ವಿಜಯಪುರದಲ್ಲಿ ಲಿಂಗಾಯತ ಸಮಾವೇಶ, 3 ನಿರ್ಣಯ ಮಂಡನೆ
ವಿಜಯಪುರ, ಡಿಸೆಂಬರ್. 10 : 'ತಲೆ ಕೆಳಗೆ ಮಾಡಿ, ಕಾಲು ಮೇಲೆ ಮಾಡಿದರೂ ಲಿಂಗಾಯತ ಧರ್ಮ ಆಗುವುದನ್ನು ತಡೆಯಲು ಸಾಧ್ಯವಿಲ್ಲ' ಎಂದು ಜಲಸಂಪನ್ಮೂಲ ಸಚಿವ ಎಂ.ಬಿ.ಪಾಟೀಲ್ ಹೇಳಿದರು.
ಭಾನುವಾರ ವಿಜಯಪುರದ ಡಾ.ಬಿ.ಆರ್.ಅಂಬೇಡ್ಕರ್ ಕ್ರೀಡಾಂಗಣದ ಡಾ.ಫ.ಗು.ಹಳಕಟ್ಟಿ ವೇದಿಕೆಯಲ್ಲಿ 'ಲಿಂಗಾಯತ ಧರ್ಮ ಸ್ವತಂತ್ರ ಧರ್ಮ' ಎಂಬ ಘೋಷವಾಕ್ಯದಲ್ಲಿ ಬೃಹತ್ ಸಮಾವೇಶ ನಡೆಯಿತು.
ಒಂದು ಲಕ್ಷಕ್ಕೂ ಅಧಿಕ ಜನರು ಸಮಾವೇಶದಲ್ಲಿ ಪಾಲ್ಗೊಂಡಿದ್ದರು. ಶ್ವೇತ ವರ್ಣದ ಬಸವೇಶ್ವರ ಪ್ರತಿಮೆಗೆ ಪುಷ್ಪಾರ್ಚನೆ ಮಾಡುವ ಮೂಲಕ ಸಮಾವೇಶಕ್ಕೆ ಚಾಲನೆ ನೀಡಲಾಯಿತು. 'ಒಬ್ಬ ಲಿಂಗಾಯತ ಕೋಟಿ ಲಿಂಗಾಯತ' ಎಂಬ ಜಯ ಘೋಷದೊಂದಿಗೆ ಕಾರ್ಯಕ್ರಮಕ್ಕೆ ಚಾಲನೆ ಸಿಕ್ಕಿತ್ತು.
ಸಮಾವೇಶದಲ್ಲಿ ಮಾತನಾಡಿದ ಎಂ.ಬಿ.ಪಾಟೀಲ ಅವರು, 'ಲಿಂಗಾಯತ ಧರ್ಮಕ್ಕಾಗಿ ರಾಜ್ಯ ಸರ್ಕಾರಕ್ಕೆ ಮನವಿ ಸಲ್ಲಿಸಲಾಗಿದೆ. ರಾಜ್ಯ ಹಾಗೂ ಕೇಂದ್ರ ಸರ್ಕಾರಗಳು ಮಾನ್ಯತೆ ನೀಡುತ್ತವೆ. ಒಂದು ವೇಳೆ ನೀಡದಿದ್ದರೆ ಸುಪ್ರೀಂಕೋರ್ಟ್ ನಲ್ಲಿ ಮಾನ್ಯತೆ ಸಿಗುತ್ತದೆ' ಎಂದರು...

ನಾವು ಹೋರಾಟ ಬಿಟ್ಟಿಲ್ಲ
ಸಮಾವೇಶದಲ್ಲಿ ಮಾತನಾಡಿದ ಬಸವರಾಜ ಹೊರಟ್ಟಿ ಅವರು, 'ಲಿಂಗಾಯತ ಹೋರಾಟಕ್ಕೆ ಮುಂದಾದಾಗ ಕೊಲೆ ಬೆದರಿಕೆ ಬಂದಿತ್ತು. ಆದರೂ ನಾವು ಹೋರಾಟ ಬಿಟ್ಟಿಲ್ಲ. ಲಿಂಗಾಯತ ಧರ್ಮ ಆಗಲೇಬೇಕಿದೆ. ಜಗತ್ತಿನಲ್ಲಿ ಎರಡು ಶಕ್ತಿಗಳನ್ನು ತಡೆಯಲಾಗುವುದಿಲ್ಲ. ಆಗ ನಮಗೆ ತಿಳುವಳಿಕೆ ಬಂದಿರಲಿಲ್ಲ, ಈಗ ತಿಳುವಳಿಕೆ ಬಂದಿದೆ. ಅದಕ್ಕಾಗಿ ಲಿಂಗಾಯತ ಧರ್ಮದ ಹೋರಾಟ ನಡೆಸಲಾಗುತ್ತಿದೆ' ಎಂದರು.

ಸ್ವತಂತ್ರ ಧರ್ಮದ ಅವಶ್ಯಕತೆ ಇದೆ
ಸಮಾವೇಶದಲ್ಲಿ ಮಾತನಾಡಿ ವೈದ್ಯಕೀಯ ಶಿಕ್ಷಣ ಸಚಿವ ಶರಣಪ್ರಕಾಶ ಪಾಟೀಲ್, 'ವಚನ ಸಾಹಿತ್ಯವೇ ನಮ್ಮ ಧರ್ಮಗ್ರಂಥ, ವಚನಗಳೇ ನಮ್ಮ ಆಚರಣೆಗಳು. ಲಿಂಗಾಯತರ ಮೂರನೇ ಪೀಳಿಗೆ ಯಾವ ರೀತಿಯಾಗಿ ಬದುಕುತ್ತಿದ್ದಾರೆ ಎಂಬುದನ್ನು ಅರ್ಥ ಮಾಡಿಕೊಳ್ಳಬೇಕು. ನಮ್ಮ ನಡೆ-ನುಡಿ ಒಂದಾಗಿ ಸನ್ಮಾರ್ಗದಲ್ಲಿ ನಡೆಯಬೇಕಾದರೆ ಲಿಂಗಾಯತ ಸ್ವತಂತ್ರ ಧರ್ಮದ ಅವಶ್ಯಕತೆ ಇದೆ' ಎಂದರು.

ಈ ಹೋರಾಟದಲ್ಲಿ ಗೆದ್ದೇ ಗೆಲ್ಲುವೆವು
ಸಚಿವ ವಿನಯ ಕುಲಕರ್ಣಿ ಮಾತನಾಡಿ, 'ಲಿಂಗಾಯತ ಪ್ರತ್ಯೇಕ ಹೋರಾಟದಲ್ಲಿ ಗೆದ್ದೆ ತೀರುತ್ತೇವೆ. ವೀರಶೈವರ ಲಿಂಗಾಯತ ಮಾನ್ಯತೆ ನಾಲ್ಕು ಸಲ ತಿರಸ್ಕೃತ ಗೊಂಡಿದೆ. ಮತ್ತೆ ವೀರಶೈವ ಲಿಂಗಾಯತ ಎಂದು ಅರ್ಜಿ ನಾವು ಸಲ್ಲಿಸಲು ಹುಚ್ಚರಲ್ಲ. ಲಿಂಗಾಯತರಿಗೆ ಅನ್ಯಾಯವಾಗಿದೆ, ಈಗ ಹೋರಾಟದ ಮೂಲಕ ಸಸಿ ಬೆಳೆಸಿದ್ದೇವೆ. ನಾಳೆ ಫಲ ತಿನ್ನಲು ಎಲ್ಲರೂ ಬರ್ತಾರೆ' ಎಂದರು.

ನಮ್ಮ ಹೋರಾಟ ಯಾವುದೇ ಸಮುದಾಯದ ವಿರುದ್ಧವಲ್ಲ
'ನಮ್ಮ ಹೋರಾಟ ಯಾವುದೇ ಸಮುದಾಯ, ಪಕ್ಷದ ವಿರುದ್ಧ ಅಲ್ಲ. ನಮ್ಮ ಹೋರಾಟ ನಮ್ಮ ಹಕ್ಕು ಪಡೆಯಲು ಮಾತ್ರ. ಗೆಲ್ಲುವವರೆಗೂ ಹೋರಾಡುವ ಸಂಕಲ್ಪ ಮಾಡೋಣ. ಲಿಂಗಾಯತ ಧರ್ಮದ ಹೋರಾಟ ಮಾಡುವ ಮೂಲಕ ಗಿಡ ನೆಡುತ್ತಿದ್ದೇವೆ. ನಾಳೆ ಮರವಾಗಿ ಹಣ್ಣು ಕೊಡುವಾಗ ಹಣ್ಣು ತಿನ್ನಲು ಎಲ್ಲರೂ ಬರುತ್ತಾರೆ' ಎಂದರು.

ಸಮಾವೇಶದಲ್ಲಿ ಮಂಡಿಸಿದ ನಿರ್ಣಯಗಳು
* 1881ರವರೆಗೆ ಲಿಂಗಾಯತ ಧರ್ಮ ಅಸ್ತಿತ್ವದಲ್ಲಿತ್ತು
* 1881ರಲ್ಲಿ ಲಿಂಗಾಯತ ಧರ್ಮ ವಿಸರ್ಜಿಸಿ ಹಿಂದೂ ಧರ್ಮಕ್ಕೆ ಸೇರಿಸಲಾಯಿತು.
* ಈ ಹಿನ್ನಲೆಯಲ್ಲಿ ಪ್ರತ್ಯೇಕ ಧರ್ಮದ ಮಾನ್ಯತೆ ನೀಡಬೇಕು












Click it and Unblock the Notifications