ಸಿಂಧಗಿ ಉಪ ಚುನಾವಣೆ ಅಖಾಡಕ್ಕಿಳಿದ ಎಚ್. ಡಿ. ದೇವೇಗೌಡ
ವಿಜಯಪುರ, ಅಕ್ಟೋಬರ್ 12; ಜೆಡಿಎಸ್ ವರಿಷ್ಠ, ಮಾಜಿ ಪ್ರಧಾನಿ ಎಚ್. ಡಿ. ದೇವೇಗೌಡ ವಿಜಯಪುರ ಜಿಲ್ಲೆಯ ಸಿಂಧಗಿ ಉಪ ಚುನಾವಣೆ ಪ್ರಚಾರಕ್ಕೆ ಧುಮುಕಿದ್ದಾರೆ. 88 ವರ್ಷದ ದೇವೇಗೌಡರು ಉಪ ಚುನಾವಣೆಗಾಗಿ 9 ದಿನಗಳ ಕಾಲ ಪ್ರಚಾರ ಮಾಡಲಿದ್ದಾರೆ. ಅಕ್ಟೋಬರ್ 30ರಂದು ಉಪ ಚುನಾವಣೆ ನಡೆಯಲಿದೆ.
ಮಂಗಳವಾರ ಸಿಂಧಗಿಯಲ್ಲಿ ಎಚ್. ಡಿ. ದೇವೇಗೌಡರು ಪತ್ರಿಕಾಗೋಷ್ಠಿ ನಡೆಸಿದರು. ಉಪ ಚುನಾವಣೆಗೆ ಜೆಡಿಎಸ್ ಅಭ್ಯರ್ಥಿಯಾದ ನಾಜಿಯಾ ಶಕೀಲ್ ಅಂಗಡಿ ಸೇರಿದಂತೆ ಪಕ್ಷದ ಹಲವು ನಾಯಕರು ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು.
ಮಾಧ್ಯಮಗಳ ಜೊತೆ ಮಾತನಾಡಿದ ದೇವೇಗೌಡರು, "ಸಿಂಧಗಿಯಲ್ಲಿ 9 ದಿನಗಳ ಕಾಲ ವಾಸ್ತವ್ಯ ಹೂಡಿ ಹಳ್ಳಿ-ಹಳ್ಳಿಗೂ ಸಂಚರಿಸಿ ಮುಖ್ಯಮಂತ್ರಿಯಾಗಿದ್ದಾಗ, ನೀರಾವರಿ ಸಚಿವನಾಗಿದ್ದಾಗ ಈ ಭಾಗಕ್ಕೆ ಮಾಡಿದ ಕೆಲಸಗಳನ್ನು ತಿಳಿಸಿ ಮತ ಕೇಳುವೆ" ಎಂದರು.

"ನಮ್ಮ ಪಕ್ಷಕ್ಕೆ ಕಾಂಗ್ರೆಸ್, ಬಿಜೆಪಿ ಎದುರಾಳಿಗಳು. ಯಾವುದೇ ದಾಕ್ಷಿಣ್ಯ ಇಲ್ಲದೇ ಚುನಾವಣೆ ಹೋರಾಟ ಮಾಡಲಾಗುತ್ತದೆ. ಯಾವುದೇ ಪಕ್ಷ ಗುರಿ ಇಟ್ಟುಕೊಂಡು ಚುನಾವಣೆ ಮಾಡುವುದಿಲ್ಲ. ಪಕ್ಷದ ಗೆಲುವಿಗೆ ಸ್ಥಳೀಯ ನಾಯಕರು ಒಟ್ಟಾಗಿ ಕೆಲಸ ಮಾಡಬೇಕು" ಎಂದು ಕರೆ ನೀಡಿದರು.
"ಸಿಂಧಗಿ ಕ್ಷೇತ್ರದ ಉಪ ಚುನಾವಣೆ ಟಿಕೆಟ್ಗಾಗಿ 9 ಅಕಾಂಕ್ಷಿಗಳಿದ್ದರು. ಈ ಭಾಗದಲ್ಲಿ ವಿದ್ಯಾಸಂಸ್ಥೆಗಳ ಮೂಲಕ ಸಮಾಜದಲ್ಲಿ ಸದ್ಭಾವನೆ ಬೆಳೆಸಿಕೊಂಡು ಬಂದಿರುವ ಅಂಗಡಿ ಕುಟುಂಬದ ಮಹಿಳೆಗೆ ಟಿಕೆಟ್ ನೀಡಲಾಗಿದೆ" ಎಂದು ದೇವೇಗೌಡ ಹೇಳಿದರು.
"ಎಂ. ಸಿ .ಮನಗೂಳಿ ಪುತ್ರ ಕಾಂಗ್ರೆಸ್ ಅಭ್ಯರ್ಥಿಯಾಗಿರುವ ಕುರಿತು ಪ್ರತಿಕ್ರಿಯೆ ನೀಡುವುದಿಲ್ಲ. ನಮ್ಮ ಮೇಲೆ ಆಪಾದನೆ ಮಾಡಿದರೆ ಉತ್ತರ ಕೊಡುವ ಶಕ್ತಿ ಇದೆ. ಎಂ. ಸಿ. ಮನಗೂಳಿ ಅವರನ್ನು ನಾವೇ ಬೆಳೆಸಿದ್ದೇವೆ ಎಂದು ಹೇಳುವುದಿಲ್ಲ. ಆದರೆ ಅವರು ನಮ್ಮ ಒಡನಾಡಿಗಳಾಗಿದ್ದರು ಎಂದು ಹೇಳ ಬಯಸುತ್ತೇನೆ" ಎಂದರು.
"ಎಂ. ಸಿ. ಮನಗೂಳಿಯವರಿಗೆ ದ್ರೋಹ ಮಾಡಿಲ್ಲ. ರಾಜಕೀಯ ಅತಂತ್ರ ಸ್ಥಿತಿ ಇದ್ದಾಗಲೂ ಮಂತ್ರಿ ಮಾಡಿದ್ದೇವೆ. ಅವರನ್ನು ಸರಿಯಾಗಿ ನಡೆಸಿಕೊಂಡಿಲ್ಲ ಎಂಬುದಾಗಿ ಮನಗೂಳಿ ಪುತ್ರರೊಬ್ಬರು ಹೇಳಿರುವುದು ಸರಿಯಲ್ಲ. ಆ ದೇವರೇ ನೋಡಿಕೊಳ್ಳಲಿ" ಎಂದು ದೇವೇಗೌಡರು ಹೇಳಿದರು.
ಜೆಡಿಎಸ್ ಜಿಲ್ಲಾಧ್ಯಕ್ಷ ಮಲ್ಲಿಕಾರ್ಜುನ ಯಂಡಿಗೇರಿ ಮಾತನಾಡಿ, "ಈಗಾಗಲೇ ಪುರಸಭೆ ಅಧ್ಯಕ್ಷ ಡಾ. ಶಾಂತವೀರ ಮನಗೂಳಿಗೆ ನೋಟಿಸ್ ನೀಡಲಾಗಿದೆ. ನಮ್ಮ ಪಕ್ಷದ ಆರು ಜನ ಸದಸ್ಯರು ಕಾಂಗ್ರೆಸ್ ಸೇರಲಿದ್ದಾರೆ ಎಂದು ಸುಳ್ಳು ಹೇಳಿಕೆ ನೀಡಿದ್ದಾರೆ" ಎಂದರು.
"ಐವರು ಸದಸ್ಯರು ಡಾ. ಶಾಂತವೀರ ಮನಗೂಳಿ ಅವರನ್ನು ಅಧ್ಯಕ್ಷ ಸ್ಥಾನದಿಂದ ಕೆಳಗಿಳಿಸುವಂತೆ ಅವಿಶ್ವಾಸ ಗೊತ್ತುವಳಿ ಮಂಡನೆಗೆ ಅರ್ಜಿ ಸಲ್ಲಿಸಿದ್ದಾರೆ. ಅವರಿಗೆ ಮಾನ, ಮರ್ಯಾದೆ ಇದ್ದರೆ ನಮ್ಮ ಪಕ್ಷ ತ್ಯಜಿಸಿದ ಕೂಡಲೇ ರಾಜೀನಾಮೆ ನೀಡಬೇಕಿತ್ತು" ಎಂದು ಸವಾಲು ಹಾಕಿದರು.
8 ಅಭ್ಯರ್ಥಿಗಳು ಕಣದಲ್ಲಿ; ಸಿಂಧಗಿ ಉಪ ಚುನಾವಣೆ ಕಣದಲ್ಲಿ 8 ಅಭ್ಯರ್ಥಿಗಳಿದ್ದಾರೆ. ಸೋಮವಾರ ನಾಮಪತ್ರಗಳ ಪರಿಶೀಲನೆ ನಡೆಯಿತು. ಮೂರು ಪ್ರಮುಖ ಪಕ್ಷಗಳು ಸೇರಿದಂತೆ ಎಲ್ಲ 8 ಅಭ್ಯರ್ಥಿಗಳು ಸಲ್ಲಿಕೆ ಮಾಡಿದ ನಾಮಪತ್ರಗಳು ಕ್ರಮಬದ್ಧವಾಗಿದೆ. ನಾಪತ್ರವನ್ನು ವಾಪಸ್ ಪಡೆಯಲು ಬುಧವಾರ ಕೊನೆಯ ದಿನವಾಗಿದೆ.
ಕಾಂಗ್ರೆಸ್ನ ಅಶೋಕ ಮನಗೂಳಿ, ಬಿಜೆಪಿಯ ರಮೇಶ ಭೂಸನೂರ, ಜೆಡಿಎಸ್ನ ನಾಜಿಯಾ ಶಕೀಲ್ ಅಂಗಡಿ, ರಾಷ್ಟ್ರೀಯ ಸಮಾಜ ಪಕ್ಷದ ವಿಕ್ರಮ್ ಪಂಡಿತ, ಕರ್ನಾಟಕ ರಾಷ್ಟ್ರ ಸಮಿತಿಯ ಡಾ. ಸುನೀಲ್ ಕುಮಾರ್ ಹೆಬ್ಬಿ ಕಣದಲ್ಲಿರುವ ಪ್ರಮುಖ ಅಭ್ಯರ್ಥಿಗಳು.
2018ರ ವಿಧಾನಸಭೆ ಚುನಾವಣೆಯಲ್ಲಿ ಜೆಡಿಎಸ್ನ ಎಂ. ಸಿ. ಮನಗೂಳಿ ಕ್ಷೇತ್ರದಲ್ಲಿ ಗೆದ್ದಿದ್ದರು. ಅವರ ಅಕಾಲಿಕ ನಿಧನದಿಂದ ತೆರವಾದ ಸ್ಥಾನಕ್ಕೆ ಉಪ ಚುನಾವಣೆ ನಡೆಯುತ್ತಿದೆ. ಎಚ್. ಡಿ. ದೇವೇಗೌಡರಿಗೆ ಎಂ. ಸಿ. ಮನಗೂಳಿ ಆಪ್ತರಾಗಿದ್ದರು. ಆದರೆ ಎಂ. ಸಿ. ಮನಗೂಳಿ ನಿಧನದ ಬಳಿಕ ಅವರ ಕುಟುಂಬ ಸದಸ್ಯರು ಕಾಂಗ್ರೆಸ್ ಸೇರಿದ್ದಾರೆ.












Click it and Unblock the Notifications