ವಿಜಯಪುರ ಬೆಚ್ಚಿ ಬೀಳಿಸಿದ್ದ ಚಡಚಣ ಸಹೋದರರ ಹತ್ಯೆಗೆ 1 ವರ್ಷ
ವಿಜಯಪುರ, ಅಕ್ಟೋಬರ್ 30 : ವಿಜಯಪುರವನ್ನು ಬೆಚ್ಚಿ ಬೀಳಿಸಿದ್ದ ಧರ್ಮರಾಜ್ ಚಡಚಣ ಮತ್ತು ಗಂಗಾಧರ ಚಡಚಣ ಹತ್ಯೆಯಾಗಿ ಇಂದಿಗೆ ಒಂದು ವರ್ಷ. ಈ ಪ್ರಕರಣದಲ್ಲಿ ಹಲವು ಪೊಲೀಸ್ ಅಧಿಕಾರಿಗಳು ಭಾಗಿಯಾಗಿದ್ದು, ಸಿಐಡಿ ಪ್ರಕರಣದ ತನಿಖೆಯನ್ನು ನಡೆಸುತ್ತಿದೆ.
ಇಂಡಿ ತಾಲೂಕಿನ ಉಮರಾಣಿ ಗ್ರಾಮದ ಚಡಚಣ ಸಹೋದರರ ಹತ್ಯೆ ಪ್ರಕರಣ ರಾಜ್ಯಾದ್ಯಂತ ಚರ್ಚೆಗೆ ಗ್ರಾಸವಾಗಿತ್ತು. ವ್ಯವಸ್ಥಿತವಾಗಿ ಈ ಪ್ರಕರಣವನ್ನು ಮುಚ್ಚಿ ಹಾಕುವ ಪ್ರಯತ್ನ ನಡೆದಿತ್ತು. ಆದರೆ, ಚಡಚಣ ಸಹೋದರರ ತಾಯಿ ವಿಮಲಾಬಾಯಿ ಮಲ್ಲಿಕಾರ್ಜುನ ಚಡಚಣ ನಡೆಸಿದ ಹೋರಾಟದಿಂದ ಪ್ರಕರಣ ಬೆಳಕಿಗೆ ಬಂದಿತು.
ಗಂಗಾಧರ ಚಡಚಣ ನಿಗೂಢ ಹತ್ಯೆ : ಚಾರ್ಜ್ ಶೀಟ್ನಲ್ಲೇನಿದೆ?
2017ರ ಅಕ್ಟೋಬರ್ 30ರಂದು ಬೆಳಗ್ಗೆ 8.15ಕ್ಕೆ ವಿಜಯಪುರದ ಕೊಂಕಣಗಾಂವ ಗ್ರಾಮದಲ್ಲಿ ನಡೆದ ಎನ್ಕೌಂಟರ್ನಲ್ಲಿ ಧರ್ಮರಾಜ್ ಚಡಚಣ ಮೃತಪಟ್ಟಿದ್ದ. ಎನ್ಕೌಂಟರ್ ಬಳಿಕ ಧರ್ಮರಾಜ್ ಚಡಚಣ ಸಹೋದರ ಗಂಗಾಧರ ಚಡಚಣನನ್ನು ಬಂಧಿಸಲಾಗಿತ್ತು.
ಧರ್ಮರಾಜ್ ಚಡಚಣ ಎನ್ಕೌಂಟರ್ ತನಿಖೆ ಆರಂಭಿಸಿದ ಸಿಐಡಿ
ಪೊಲೀಸ್ ವಶದಲ್ಲಿದ್ದ ಗಂಗಾಧರ ಚಡಚಣ ನಿಗೂಢವಾಗಿ ನಾಪತ್ತೆಯಾಗಿ, ಕೊಲೆ ಯಾಗಿದ್ದ. ಶವದ ಒಂದು ತುಂಡು ಸಹ ಸಿಗದಂತೆ ವ್ಯವಸ್ಥಿತವಾಗಿ ಕೊಲೆ ಪ್ರಕರಣ ಮುಚ್ಚಿ ಹಾಕಲಾಗಿತ್ತು. ಆದರೆ, ಈಗ ಪೊಲೀಸ್ ಅಧಿಕಾರಿಗಳು ಸೇರಿ 13 ಆರೋಪಿಗಳನ್ನು ಬಂಧಿಸಲಾಗಿದೆ.
ಗಂಗಾಧರ ಚಡಚಣ ಹತ್ಯೆ : ಸಿಐಡಿ ಕೈಗೆ ಸಿಕ್ಕಿಬಿದ್ದ ಎಂ.ಬಿ.ಅಸೋಡೆ
ಪೊಲೀಸ್ ಎನ್ಕೌಂಟರ್
ವಿಜಯಪುರದ ಇಂಡಿ ತಾಲೂಕಿನ ಕೊಂಕಣಗಾಂವ ಗ್ರಾಮದಲ್ಲಿ ಭೀಮಾ ತೀರದ ಹಂತಕ ಧರ್ಮರಾಜ್ ಚಡಚಣ ಮತ್ತು ಗಂಗಾಧರ ಚಡಚಣ ಅವಿತಿರುವ ಮಾಹಿತಿ ಅಂದಿನ ಚಡಚಣ ಸಿಪಿಐ ಗೋಪಾಲ ಹಳ್ಳೂರಗೆ ಸಿಕ್ಕಿತ್ತು.
ಅಕ್ರಮವಾಗಿ ಶಸ್ತ್ರಾಸ್ತ್ರ ಸಂಗ್ರಹಿಸಿದ್ದಾರೆ ಎಂಬ ಆರೋಪದಲ್ಲಿ ಅವರನ್ನು ಬಂಧಿಸಲು ಪೊಲೀಸರು ತೆರಳಿದ್ದರು. ಆದರೆ, ಆಗ ಪೊಲೀಸರ ಮೇಲೆ ಗುಂಡಿನ ದಾಳಿ ನಡೆಯಿತು. ಪ್ರತಿದಾಳಿಯಲ್ಲಿ ಧರ್ಮರಾಜ ಚಡಚಣ ಮೃತಪಟ್ಟಿದ್ದ. ಗಂಗಾಧರ ಚಡಚಣನನ್ನು ಪೊಲೀಸರು ಬಂಧಿಸಿದ್ದರು.
ಗಂಗಾಧರ ಚಡಚಣ ನಾಪತ್ತೆ
ಮರಣೋತ್ತರ ಪರೀಕ್ಷೆ ಬಳಿಕ ಧರ್ಮರಾಜ್ ಚಡಚಣ ಶವವನ್ನು ಕುಟುಂಬದವರಿಗೆ ಹಸ್ತಾಂತರ ಮಾಡಲಾಯಿತು. ಆದರೆ, ಪೊಲೀಸರ ವಶದಲ್ಲಿದ್ದ ಗಂಗಾಧರ ಚಡಚಣ ನಾಪತ್ತೆಯಾಗಿದ್ದರು. ಪುತ್ರನನ್ನು ಅಪಹರಣ ಮಾಡಿ ಕೊಲೆ ಮಾಡಿದ್ದಾರೆ ಎಂದು ವಿಮಲಾಬಾಯಿ ಮಲ್ಲಿಕಾರ್ಜುನ ಚಡಚಣ ಆರೋಪಿಸಿದರು. ಪೊಲೀಸರಿಗೆ ಹಣ ಕೊಟ್ಟು ಧರ್ಮರಾಜ್ ಚಡಚಣ ಎನ್ಕೌಂಟರ್ ಮಾಡಿಸಲಾಗಿದೆ. ಮಹಾದೇವ ಭೈರಗೊಂಡ ಇದರ ಹಿಂದಿದ್ದಾನೆ ಎಂದು ಆರೋಪಿಸಿದ್ದರು.
ಆರೋಪ ನಿರಾಕರಿಸಿದ್ದ ಭೈರಗೊಂಡ
ವಿಮಲಾಬಾಯಿ ಮಲ್ಲಿಕಾರ್ಜುನ ಚಡಚಣ ಎಲ್ಲಾ ಆರೋಪವನ್ನು ಮಹಾದೇವ ಭೈರಗೊಂಡ ತಳ್ಳಿಹಾಕಿದ್ದ. ಧರ್ಮರಾಜ ಚಡಚಣ ಎನ್ಕೌಂಟರ್ ಮತ್ತು ಗಂಗಾಧರ ಚಡಚಣ ಹತ್ಯೆಯ ಹಿಂದೆ ನನ್ನ ಕೈವಾಡವಿಲ್ಲ ಎಂದು ಸ್ಪಷ್ಟನೆ ನೀಡಿದ್ದರು. ತಾನು ಉದ್ಯಮ ಮತ್ತು ಶಿಕ್ಷಣ ಸಂಸ್ಥೆಗಳನ್ನು ನಡೆಸುತ್ತಿದ್ದೇನೆ ಎಂದು ಹೇಳಿದ್ದರು. ಆದರೆ, ಈಗ ಗಂಗಾಧರ ಚಡಚಣ ಹತ್ಯೆ ಪ್ರಕರಣದಲ್ಲಿ ಅವರೇ ಪ್ರಮುಖ ಆರೋಪಿಯಾಗಿದ್ದು ಜೈಲಿನಲ್ಲಿದ್ದಾರೆ.
ಕಾನೂನು ಹೋರಾಟ ಆರಂಭ
ಪುತ್ರರನ್ನು ಕಳೆದುಕೊಂಡ ವಿಮಲಾಬಾಯಿ ಮಲ್ಲಿಕಾರ್ಜುನ ಚಡಚಣ ಕಾನೂನು ಹೋರಾಟ ಆರಂಭಿಸಿದರು. ಕರ್ನಾಟಕ ಹೈಕೋರ್ಟ್ನ ಕಲಬುರಗಿ ಪೀಠಕ್ಕೆ ಹೆಬಿಯಸ್ ಕಾರ್ಪಸ್ ಅರ್ಜಿ ಹಾಕಿದರು. ಗಂಗಾಧರ ಚಡಚಣನನ್ನು ಹುಡುಕಿಕೊಡುವಂತೆ ಮನವಿ ಮಾಡಿದರು. ಹೈಕೋರ್ಟ್ ವಿಜಯಪುರ ಪೊಲೀಸರಿಗೆ ಈ ಕುರಿತು ನೋಟಿಸ್ ನೀಡಿತು.
ದಕ್ಷ ಅಧಿಕಾರಿ ಅಲೋಕ್ ಕುಮಾರ್
ವಿಮಲಾಬಾಯಿ ಮಲ್ಲಿಕಾರ್ಜುನ ಚಡಚಣ ಅವರು ಅಂದಿನ ಉತ್ತರ ವಲಯ ಐಜಿಪಿ ಅಲೋಕ್ ಕುಮಾರ್ ಅವರನ್ನು ಭೇಟಿಯಾಗಿ ಗಂಗಾಧರ ಚಡಚಣ ಪ್ರಕರಣದ ಬಗ್ಗೆ ದೂರು ನೀಡಿದರು. ಆಗ ಪೊಲೀಸರು ಅಂದಿನ ಚಡಚಣ ಪಿಎಸ್ಐ ಗೋಪಾಲ ಹಳ್ಳೂರ ಸೇರಿದಂತೆ ಮೂವರು ಪೇದೆಗಳನ್ನು ಬಂಧಿಸಿ ವಿಚಾರಣೆ ನಡೆಸಿದಾಗ ಗಂಗಾಧರ ಚಡಚಣ ಹತ್ಯೆಯಾಗಿರುವುದು ಬೆಳಕಿಗೆ ಬಂದಿತು.
ಸಿಐಡಿ ತನಿಖೆ ನಡೆಸುತ್ತಿದೆ
ಐಜಿಪಿ ಅಲೋಕ್ ಕುಮಾರ್ ಅವರು ವಿಜಯಪುರ ಎಸ್ಪಿ ಪ್ರಕಾಶ್ ನಿಕ್ಕಂ ಮೂಲಕ ಪೊಲೀಸ್ ಮಹಾನಿರ್ದೇಶಕರಿಗೆ ಪತ್ರ ಬರೆಸಿ ಗಂಗಾಧರ ಚಡಚಣ ಹತ್ಯೆ ಪ್ರಕರಣವನ್ನು ಸಿಐಡಿ ತನಿಖೆಗೆ ವಹಿಸುವಂತೆ ನೋಡಿಕೊಂಡರು. ಧರ್ಮರಾಜ್ ಚಡಚಣ ಹತ್ಯೆ ಪ್ರಕರಣವನ್ನು ಸಹ ಈಗ ಸಿಐಡಿಗೆ ವಹಿಸಲಾಗಿದೆ. ಗಂಗಾಧರ ಚಡಚಣ ಹತ್ಯೆ ಪ್ರಕರಣದಲ್ಲಿ ಪೊಲೀಸ್ ಅಧಿಕಾರಿಗಳೂ ಸೇರಿ 13 ಜನರನ್ನು ಸಿಐಡಿ ಬಂಧಿಸಿದ್ದು, ಚಾರ್ಜ್ ಶೀಟ್ ಸಲ್ಲಿಕೆ ಮಾಡಿದೆ.