ವಿಜಯಪುರ-ಮಂಗಳೂರು ರೈಲು ಮಂಗಳೂರು ಸೆಂಟ್ರಲ್ ತನಕ ವಿಸ್ತರಣೆ
ವಿಜಯಪುರ, ಫೆಬ್ರವರಿ 07: ಕರ್ನಾಟಕದ ಕರಾವಳಿ ಮತ್ತು ಉತ್ತರ ಕರ್ನಾಟಕ ಭಾಗದ ರೈಲು ಪ್ರಯಾಣಿಕರ ಒತ್ತಾಯಕ್ಕೆ ರೈಲ್ವೆ ಇಲಾಖೆ ಕೊನೆಗೂ ಮಣಿದಿದೆ. ವಿಜಯಪುರ-ಮಂಗಳೂರು ಜಂಕ್ಷನ್ ನಡುವಿನ ಪ್ರತಿದಿನದ ವಿಶೇಷ ಎಕ್ಸ್ಪ್ರೆಸ್ ರೈಲು ಸೇವೆಯನ್ನು ಮಂಗಳೂರು ಸೆಂಟ್ರಲ್ ತನಕ ವಿಸ್ತರಣೆ ಮಾಡುವ ದಿನಾಂಕ ಘೋಷಣೆ ಮಾಡಿದೆ.
ದಕ್ಷಿಣ ರೈಲ್ವೆ ಮತ್ತು ನೈಋತ್ಯ ರೈಲ್ವೆ ವಿಜಯಪುರ-ಮಂಗಳೂರು ಜಂಕ್ಷನ್ ನಡುವಿನ ಪ್ರತಿದಿನದ ವಿಶೇಷ ಎಕ್ಸ್ಪ್ರೆಸ್ ರೈಲು ಸೇವೆಯನ್ನು ಮಂಗಳೂರು ಸೆಂಟ್ರಲ್ ತನಕ ಏಪ್ರಿಲ್ 1ರಿಂದ ವಿಸ್ತರಣೆ ಮಾಡಲು ಒಪ್ಪಿಗೆ ನೀಡಿದೆ.

ವಿಜಯಪುರ-ಮಂಗಳೂರು ಜಂಕ್ಷನ್ ರೈಲನ್ನು ಮಂಗಳೂರು ಸೆಂಟ್ರಲ್ ತನಕ ವಿಸ್ತರಣೆ ಮಾಡಲು ಒಪ್ಪಿಗೆ ನೀಡಲಾಗಿತ್ತು. ಈಗ ಅಧಿಕೃತ ದಿನಾಂಕ ಘೋಷಣೆ ಮಾಡಲಾಗಿದೆ. ವಿಜಯಪುರ-ಮಂಗಳೂರು ಜಂಕ್ಷನ್ ರೈಲನ್ನು ಮಂಗಳೂರು ಸೆಂಟ್ರಲ್ ತನಕ ವಿಸ್ತರಣೆ ಮಾಡುವಂತೆ ಅಭಿಯಾನ ನಡೆದಿತ್ತು. ಜನಪ್ರತಿನಿಧಿಗಳು ಸಹ ರೈಲ್ವೆ ಇಲಾಖೆಗೆ ಪತ್ರವನ್ನು ಬರೆದಿದ್ದರು.
ರೈಲು ವಿಸ್ತರಣೆ: ನೈಋತ್ಯ ರೈಲ್ವೆ 20223ರ ಡಿಸೆಂಬರ್ನಲ್ಲಿ ವಿಜಯಪುರ-ಮಂಗಳೂರು ಜಂಕ್ಷನ್ ರೈಲನ್ನು ವಿಸ್ತರಣೆ ಮಾಡಿದೆ. ರೈಲು ನಂಬರ್ 07377 1/1/2024 ರಿಂದ 31/3/2024ರ ತನಕ ವಿಸ್ತರಣೆಯಾಗಿದೆ. ಮಂಗಳೂರು ಜಂಕ್ಷನ್-ವಿಜಯಪುರ (07378) ರೈಲು 2/1/2024 ರಿಂದ 1/4/2024ರ ತನಕ ವಿಸ್ತರಣೆ ಮಾಡಿ ಆದೇಶಿಸಲಾಗಿದೆ.
ವಿಜಯಪುರ-ಮಂಗಳೂರು ಜಂಕ್ಷನ್ ರೈಲನ್ನು ಈಗ ಮಂಗಳೂರು ಸೆಂಟ್ರಲ್ ತನಕ ವಿಸ್ತರಣೆ ಮಾಡಿರುವುದರಿಂದ ಈಗಿರುವ ವೇಳಾಪಟ್ಟಿಯ ಅನ್ವಯವೇ ರೈಲು ಸಂಚಾರ ನಡೆಸಲಿದೆಯೇ? ಎಂದು ಕಾದು ನೋಡಬೇಕಿದೆ. ಈ ಕುರಿತು ಇನ್ನೂ ಅಧಿಕೃತ ಆದೇಶ ಬರಬೇಕಿದೆ.
ಕರಾವಳಿ ಮತ್ತು ಉತ್ತರ ಕರ್ನಾಟಕವನ್ನು ಸಂಪರ್ಕಿಸುವ ಪ್ರತಿದಿನ ವಿಶೇಷ ಎಕ್ಸ್ಪ್ರೆಸ್ ರೈಲು ಸೇವೆ ಇದು. ದಕ್ಷಿಣ ಕನ್ನಡದ ದೇವಾಲಯಗಳು, ಆಸ್ಪತ್ರೆಗಳು, ಕಾಲೇಜುಗಳಿಗೆ ಬರುವ ಜನರಿಗೆ ಈ ರೈಲು ಅನುಕೂಲವಾಗಿದೆ. ಈ ರೈಲನ್ನು ಕಾಯಂಗೊಳಿಸಬೇಕು ಎಂಬ ಬೇಡಿಕೆ ಸಹ ಇದ್ದು, ಅದಕ್ಕೆ ಮನ್ನಣೆ ಸಿಕ್ಕಿಲ್ಲ.
ಸದ್ಯದ ವೇಳಾಪಟ್ಟಿಯಂತೆ ವಿಜಯಪುರ-ಮಂಗಳೂರು ಜಂಕ್ಷನ್ (07377) ರೈಲು ಸಂಜೆ 4 ಗಂಟೆಗೆ ವಿಜಯಪುರದಿಂದ ಹೊರಟು ಮರುದಿನ ಬೆಳಗ್ಗೆ 9.30ಕ್ಕೆ ಮಂಗಳೂರು ಜಂಕ್ಷನ್ಗೆ ಬರಲಿದೆ. ಮಂಗಳೂರು ಜಂಕ್ಷನ್-ವಿಜಯಪುರ (07378) ರೈಲು 2.45ಕ್ಕೆ ಮಂಗಳೂರು ಜಂಕ್ಷನ್ನಿಂದ ಹೊರಡಲಿದೆ.
ವಿಜಯಪುರ-ಮಂಗಳೂರು ನಡುವಿನ ರೈಲನ್ನು ಮಂಗಳೂರು ಜಂಕ್ಷನ್ನಿಂದ ಮಂಗಳೂರು ಸೆಂಟ್ರಲ್ ತನಕ ವಿಸ್ತರಣೆ ಮಾಡಲು ಪ್ರಯಾಣಿಕರು, ಜನಪ್ರತಿನಿಧಿಗಳು ಬೇಡಿಕೆ ಇಟ್ಟಿದ್ದರು. ಈ ಕುರಿತು ನೈಋತ್ಯ ರೈಲ್ವೆ, ರೈಲ್ವೆ ಸಚಿವರಿಗೆ ಪತ್ರವನ್ನು ಬರೆಯಲಾಗಿತ್ತು. ಆನ್ಲೈನ್ ಮೂಲಕ ಅಭಿಯಾನವನ್ನೂ ನಡೆಸಲಾಗಿತ್ತು.
ಈ ರೈಲು ತತ್ಕಾಲ್ ಮಾದರಿಯಾದ ಕಾರಣ ದರ ಹೆಚ್ಚಿದೆ. ರೈಲನ್ನು ಕಾಯಂಗೊಳಿಸಬೇಕು ಆಗ ಮಂಗಳೂರು ಮತ್ತು ಉತ್ತರ ಕರ್ನಾಟಕ ಭಾಗಕ್ಕೆ ಸಂಚಾರ ನಡೆಸುವ ಅನೇಕ ಜನರಿಗೆ ಅನುಕೂಲವಾಗಲಿದೆ ಎಂಬ ವಾದವೂ ಇದೆ.
ಮಂಗಳೂರು ಸೆಂಟ್ರಲ್ ನಿಲ್ದಾಣದಲ್ಲಿ ಹೊಸ ಪ್ಲಾಟ್ ಫಾರ್ಮ್ಗಳ ಕಾಮಗಾರಿ ಪೂರ್ಣಗೊಳ್ಳುತ್ತಾ ಬಂದಿದೆ. ಆದ್ದರಿಂದ ರೈಲು ನಿಲುಗಡೆ ಮಾಡಲು ಜಾಗವೂ ಸಿಕ್ಕಿದೆ. ಆದ್ದರಿಂದ ಈ ಹಿಂದೆ ನೀಡಿದ್ದ ಭರವಸೆಯಂತೆ ವಿಜಯಪುರ-ಮಂಗಳೂರು ಜಂಕ್ಷನ್ ರೈಲನ್ನು ಮಂಗಳೂರು ಸೆಂಟ್ರಲ್ ತನಕ ವಿಸ್ತರಣೆ ಮಾಡಲಾಗಿದೆ.
ಮಂಗಳೂರು ಸೆಂಟ್ರಲ್ ತನಕ ರೈಲು ವಿಸ್ತರಣೆ ಮಾಡಬೇಕು ಎಂದು ಪಾಲಕ್ಕಾಡ್ ರೈಲ್ವೆ ವಿಭಾಗ ಮಟ್ಟದ ಸಭೆಯಲ್ಲಿಯೂ ಚರ್ಚೆ ನಡೆದಿತ್ತು. ಆಗ ಅಧಿಕಾರಿಗಳು ಪ್ಲಾಟ್ ಫಾರಂಗಳ ಕೆಲಸ ಪೂರ್ಣಗೊಂಡ ಬಳಿಕ ಈ ಕುರಿತು ತೀರ್ಮಾನ ಮಾಡೋಣ. ಸದ್ಯ ರೈಲು ವಿಸ್ತರಣೆ ಮಾಡಿದರೆ ಪೀಕ್ ಅವರ್ನಲ್ಲಿ ಸೆಂಟ್ರಲ್ ನಿಲ್ದಾಣದಲ್ಲಿ ಸಂಚಾರ ದಟ್ಟಣೆ ಉಂಟಾಗುತ್ತದೆ ಎಂದು ಹೇಳಿದ್ದರು.












Click it and Unblock the Notifications