ವಿಜಯೇಂದ್ರ ದೆಹಲಿ ಭೇಟಿಯ ಹಿಂದಿನ ರಹಸ್ಯ ಬಿಚ್ಚಿಟ್ಟ ಯತ್ನಾಳ್
ವಿಜಯಪುರ, ಜೂನ್ 6: ಕರ್ನಾಟಕ ರಾಜ್ಯ ಬಿಜೆಪಿ ಘಟಕದ ಉಪಾಧ್ಯಕ್ಷ ಬಿ.ವೈ.ವಿಜಯೇಂದ್ರ ಅವರು ಇತ್ತೀಚೆಗೆ ದೆಹಲಿಗೆ ನೀಡಿದ ಭೇಟಿಯ ರಹಸ್ಯವನ್ನು ಪಕ್ಷದ ಹಿರಿಯ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ಬಿಚ್ಚಿಟ್ಟಿದ್ದಾರೆ.
ಪಕ್ಷದ ಮುಖಂಡರನ್ನು ಭೇಟಿಯಾಗಲು ವಿಜಯೇಂದ್ರ ಅವರು ಹೋಗಿದ್ದರು ಎನ್ನುವುದು ಸುಳ್ಳು, ರಾಜ್ಯದಲ್ಲಿ ಹಲವು ಉಪಾಧ್ಯಕ್ಷರು ಇದ್ದಾರೆ. ಅವರನ್ನೆಲ್ಲಾ ಬಿಟ್ಟು ವಿಜಯೇಂದ್ರ ಅವರನ್ನು ಮಾತ್ರ ವರಿಷ್ಠರು ಯಾಕೆ ಕರೆಯುತ್ತಾರೆ ಎಂದು ಯತ್ನಾಳ್ ಪ್ರಶ್ನಿಸಿದ್ದಾರೆ.
"ಅಸಲಿಗೆ ಜಾರಿ ನಿರ್ದೇಶನಾಲಯ (ಇಡಿ) ವಿಜಯೇಂದ್ರ ಅವರನ್ನು ವಿಚಾರಣೆಗೆ ಹಾಜರಾಗುವಂತೆ ಸೂಚಿಸಿದ್ದರಿಂದ ವಿಜಯೇಂದ್ರ, ದೆಹಲಿಗೆ ಹೋಗಿದ್ದರೇ ಹೊರತು ಪಕ್ಷದ ಹೈಕಮಾಂಡ್ ಅನ್ನು ಭೇಟಿ ಮಾಡಲು ಅಲ್ಲ"ಎಂದು ಯತ್ನಾಳ್ ಹೊಸ ಬಾಂಬ್ ಸಿಡಿಸಿದ್ದಾರೆ.

"ಮಾರಿಷಸ್ ನಲ್ಲಿ ಅಕ್ರಮವಾಗಿರುವ ಆರ್ಥಿಕ ಮೂಲ ಎಲ್ಲಿಂದ ಬಂತು ಮತ್ತು ಕಿಯಾ ಕಂಪೆನಿಗೆ ವರ್ಗಾವಣೆ ಆಗಿದ್ದು ಹೇಗೆ ಎನ್ನುವ ವಿಚಾರದ ಬಗ್ಗೆ ಇಡಿ ಇಲಾಖೆ ವಿಜಯೇಂದ್ರ ಅವರ ವಿಚಾರಣೆ ನಡೆಸಿದೆ"ಎಂದು ಯತ್ನಾಳ್ ಆರೋಪಿಸಿದ್ದಾರೆ.
"ಕೋವಿಡ್ ನಿರ್ವಹಣೆ ಮತ್ತು ರಾಜ್ಯ ಬಿಜೆಪಿಯ ಆಂತರಿಕ ವಿಚಾರವನ್ನು ವಿಜಯೇಂದ್ರ ಬಳಿ ಹೈಕಮಾಂಡ್ ಮಾತನಾಡುತ್ತಾ. ಅದಕ್ಕಾಗಿ ರಾಜ್ಯಾಧ್ಯಕ್ಷರು ಮತ್ತು ಮುಖ್ಯಮಂತ್ರಿಗಳಿಲ್ಲವೇ"ಎಂದು ಯತ್ನಾಳ್ ಹೇಳಿದ್ದಾರೆ.
"ಮುಖ್ಯಮಂತ್ರಿಗಳು ಗೌರವಯುತವಾಗಿ ಸ್ಥಾನದಿಂದ ಕೆಳಗಿಳಿಯಬೇಕು. ತಮ್ಮ ಸುತ್ತಮುತ್ತ ತುಂಬಿರುವ ಹೊಗಳು ಭಟ್ಟರ ಮಾತನ್ನು ಕೇಳಿದರೆ, ಇನ್ನಷ್ಟು ಅವಮಾನ ಎದುರಿಸಬೇಕಾದೀತು"ಎಂದು ಯತ್ನಾಳ್ ಎಚ್ಚರಿಕೆಯನ್ನು ನೀಡಿದ್ದಾರೆ.












Click it and Unblock the Notifications