ಈಡೇರದ ಬೇಡಿಕೆ; ಮಂಗಳೂರು-ವಿಜಯಪುರ ರೈಲು ಮತ್ತೆ ಸೇವೆ ವಿಸ್ತರಣೆ
ವಿಜಯಪುರ, ಡಿಸೆಂಬರ್ 28; ಕರಾವಳಿ ಮತ್ತು ಉತ್ತರ ಕರ್ನಾಟಕ ಸಂಪರ್ಕಿಸುವ ವಿಶೇಷ ರೈಲು ವಿಜಯಪುರ-ಮಂಗಳೂರು ನಡುವೆ ಪ್ರತಿದಿನ ಸಂಚಾರ ನಡೆಸುತ್ತದೆ. ನೈಋತ್ಯ ರೈಲ್ವೆ ಈ ವಿಶೇಷ ಎಕ್ಸ್ಪ್ರೆಸ್ ರೈಲು ಸೇವೆ ವಿಸ್ತರಣೆ ಮಾಡಿದೆ. ಆದರೆ ಈ ರೈಲು ಸೇವೆಯನ್ನು ಕಾಯಂಗೊಳಿಸಬೇಕು ಎಂಬ ಬೇಡಿಕೆಗೆ ಮತ್ತೆ ಮನ್ನಣೆ ನೀಡಿಲ್ಲ.
ನೈಋತ್ಯ ರೈಲ್ವೆ ವಿಜಯಪುರ- ಮಂಗಳೂರು ಜಂಕ್ಷನ್ (07377), ಮಂಗಳೂರು ಜಂಕ್ಷನ್-ವಿಜಯಪುರ (07378) ರೈಲನ್ನು ವಿಸ್ತರಣೆ ಮಾಡಿ ಆದೇಶ ಹೊರಡಿಸಿದೆ. ಈ ಮೊದಲು ಡಿಸೆಂಬರ್ 31ರ ತನಕ ವಿಶೇಷ ರೈಲು ಸಂಚಾರ ನಡೆಸಲಿದೆ ಎಂದು ತಿಳಿಸಲಾಗಿತ್ತು.

ಆದೇಶದ ಪ್ರಕಾರ ವಿಜಯಪುರ-ಮಂಗಳೂರು ಜಂಕ್ಷನ್ (07377) ರೈಲು ಸೇವೆಯನ್ನು 1/1/2024 ರಿಂದ 31/3/2024ರ ತನಕ ವಿಸ್ತರಣೆ ಮಾಡಲಾಗಿದೆ. ಈ ಹಿಂದೆ ಈ ರೈಲನ್ನು 31/12/2023ರ ತನಕ ಓಡಿಸಲು ಆದೇಶಿಸಲಾಗಿತ್ತು.
ಇದೇ ರೀತಿ ಮಂಗಳೂರು ಜಂಕ್ಷನ್-ವಿಜಯಪುರ (07378) ರೈಲನ್ನು ಈ ಹಿಂದೆ 1/1/2024ರ ತನಕ ಓಡಿಸಲು ಆದೇಶಿಸಲಾಗಿತ್ತು. ಈಗ 2/1/2024 ರಿಂದ 1/4/2024ರ ತನಕ ಓಡಿಸಲು ಆದೇಶಿಸಲಾಗಿದೆ. ಈ ಮೂಲಕ ಏಪ್ರಿಲ್ 2024ರ ತನಕ ರೈಲು ಸೇವೆ ವಿಸ್ತರಣೆಯಾಗಿದೆ.
ಎರಡು ಪ್ರಮುಖ ಬೇಡಿಕೆಗಳು; ವಿಜಯಪುರ-ಮಂಗಳೂರು ಜಂಕ್ಷನ್ ರೈಲನ್ನು ಮಂಗಳೂರು ಸೆಂಟ್ರಲ್ ತನಕ ವಿಸ್ತರಣೆ ಮಾಡಬೇಕು ಮತ್ತು ಈ ರೈಲನ್ನು ಕಾಯಂಗೊಳಿಸಬೇಕು ಎಂಬುದು ಎರಡು ಪ್ರಮುಖ ಬೇಡಿಕೆಯಾಗಿದೆ. ರೈಲ್ವೆ ಅಧಿಕಾರಿಗಳು ರೈಲನ್ನು ಮಂಗಳೂರು ಸೆಂಟ್ರಲ್ ತನಕ ವಿಸ್ತರಣೆ ಮಾಡಲು ಒಪ್ಪಿಗೆ ನೀಡಿದ್ದಾರೆ. ಆದರೆ ರೈಲು ಕಾಯಂಗೊಳಿಸುವ ಬೇಡಿಕೆ ಈಡೇರಿಲ್ಲ.
ವಿಜಯಪುರದ ಸಂಸದ ರಮೇಶ್ ಜಿಗಜಿಣಗಿ ಮತ್ತು ರೈಲ್ವೆ ಪ್ರಯಾಣಿಕರ ವೇದಿಕೆ ನೈಋತ್ಯ ರೈಲ್ವೆಗೆ ವಿಜಯಪುರ-ಮಂಗಳೂರು ಜಂಕ್ಷನ್ ರೈಲನ್ನು ಕಾಯಂಗೊಳಿಸಬೇಕು ಎಂದು ಬೇಡಿಕೆ ಇಟ್ಟಿದ್ದರು. ಆದರೆ ಈಗ ಪ್ರತಿದಿನದ ವಿಶೇಷ ರೈಲು ಸೇವೆಯನ್ನು ಪುನಃ ಮೂರು ತಿಂಗಳು ವಿಸ್ತರಣೆ ಮಾಡಲಾಗಿದೆ.
ಮಂಗಳೂರು ಸೆಂಟ್ರಲ್ ನಿಲ್ದಾಣದಲ್ಲಿ ಎರಡು ಹೊಸ ಪ್ಲಾಟ್ಫಾರ್ಮ್ಗಳು ಉದ್ಘಾಟನೆಗೆ ಸಿದ್ಧವಾಗಿವೆ. ಡಿಸೆಂಬರ್ 30ರಂದು ಪ್ರಧಾನಿ ನರೇಂದ್ರ ಮೋದಿ ಅವುಗಳನ್ನು ಲೋಕಾರ್ಪಣೆ ಮಾಡಲಿದ್ದಾರೆ. ಬಳಿಕ ರೈಲನ್ನು ಮಂಗಳೂರು ಜಂಕ್ಷನ್ನಿಂದ ಮಂಗಳೂರು ಸೆಂಟ್ರಲ್ ತನಕ ವಿಸ್ತರಣೆ ಮಾಡುವ ಕುರಿತು ರೈಲ್ವೆ ಇಲಾಖೆಗೆ ಅಧಿಕಾರಿಗಳು ತೀರ್ಮಾನ ಕೈಗೊಳ್ಳುವ ನಿರೀಕ್ಷೆ ಇದೆ.
ಕರ್ನಾಟಕದ ಕರಾವಳಿ ಮತ್ತು ಉತ್ತರ ಕರ್ನಾಟಕ ಸಂಪರ್ಕಿಸುವ ಈ ರೈಲು ಸೇವೆಯಿಂದ ಧರ್ಮಸ್ಥಳ, ಕುಕ್ಕೆ ಸುಬ್ರಮಣ್ಯಕ್ಕೆ ಆಗಮಿಸುವ ಭಕ್ತರು, ಉಡುಪಿ ಮತ್ತು ಮಂಗಳೂರಿಗೆ ಆರೋಗ್ಯ ಸೇವೆ, ಶಿಕ್ಷಣಕ್ಕಾಗಿ ಆಗಮಿಸುವವರಿಗೆ ಅನುಕೂಲವಾಗಿದೆ. ಆದರೆ ವಿಶೇಷ ರೈಲು ಆದ ಕಾರಣ ದರ ಹೆಚ್ಚಿದೆ. ರೈಲನ್ನು ಕಾಯಂಗೊಳಿಸಿದರೆ ದರ ಕಡಿಮೆಯಾಗಲಿದೆ.
ನೈಋತ್ಯ ರೈಲ್ವೆ 2021ರಲ್ಲಿ ವಿಜಯಪುರ-ಮಂಗಳೂರು ಜಂಕ್ಷನ್ ನಡುವೆ ವಿಶೇಷ ರೈಲನ್ನು ಆರಂಭಿಸಿತ್ತು. ಕೋವಿಡ್ ಸಂದರ್ಭದಲ್ಲಿ ರೈಲು ಸೇವೆ ಸ್ಥಗಿತಗೊಳಿಸಲಾಗಿತ್ತು. ಬಳಿಕ ಪ್ರಯಾಣಿಕರ ಬೇಡಿಕೆಯಂತೆ ಸಂಚಾರ ಆರಂಭಿಸಲಾಯಿತು. ಆದರೆ ಮೂರು ವರ್ಷಗಳು ಕಳೆದರೂ ಸಹ ಇನ್ನೂ ರೈಲು ಸೇವೆ ಕಾಯಂಗೊಳಿಸಿಲ್ಲ.
ತತ್ಕಾಲ್ ಮಾದರಿಯಲ್ಲಿಯೇ ಮೂರು, ನಾಲ್ಕು ತಿಂಗಳ ಕಾಲ ರೈಲು ಸೇವೆಯನ್ನು ವಿಸ್ತರಣೆ ಮಾಡಿ ಓಡಿಸಲಾಗುತ್ತಿದೆ. ರೈಲು ಸೇವೆ ಕಾಯಂಗೊಳಿಸಿದರೆ ದರಗಳು ಕಡಿಮೆಯಾಗಲಿವೆ. ಆದರೆ ಇಲಾಖೆ ಕಾಯಂಗೊಳಿಸುವ ಕುರಿತು ಯಾವುದೇ ಆದೇಶವನ್ನು ಹೊರಡಿಸಿಲ್ಲ.
ರೈಲುಗಳ ಅವಧಿ ವಿಸ್ತರಣೆ ಆದೇಶ
ನೈಋತ್ಯ ರೈಲ್ವೆ ಸಮಯ, ನಿಲುಗಡೆಗಳಲ್ಲಿ ಯಾವುದೇ ಬದಲಾವಣೆ ಇಲ್ಲದಂತೆ ಕೆಲವು ರೈಲುಗಳ ಸೇವೆಯನ್ನು ವಿಸ್ತರಣೆ ಮಾಡಿದೆ.
* ರೈಲು ಸಂಖ್ಯೆ 07355 ಎಸ್ಎಸ್ಎಸ್ ಹುಬ್ಬಳ್ಳಿ-ರಾಮೇಶ್ವರಂ. ಈ ರೈಲನ್ನು ಎಸ್ಎಸ್ಎಸ್ ಹುಬ್ಬಳ್ಳಿಯಿಂದ 30/12/2023 ರವರೆಗೆ ಓಡಿಸಲು ಸೂಚಿಸಲಾಗಿತ್ತು, ಇದನ್ನು 6/1/2024 ರಿಂದ 30/3/2024ರವರೆಗೆ ವಿಸ್ತರಿಸಲಾಗಿದೆ.
* ರೈಲು ಸಂಖ್ಯೆ 07356 ರಾಮೇಶ್ವರಂ-ಎಸ್ಎಸ್ಎಸ್ ಹುಬ್ಬಳ್ಳಿ. ರೈಲನ್ನು ಮೊದಲು ರಾಮೇಶ್ವರಂನಿಂದ 31/12/2023ರವರೆಗೆ ಓಡಿಸಲು ಸೂಚಿಸಲಾಗಿತ್ತು. ಇದನ್ನು 7/1/2024 ರಿಂದ 31/3/2024ರವರೆಗೆ ವಿಸ್ತರಿಸಲಾಗಿದೆ.












Click it and Unblock the Notifications