬ್ಲಿಕನ್ ರಾಜ್ಯಪಾಲ ಗ್ರೇಗ್ ಅಬಾಟ್ ಇದಕ್ಕೆ ವ್ಯತಿರಿಕ್ತ ಆದೇಶ ನೀಡಿದ್ದಾರೆ. ಗ್ರೇಗ್ ಅಬಾಟ್ ಈ ಮೊದಲಿನಿಂದಲೂ ಕಡ್ಡಾಯ ವ್ಯಾಕ್ಸಿನೇಷನ್ ವಿರುದ್ಧ ಧ್ವನಿ ಎತ್ತಿದ್ದರು.
ಈಗ ದಿಢೀರ್ ಆದೇಶವೊಂದನ್ನು ಹೊರಡಿಸಿರುವ ಗ್ರೇಗ್ ಅಬಾಟ್, ಖಾಸಗಿ ಕಂಪನಿಗಳ ಉದ್ಯೋಗಿಗಳು ಮತ್ತು ಸರ್ಕಾರಿ ಉದ್ಯೋಗಿಗಳು ಕಡ್ಡಾಯವಾಗಿ ಲಸಿಕೆ ಹಾಕಿಸಿಕೊಳ್ಳುವ ಅಗತ್ಯತೆ ಇಲ್ಲ ಎಂದಿದ್ದಾರೆ. ಅಲ್ಲದೆ ಪ್ರಜೆಗಳಿಗೂ ಲಸಿಕೆ ಕಡ್ಡಾಯವಲ್ಲ ಎಂದಿದ್ದಾರೆ ಗ್ರೇಗ್ ಅಬಾಟ್. ಇದು ಅಧ್ಯಕ್ಷ ಜೋ ಬೈಡನ್ ಆದೇಶಕ್ಕೆ ವಿರುದ್ಧವಾಗಿದ್ದು, ಅಮೆರಿಕದಲ್ಲಿ ಸಂಚಲನ ಸೃಷ್ಟಿಸಿದೆ.

ಟೆಕ್ಸಾಸ್ ಗವರ್ನರ್ ಗ್ರೇಗ್ ಅಬಾಟ್ ಆದೇಶ
ಟೆಕ್ಸಾಸ್ ಗವರ್ನರ್ ಗ್ರೇಗ್ ಅಬಾಟ್ ಆದೇಶ ಹೇಗಾಗಿದೆ ಅಂದ್ರೆ, ಎತ್ತು ಏರಿಗೆ-ಕೋಣ ನೀರಿಗೆ ಎಂಬಂತಹ ಪರಿಸ್ಥಿತಿ ಸೃಷ್ಟಿಸಿದೆ. ಅಧ್ಯಕ್ಷ ಜೋ ಬೈಡನ್ ವ್ಯಾಕ್ಸಿನ್ ಕಡ್ಡಾಯಗೊಳಿಸಿ ಆದೇಶ ಹೊರಡಿಸಿರುವ ಬೆನ್ನಲ್ಲೇ ಅಲ್ಲಿ ಪ್ರತಿಯೊಂದು ಸಂಸ್ಥೆಗಳೂ ಲಸಿಕೆ ಕಡ್ಡಾಯಗೊಳಿಸಿವೆ. ಲಸಿಕೆ ಹಾಕಿಸಿಕೊಳ್ಳದ ಉದ್ಯೋಗಿಗಳಿಗೆ ರಜೆ ಕೊಟ್ಟು ಮನೆಗೆ ಕಳಿಸುತ್ತಿವೆ. ಆದರೆ ಟೆಕ್ಸಾಸ್ ಗವರ್ನರ್ ಇದಕ್ಕೆ ವ್ಯತಿರಿಕ್ತ ಆದೇಶವನ್ನ ನೀಡಿದ್ದಾರೆ. ಅಗತ್ಯ ಎನಿಸಿದರೆ ಮಾತ್ರ ವ್ಯಾಕ್ಸಿನ್ ಹಾಕಿಸಿಕೊಳ್ಳಿ. ಬೇಡ ಅಂದರೆ ಬಿಟ್ಟುಬಿಡಿ ಅಂತಾ ಪ್ರಜೆಗಳಿಗೆ ತಿಳಿಸಿದ್ದಾರೆ. ಮೊದಲೇ ಲಸಿಕೆ ಬಗ್ಗೆ ಅಸಡ್ಡೆ ಹೊಂದಿದ್ದ ಬಹುಪಾಲು ಅಮೆರಿಕನ್ನರ ಮೇಲೆ ಇದು ತೀವ್ರ ಪ್ರಭಾವ ಬೀರುವ ಸಾಧ್ಯತೆ ಇದೆ.

ವ್ಯಾಕ್ಸಿನ್ ಪಡೆದರೆ 7 ಸಾವಿರ!
ಅಮೆರಿಕದಲ್ಲಿ ವ್ಯಾಕ್ಸಿನ್ ಪಡೆಯದವರ ಸಂಖ್ಯೆ ಹೆಚ್ಚಾಗಿದೆ. ಮತ್ತೊಂದು ಕಡೆ ಅಮೆರಿಕದಲ್ಲಿ ಕೊರೊನಾ 4ನೇ ಅಲೆಯ ಭೀತಿ ಸೃಷ್ಟಿಯಾಗಿದೆ. ಈಗಾಗಲೇ ಕೊರೊನಾದ 3 ಅಲೆಗಳನ್ನ ನೋಡಿ ಬೆಚ್ಚಿಬಿದ್ದಿರುವ ಅಮೆರಿಕದಲ್ಲಿ 4ನೇ ಅಲೆ ಎದ್ದಿದೆ. ಮೆಲ್ಲಗೆ ಸೋಂಕಿತರ ಸಂಖ್ಯೆ ಹೆಚ್ಚಾಗುತ್ತಿದೆ. ನಿತ್ಯವೂ ಸೋಂಕಿತರ ಸಂಖ್ಯೆ 1 ಲಕ್ಷದ ಗಡಿಗೆ ಬಂದು ತಲುಪುತ್ತಿದೆ. ಹೀಗಾಗಿ ಅಲರ್ಟ್ ಆಗಿರುವ ಬೈಡನ್ ಆಡಳಿತ, ಆದಷ್ಟು ಬೇಗ ಬಾಕಿ ಇರುವ ತನ್ನೆಲ್ಲಾ ಪ್ರಜೆಗಳಿಗೆ ಕೊರೊನಾ ವ್ಯಾಕ್ಸಿನ್ ಹಾಕಿಸಲು ಪ್ಲ್ಯಾನ್ ಮಾಡಿದೆ. ಹೀಗಾಗಿ ಲಸಿಕೆ ಹಾಕಿಸಿಕೊಂಡರೆ 7 ಸಾವಿರ ರೂಪಾಯಿ ಹಣ ಕೊಡಲು ಮುಂದಾಗಿದೆ. ಈ ಬಗ್ಗೆ ಬೈಡನ್ ಕಚೇರಿಯಿಂದ ಖಡಕ್ ಆದೇಶ ಹೊರಬಿದ್ದಿದೆ.

ರಾಜ್ಯಗಳ ಹೆಗಲ ಮೇಲೆ ಹೊಣೆ
ಈಗಾಗಲೇ 2 ಟ್ರಿಲಿಯನ್ ಡಾಲರ್ ಮೊತ್ತದ 'ಕೊರೊನಾ' ಪ್ಯಾಕೇಜ್ನ ಅಮೆರಿಕ ಸರ್ಕಾರ ಘೋಷಿಸಿದೆ. ಇದೇ ದುಡ್ಡಲ್ಲಿ ಸುಮಾರು 350 ಮಿಲಿಯನ್ ಡಾಲರ್ ಹಣವನ್ನ ಅಮೆರಿಕದ ಅರ್ಥ ವ್ಯವಸ್ಥೆ ಸರಿದೂಗಿಸಲು ಎತ್ತಿಡಲಾಗಿದೆ. ಇಷ್ಟು ದೊಡ್ಡ ಮೊತ್ತದ ಹಣವನ್ನ ಅಮೆರಿಕದ ರಾಜ್ಯಗಳಿಗೆ ತಲುಪಿಸಲಾಗಿದೆ. ಇದೇ ಹಣದಲ್ಲಿ ವ್ಯಾಕ್ಸಿನ್ ಹಾಕಿಸಿಕೊಂಡವರಿಗೆ ಸುಮಾರು 100 ಡಾಲರ್ ಅಂದ್ರೆ 7400 ರೂಪಾಯಿ ಸಹಾಯಧನ ನೀಡಲು ಸೂಚನೆ ನೀಡಲಾಗಿದೆ. ಬೈಡನ್ ಆಡಳಿತದಿಂದ ಸ್ಥಳೀಯ ಆಡಳಿತಗಳಿಗೆ ಈ ಬಗ್ಗೆ ಸಂದೇಶ ನೀಡಲಾಗಿದೆ.

ವಿಶ್ವಯದ್ಧದ ನಂತರ ಅತಿಹೆಚ್ಚು ಸಾವು
ಮಿತ್ರಪಡೆಗಳ ಪರ 2ನೇ ಮಹಾಯುದ್ಧದಲ್ಲಿ ಅಖಾಡ ಪ್ರವೇಶಿಸಿದ್ದ ದೊಡ್ಡಣ್ಣ ಅಮೆರಿಕ ಭಾರಿ ಸಾವು, ನೋವು ಅನುಭವಿಸಿತ್ತು. ಅಂದಾಜು 4 ಲಕ್ಷಕ್ಕೂ ಹೆಚ್ಚು ಅಮೆರಿಕನ್ನರು 2ನೇ ವಿಶ್ವಯುದ್ಧದಲ್ಲಿ ಮೃತಪಟ್ಟಿದ್ದರು. ಆದರೆ ಕೊರೊನಾ ಇದಕ್ಕಿಂತಲೂ ಹೆಚ್ಚಿನ ಸಾವು ನೋವು ಉಂಟುಮಾಡಿದೆ. 7 ಲಕ್ಷ 37 ಸಾವಿರಕ್ಕೂ ಹೆಚ್ಚು ಜನ ಅಮೆರಿಕದಲ್ಲಿ ಬಲಿಯಾಗಿದ್ದಾರೆ. ಅಮೆರಿಕದ ಕೆಲ ಪ್ರದೇಶಗಳಲ್ಲಿ ಕೊರೊನಾ ಕಾರಣದಿಂದ ಮೃತಪಟ್ಟವರನ್ನು ಮಣ್ಣು ಮಾಡುವುದಕ್ಕೂ ಜಾಗದ ಕೊರತೆ ಎದುರಾಗಿತ್ತು. ಇಂತಹ ಸಂದಿಗ್ಧ ಸ್ಥಿತಿಯಲ್ಲೇ ಅಮೆರಿಕದ ಅಧ್ಯಕ್ಷ ಬೈಡನ್ ಮತ್ತೊಮ್ಮೆ ಪುಟಿದೇಳುವ ಧೈರ್ಯ ತೋರಿದ್ದಾರೆ.

ಕೊರೊನಾ ಕೂಪದಲ್ಲಿ ಅಮೆರಿಕ
ಬೈಡನ್ ಅಧಿಕಾರ ಸ್ವೀಕರಿಸಿ ಸುಮಾರು 9 ತಿಂಗಳಾಗಿದೆ ಅಷ್ಟೇ. ಜೋ ಬೈಡನ್ ಅಧಿಕಾರ ಸ್ವೀಕರಿಸಿದ ತಕ್ಷಣ ಅಮೆರಿಕನ್ನರ ಸಮಸ್ಯೆಗಳು ಸರಿಯಾಗುವುದಿಲ್ಲ. ಏಕೆಂದರೆ ಅಮೆರಿಕ ಶತಮಾನದಲ್ಲೇ ಎದುರಿಸದಷ್ಟು ದೊಡ್ಡ ಸಂಕಷ್ಟಕ್ಕೆ ಸಿಲುಕಿದೆ. ಇದನ್ನೆಲ್ಲಾ ಬಗೆಹರಿಸಲು ಹಲವು ವರ್ಷಗಳೇ ಬೇಕು. ಅದರಲ್ಲೂ ಟ್ರಂಪ್ ಅಮೆರಿಕದ ಘನತೆಗೆ ಹಾಗೂ ಅಮೆರಿಕ ಅರ್ಥ ವ್ಯವಸ್ಥೆಗೆ ಮಾಡಿದ ಘಾಸಿಗೆ ಮುಲಾಮು ಹಚ್ಚಬೇಕು. ಹೀಗಾಗಿ ಬೈಡನ್ಗೆ ಅಮೆರಿಕ ಅಧ್ಯಕ್ಷರ ಖುರ್ಚಿ ಹೂವಿನ ಹಾಸಿಗೆ ಆಗಿಲ್ಲ, ಮುಳ್ಳಿನ ಹಾದಿಯಾಗಿದೆ ಎನ್ನುತ್ತಾರೆ ಅರ್ಥಶಾಸ್ತ್ರಜ್ಞರು. ಇದನ್ನೆಲ್ಲಾ ಎದುರಿಸಿ, ಅಮೆರಿಕ ಹಾಗೂ ಅಮೆರಿಕನ್ನರನ್ನು ರಕ್ಷಿಸುವ ಹೊಣೆ ಜೋ ಬೈಡನ್ ಹೆಗಲ ಮೇಲಿದೆ.

ನಂ. 2 ಆಗತ್ತಾ ಅಮೆರಿಕ?
ಅಮೆರಿಕದ ಸದ್ಯದ ಪರಿಸ್ಥಿತಿಯನ್ನು ಗಮನಿಸುತ್ತಿದ್ದರೆ, ಅಮೆರಿಕದ ಆರ್ಥಿಕತೆಗೆ ಬಲವಾದ ಪೆಟ್ಟು ಬಿದ್ದಿರುವುದು ಖಚಿತವಾಗುತ್ತಿದೆ. ಹೀಗಾಗಿ ಅಮೆರಿಕದ ಪರಮ ಶತ್ರು ಚೀನಾ ಅಮೆರಿಕದ ನಂಬರ್ 1 ಸ್ಥಾನವನ್ನ ಆಕ್ರಮಿಸಲು ತುದಿಗಾಗಲಲ್ಲಿ ನಿಂತಿದೆ. ಇದು ಕೂಡ ಅಮೆರಿಕದ ನಾಯಕರನ್ನ ಹಾಗೂ ಉದ್ಯಮಿಗಳನ್ನ ಕಂಗೆಡಿಸಿದೆ. ಹಾಗೇ ಕೊರೊನಾ ಸಾಂಕ್ರಾಮಿಕ ಪರಿಸ್ಥಿತಿಯಲ್ಲಿ ಜಗತ್ತು ಆರ್ಥಿಕ ಹಿಂಜರಿತ ಕಾಣುತ್ತಿದ್ದರೆ ಚೀನಾದ ಜಿಡಿಪಿ ಮಾತ್ರ ಗಮನಾರ್ಹ ಬೆಳವಣಿಗೆ ಕಾಣುತ್ತಿರುವುದು ಆತಂಕ ಹೆಚ್ಚಾಗುವಂತೆ ಮಾಡಿದೆ. ಇದು ಅಮೆರಿಕದ ನಂಬರ್ 1 ಸ್ಥಾನ ಅಲುಗಾಡಿಸುವ ಜೊತೆಗೆ, ಜಗತ್ತಿನಲ್ಲಿ ಹೊಸ ಆರ್ಥಿಕ ಶಕ್ತಿಯ ಉಗಮಕ್ಕೂ ಕಾರಣವಾಗುತ್ತಿದೆ.
-
Prakash Raj: ‘ಅಪ್ಪನ ಮನೆ ಆಸ್ತಿ ಮಾರ್ತಿದೀರಾ?’: ಕೇಂದ್ರದ ಹೊಸ ನಿಯಮದ ವಿರುದ್ಧ ನಟ ಪ್ರಕಾಶ್ ರಾಜ್ ಟೀಕೆ -
Abhishek Sharma: ದಯವಿಟ್ಟು ಕ್ಷಮಿಸಿ ಎಂದು ಬೇಡಿಕೊಂಡ ಅಭಿಷೇಕ್ ಶರ್ಮಾ -
"ನನ್ನನ್ನೇಕೆ ಮದುವೆಗೆ ಕರೆದಿಲ್ಲ" ಎಂದು ದಬಾಯಿಸಿದ ಪುಟಾಣಿ ಅಭಿಮಾನಿ: ಮನೆಗೆ ಊಟಕ್ಕೆ ಆಹ್ವಾನಿಸಿದ ವಿಜಯ್ ದೇವರಕೊಂಡ-ರಶ್ಮಿಕಾ -
Petrol Price: ಇರಾನ್,ಅಮೆರಿಕ – ಇಸ್ರೇಲ್ ಯುದ್ಧ: ಕಚ್ಚಾ ತೈಲ ದರ ಏರಿಕೆ, ಭಾರತದಲ್ಲಿ ಪೆಟ್ರೋಲ್ ಬೆಲೆ ಶೀಘ್ರ 200 ರೂ. ? -
Viral Video: ಅಮೆರಿಕದ ಯುದ್ಧ ಸ್ಮಾರಕದ ಮುಂದೆ ಭಾರತೀಯ ದಂಪತಿ ಎಡವಟ್ಟು: ಶುರುವಾಯ್ತು ಗಡೀಪಾರು ಭೀತಿ, ವೈರಲ್ ವಿಡಿಯೋ -
Sapthami Gowda: ಅಸಭ್ಯವಾಗಿ ವಿಡಿಯೋ ಚಿತ್ರೀಕರಣ: ಫಿಲ್ಮ್ ಚೇಂಬರ್ ಮೆಟ್ಟಿಲೇರಿದ ಸಪ್ತಮಿ ಗೌಡ, ಸಭೆಯಲ್ಲಿ ಮಹತ್ವದ ತೀರ್ಮಾನ -
Namma Metro Phase 3 Project: ಮೆಟ್ರೋ 2 ಕಾರಿಡಾರ್ ನಿರ್ಮಾಣಕ್ಕೆ 2031ರ ಹೊಸ ಗಡುವು -
"ನಂದಿನಿ" ನಕಲಿ ತುಪ್ಪಕ್ಕೆ ಕೆಎಂಎಫ್ ಕ್ಯೂಆರ್ ಕೋಡ್ ಅಸ್ತ್ರ; ಪತ್ತೆ ಹಚ್ಚುವುದು ಈಗ ಸುಲಭ -
Imd Weather Forecast: ಭಾರೀ ಬಿಸಿಲಿನ ನಡುವೆ ಈ ಭಾಗಗಳಲ್ಲಿ ಮಳೆ: ಐಎಂಡಿ ಮುನ್ಸೂಚನೆ ಇಲ್ಲಿದೆ -
Bengaluru Second Airport: ಬೆಂಗಳೂರಿಗೆ ಟಕ್ಕರ್ ಕೊಡಲು ಬಂದ ತಮಿಳುನಾಡಿಗೆ ಮುಖಭಂಗ, ಹೊಸೂರು ವಿಮಾನ ನಿಲ್ದಾಣ ಕಷ್ಟ -
Sanju Samson Father: ಅಂದು ಮಗನನ್ನು ಅಲೆದಾಡಿಸಿದವರು ಇಂದು ಕ್ಷಮೆ ಕೇಳುತ್ತಿದ್ದಾರೆ: ಸಂಜು ಸ್ಯಾಮ್ಸನ್ ತಂದೆಯ ಭಾವುಕ ನುಡಿ -
Horoscope March 10: ಈ ರಾಶಿಯವರಿಗೆ ಹಣಕಾಸಿನಲ್ಲಿ ಲಾಭ, ಯಾರಿಗೆ ಶುಭ-ಅಶುಭ, ದಿನ ಭವಿಷ್ಯ












Click it and Unblock the Notifications