ಅತ್ಯಾಚಾರಿಗಳಿಗೆ ಕಠಿಣ ಶಿಕ್ಷೆ ಕಾದಿದೆ: ಸಿದ್ದರಾಮಯ್ಯ
ವಿಜಯಪುರ, ಡಿಸೆಂಬರ್ 20: ವಿಜಯಪುರದಲ್ಲಿ ಅಪ್ರಾಪ್ತ ದಲಿತ ಬಾಲಕಿ ಮೇಲೆ ನಡೆದಿರುವ ಸಾಮೂಹಿಕ ಅತ್ಯಾಚಾರ ಮತ್ತು ಕೊಲೆಯ ಬಗ್ಗೆ ತೀವ್ರ ಬೇಸರವನ್ನು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ವ್ಯಕ್ತಪಡಿಸಿದ್ದಾರೆ.
ವಿಜಯಪುರದಲ್ಲಿ ನವಕರ್ನಾಟಕ ನಿರ್ಮಾಣ ಯಾತ್ರೆಯಲ್ಲಿರುವ ಸಿದ್ದರಾಮಯ್ಯ ಅವರು ಸುದ್ದಿಗಾರರೊಂದಿಗೆ ಮಾತನಾಡಿ ಘಟನೆಯನ್ನು ಕಠಿಣ ಶಬ್ದಗಳಲ್ಲಿ ಖಂಡಿಸಿದ್ದು, ಇದು ಮಾನವಿಯತೆಗೆ ವಿರೋಧವಾಗಿದ್ದು ಯಾರೆ ಆದರೂ ಇಂತಹ ಕೃತ್ಯಗಳನ್ನ ಸಹಿಸಲ್ಲ, ಆರೋಪಿಗಳ ವಿರುದ್ಧ ಕಠಿಣ ಕ್ರಮ ಕೈಗೊಳ್ಳುತ್ತೇವೆ ಎಂದು ಗುಡುಗಿದರು.
ತಮ್ಮ ಟ್ವಿಟರ್ ಖಾತೆಯಲ್ಲಿಯೂ ಈ ಬಗ್ಗೆ ಆಕ್ರೋಶ ವ್ಯಕ್ತಪಡಿಸಿರುವ ಸಿದ್ದರಾಮಯ್ಯ ಅವರು 'ವಿಜಯಪುರದಲ್ಲಿ ಮುಗ್ಧ ಬಾಲಕಿಯ ಮೇಲೆ ನಡೆದಿರುವ ಅತ್ಯಾಚಾರ ಖಂಡನೀಯ, ಈ ರೀತಿಯ ಕೃತ್ಯಗಳು ಮನುಷ್ಯತ್ವದ ಹತ್ಯೆಯೂ ಹೌದು, ಇದನ್ನು ಸರ್ಕಾರ ಸಹಿಸುವುದಿಲ್ಲ, ಪೊಲೀಸರು ಈಗಾಗಲೇ ಕೆಲವು ದುಷ್ಕರ್ಮಿಗಳನ್ನು ಬಂಧಿಸಿದ್ದಾರೆ, ತಪ್ಪಿತಸ್ಥರೆಲ್ಲರನ್ನೂ ಬಂಧಿಸದೆ ಬಿಡುವುದಿಲ್ಲ, ಪೊಲೀಸರಿಗೆ ಕಟ್ಟುನಿಟ್ಟಿನ ಆದೇಶ ನೀಡಿದ್ದೇನೆ' ಎಂದು ಬರೆದುಕೊಂಡಿದ್ದಾರೆ.

ಕಾಂಗ್ರೆಸ್ ಸೇರಲಿದ್ದಾರೆ ಯೋಗೀಶ್ ಗೌಡ ಪತ್ನಿ
ಇದೇ ಸಮಯದಲ್ಲಿ ಬಿಜೆಪಿ ಪಕ್ಷದ ಧಾರವಾಡ ಜಿಲ್ಲಾ ಪಂಚಾಯಿತಿ ಸದಸ್ಯ ಮೃತ ಯೊಗೀಶ್ ಗೌಡ ಅವರ ಪತ್ನಿ ಮಲ್ಲಮ್ಮ ಅವರು ತಮ್ಮನ್ನು ಭೇಟಿ ಆದ ವಿಷಯದ ಬಗ್ಗೆ ಮಾತನಾಡಿದ ಮುಖ್ಯಮಂತ್ರಿಗಳು 'ಬಿಜೆಪಿ ನಾಯಕರಾದ ಜಗದೀಶ್ ಶೆಟ್ಟರ್ ಹಾಗೂ ಪ್ರಹ್ಲಾದ್ ಜೋಷಿ ಅವರುಗಳು ತನ್ನನ್ನು ಬಿಜೆಪಿ ಸೇರುವಂತೆ ಒತ್ತಡ ಹೇರುತ್ತಿದ್ದಾರೆ, ಸ್ಥಳೀಯ ಕಾರ್ಯಕರ್ತರು ಬೆದರಿಕೆ ಒಡ್ಡುತ್ತಿದ್ದಾರೆ ಹಾಗಾಗಿ ಭದ್ರತೆ ನೀಡಿ ಎಂದು ಕೇಳಿದ್ದಾರೆ, ಅವರು ಕಾಂಗ್ರೆಸ್ ಪಕ್ಷ ಸೇರಲು ಉತ್ಸುಕರಾಗಿದ್ದು, ಸ್ಥಳಿಯ ಮುಖಂಡರೊಂದಿಗೆ ಚರ್ಚಿಸಲು ಹೇಳಿದ್ದೇನೆ ಎಂದರು.

ವರದಿ ನೀಡುವಂತೆ ಸೂಚನೆ
ಪ್ರತ್ಯೇಕ ಲಿಂಗಾಯತ ಧರ್ಮ ಸ್ಥಾಪನೆ ವಿಚಾರವಾಗಿ 5 ಪಿಟಿಷನ್ ಗಳನ್ನು ಆಯೋಗಕ್ಕೆ ಕಳಿಸಲಾಗಿದೆ ಎಂದ ಮುಖ್ಯಮಂತ್ರಿಗಳು ಕಾನೂನಾತ್ಮಕವಾಗಿ, ಸಾಮಾಜಿಕವಾಗಿ, ಸಂವಿಧಾನಿಕವಾಗಿ, ಐತಿಹಾಸಿಕವಾಗಿ ಈ ಎಲ್ಲ ದೃಷ್ಟಿಯಿಂದ ಮಾಹಿತಿ ಪಡೆದು ವರದಿ ನೀಡುವಂತೆ ಸೂಚಿಸಿದ್ದೆನೆ. ಅದಕ್ಕಾಗಿ ನುರಿತ ತಜ್ಞರ ಸಮಿತಿ ಈಗಾಗಲೇ ಆ ಬಗ್ಗೆ ಮಾಹಿತಿ ಕಲೆ ಹಾಕುತ್ತಿದೆ, ತಜ್ಞರ ಸಮಿತಿ ವರದಿ ನೀಡಿದ ಬಳಿಕ ಸರ್ಕಾರ ಪ್ರತ್ಯೇಕ ಧರ್ಮಕ್ಕೆ ಮಾನ್ಯತೆ ನೀಡಬೇಕಾ ಬೇಡವಾ ಎಂಬ ಬಗ್ಗೆ ತಿರ್ಮಾನ ಕೈಗೊಳ್ಳಲಿದೆ ಎಂದರು.
— CM of Karnataka (@CMofKarnataka) December 20, 2017 |
ಮುಖ್ಯಮಂತ್ರಿಗಳಿಗೆ ರೈತರಿಂದ ಸನ್ಮಾನ
ಮುದ್ದೆಬಿಹಾಳದಲ್ಲಿ ನಡೆದ ಕಾರ್ಯಕ್ರಮದಲ್ಲಿ, ನಾಗರಬೆಟ್ಟ ಏತ ನೀರಾವರಿ ಯೋಜನೆಗೆ ಅನುಮೋದನೆ ಕೊಟ್ಟಿದ್ದಕ್ಕಾಗಿ ಸಿಎಂ ಸಿದ್ದರಾಮಯ್ಯ ಅವರಿಗೆ ನಾಗರಬೆಟ್ಟ ಗ್ರಾಮಸ್ಥರು ಬಂಗಾರದ ಕಡ ನೀಡಿ ಸನ್ಮಾನ ಮಾಡಿದರು. ಅದೇ ಕಾರ್ಯಕ್ರಮದಲ್ಲಿ ಐವರು ಗಣ್ಯ ವ್ಯಕ್ತಿಗಳಿಗೆ ಮುಖ್ಯಮಂತ್ರಿಗಳು ಸನ್ಮಾನ ಮಾಡಿದರು.

ಪ್ರಾಮಾಣಿಕವಾಗಿ ಕಾರ್ಯ
ನಾನು ವಿರೋಧ ಪಕ್ಷದ ನಾಯಕನಾಗಿದ್ದಾಗಿ ಹೊಸಪೇಟೆಯಿಂದ ಕೂಡಲಸಂಗಮದವರೆಗೆ ಪಾದಯಾತ್ರೆ ಮಾಡಿದ್ದೆ, ಜನರು ಆಶೀರ್ವಾದ ಮಾಡಿದರೆ ಎಲ್ಲಾ ನೀರಾವರಿ ಯೋಜನೆಗಳನ್ನು ಕೈಗೆತ್ತಿಕೊಂಡು, ಅವುಗಳಿಗೆ ಹೊಸ ಕಾಯಕಲ್ಪ ಕಲ್ಪಿಸುವುದಾಗಿ ತೀರ್ಮಾನಿಸಿದ್ದೆ. ಈಗ ಆ ಕಾರ್ಯವನ್ನು ಪ್ರಾಮಾಣಿಕವಾಗಿ ಮಾಡಿದ್ದೇನೆ. ಇದು ನನ್ನ ಬದ್ಧತೆ ಎಂದು ಮುಖ್ಯಮಂತ್ರಿಗಳು ಮುದ್ದೆಬಿಹಾಳ ಕಾರ್ಯಕ್ರಮದಲ್ಲಿ ಹೇಳಿದರು.












Click it and Unblock the Notifications