ಲಿಂಗಾಯತರು ಹಿಂದುಗಳು ಅಲ್ಲ : ಹಿಂದುಗಳಲ್ಲಿ ಸೇರಿಸಿ ಶೂದ್ರರಾಗಿ ಮಾಡಿದ್ದಾರೆ.
ವಿಜಯಪುರ, ಡಿಸೆಂಬರ್ 05 : ನಾವು ಹಿಂದುಗಳು ಅಲ್ಲ, ನಮ್ಮನ್ನು ಯಾರೋ ಹಿಂದುಗಳಲ್ಲಿ ಸೇರಿಸಿ ಶೂದ್ರರನ್ನಾಗಿ ಮಾಡಿದ್ದಾರೆ ಎಂದು ಸಚಿವ ಎಂ.ಬಿ. ಪಾಟೀಲ್ ಹೇಳಿದ್ದಾರೆ.
ವಿಜಯಪುರದಲ್ಲಿ ನಡೆದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ನಮ್ಮ ಹೋರಾಟ ಯಾರ ವಿರುದ್ಧವೂ ಅಲ್ಲ ಬಸವಣ್ಣನಿಗೆ ಮಾನ್ಯತೆ ಸಿಗಬೇಕು ಅಷ್ಟೆ. ನಮ್ಮ ಜತೆಗೆ ಬನ್ನಿ ಸಂತೋಷ, ಬರದೇ ಇದ್ದರೆ ವೀರಶೈವ ಸ್ವತಂತ್ರ ಧರ್ಮ ಅಂತ ಹೇಳಿ ಅಭ್ಯಂತರವಿಲ್ಲ. ವೀರಶೈವ ಸ್ವತಂತ್ರ ಧರ್ಮ ಎಂದು ಮೀಸಲಾತಿ ಪಡೆಯಿರಿ ನಮ್ಮ ಅಭ್ಯಂತರ ಇಲ್ಲ ಆದರೆ ವೀರಶೈವ ಲಿಂಗಾಯತ ಎಂದು ಹೇಳಬೇಡಿ ಎಂದು ವೀರಶೈವರಲ್ಲಿ ಮನವಿ ಮಾಡಿದರು
ರಾಜ್ಯ ಸರ್ಕಾರ ಮತ್ತು ಕೇಂದ್ರ ಸರ್ಕಾರ ಸ್ವತಂತ್ರ ಲಿಂಗಾಯತ ಧರ್ಮಕ್ಕೆ ಮಾನ್ಯತೆ ಸಿಗುತ್ತದೆ ಎನ್ನುವ ಭರವಸೆ ಇದೆ ಒಂದು ವೇಳೆ ಕೇಂದ್ರ ಸರ್ಕಾರ ಮಾನ್ಯತೆ ನೀಡದಿದ್ದರೆ ಅನಿವಾರ್ಯವಾಗಿ ಸುಪ್ರೀಂಕೋರ್ಟ್ ಮೆಟ್ಟಿಲು ಏರಬೇಕಾಗುತ್ತೆ ಎಂದು ಎಚ್ಚರಿಕೆ ನೀಡಿದರು.

ನಾನು ಈ ಮೊದಲೇ ಹೇಳಿದ್ದೇನೆ ಫೆಬ್ರವರಿಯಲ್ಲಿ ಯಡಿಯೂರಪ್ಪ ಹಗರಣಗಳನ್ನ ಬಿಡುಗಡೆ ಮಾಡುತ್ತೇನೆ. ಯಡಿಯೂರಪ್ಪ ವಿಜಯಪುರ ಜಿಲ್ಲೆಯಲ್ಲಿ ನಡೆಸಿದ ಪರಿವರ್ತನಾ ಮೆರವಣಿಗೆ ಉದ್ದಕ್ಕೂ ನನ್ನ ವಿರುದ್ಧ ಹಗರಣಗಳನ್ನು ಬಿಡುಗಡೆ ಮಾಡುತ್ತೇನೆ ಎಂದು ಹೇಳುತ್ತಲೇ ಇಡೀ ಮೆರವಣಿಗೆಯನ್ನು ಕಳೆದಿದ್ದಾರೆ ಎಂದರು.
ಯಡಿಯೂರಪ್ಪಗೆ ತಿಳವಳಿಕೆ ಇಲ್ಲ. ಇದೆ ತಿಂಗಳ 15ಕ್ಕೆ ಮಹದಾಯಿಯಲ್ಲಿ ನೀರು ಹರಿಸುತ್ತೇನೆ ಎಂದಿದ್ದಾರೆ ಆದರೆ ಇದು ಅಸಾಧ್ಯ. ಅಲ್ಲಿ ಅಣೆಕಟ್ಟು ಇಲ್ಲ. ಅದು ಹೇಗೆ ನೀರು ಹರಿಸುತ್ತಾರೋ ನಾನು ನೋಡುತ್ತೇನೆ. ಒಂದು ವೇಳೆ ನೀರು ಹರಿಸಿದ್ದೇ ಆದರೆ ಯಡಿಯೂರಪ್ಪ ಭಗೀರತನಗಿಂತಲೂ ದೊಡ್ಡವರಾಗುತ್ತಾರೆಂದು ವ್ಯಂಗ್ಯವಾಡಿದರು.
ಲಿಂಗಾಯತ ಪ್ರತ್ಯೇಕ ಧರ್ಮ ಮೆರವಣಿಗೆಯು ಡಿ.10 ರಂದು ಬೆಳಿಗ್ಗೆ 11 ಗಂಟೆಗೆ ವಿಜಯಪುರದ ಅಂಬೇಡ್ಕರ್ ಮೈದಾನದಲ್ಲಿ ನಡೆಯಲಿದೆ. ಗದುಗಿನ ತೋಂಟದ ಶ್ರೀ, ಕೂಡಲಸಂಗಮದ ಬಸವಜಯ ಮೃತ್ಯುಂಜಯ ಸ್ವಾಮೀಜಿಯವರು ಸೇರಿದಂತೆ ಅನೇಕ ಸ್ವಾಮಿಜಿಗಳು ಭಾಗಿಯಾಗಿದ್ದಾರೆ.
ಮಾಜಿ ಸಚಿವ.ಬಸವರಾಜ ಹೊರಟ್ಟಿ, ಸಚಿವರಾದ ಬಸವಾರಾಜ ರಾಯರೆಡ್ಡಿ, ವಿನಯ್ ಕುಲಕರ್ಣಿ, ಶರಣಪ್ರಕಾಶ ಪಾಟೀಲ, ಸಂಸದ ಪ್ರಕಾಶ ಹುಕ್ಕೇರಿ ಸೇರಿದಂತೆ ವಿವಿಧ ಮುಖಂಡರು ಭಾಗಿಯಾಗಲಿದ್ದು, ಬಸವಕಲ್ಯಾಣ, ಇಂಗಳೇಶ್ವರ, ಬಸವನಬಾಗೇವಾಡಿ, ಕೂಡಲಸಂಗಮ,ಭಾಲ್ಕಿಯಿಂದ ಆಗಮಿಸಲಿದ್ದಾರೆ ಎಂದರು.












Click it and Unblock the Notifications