ಎಂ.ಬಿ.ಪಾಟೀಲ್ ಸಿಎಂ ಆಗಲಿ: ಬಿಜೆಪಿ ಶಾಸಕರಿಂದ ಶಾಕಿಂಗ್ ಹೇಳಿಕೆ!
ವಿಜಯಪುರ, ಜುಲೈ 02: ಗೃಹ ಸಚಿವರಾಗಿರುವ ಎಂ.ಬಿ.ಪಾಟೀಲ್ ಅವರು ಕರ್ನಾಟಕದ ಮುಖ್ಯಮಂತ್ರಿ ಆಗಬೇಕೆಂದು ಬಿಜೆಪಿಯ ಪ್ರಮುಖ ವ್ಯಕ್ತಿಯೊಬ್ಬರು ಹಾರೈಸಿದ್ದಾರೆ.
ಹೌದು, ಇಂದು ವಿಜಯಪುರದಲ್ಲಿ ನಡೆದ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದ ಗೋವಾ ಬಿಜೆಪಿ ಸಚಿವ ಮತ್ತು ವಿಧಾನಸಭೆ ಉಪ ಸಭಾಧ್ಯಕ್ಷ ಮೈಕಲ್ ಲೋಬೋ ಅವರು ಎಂ.ಬಿ.ಪಾಟೀಲ್ ಅವರು ಕರ್ನಾಟಕದ ಸಿಎಂ ಆಗಲಿ ಎಂದು ಹಾರೈಸಿದ್ದಾರೆ.
ಎಂ.ಬಿ.ಪಾಟೀಲ್ ಅವರು ಪ್ರಸ್ತುತ ಕಾಂಗ್ರೆಸ್ನಲ್ಲಿದ್ದಾರೆ, ರಾಜಕೀಯದಲ್ಲಿ ಯಾವಾಗ ಏನಾಗುತ್ತದೆಯೋ ಗೊತ್ತಿಲ್ಲ. ಆದರೆ ತಾಯಿ ದುರ್ಗೆಯ ಆಶೀರ್ವಾದ ಅವರ ಮೇಲಿದೆ. ಅವರು ಒಂದಲ್ಲಾ ಒಂದು ದಿನ ರಾಜ್ಯದ ಸಿಎಂ ಆಗಿಯೇ ತೀರುತ್ತಾರೆ ಎಂದು ಭರವಸೆ ವ್ಯಕ್ತಪಡಿಸಿದ್ದಾರೆ.
ಮೈಕಲ್ ಲೋಬೊ ಮಾತ್ರವಲ್ಲದೆ, ರಾಜ್ಯ ಸರ್ಕಾರ ಸಚಿವ ಆರ್.ಶಂಕರ್ ಸಹ ಇದೇ ಅಭಿಪ್ರಾಯವನ್ನು ವ್ಯಕ್ತಪಡಿಸಿದ್ದು, ಎಂ.ಬಿ.ಪಾಟೀಲ್ ಅವರಿಗೆ ವಯಸ್ಸಿದೆ, ಅವರಿಗೆ ಅನುಭವವೂ ಇದೆ, ಅವರು ಗೃಹ ಮಂತ್ರಿ ಹುದ್ದೆಯಿಂದ ಮೇಲಕ್ಕೆ ಏರಿ ರಾಜ್ಯದ ಸಿಎಂ ಆಗಬೇಕು ಎಂದು ಹಾರೈಸಿದರು.

'ಎಂ.ಬಿ.ಪಾಟೀಲ್ ಬರದ ಜಿಲ್ಲೆಗೆ ನೀರು ಹರಿಸಿದ್ದಾರೆ'
ಎಂ.ಬಿ.ಪಾಟೀಲ್ ಅವರು ಜಲ ಸಂಪನ್ಮೂಲ ಸಚಿವರಾಗಿದ್ದಾಗ ಬರದ ಜಿಲ್ಲೆಗಳಿಗೆ ನೀರು ಒದಗಿಸುವ ಕಾರ್ಯ ಮಾಡಿದರು. ಅವರು ಪ್ರತಿ ಬಾರಿ ಚುನಾವಣೆಗೆ ನಿಂತಾಗಲೂ ಕಳೆದ ಬಾರಿಗಿಂತಲೂ ಹೆಚ್ಚಿನ ಮತಗಳಿಂದ ಗೆಲ್ಲಲಿ, ಅವರು ಕರ್ನಾಟಕದ ಸಿಎಂ ಆಗಲಿ ಎಂದು ಹೇಳಿದರು.

ಎಂಬಿ ಪಾಟೀಲ್ ಪ್ರತಿಕ್ರಿಯೆ
ಇದಕ್ಕೆ ಪ್ರತಿಕ್ರಿಯಿಸಿದ ಸಚಿವ ಎಂ.ಬಿ.ಪಾಟೀಲ್, ಮೈಕಲ್ ಲೋಬೊ ನನ್ನ ಆತ್ಮೀಯ ಗೆಳೆಯರು, ಅವರು ಬಿಜೆಪಿಯಲ್ಲಿದ್ದಾರೆ, ನಾನು ಕಾಂಗ್ರೆಸ್ ನಲ್ಲಿದ್ದೀನಿ, ಗೆಳೆತನಕ್ಕಾಗಿ ಅವರು ಕಾರ್ಯಕ್ರಮಕ್ಕೆ ಬಂದು ನನಗೆ ಹಾರೈಸಿದ್ದಾರೆ ಎಂದು ಹೇಳಿದರು.

ಸಿಎಂ ಆಗುವುದೆಂದರೆ ಸುಮ್ಮನೆ ಅಲ್ಲ: ಎಂಬಿ ಪಾಟೀಲ್
ಸಿಎಂ ಆಗುವುದೆಂದರೆ ಸಮ್ಮನೆ ಅಲ್ಲ, ಜನ ನಮಗೆ ಬಹುಮತ ಕೊಡಬೇಕು, ಸ್ವಂತ ಬಲದಿಂದ ಅಧಿಕಾರಕ್ಕೆ ಬರಬೇಕು, ಶಾಸಕರಿರುತ್ತಾರೆ, ಮುಖ್ಯಸ್ಥರಿರುತ್ತಾರೆ ಅವರೆಲ್ಲಾ ನಿರ್ಧಾರ ಮಾಡುತ್ತಾರೆ, ಹೈಕಮಾಂಡ್ ಒಪ್ಪಬೇಕು ಎಲ್ಲರೂ ಒಪ್ಪಿದರೆ ಅಷ್ಟೆ ಸಿಎಂ ಆಗಲು ಸಾಧ್ಯ ಎಂದು ಹೇಳಿದರು.

ಈ ಹಿಂದೆಯೂ ಇದೇ ಕೂಗು ಕೇಳಿಬಂದಿತ್ತು
ಲಿಂಗಾಯತ ಪ್ರತ್ಯೇಕ ಧರ್ಮ ಹೊರಾಟದ ಸಂದರ್ಭದಲ್ಲಿ ಕೆಲವು ಲಿಂಗಾಯತ ಧರ್ಮ ಹೋರಾಟಗಾರರು ಎಂ.ಬಿ.ಪಾಟೀಲ್ ಅವರನ್ನು ಸಿಎಂ ಮಾಡಬೇಕು ಎಂದು ಹೇಳಿದ್ದರು. ಪಾಟೀಲ್ ಅವರು ಸಹ ನಾನು ಸಿಎಂ ಆಕಾಂಕ್ಷೆ ಆದರೆ ಈಗಲೇ ಅಲ್ಲ ಎಂದು ಹೇಳಿದ್ದರು.












Click it and Unblock the Notifications