ಸಿದ್ದರಾಮಯ್ಯ- ಡಿಕೆಶಿ ಗದ್ದಲದಿಂದ ರಾಜ್ಯದಲ್ಲಿ ಕಾಂಗ್ರೆಸ್ ಫಿನಿಷ್
ವಿಜಯಪುರ, ಅ 21: ಸಿಂಧಗಿ ಕ್ಷೇತ್ರದ ಉಪ ಚುನಾವಣೆಗೆ ಬಿಜೆಪಿ, ಮಾಜಿ ಮುಖ್ಯಮಂತ್ರಿ ಯಡಿಯೂರಪ್ಪನವರ ನೇತೃತ್ವದಲ್ಲಿ ಗುರುವಾರದಂದು (ಅ 21) ದೊಡ್ಡ ಮಟ್ಟದಲ್ಲಿ ಮತಯಾಚನೆ ಮಾಡಿದೆ. ಹೋದಲ್ಲೆಲ್ಲಾ ಯಡಿಯೂರಪ್ಪನವರಿಗೆ ಭಾರೀ ಸ್ವಾಗತ ಸಿಗುತ್ತಿದೆ.
ಸಿಂಧಗಿ ಪಟ್ಟಣದಲ್ಲಿ ಚುನಾವಣಾ ಸಭೆಯಲ್ಲಿ ಮಾತನಾಡುತ್ತಿದ್ದ ಮಾಜಿ ಮುಖ್ಯಮಂತ್ರಿ ಜಗದೀಶ್ ಶೆಟ್ಟರ್, "ಈ ಸಭೆಗೆ ಸುಮಾರು ಹತ್ತು ಸಾವಿರಕ್ಕೂ ಹೆಚ್ಚು ಜನರು ಸೇರಿದ್ದಾರೆ. ನೀವೆಲ್ಲಾ ಮತ್ತು ನಿಮ್ಮ ಜೊತೆಗೆ ಇನ್ನೊಬ್ಬರಿಂದ ವೋಟ್ ಹಾಕಿಸಿದರೆ, ಸಿಂಧಗಿ ಪಟ್ಟಣವೊಂದರಲ್ಲೇ ಬಿಜೆಪಿಗೆ ಇಪ್ಪತ್ತು ಸಾವಿರ ಮತಗಳು ಬೀಳುತ್ತವೆ"ಎಂದು ಹೇಳಿದರು.
"ದೇಶದಲ್ಲಿ ಕಾಂಗ್ರೆಸ್ ಎಲ್ಲಿದೆ ಎಂದು ದುರ್ಬಿನು ಹಾಕಿ ಹುಡುಕುವ ಪರಿಸ್ಥಿತಿಯಿದೆ, ಅದು ಮುಳುಗುತ್ತಿರುವ ಹಡಗು. ದೇಶದ 26 ರಾಜ್ಯಗಳಲ್ಲಿ ಬಿಜೆಪಿಯ ಆಡಳಿತವಿದೆ, ಪಂಜಾಬ್ನಲ್ಲಿ ಮಾತ್ರ ಕಾಂಗ್ರೆಸ್ ಇದೆ. ಅಲ್ಲಿ ಕೂಡಾ ಸಿದ್ದುಗಳ ಹಾವಳಿ ಜೋರಾಗಿದೆ"ಎಂದು ಜಗದೀಶ್ ಶೆಟ್ಟರ್ ವ್ಯಂಗ್ಯವಾಡಿದರು.

"ಕರ್ನಾಟಕದಲ್ಲೂ ಒಬ್ಬ ಸಿದ್ದು ಇದ್ದಾರೆ, ಈ ಸಿದ್ದು ಮತ್ತು ಡಿ.ಕೆ.ಶಿವಕುಮಾರ್ ನಡುವಿನ ಗದ್ದಲದ ನಡುವೆ ಕರ್ನಾಟಕದಲ್ಲೂ ಕಾಂಗ್ರೆಸ್ ನಶಿಸಿ ಹೋಗುತ್ತದೆ. ಕಾಂಗ್ರೆಸ್ಸಿನವರು ಭ್ರಮೆಯಲ್ಲಿದ್ದಾರೆ, ಎರಡು ಬಾರಿ ಕೋವಿಡ್ ಬಂದಂತಹ ಸಂದರ್ಭದಲ್ಲಿ ನಮ್ಮ ಸರಕಾರ ಅದನ್ನು ಸಮರ್ಥವಾಗಿ ನಿಭಾಯಿಸಿದೆ,"ಎಂದು ಜಗದೀಶ್ ಶೆಟ್ಟರ್ ಹೇಳಿದರು.
"ದೇಶದ 130 ಕೋಟಿ ಜನರಿಗೆ ಉಚಿತವಾಗಿ ಲಸಿಕೆ ನೀಡುವಂತಹ ಕೆಲಸವನ್ನು ಯಾರಾದರೂ ಮಾಡಿದ್ದರೆ ಅದು ನರೇಂದ್ರ ಮೋದಿ ಸರಕಾರ. ನಾವು, ನೀವು ಎಂದು ಮಾಸ್ಕ್ ಹಾಕಿಕೊಳ್ಳದೇ ಆರಾಮಾಗಿ ಕೂತಿದ್ದೇವೆ ಎಂದರೆ ಅದು ಮೋದಿ ಸರಕಾರದ ದಿಟ್ಟ ಕ್ರಮದಿಂದಾಗಿ"ಎಂದು ಜಗದೀಶ್ ಶೆಟ್ಟರ್ ಹೇಳಿದರು.
"ಕೇಂದ್ರ ಮತ್ತು ರಾಜ್ಯದಲ್ಲಿ ಬಿಜೆಪಿ ಸರಕಾರವಿದೆ, ಆ ಹಿನ್ನಲೆಯಲ್ಲಿ ರಮೇಶ್ ಬೂಸನೂರು ಅವರಿಗೆ ನಿಮ್ಮ ಮತವನ್ನು ನೀಡಿ ಹರಸಬೇಕು. ಅವರು ಗೆದ್ದರೆ ಸಿಂದಗಿ ಕ್ಷೇತ್ರದಲ್ಲಿ ಆಮೂಲಾಗ್ರ ಬದಲಾವಣೆ ಸಾಧ್ಯವಾಗಲಿದೆ"ಎಂದು ಜಗದೀಶ್ ಶೆಟ್ಟರ್ ಮತದಾರರಲ್ಲಿ ಮನವಿ ಮಾಡಿದ್ದಾರೆ.












Click it and Unblock the Notifications