ಸದನಕ್ಕೆ ಗೈರಾಗಿ ಉರಿ ಸಿನಿಮಾ ವೀಕ್ಷಿಸಿದ ಬಿಜೆಪಿ ಶಾಸಕ!
ವಿಜಯಪುರ, ಫೆಬ್ರವರಿ 06 : ವಿಧಾನಮಂಡಲದ ಜಂಟಿ ಅಧಿವೇಶನಕ್ಕೆ ಬಿಜೆಪಿ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ಗೈರಾಗಿದ್ದರು. ಕ್ಷೇತ್ರದ ಜನರ ಜೊತೆ ಅವರು 'ಉರಿ' ಸಿನಿಮಾ ವೀಕ್ಷಣೆ ಮಾಡಿದರು.
ವಿಜಯಪುರ ನಗರ ಕ್ಷೇತ್ರದ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ವಿಜಯಪುರದ ಅಪ್ಸರಾ ಚಿತ್ರಮಂದಿರದಲ್ಲಿ ಬುಧವಾರ 'ಉರಿ' ಸಿನಿಮಾವನ್ನು ನೋಡಿದರು. ಜನರು ಸಹ ಉಚಿತವಾಗಿ ಸಿನಿಮಾ ವೀಕ್ಷಣೆ ಮಾಡಲು ಅವಕಾಶ ಮಾಡಿಕೊಟ್ಟಿದ್ದರು.
'ಉರಿ' ಸಿನಿಮಾ ಚೆನ್ನಾಗಿದೆ ಅಂತಾವ್ರೆ, ಕಲೆಕ್ಷನ್ ಎಷ್ಟು ಗೊತ್ತಾ?
ಮಾಧ್ಯಮಗಳ ಜೊತೆ ಮಾತನಾಡಿದ ಶಾಸಕರು, 'ಇಂದು ಸಿನಿಮಾದ ಕೊನೆಯ ಪ್ರದರ್ಶನವಾದ ಹಿನ್ನಲೆಯಲ್ಲಿ ಜನರಿಗೆ ಉಚಿತವಾಗಿ ವೀಕ್ಷಣೆಗೆ ಅವಕಾಶ ಮಾಡಿಕೊಟ್ಟಿದ್ದೆವು. ನಮಗಾಗಿ ದೇಶದ ಗಡಿಯಲ್ಲಿ ಪ್ರತಿನಿತ್ಯ ಹೋರಾಡುವ ಸೈನಿಕರ ಕಾರ್ಯವನ್ನು ಸಿನಿಮಾದಲ್ಲಿ ತೋರಿಸಲಾಗಿದೆ' ಎಂದರು.

'ಇಂದಿನ ಅಧಿವೇಶನ ಅಷ್ಟೊಂದು ಪ್ರಾಮುಖ್ಯತೆಯನ್ನು ಹೊಂದಿರಲಿಲ್ಲ. ಗುರುವಾರ ಮುಖ್ಯದಿನವಾಗಿದೆ, ಅಂದು ಸದನದಲ್ಲಿ ನಾನು ಪಾಲ್ಗೊಳ್ಳುತ್ತೇನೆ. ಅಧಿವೇಶಕ್ಕೆ ಗೈರಾದ ಬಿಜೆಪಿ ಶಾಸಕರು ನನ್ನ ಹಾಗೆ ಯಾವುದೋ ಕೆಲಸದಲ್ಲಿರಬೇಕು. ನಮ್ಮಲ್ಲಿ ಯಾವುದೇ ಅತೃಪ್ತಿ ಇಲ್ಲ' ಎಂದು ಸ್ಪಷ್ಟಪಡಿಸಿದರು.
ಫೆ.8ರ ಶುಕ್ರವಾರ ಹಣಕಾಸು ಸಚಿವರೂ ಆಗಿರುವ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಬಜೆಟ್ ಮಂಡನೆ ಮಾಡಲಿದ್ದಾರೆ.












Click it and Unblock the Notifications