'ಸರ್ಜಿಕಲ್ ಸ್ಟ್ರೈಕ್ ಸಾಕ್ಷಿ ಕೇಳಿದರೆ ವಿಮಾನದಲ್ಲಿ ಒಯ್ದು ಪಾಕಿಸ್ತಾನದಲ್ಲಿ ಎಸೆಯಬೇಕು'
ವಿಜಯಪುರ, ಮಾರ್ಚ್ 04: ಸರ್ಜಿಕಲ್ ಸ್ಟ್ರೈಕ್ ನ ಸಾಕ್ಷಿ ಕೇಳುವ ಸಿಎಂ ಕುಮಾರಸ್ವಾಮಿಗೆ ಮಾನ ಮರ್ಯಾದೆ ಇದೆಯಾ?. ಭಾರತೀಯರು ಆಟದಲ್ಲಿ ಗೆದ್ದಾಗ, ಸರ್ಜಿಕಲ್ ಸ್ಟ್ರೈಕ್ ನಡೆಸಿದಾಗ ಸಂಭ್ರಮಿಸಬಾರದಾ?. ಈ ವೇಳೆ ಸಂಭ್ರಮಿಸದೇ, ಇನ್ನೇನು 'ಸೀತಾರಾಮ ಕಲ್ಯಾಣ' ಸಿನಿಮಾ ನೋಡಿ ಸಂಭ್ರಮಿಸಬೇಕಾ? ಎಂದು ಕುಮಾರಸ್ವಾಮಿ ವಿರುದ್ಧ ಶಾಸಕ ಬಸವರಾಜ್ ಪಾಟೀಲ್ ಯತ್ನಾಳ ವಾಗ್ದಾಳಿ ನಡೆಸಿದರು.
ವಿಜಯಪುರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಸರ್ಜಿಕಲ್ ಸ್ಟ್ರೈಕ್ ಸಾಕ್ಷಿ ಕೇಳುವವರನ್ನು ವಿಮಾನದಲ್ಲಿ ಒಯ್ದು ಪಾಕಿಸ್ತಾನಕ್ಕೆ ಒಗೆಯಬೇಕು. ಕೇಜ್ರಿವಾಲ್, ಮಮತಾ ಬ್ಯಾನರ್ಜಿ, ಮಾಯಾವತಿ, ಕುಮಾರಸ್ವಾಮಿ ಅಂಥವರನ್ನು ಒಂದೇ ವಿಮಾನದಲ್ಲಿ ಕರೆದುಕೊಂಡು ಹೋಗಿ ಪಾಕಿಸ್ತಾನದಲ್ಲಿ ಎಸೆಯಬೇಕು ಎಂದು ಆಕ್ರೋಶ ವ್ಯಕ್ತಪಡಿಸಿದರು.
ತಮ್ಮ ಹೇಳಿಕೆ ಬಗ್ಗೆ ತಕ್ಷಣವೇ ಕುಮಾರಸ್ವಾಮಿ ಕ್ಷಮೆ ಕೇಳಬೇಕು. ಮುಂದಿನ ಬಾರಿ ಸಿಎಂ ಕುಮಾರಸ್ವಾಮಿ ಮನೆ ಎದುರು ಪಟಾಕಿ ಹಚ್ಚಿ ಸಂಭ್ರಮಾಚರಣೆ ಮಾಡುತ್ತೇವೆ ಎಂದು ಯತ್ನಾಳ ತಿಳಿಸಿದರು.

ಮಾಜಿ ಪ್ರಧಾನಿ ಎಚ್.ಡಿ.ದೇವೇಗೌಡ ಅವರು, ಇದು ನನ್ನ ಕೊನೆಯ ಚುನಾವಣೆ ಅಂತಾರೆ, ಮತ್ತೆ ನಿಲ್ತಾರೆ. ಸುಳ್ಳು ಹೇಳುವುದನ್ನು ದೇವೇಗೌಡರು ಬಿಡಬೇಕು. 2004ರಲ್ಲಿಯೇ ನಾನು ಲೋಕಸಭಾ ಸದಸ್ಯನಾಗಿದ್ದಾಗ ದೇವೇಗೌಡರು ಈ ಮಾತನ್ನು ಹೇಳಿದ್ದರು. ಅದಾದ ನಂತರ ಎಷ್ಟು ಲೋಕಸಭಾ ಚುನಾವಣೆಗಳು ನಡೆದಿವೆ ಎನ್ನುವುದು ಜನತೆಗೆ ಗೊತ್ತಿರುವ ಸಂಗತಿ. ಈಗಾಗಲೇ ದೇವೇಗೌಡರ ಕುಟುಂಬದ ನಾಲ್ಕನೇ ತಲೆ ರಾಜಕೀಯ ಆರಂಭಿಸುವ ತಯಾರಿ ಅಂತಿಮವಾಗಿದೆ. ಇನ್ನು ಮುಂದೆ ದೇವೇಗೌಡ ಆಂಡ್ ಕಂಪನಿ ಅಂದರು ತಪ್ಪಾಗಲಿಕ್ಕಿಲ್ಲ ಎಂದು ಬಸವರಾಜ್ ಪಾಟೀಲ್ ಯತ್ನಾಳ ಟೀಕಿಸಿದರು.
ಕಾಂಗ್ರೆಸ್ ಗೆ ಜಾದವ್ ರಾಜೀನಾಮೆ ಸ್ವಾಗತಿಸಿದ ಯತ್ನಾಳ್, ಹಂತ ಹಂತವಾಗಿ ಎರಡು ಪಕ್ಷಗಳ ಮನೆ ಖಾಲಿ ಆಗಲಿದೆ. ಜಾದವ್ ಅವರು ಮೊದಲು ಓಪನಿಂಗ್ ಮಾಡಿದ್ದಾರೆ. ಇನ್ನು ಸಮಾರೋಪ ಆದಷ್ಟು ಬೇಗನೇ ಆಗುತ್ತದೆ. ಈ ಮೂಲಕ ಅವರ ಪಕ್ಷದಿಂದ ಆಯ್ಕೆಯಾದ ಶಾಸಕರೇ ಕಾಂಗ್ರೆಸ್, ಜೆಡಿಎಸ್ ಪಕ್ಷಗಳಿಗೆ ಬುದ್ಧಿ ಕಲಿಸಲಿದ್ದಾರೆ ಎಂದು ಯತ್ನಾಳ ಟೀಕಿಸಿದರು.












Click it and Unblock the Notifications