ಜಲಧಾರೆ ಯೋಜನೆ: ಪ್ರತಿ ಹಳ್ಳಿಗೆ ಕುಡಿಯುವ ನೀರು
ವಿಜಯಪುರ, ನವೆಂಬರ್ 30: ಪ್ರತಿ ಹಳ್ಳಿಗೂ ಪೈಪ್ಲೈನ್ ಮೂಲಕ ಕುಡಿಯುವ ನೀರು ಪೂರೈಸುವ ಜಲಧಾರೆ ಯೋಜನೆ ಜಾರಿ ಮಾಡುವ ಉದ್ದೇಶ ಸರ್ಕಾರಕ್ಕಿದೆ ಎಂದು ಗ್ರಾಮೀಣಾಭಿವೃದ್ಧಿ ಸಚಿವ ಕೃಷ್ಣಬೈರೇಗೌಡ ಹೇಳಿದ್ದಾರೆ.
ವಿಜಯಪುರ ಜಿಲ್ಲಾ ಪಂಚಾಯಿತಿ ಸಭಾಂಗಣದಲ್ಲಿಂದು ಪಂಚಾಯತ್ ರಾಜ್ ಇಲಾಖೆ, ವಿವಿಧ ಇಲಾಖೆಗಳ ಪ್ರಗತಿ ಪರಿಶೀಲನಾ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.
ವಸತಿಯುಳ್ಳ ಪ್ರತಿ ಹಳ್ಳಿಗೂ ಪೈಪ್ಲೈನ್ ಮೂಲಕ ಕುಡಿಯುವ ನೀರು ತಲುಪಿಸುವ ಜಲಧಾರೆ ಯೋಜನೆಯ ನೀಲನಕ್ಷೆ ತಯಾರಿದ್ದು, ಮುಂಬರುವ ಸಂಪುಟ ಸಭೆಯಲ್ಲಿ ಇದಕ್ಕೆ ಒಪ್ಪಿಗೆ ಪಡೆಯಲಾಗುವುದು ಎಂದು ಕೃಷ್ಣಬೈರೇಗೌಡ ಅವರು ಹೇಳಿದರು.

ಜಲಧಾರೆ ಯೋಜನೆಯಿಂದ ವಿಶೇಷವಾಗಿ ವಿಜಯಪುರ ಹಾಗೂ ಬಾಗಲಕೋಟೆ ಜಿಲ್ಲೆಗಳಿಗೆ ಹೆಚ್ಚಿನ ಅನುಕೂಲವಾಗಲಿದೆ. ಈ ಜಿಲ್ಲೆಗಳಿಗೆ ಪ್ರಥಮ ಪ್ರಾಶ್ಯಸ್ತ ಸಹ ನೀಡಲಾಗುವುದು ಎಂದು ಕೃಷ್ಣಬೈರೇಗೌಡ ಅವರು ಹೇಳಿದರು.
ವಿಜಯಪುರ ಜಿಲ್ಲೆಗೆ ಸಂಬಂಧಪಟ್ಟಂತೆ ನೀಲನಕ್ಷೆಯನ್ನು ಸಿದ್ದಪಡಿಸುವ ಜೊತೆಗೆ ಪ್ರಾಥಮಿಕ ಯೋಜನಾ ವರದಿಯನ್ನು ಆಯಾ ಶಾಸಕರು, ಸಚಿವರು, ಮತ್ತು ಹಿರಿಯ ಅಧಿಕಾರಿಗಳ ಸಮಾಲೋಚನೆಯೊಂದಿಗೆ ಸಿದ್ಧಪಡಿಸಬೇಕು. ಮುಂದಿನ ವರ್ಷದಲ್ಲಿ ಈ ಯೋಜನೆ ಕುರಿತಂತೆ ಟೆಂಡರ್ ಆಹ್ವಾನಕ್ಕೂ ಪ್ರಯತ್ನಿಸಲಾಗುವುದೆಂದು ಹೇಳಿದರು.
ರಾಜ್ಯ ಹಾಗೂ ಜಿಲ್ಲೆಯಲ್ಲಿ ತೀವ್ರ ಬರ ಇರುವ ಹಿನ್ನಲೆಯಲ್ಲಿ ಜನರಿಗೆ ನೀರಿನ ಸಮಸ್ಯೆಯಾಗದಂತೆ ಮುನ್ನೆಚ್ಚರಿಕೆ ವಹಿಸಬೇಕು. ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಹನಾಧಿಕಾರಿಗಳು, ಆಯಾ ತಹಶೀಲ್ದಾರ, ತಾಲೂಕಾ ಪಂಚಾಯತ್ ಕಾರ್ಯನಿರ್ವಾಹಕ ಅಧಿಕಾರಿಗಳು ಮತ್ತು ಪಿಡಿಓಗಳೊಂದಿಗೆ ಜಂಟಿ ಸಭೆ ನಡೆಸಿ, ಸೂಕ್ತ ಪರಿಹಾರೋಪಾಯಗಳನ್ನು ಕಂಡುಕೊಳ್ಳಬೇಕು ಎಂದು ಅವರು ಸಲಹೆ ನೀಡಿದರು.












Click it and Unblock the Notifications