ಶೋಭಾಗೆ ನಾಲಿಗೆ ಮೇಲೆ ಹಿಡಿತವಿಲ್ಲ: ಎಚ್.ಆಂಜನೇಯ
ವಿಜಯಪುರ, ಡಿಸೆಂಬರ್ 29: ಶೋಭಾ ಕರಂದ್ಲಾಜೆ ಮುಖ್ಯಮಂತ್ರಿಗಳ ಬಗ್ಗೆ ಹಗುರವಾಗಿ ಮಾತನಾಡುತ್ತಿದ್ದಾರೆ 'ಶೋಭಾಗೆ ನಾಲಿಗೆ ಮೇಲೆ ಹಿಡಿತವಿಲ್ಲ' ಎಂದು ಸಮಾಜ ಕಲ್ಯಾಣ ಇಲಾಖೆ ಸಚಿವ ಎಚ್.ಆಂಜನೇಯ ಹೇಳಿದರು.
ಸಾಮೂಹಿಕ ಅತ್ಯಾಚಾರ ಮತ್ತು ಹತ್ಯೆಗೊಳಗಾದ ಪಟ್ಟಣದ ಬಾಲಕಿಯ ಮನೆಗೆ ಇಂದು ಸಮಾಜ ಕಲ್ಯಾಣ ಇಲಾಖೆ ಸಚಿವ ಎಚ್.ಆಂಜನೇಯ ಭೇಟಿ ನೀಡಿದ್ದ ಅವರು ಸುದ್ದಿಗಾರರೊಂದಿಗೆ ಮಾತನಾಡಿ ಬಿಜೆಪಿ ನಾಯಕರ ಸಂಸ್ಕಾರ ಅವರ ಮಾತಿನ ಮೂಲಕ ಹೊರಬರುತ್ತಿದೆ ಎಂದರು.
ಮೃತ ಬಾಲಕಿಯ ಕುಟುಂಬಕ್ಕೆ ಸಾಂತ್ವನ ಹೇಳಿ ಇದೊಂದು ಅಮಾನವೀಯ ಘಟನೆ, ಇಂತಹಾ ಘಟನೆ ನಡೆದಿರುವುದು ದುರದೃಷ್ಟಕರ ಎಂದರು.
ಜನತೆ ಮೃತ ಬಾಲಕಿ ಕುರಿತ ತೋರಿದ ಪ್ರೀತಿಗೆ ಧನ್ಯವಾದ ಅರ್ಪಿಸಿದ ಅವರು ಇಂಥ ಘಟನೆ ತಡೆಯಲು ಕಠಿಣ ಕಾನೂನು ಮಾಡಲು ತಜ್ಞರ ಜೊತೆಗೆ ಚರ್ಚಿಸುವೆ ಎಂದು ಭರವಸೆ ನೀಡಿದರು.
ಈಗಾಗಲೇ ಸಿ.ಎಂ ಸಿದ್ದರಾಮಯ್ಯ ಹಾಗೂ ಸಚಿವ ಎಂ.ಬಿ. ಪಾಟೀಲ್ ಭೇಟಿ ನೀಡಿ ಸಾಂತ್ವನ ಹೇಳಿ ಸೂಕ್ತ ಪರಿಹಾರ ನೀಡಿದ್ದಾರೆ, ಮೃತ ಬಾಲಕಿ ತಾಯಿಗೆ ಜಿಲ್ಲಾಡಳಿತದ ವತಿಯಿಂದ ಸಮಾಜ ಕಲ್ಯಾಣ ಇಲಾಖೆಯಲ್ಲಿ ತಾತ್ಕಾಲಿಕ ನೌಕರಿ ನೀಡಲಾಗುತ್ತದೆ ಎಂದು ಅವರು ಭರವಸೆ ನೀಡಿದರು.

ನಾಲಗೆ ಹಿಡಿತದಲ್ಲಿರಲಿ
ಶೋಭಾ ಕರಂದ್ಲಾಜೆ ಅವರ ಬಗ್ಗೆ ಕಿಡಿ ಕಾರಿದ ಎಚ್.ಆಂಜನೇಯ 'ಶೋಭಾ ಕೆಲಸ ಬರೀ ಸಂಘರ್ಷಕ್ಕೆ ಎಡೆಮಾಡಿ ಕೊಡುವಂತದ್ದು, ಹಿಂಸೆಗೆ ಪ್ರಚೋದನೆ ನೀಡುವಂತಹಾ ಹೇಳಿಕೆ ನೀಡುತ್ತಾರೆ, ಶೋಭಾಗೆ ನಾಲಿಗೆ ಇದೀಯೋ ಇಲ್ಲವೋ ಅನ್ನೋದು ನಮಗೆ ಗೊತ್ತಿಲ್ಲ ಸಂಸದೇ ಶೋಭಾ ಮಾತನಾಡುವ ಭಾಷೆ ಸರಿಯಿಲ್ಲ ಅವರು ತಿದ್ದಿಕೊಳ್ಳಬೇಕು, ನಾಲಗೆ ಹಿಡಿತದಲ್ಲಿಟ್ಟುಕೊಳ್ಳಬೇಕು ಎಂದು ಅವರು ಹರಿಹಾಯ್ದರು.

ಮಾತನಾಡುವಾಗ ಎಚ್ಚರಿಕೆ
ಸಿದ್ದರಾಮಯ್ಯ ಅವರೇ ಸಿಎಂ ಆಗುತ್ತಾರೆಂದು ಹತಾಶೆಗೊಂಡು ಶೋಭಾ ಕರಂದ್ಲಾಜೆ ಅವರು ಹೀಗೆ ಬಾಯಿಗೆ ಬಂದಂತೆ ಮಾತನಾಡುತ್ತಿದ್ದಾರೆ, ಸಿಎಂ ಸಿದ್ದರಾಮಯ್ಯ ಬಗ್ಗೆ ಹಗರುವಾಗಿ ಮಾತನಾಡಬಾರದು ಎಚ್ಚರವಿರಲಿ ಎಂದು ಎಚ್.ಆಂಜನೇಯ ಹೇಳಿದರು.

ಮಲತಾಯಿ ಧೋರಣೆ ಬೇಡ
ಮಹದಾಯಿ ವಿಚಾರವಾಗಿ ಮಾಧ್ಯಮದವರೊಂದಿಗೆ ಮಾತನಾಡಿದ ಸಚಿವ ಆಂಜನೇಯ ಪ್ರಧಾನಿ ನರೇಂದ್ರ ಮೋದಿ ಮಧ್ಯೆ ಪ್ರವೇಶಿಸಿ ಮಹದಾಯಿ ವಿವಾದ ಇತ್ಯರ್ಥಗೊಳಿಸಬೇಕು ಮೂರು ರಾಜ್ಯದ ಸಿಎಂಗಳನ್ನು ಕರೆಯಿಸಿ ಮಹದಾಯಿ ನೀರಿನ ವಿಚಾರ ಬಗೆಹರಿಸಬೇಕು, ಗೋವಾ ಸಿಎಂ ಯಡಿಯೂರಪ್ಪಗೆ ಪತ್ರ ಕೊಟ್ರೆ ನೀರಿನ ಸಮಸ್ಯೆ ಬಗೆಹರಿಯುವುದಿಲ್ಲ , ಪ್ರಧಾನಿ ನರೇಂದ್ರ ಮೋದಿಯ ಆಡಳಿತ ಇದೆ ಎಂದು ಮಲತಾಯಿ ಧೋರಣೆ ಮಾಡಬಾರದು ಎಲ್ಲ ನಾಡಿನ ಜನರನ್ನು ಸಮಾನವಾಗಿ ಕಾಣಬೇಕು ಎಂದರು.

ನಾವೇನು ಪಾಕಿಸ್ತಾನದವರಾ?
ಪ್ರಧಾನಿ ಅವರು ಜನರ ಕಣ್ಣೀರನ್ನು ಒರೆಸುವ ಹೃದಯವಂತಿಕೆಯ ಕೆಲಸ ಮಾಡಬೇಕು, ನೀರು ಕೊಡಲಿಕ್ಕೆ ರಾಜಕೀಯ ಮಾಡಬಾರದು, ನಾವೇನು ಬೇರೆ ದೇಶದವರಾ, ನಾವೇನು ಪಾಕಿಸ್ತಾನಗಳಾ.? ಹಾಗಿದ್ದ ಮೇಲೆ ಮಧ್ಯಸ್ಥಿಕೆ ವಹಿಸಲು ಏನು ಅಡ್ಡಿ ಎಂದು ಅವರು ಪ್ರಶ್ನಿಸಿದರು.












Click it and Unblock the Notifications