ಸಿಂಧಗಿ ಉಪಚುನಾವಣೆ: ಗ್ರೇಟ್ ಲಯರ್ ಎಂದ ಸಿದ್ದರಾಮಯ್ಯಗೆ ಎಚ್.ಡಿ.ಕೆ ತಿರುಗೇಟು
ಸಿಂಧಗಿ, ಅಕ್ಟೋಬರ್ 27: ಭಾರೀ ಕುತೂಹಲ ಹಾನಗಲ್ ಹಾಗೂ ಸಿಂಧಗಿ ಉಪ ಚುನಾವಣೆಯ ಬಹಿರಂಗ ಪ್ರಚಾರ ಅಂತ್ಯ ಕಂಡಿದೆ. ಮೂರು ರಾಜಕೀಯ ಪಕ್ಷಗಳ ನಡುವೆ ಭಾರೀ ಪೈಪೋಟಿ ನಡೆದಿದೆ. ಕೇಂದ್ರದಲ್ಲಿ ರಾಜ್ಯದಲ್ಲಿ ಎರಡು ಹಳಿ ಬಂಡಿ ನಡೆಸುತ್ತಿರುವ ಬಿಜೆಪಿಗೆ ಸಿಂಧಗಿ ಉಪಚುನಾವಣೆಯಲ್ಲಿ ಗೆಲ್ಲುವುದು ಮುಖ್ಯವಾದರೇ ಬಿಜೆಪಿಯನ್ನು ಸೋಲಿಸಲೇಬೇಕು ಎಂದು ಕಾಂಗ್ರೆಸ್ ನಾಯಕರು ತೊಡೆ ತಟ್ಟಿ ನಿಂತಿದ್ದಾರೆ. ಇತ್ತ ಎರಡೂ ಪಕ್ಷಗಳಿಗೂ ಸೋಲಿನ ಊಟ ಉಣಬಡಿಸಬೇಕು ಎಂದು ಜೆಡಿಎಸ್ ಪಣತೊಟ್ಟಿದೆ. ಹೀಗಾಗಿ ಪರಸ್ಪರ ವಾಕ್ಸಮರವೂ ಜೋರಾಗಿದೆ. ಪ್ರಚಾರದ ಕೊನೆ ದಿನವಾದ ಇಂದು ಮೂರು ಪಕ್ಷಗಳ ಮತಬೇಟೆ ಕ್ಷೇತ್ರದಲ್ಲಿ ಜೋರಾಗಿ ನಡೆದಿದೆ. ಈ ಮಧ್ಯೆ ಸಿಂಧಗಿಯಲ್ಲಿ ಭರ್ಜರಿ ಪ್ರಚಾರ ಮಾಡುವ ಮೂಲಕ ''ಗ್ರೇಟ್ ಲಯರ್'' ಎಂದ ಸಿದ್ದರಾಮಯ್ಯಗೆ ಎಚ್.ಡಿ.ಕೆ ತಿರುಗೇಟು ಕೊಟ್ಟಿದ್ದಾರೆ.
ತಮ್ಮನ್ನು 'ಗ್ರೇಟ್ ಲಯರ್' ಎಂದು ಕರೆದ ಪ್ರತಿಪಕ್ಷ ನಾಯಕ ಸಿದ್ದರಾಮಯ್ಯ ಅವರಿಗೆ ತೀವ್ರ ತಿರುಗೇಟು ನೀಡಿದ ಮಾಜಿ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಅವರು; "ಉಪ ಚುನಾವಣೆಯಲ್ಲಿ ಬಿಜೆಪಿಯನ್ನು ಗೆಲ್ಲಿಸಲು ಯಡಿಯೂರಪ್ಪ ಅವರಿಂದ ಎಷ್ಟು ಸೂಟ್ಕೇಸ್ ಪಡೆದಿರಿ ಎನ್ನುವುದನ್ನು ಜನರಿಗೆ ತಿಳಿಸಿ" ಎಂದು ಹೇಳಿದರು. ಸಿಂಧಗಿ ಉಪ ಚುನಾವಣೆಯ ನಿಮಿತ್ತ ಕ್ಷೇತ್ರದಲ್ಲಿ ಕೊನೆ ದಿನದ ಪ್ರಚಾರ ನಡೆಸಿದ ವೇಳೆ ಮಾಧ್ಯಮಗಳ ಜತೆ ಮಾತನಾಡಿದರು ಅವರು,"ನನ್ನನ್ನು ಸಿದ್ದರಾಮಯ್ಯ 'ಗ್ರೇಟ್ ಲಯರ್' ಎಂದು ಕರೆದಿದ್ದಾರೆ. ಹಾಗಾದರೆ ಸಿದ್ದರಾಮಯ್ಯ ಸತ್ಯವಂತರು ಅಲ್ಲವೆ? ಅವರು ಸತ್ಯ ಹರಿಶ್ಚಂದ್ರ ಅಲ್ಲವೇ. ಹಾಗಾದರೆ ಅವರು ಯಡಿಯೂರಪ್ಪ ಅವರಿಂದ ಚುನಾವಣೆ ಸೂಟ್ಕೇಸ್ ಪಡೆದಿಲ್ಲ ಎಂದು ಹೇಳಲಿ" ಎಂದು ಸವಾಲು ಹಾಕಿದರು.
ಸಿದ್ದರಾಮಯ್ಯಗೆ ಕುಮಾರಸ್ವಾಮಿ ಸವಾಲ್
2009ರಲ್ಲಿ ನಡೆದ ಉಪ ಚುನಾವಣೆಗಳಲ್ಲಿ ಅದರಲ್ಲೂ ಮೊದಲ ಹಂತದ ಎಂಟು ವಿಧಾನಸಭಾ ಕ್ಷೇತ್ರಗಳ ಚುನಾವಣೆ ಸಮಯದಲ್ಲಿ ಬಿಜೆಪಿಯನ್ನು ಗೆಲ್ಲಿಸಲು ನಿಮ್ಮ ಆಪ್ತರನ್ನು ಯಡಿಯೂರಪ್ಪ ಅವರ ಬಳಿಗೆ ಕಳಿಸಿ ಹಣ ಪಡೆದುಕೊಳ್ಳಲಿಲ್ಲವೆ? ಆ ಮೂಲಕ ನೀವು ಬಿಜೆಪಿಯನ್ನು ಗೆಲ್ಲಿಸಿ ಕಾಂಗ್ರೆಸ್ ಅಭ್ಯರ್ಥಿಗಳನ್ನು ಸೋಲಿಸಲು ಕೆಲಸ ಮಾಡಿದಿರೋ ಇಲ್ಲವೋ ಎಂಬುದನ್ನು ಜನರ ಮುಂದೆ ಇಡಿ ಎಂದು ಕುಮಾರಸ್ವಾಮಿ ಅವರು ಸಿದ್ದರಾಮಯ್ಯ ಅವರಿಗೆ ನೇರವಾಗಿ ಹೇಳಿದರು. ಮೊದಲು ಆ ವಿಷಯವನ್ನು ಬಹಿರಂಗವಾಗಿ ಹೇಳಿ. ಆಮೇಲೆ ನಾನು ಗ್ರೇಟ್ ಲಯರ್ರೋ ಅಥವಾ ನೀವು ಗ್ರೇಟ್ ಲಯರ್ರೋ ಎನ್ನುವುದು ಗೊತ್ತಾಗುತ್ತದೆ ಎಂದು ಪ್ರತಿಪಕ್ಷ ನಾಯಕನಿಗೆ ಮಾಜಿ ಮುಖ್ಯಮಂತ್ರಿಗಳು ನೇರ ಸವಾಲು ಹಾಕಿದರು. ಸಿದ್ದರಾಮಯ್ಯ ಅವರು ಆ ತಾಯಿ ಚಾಮುಂಡೇಶ್ವರಿಯ ಆಶೀರ್ವಾದದಿಂದ ರಾಜಕೀಯದಲ್ಲಿ ಇಷ್ಟು ದೂರ ಬೆಳೆದು ಬಂದಿದ್ದಾರೆ. ಅವರು ಒಮ್ಮೆ ಆ ತಾಯಿಯನ್ನು ಮನಸ್ಸಿನಲ್ಲೇ ಸ್ಮರಿಸಿ, ಚುನಾವಣೆಯಲ್ಲಿ ಬಿಜೆಪಿಯನ್ನು ಗೆಲ್ಲಿಸಿ ಕಾಂಗ್ರೆಸ್ ಪಕ್ಷವನ್ನು ಸೋಲಿಸಲು ನಾನು ಯಡಿಯೂರಪ್ಪ ಅವರಿಂದ ಹಣ ಪಡೆದಿಲ್ಲ ಎಂದು ಹೇಳಲಿ ಎಂದರು ಕುಮಾರಸ್ವಾಮಿ ಅವರು ಹೇಳಿದ್ದಾರೆ.
ನಿಖಿಲ್ ತಿರುಗೇಟು
ಇದರೊಂದಿಗೆ ಇಂದು ಸಿಂಧಗಿ ಪ್ರಚಾರದ ವೇಳೆ ಮಾತನಾಡಿದ ನಿಖಿಲ್ ಕುಮಾರಸ್ವಾಮಿ ಕೂಡ ಸಿದ್ದರಾಮಯ್ಯ ವಿರುದ್ಧ ಕಿಡಿ ಕಾರಿದ್ದಾರೆ. ಇನ್ನು ಮಾಜಿ ಸಿಎಂ ಸಿದ್ದರಾಮಯ್ಯ ಅವರ ಜೆಡಿಎಸ್ ಅಲ್ಲ ಅದು ಜೆಡಿಎಫ್ ಎಂದು ಹೇಳಿದ್ದು, ಅದಕ್ಕ ಜೆಡಿಎಸ್ ಯುವ ಘಟಕದ ಅಧ್ಯಕ್ಷ ನಿಖಿಲ್ ಕುಮಾರಸ್ವಾಮಿ ತಿರುಗೇಟು ಕೊಟ್ಟಿದ್ದಾರೆ. ಸಿದ್ದರಾಮಯ್ಯ ಅವರ ಜೆಡಿಎಸ್ ಅಲ್ಲ ಅದು ಜೆಡಿಎಫ್ ಎಂದು ಹೇಳಿದ್ರು ಸಿದ್ದರಾಮಣ್ಣ ಅವರ ಮಗನೂ ರಾಜಕೀಯದಲ್ಲಿ ಇಲ್ಲವೇ? ಅವರೂ ಕೂಡ ರಾಜಕಾರಣಿ ಅಲ್ಲವೇ? ಅವರು ಡಾಕ್ಟರ್ ಅಲ್ಲವೇ? ಅವರ ಪ್ರೋಫೇಷನಲ್ ಡಾಕ್ಟರ್ ಅಲ್ಲವೇ? ಹಾಗಾದ್ರೆ ಅವರು ರಾಜಕೀಯಕ್ಕೆ ಯಾಕೆ ಬಂದ್ರು ಅಂತ ಕೇಳಬಹುದು ಅಲ್ವಾ? ಹೀಗೆ ಪ್ರಶ್ನೆ ಮಾಡಿದರೆ ಸುಮಾರಷ್ಟು ಇವೆ. ಅವರೆಂತೆ ನಾವು ಮತನಾಡುವುದಿಲ್ಲ" ನಿಖಿಲ್ ಕುಟುಕಿದ್ದಾರೆ.
ಬಿಜೆಪಿ- ಜೆಡಿಎಸ್ ಒಳಒಪ್ಪಂದ
Recommended Video
ಉಪಚುನಾವಣೆಯಲ್ಲಿ ಬಿಜೆಪಿ ಜತೆ ಜೆಡಿಎಸ್ ಒಳ ಒಪ್ಪಂದ ಮಾಡಿಕೊಂಡಿದೆ ಎಂದು ವಿಪಕ್ಷ ನಾಯಕ ಸಿದ್ಧರಾಮಯ್ಯ ಆರೋಪ ಮಾಡಿದ್ದರು. ಇದಕ್ಕೆ ಖಾರವಾಗಿ ಉತ್ತರಿಸಿದ ಮಾಜಿ ಸಿಎಂ ಎಚ್.ಡಿ ಕುಮಾರಸ್ವಾಮಿ,"ನಮಗೆ ಯಾರ ಬಗ್ಗೆಯೂ ಸಾಫ್ಟ್ ಕಾರ್ನರ್ ಇಲ್ಲ. ಬಿಜೆಪಿ ಮೇಲೆ ಸಾಫ್ಟ್ ಕಾರ್ನರ್ ಇದ್ದಿದ್ದರೆ ಕಾಂಗ್ರೆಸ್ ಜೊತೆ ಯಾಕೆ ಸರ್ಕಾರ ಮಾಡುತ್ತಿದ್ದೆ. ಬಿಜೆಪಿ ಜೊತೆಯೇ 5 ವರ್ಷ ಕಾಲ ಸರ್ಕಾರ ಮಾಡುತ್ತಿದ್ದೆ. 2006ರಲ್ಲಿ ಸರ್ಕಾರ ಮಾಡಲು ಕಾರಣ ಇದೇ ಸಿದ್ದರಾಮಯ್ಯ. ಅವರ ನಡವಳಿಕೆಯಿಂದ ನಾವು ಸರ್ಕಾರ ಮಾಡಿದ್ದೆವು" ಎಂದು ಟಾಂಗ್ ಕೊಟ್ಟಿದ್ದರು. ಇಂದು ಮತ್ತೆ ಸಿದ್ದರಾಮಯ್ಯಗೆ ಅವರಿಗೆ ತಿರುಮಂತ್ರ ಹಾಕಿ ಸವಾಲು ಹಾಕಿದ್ದಾರೆ.