Vijayapura Earthquake: ನಿರಂತರ ಮಳೆಯ ನಡುವೆಯೇ ವಿಜಯಪುರ ಜಿಲ್ಲೆಯಲ್ಲಿ ಭೂಕಂಪ- ಆತಂಕದಲ್ಲಿ ಜನರು
ಬೆಂಗಳೂರು, ಜುಲೈ 25: ವಿಜಯಪುರ ಜಿಲ್ಲೆಯಲ್ಲಿ ಮಂಗಳವಾರ 2.4 ತೀವ್ರತೆಯ ಭೂಕಂಪ ಸಂಭವಿಸಿದೆ ಎಂದು ಕರ್ನಾಟಕ ರಾಜ್ಯ ನೈಸರ್ಗಿಕ ವಿಕೋಪ ಉಸ್ತುವಾರಿ ಕೇಂದ್ರ (ಕೆಎಸ್ಎನ್ಡಿಎಂಸಿ) ತಿಳಿಸಿದೆ.
ಬಸವನ ಬಾಗೇವಾಡಿ ತಾಲೂಕಿನ ಮನಗೂಳಿಯಿಂದ ಆಗ್ನೇಯಕ್ಕೆ 2.9 ಕಿ.ಮೀ ದೂರದಲ್ಲಿ ಭೂಕಂಪನವಾಗಿದೆ. ಬೆಳಗ್ಗೆ 09:55 ಕ್ಕೆ ಇದು ಸಂಭವಿಸಿದೆ ಎಂದು ಕೆಎಸ್ಎನ್ಡಿಎಂಸಿ ಹೇಳಿಕೆಯಲ್ಲಿ ತಿಳಿಸಿದೆ.

ಭೂಕಂಪನದ 'ಸೆಸ್ಮಿಕ್ ಇಂಟೆನ್ಸಿಟಿ ಮ್ಯಾಪ್' ಪ್ರಕಾರ, ತೀವ್ರತೆಯು ತುಂಬಾ ಕಡಿಮೆಯಾಗಿದೆ. ಭೂಕಂಪವಾದ ಸ್ಥಳದಿಂದ 15-20 ಕಿಮೀ ರೇಡಿಯಲ್ ದೂರದವರೆಗೆ ಕಂಪನ ಹರಡಿರಬಹುದುಎಂದು ಹೇಳಲಾಗಿದೆ.
'ಈ ರೀತಿಯ ಭೂಕಂಪವು ಜನರಿಗೆ ಯಾವುದೇ ಹಾನಿಯನ್ನು ಉಂಟುಮಾಡುವುದಿಲ್ಲ. ಕಂಪನಗಳು ಕಂಡುಬಂದರೂ, ತೀವ್ರತೆಯು ತುಂಬಾ ಕಡಿಮೆಯಾಗಿದೆ. ಜನರು ಆತಂಕ ಪಡುವ ಅವಶ್ಯತೆಯಲ್ಲ' ಎಂದು ಕೆಎಸ್ಎನ್ಡಿಎಂಸಿ ಹೇಳಿದೆ.
ವಿಜಯಪುರದಲ್ಲಿ ನಿರಂತರ ಮಳೆ
ಕಲಬುರಗಿ, ಬೀದರ್, ಯಾದಗಿರಿ ಮತ್ತು ವಿಜಯಪುರ ಸೇರಿ ನಾಲ್ಕು ಜಿಲ್ಲೆಗಳಲ್ಲಿ ಮುಂದಿನ ಕೆಲವು ದಿನಗಳಲ್ಲಿ ಭಾರಿ ಮಳೆಯಾಗುವ ನಿರೀಕ್ಷೆಯಿರುವುದರಿಂದ ಸರ್ಕಾರ ಕಟ್ಟೆಚ್ಚರ ವಹಿಸಿದೆ.

ಕಳೆದ ಕೆಲ ದಿನಗಳಿಂದ ವಿಜಯಪುರದಲ್ಲಿ ನಿರಂತರ ಮಳೆ ಬೀಳುತ್ತಿದೆ. ಉತ್ತರ ಒಳನಾಡಿನ ಕರ್ನಾಟಕದಲ್ಲಿ ವಾಡಿಕೆಗಿಂತ ಶೇ.170ರಷ್ಟು ಹೆಚ್ಚು ಮಳೆಯಾಗಿದೆ.
ಕಲಬುರಗಿ, ಯಾದಗಿರಿ, ಬೀದರ್, ಬೆಳಗಾವಿ, ಬಾಗಲಕೋಟೆ, ವಿಜಯಪುರ, ಗದಗ ಜಿಲ್ಲೆಗಳಲ್ಲಿ ಭಾರಿ ಮಳೆಯಾಗುತ್ತಿದೆ. ಜುಲೈ 28 ರವರೆಗೆ ಉತ್ತಮ ಮಳೆಯಾಗಲಿದೆ ಎಂದು ಹವಾಮಾನ ಇಲಾಖೆ ಮುನ್ಸೂಚನೆ ನೀಡಿದ್ದು, ಮುಂದಿನ ನಾಲ್ಕು ದಿನಗಳು ಮಹತ್ವದ್ದಾಗಿವೆ ಎಂದು ತಿಳಿಸಿದೆ.
ಮಹಾರಾಷ್ಟ್ರದ ಉಜ್ಜನಿ ಅಣೆಕಟ್ಟಿನಿಂದ ನೀರು ಬಿಟ್ಟರೆ, ಭೀಮಾ ಜಲಾನಯನ ಪ್ರದೇಶವು ಜಲಾವೃತವಾಗುವ ಅಪಾಯವಿದೆ. ಈ ಪ್ರದೇಶವನ್ನು ಹೈ ಅಲರ್ಟ್ನಲ್ಲಿ ಇರಿಸಲಾಗಿದೆ ಎಂದು ಸರ್ಕಾರ ಹೇಳಿದೆ.

ಮಲಪ್ರಭಾ, ಘಟಪ್ರಭಾ, ಆಲಮಟ್ಟಿ, ನಾರಾಯಣಪುರ ಮತ್ತು ತುಂಗಭದ್ರಾ ಜಲಾಶಯಗಳಲ್ಲಿ 2.61 ಲಕ್ಷ ಕ್ಯೂಸೆಕ್ನಷ್ಟು ಒಳಹರಿವು ದಾಖಲಾಗಿದೆ. ಆದರೆ, ಬೆಂಗಳೂರು, ಬೆಂಗಳೂರು ಗ್ರಾಮಾಂತರ, ರಾಮನಗರ, ಕೋಲಾರ, ಚಾಮರಾಜನಗರ ಮತ್ತು ಮಂಡ್ಯ ಜಿಲ್ಲೆಗಳಲ್ಲಿ ಇದುವರೆಗೆ ಮಳೆ ಕೊರತೆಯಾಗಿದೆ.
ಕಳೆದ ಒಂದು ವಾರದಲ್ಲಿ ಕರಾವಳಿ ಕರ್ನಾಟಕ, ಮಲೆನಾಡು ಮತ್ತು ಉತ್ತರ ಒಳನಾಡಿನಲ್ಲಿ ಉತ್ತಮ ಮಳೆಯಾಗಿದ್ದು, ರಾಜ್ಯದಲ್ಲಿ ಒಟ್ಟಾರೆ ಶೇ.80ರಷ್ಟು ಮಳೆಯಾಗಿದೆ ಎಂದು ಸಚಿವ ಕೃಷ್ಣಾ ಬೈರೇಗೌಡ ತಿಳಿಸಿದ್ದಾರೆ. ಜೂನ್ 1 ರಿಂದ ಜುಲೈ 24 ರವರೆಗೆ ಭಾರೀ ಮಳೆಯಿಂದಾಗಿ 27 ಜನರು ಸಾವನ್ನಪ್ಪಿದ್ದಾರೆ. ಹೆಚ್ಚಿನ ಸಾವುಗಳು ಸಿಡಿಲಿನ ಕಾರಣ ಸಂಭವಿಸಿವೆ ಎಂದು ಅವರು ಹೇಳಿದ್ದಾರೆ.
ಜೂನ್ನಲ್ಲಿ ಶೇ.56 ರಷ್ಟು ಮಳೆ ಕೊರತೆಯಾಗಿದ್ದರೆ, ಜುಲೈನಲ್ಲಿ ರಾಜ್ಯದಲ್ಲಿ ವಾಡಿಕೆಗಿಂತ ಹೆಚ್ಚು ಮಳೆಯಾಗಿದೆ. ಮಳೆ ಕೊರತೆ ಈಗ ಶೇ.14ಕ್ಕೆ ಕುಸಿದಿದೆ. ನಾವು ಜಿಲ್ಲಾಧಿಕಾರಿಗಳೊಂದಿಗೆ ನಿರಂತರವಾಗಿ ಸಂಪರ್ಕದಲ್ಲಿದ್ದೇವೆ ಮತ್ತು ಹೆಚ್ಚು ಜಾಗರೂಕರಾಗಿರಲು ಅವರಿಗೆ ತಿಳಿಸಿದ್ದೇವೆ' ಎಂದು ಅವರು ತಿಳಿಸಿದ್ದಾರೆ.












Click it and Unblock the Notifications