'ಯಡಿಯೂರಪ್ಪನವರಿಗೆ ವಯಸ್ಸಾಗಿದೆ ವಿಶ್ರಾಂತಿ ಪಡೆಯಲಿ'
ವಿಜಯಪುರ, ಅಕ್ಟೋಬರ್ 22 : 'ಬಿಜೆಪಿ ರಾಜ್ಯಾಧ್ಯಕ್ಷ ಬಿ.ಎಸ್.ಯಡಿಯೂರಪ್ಪನವರಿಗೆ ವಯಸ್ಸಾಗಿದೆ. ಅವರು ವಿಶ್ರಾಂತಿ ಪಡೆಯಬೇಕು, ಅವರಿವರ ಮಾತು ಕೇಳಿ ಯಡಿಯೂರಪ್ಪ ಅವರು ಸುಳ್ಳು ಆರೋಪ ಮಾಡುತ್ತಿದ್ದಾರೆ' ಎಂದು ಜಲಸಂಪನ್ಮೂಲ ಸಚಿವ ಎಂ.ಬಿ.ಪಾಟೀಲ್ ಹೇಳಿದರು.
ವಿಜಯಪುರದಲ್ಲಿ ಭಾನುವಾರ ಮಾತನಾಡಿದ ಸಚಿವರು, 'ನೀರಾವರಿ ಇಲಾಖೆಯಲ್ಲಿಯೂ ಹಗರಣ ಆಗಿದೆ ಅಂತಾ ನನ್ನ ವಿರುದ್ಧವು ಆರೋಪ ಮಾಡಿ ವಿಜಯಪುರದಲ್ಲಿ ಸಮಾವೇಶವನ್ನೇ ಹಮ್ಮಿಕೊಂಡಿದ್ದಾರೆ. ಯಡಿಯೂರಪ್ಪ ಹತಾಶೆಗೊಂಡು ಸುಳ್ಳು ಆರೋಪ ಮಾಡುತ್ತಿದ್ದಾರೆ' ಎಂದು ತಿಳಿಸಿದರು.

'ಯಡಿಯೂರಪ್ಪ ಅವರ ಆರೋಪಗಳು ಚುನಾವಣೆ ಗಿಮಿಕ್. ಅದಕ್ಕೆ ಇಂತಹ ಬೇಜವಾಬ್ದಾರಿಯುತ ಹೇಳಿಕೆ ನೀಡಿದ್ದಾರೆ.
ಚುನಾವಣೆ ಹತ್ತಿರ ಬಂದಿದ್ದಕ್ಕೆ ಈ ರೀತಿ ಆರೋಪಗಳನ್ನು ಮಾಡುತ್ತಿದ್ದಾರೆ. ಜನರು ಈ ತರಹ ಸುಳ್ಳು ಆರೋಪಗಳನ್ನು ಒಪ್ಪುವುದಿಲ್ಲ. ಆನೆ ಹೊರಟಾಗ ಶ್ವಾನ ಬೊಗಳಿದಂತಾಗಿದೆ ಇವರ ಪರಿಸ್ಥಿತಿ' ಎಂದು ಲೇವಡಿ ಮಾಡಿದರು.
ಹಳೆಯ ವಿಚಾರ : 'ಕಾವೇರಿ, ಕೃಷ್ಣಾ ನದಿ ಜೋಡಣೆ ವಿಚಾರ ಹಳೆಯ ವಿಷಯ, ಇದರ ಬಗ್ಗೆ ಕೇಂದ್ರ ಸರ್ಕಾರಕ್ಕೆ ಪ್ರಸ್ತಾವನೆ ಸಲ್ಲಿಸಲಾಗಿದೆ. ನಾನು ಕೇಂದ್ರ ನೀರಾವರಿ ಸಚಿವೆ ಉಮಾ ಭಾರತಿ ಅವರನ್ನು ಭೇಟಿ ಮಾಡಿ ನಮ್ಮ ರಾಜ್ಯಕ್ಕಾದ ಅನ್ಯಾಯದ ಬಗ್ಗೆ ತಿಳಿಸಿದ್ದೇನೆ' ಎಂದರು.
'ಉಮಾ ಭಾರತಿಯವರು ನಮ್ಮ ರಾಜ್ಯಕ್ಕಾದ ಅನ್ಯಾಯವನ್ನು ಸರಿಪಡಿಸಲು ಸಂಬಂಧ ಪಟ್ಟ ಆಧಿಕಾರಿಗಳಿಗೆ ಸೂಚಿಸಿದ್ದರು.
ಲಿಖಿತ ರೂಪದಲ್ಲೆ ನಮ್ಮ ರಾಜ್ಯದ ಹಕ್ಕು ನೀಡುವುದಾಗಿ ಕೇಂದ್ರ ನೀರಾವರಿ ಇಲಾಖೆ ಪತ್ರ ಕೊಟ್ಟಿದ್ದಾರೆ. ರಾಜ್ಯದ ಜನರು ಆತಂಕ ಪಡುವುದು ಬೇಡ. ರಾಜ್ಯದ ಹಕ್ಕು ಕಾಪಾಡಲು ನಾವು ನಾವು ಬದ್ಧರಿದ್ದೇವೆ' ಎಂದು ಎಂ.ಬಿ.ಪಾಟೀಲ್ ಹೇಳಿದರು.












Click it and Unblock the Notifications