ಗಂಗಾಧರ ಚಡಚಣ ಕೊಲೆ: ಪ್ರಮುಖ ಆರೋಪಿ ಮಹದೇವ ಸಾಹುಕಾರ ಬಂಧನ
ವಿಜಯಪುರ, ಜುಲೈ 5: ಭೀಮಾ ತೀರದ ಗಂಗಾಧರ ಚಡಚಣ ಅವರ ಹತ್ಯೆಯ ಪ್ರಮುಖ ಆರೋಪಿ ಮಹದೇವ ಸಾಹುಕಾರ ಭೈರಗೊಂಡನನ್ನು ಪೊಲೀಸರು ಬಂಧಿಸಿದ್ದಾರೆ.
ಇಂಡಿ ತಾಲ್ಲೂಕಿನ ಕೆರೂರು ಗ್ರಾಮದಲ್ಲಿರುವ ತಮ್ಮ ಮನೆಗೆ ತಡರಾತ್ರಿ ಬಂದಿದ್ದ ಸಾಹುಕಾರನನ್ನು ಸಿಐಡಿ ಪೊಲೀಸರು ಬೆಳಿಗ್ಗೆ ಏಳು ಗಂಟೆ ಸುಮಾರಿಗೆ ಬಂಧಿಸಿದ್ದಾರೆ.
ಗಂಗಾಧರ ಚಡಚಣ ಅವರ ಹತ್ಯೆ ಪ್ರಕರಣದ ಪ್ರಮುಖ ಆರೋಪಿಯಾಗಿರುವ ಮಹದೇವ ಸಾಹುಕಾರ ಪ್ರಕರಣ ಬೆಳಕಿಗೆ ಬಂದ ಬಳಿಕ ತಲೆಮರೆಸಿಕೊಂಡಿದ್ದ. ಹಲವು ದಿನಗಳಿಂದ ಹುಡುಕಾಟ ನಡೆಸಿದ್ದರೂ ಪತ್ತೆಯಾಗಿರಲಿಲ್ಲ. ಸುದೀರ್ಘ ಸಮಯದಿಂದ ಮನೆಗೆ ಬಂದಿರದ ಕಾರಣ ಅಲ್ಲಿಗೆ ಬಂದೇ ಬರುತ್ತಾನೆ ಎಂಬ ನಿರೀಕ್ಷೆಯೊಂದಿಗೆ ಕಾದಿದ್ದರು.

ಬುಧವಾರ ಮಧ್ಯರಾತ್ರಿ ಮಹದೇವ ಸಾಹುಕಾರ ಗುಟ್ಟಾಗಿ ಮನೆಗೆ ಬಂದಿರುವ ವಿಷಯ ತಿಳಿದ ಪೊಲೀಸರು ಕೂಡಲೇ ಆತನನ್ನು ಬಂಧಿಸಿ ಚಡಚಣ ಠಾಣೆಗೆ ಕರೆದೊಯ್ದರು.
ಪ್ರಕರಣಕ್ಕೆ ಸಂಬಂಧಿಸಿದಂತೆ ಪೊಲೀಸರು ತನ್ನನ್ನು ಬಂಧಿಸದಂತೆ ಸಾಹುಕಾರ ಸಲ್ಲಿಸಿದ್ದ ನಿರೀಕ್ಷಣಾ ಜಾಮೀನು ಅರ್ಜಿಯನ್ನು ಸೋಮವಾರ ವಿಜಯಪುರ ಹೆಚ್ಚುವರಿ ಜಿಲ್ಲಾ ವಿಶೇಷ ನ್ಯಾಯಾಲಯ ವಜಾಗೊಳಿಸಿತ್ತು.
ಗಂಗಾಧರ ಚಡಚಣ ಹತ್ಯೆ ಪ್ರಕರಣದಲ್ಲಿ ಇನ್ನೂ 9 ಮಂದಿಯನ್ನು ಬಂಧಿಸಲಾಗಿದ್ದು, ಅವರು ನ್ಯಾಯಾಂಗ ವಶದಲ್ಲಿದ್ದಾರೆ. ಜುಲೈ 12ರವರೆಗೂ ಅವರನ್ನು ನ್ಯಾಯಾಂಗ ಬಂಧನದಲ್ಲಿ ಇರಿಸಿಕೊಂಡು ಪ್ರತಿ ಆರೋಪಿಯನ್ನು ಅರ್ಧ ಗಂಟೆ ವಿಚಾರಣೆ ನಡೆಸಲು ಇಂಡಿ ನ್ಯಾಯಾಲಯ ಪೊಲೀಸರಿಗೆ ಅನುಮತಿ ನೀಡಿತ್ತು.
ರೌಡಿ ಶೀಟರ್ ಧರ್ಮರಾಜ್ ಚಡಚಣ 2017ರ ಅಕ್ಟೋಬರ್ 30ರಂದು ತೋಟದ ಮನೆಯಲ್ಲಿ ನಡೆದ ಪೊಲೀಸ್ ಎನ್ಕೌಂಟರ್ನಲ್ಲಿ ಮೃತಪಟ್ಟಿದ್ದ. ಈ ಎನ್ಕೌಂಟರ್ ಬಳಿಕ ಆತನ ಸಹೋದರ ಗಂಗಾಧರ ಚಡಚಣನನ್ನು ಪೊಲೀಸರು ವಶಕ್ಕೆ ಪಡೆದಿದ್ದರು. ಬಳಿಕ ಆತ ನಾಪತ್ತೆಯಾಗಿದ್ದ. ಕಣ್ಮರೆಯಾಗಿದ್ದ ಗಂಗಾಧರ ಚಡಚಣ ಕೊಲೆಯಾಗಿದ್ದಾನೆ ಎಂಬ ಮಾಹಿತಿ ದೊರಕಿತ್ತು.












Click it and Unblock the Notifications