ಲಿಂಗಾಯತ ಪ್ರತ್ಯೇಕ ಧರ್ಮ ಹೇಳಿಕೆ: ಡಿಕೆಶಿ ಮೇಲೆ ಎಂಬಿ.ಪಾಟೀಲ್ ಕಿಡಿ
ಬೆಂಗಳೂರು, ಅಕ್ಟೋಬರ್ 18: ಲಿಂಗಾಯತ ಪ್ರತ್ಯೇಕ ಧರ್ಮ ವಿಚಾರದಲ್ಲಿ ಹಸ್ತಕ್ಷೇಪ ಮಾಡಿ ಸಿದ್ದರಾಮಯ್ಯ ಸರ್ಕಾರ ತಪ್ಪು ಮಾಡಿತು ಎಂದು ಕ್ಷಮಾಪಣೆ ಕೇಳಿದ ಡಿ.ಕೆ.ಶಿವಕುಮಾರ್ ಅವರ ಮೇಲೆ ಲಿಂಗಾಯತ ಪ್ರತ್ಯೇಕ ಧರ್ಮ ಹೋರಾಟದಲ್ಲಿ ಮುಂಚೂಣಿಯಲ್ಲಿದ್ದ ಎಂಬಿ ಪಾಟೀಲ್ ಗರಂ ಆಗಿದ್ದಾರೆ.
ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಡಿ.ಕೆ.ಶಿವಕುಮಾರ್ ಅವರು ಯಾವ ಅರ್ಥದಲ್ಲಿ ಹಾಗೆ ಹೇಳಿದ್ದಾರೆ ಆದರೆ ಅವರಿಗೆ ತಪ್ಪು ಮಾಹಿತಿ ಇದೆ ಎಂದು ಅವರು ಹೇಳಿದರು.
ಅಲ್ಲದೆ ಲಿಂಗಾಯತ ಪ್ರತ್ಯೇಕ ಧರ್ಮದಿಂದ ಕಾಂಗ್ರೆಸ್ಗೆ ಹಿನ್ನಡೆ ಆಗಿದೆ ಎಂದು ಒಪ್ಪದ ಅವರು, ಒಕ್ಕಲಿಗ ಮತಗಳು ಇದ್ದಕಡೆ ಹಾಗೂ ಕರಾವಳಿ ಭಾಗದಲ್ಲಿ ಕಾಂಗ್ರೆಸ್ಗೆ ಹಿನ್ನಡೆ ಆಗಿದೆಯೇ ಹೊರತು ಲಿಂಗಾಯತ ಬಾಹುಳ್ಯದ ಪ್ರದೇಶದಲ್ಲಿ ಅಲ್ಲ ಎಂದು ಅವರು ತಿರುಗೇಟು ನೀಡಿದ್ದಾರೆ.
ಆ ಮೂಲಕ ಡಿ.ಕೆ.ಶಿವಕುಮಾರ್ ಮತ್ತಿತರ ಒಕ್ಕಲಿಗ ನಾಯಕರಿದ್ದ ಕಡೆ ಕಾಂಗ್ರೆಸ್ಗೆ ಹಿನ್ನಡೆ ಆಗಿದೆಯೇ ಹೊರತು ತಮ್ಮ ಕ್ಷೇತ್ರಗಳಲ್ಲಿ ಅಲ್ಲ ಎಂದು ಎಂಬಿ ಪಾಟೀಲ್ ಸೂಚ್ಯವಾಗಿ ಹೇಳಿದ್ದಾರೆ.

ಡಿಕೆಶಿ ಆತ್ಮಾವಲೋಕನ ಮಾಡಿಕೊಳ್ಳಲಿ
ಡಿ.ಕೆ.ಶಿವಕುಮಾರ್ ಆತ್ಮಾವಲೋಕನ ಮಾಡಿಕೊಳ್ಳಬೇಕು ಎಂದು ಖಡಕ್ ಆಗಿ ಹೇಳಿದ ಎಂಬಿ ಪಾಟೀಲ್ ಅವರು, ಲಿಂಗಾಯತ ಪ್ರತ್ಯೇಕ ಧರ್ಮದಿಂದ ಕಾಂಗ್ರೆಸ್ ಪೆಟ್ಟಾಗಿಲ್ಲ ಎಂದು ಬಲವಾಗಿ ಪ್ರತಿಪಾದಿಸಿದರು.

ಮೊದಲಿನಿಂದಲೂ ಬೇಡಿಕೆ ಇತ್ತು, ಅದು ಕಾಂಗ್ರೆಸ್ ಬೇಡಿಕೆಯಲ್ಲ
ಸಿದ್ದರಾಮಯ್ಯ ಸರ್ಕಾರ ಲಿಂಗಾಯತ ಪ್ರತ್ಯೇಕ ಧರ್ಮ ವಿಚಾರದಲ್ಲಿ ಹಸ್ತಕ್ಷೇಪ ಮಾಡಲಿಲ್ಲ. ಆ ಬೇಡಿಕೆ ಮೊದಲೇ ಇತ್ತು, ಅದಕ್ಕೆ ಸಮಿತಿ ರಚಿಸಿ ವರದಿಯನ್ನು ಕೇಂದ್ರಕ್ಕೆ ಕಳುಹಿಸಿಕೊಟ್ಟಿದ್ದಾರೆ ಅಷ್ಟೆ ಅದೀಗ ಕೇಂದ್ರದ ಮುಂದಿದೆ. ಧರ್ಮ ಒಡೆದದ್ದು ಸಿದ್ದರಾಮಯ್ಯ ಸರ್ಕಾರ ಅಲ್ಲ ಎಂದು ಅವರು ತಮ್ಮ ನಾಯಕನ ಬೆನ್ನಿಗೆ ನಿಂತಿದ್ದಾರೆ.

ಡಿಕೆಶಿ ಗೆ ಪಕ್ಷದ ಸಭೆಯಲ್ಲಿ ಉತ್ತರ ಕೊಡುತ್ತೇನೆ
ಡಿ.ಕೆ.ಶಿವಕುಮಾರ್ ಹೇಳಿಕೆ ಬಗ್ಗೆ ಬಹಿರಂಗವಾಗಿ ಮಾತನಾಡುವುದಿಲ್ಲ ಎಂದ ಅವರು, ಪಕ್ಷದ ಸಭೆಯಲ್ಲಿ ನಾಲ್ಕು ಗೋಡೆಗಳ ಮಧ್ಯೆ ಅವರ ಮಾತಿಗೆ ತಕ್ಕ ಉತ್ತರ ನೀಡುತ್ತೇನೆ ಎಂದು ಸಿಟ್ಟಿನಿಂದ ಹೇಳಿದ್ದಾರೆ.

ಲಿಂಗಾಯತ ಹೋರಾಟದ ಮುಂಚೂಣಿಯಲ್ಲಿದ್ದ ಎಂಬಿ ಪಾಟೀಲ್
ಎಂಬಿ.ಪಾಟೀಲ್ ಅವರು ಜಲಸಂಪನ್ಮೂಲ ಸಚಿವರಾಗಿದ್ದಾಗ ಲಿಂಗಾಯತ ಪ್ರತ್ಯೇಕ ಧರ್ಮದ ಮುಂಚೂಣಿಯಲ್ಲಿದ್ದರು ಇವರ ಜೊತೆಗೆ ಕಾಂಗ್ರೆಸ್ನ ಉತ್ತರ ಕರ್ನಾಟಕ ಹಲವು ಸಚಿವರು ಭಾಗಿಯಾಗಿದ್ದಾರು. ಸಿದ್ದರಾಮಯ್ಯ ಅವರಿಗೆ ಆಪ್ತರಾಗಿದ್ದ ಎಂ.ಬಿ.ಪಾಟೀಲ್ ಅವರೇ ಲಿಂಗಾಯತ ಪ್ರತ್ಯೇಕ ಧರ್ಮದ ಕಾಂಗ್ರೆಸ್ ಸರ್ಕಾರ ತಳೆದ ನಿಲುವುಗಳ ಹಿಂದೆ ಇದ್ದರು.












Click it and Unblock the Notifications