ಕುಂದಾಪುರದಲ್ಲಿ ಡೆತ್ ನೋಟ್ ಬರೆದು ಯುವಕ ಆತ್ಮಹತ್ಯೆಗೆ ಶರಣು: ಸಾವಿಗೆ ಕಾರಣ ಉಗ್ರ ಸಂಘಟನೆ?
ಉಡುಪಿ, ಅಕ್ಟೋಬರ್. 17: ಕುಂದಾಪುರದಲ್ಲಿ ನಡೆದ ಯುವಕನೋರ್ವನ ಆತ್ಮಹತ್ಯೆ ಪ್ರಕರಣ ಈಗ ಭಾರೀ ಚರ್ಚೆಗೆ ಗ್ರಾಸವಾಗಿದೆ. ಅದಕ್ಕೆ ಕಾರಣ ಯುವಕ ಬರೆದಿಟ್ಟ ಡೆತ್ ನೋಟ್ . ಅದರಲ್ಲಿ ಯುವಕ ತನ್ನ ಸಾವಿಗೆ ಉಗ್ರ ಸಂಘಟನೆ ಕಾರಣ ಎಂದು ಬರೆದಿರುವುದನ್ನು ಪೊಲೀಸ್ ಇಲಾಖೆ ಗಂಭೀರವಾಗಿ ಪರಿಗಣಿಸಿದೆ.
ಉಗ್ರ ಸಂಘಟನೆಯೊಂದರಿಂದ ಜೀವ ಭಯವಿದೆ. ಮನೆಯವರನ್ನು ಉಳಿಸಲು ಸಾವು ಅನಿವಾರ್ಯ ಎಂದು ಬರೆದು ಕುಂದಾಪುರ ತಾಲೂಕಿನ ಕೋಟೇಶ್ವರ ಗ್ರಾಮದ ನಿವಾಸಿ ವಿವೇಕ್(23) ಮನೆಯಲ್ಲಿ ನೇಣು ಬಿಗಿದು ಆತ್ಮಹತ್ಯೆ ಮಾಡಿಕೊಂಡಿದ್ದ . ಸೋಮವಾರ ಸಂಜೆ ಈ ಘಟನೆ ನಡೆದಿದೆ.
ಆದರೆ ಈ ಆತ್ಮಹತ್ಯಾ ಪ್ರಕರಣಕ್ಕೆ ವಿವೇಕ್ ಬರೆದಿರುವ ಡೆತ್ ನೋಟ್ ಮಹತ್ವದ ತಿರುವು ನೀಡಿದೆ. ಪದವಿ ಮುಗಿಸಿರುವ ವಿವೇಕ್ ಉಡುಪಿಯಲ್ಲಿ ಉದ್ಯೋಗಕ್ಕೆ ಸೇರಿಕೊಂಡಿದ್ದ. ತಂದೆ ಉದಯ ಮೊಗವೀರ ಮೀನುಗಾರಿಕಾ ವೃತ್ತಿಯಲ್ಲಿದ್ದರೆ, ತಾಯಿ ಕಾವೇರಿ ಬೀಡಿ ಕಟ್ಟಿ ಮನೆ ನಿರ್ವಹಣೆ ಮಾಡುತ್ತಿದ್ದರು.
ಇತ್ತೀಚೆಗಷ್ಟೆ ವಿವೇಕ್ ಉದ್ಯೋಗಕ್ಕಾಗಿ ಬೆಂಗಳೂರಿಗೆ ಹೋಗಲು ನಿರ್ಧರಿಸಿದ್ದ. ಆದರೆ ಸೋಮವಾರ ಸಂಜೆ ಮನೆಯಲ್ಲಿ ನೇಣು ಬಿಗಿದು ಆತ್ಮಹತ್ಯೆ ಮಾಡಿಕೊಂಡಿದ್ದಾನೆ. ಮುಂದೆ ಓದಿ..

ಸಾವಿಗೆ ಉಗ್ರ ಸಂಘಟನೆ ಕಾರಣ
ಈ ನಡುವೆ ವಿವೇಕ್ ಆತ್ಮಹತ್ಯೆಗೆ ಶರಣಾಗುವ ಮೊದಲು 3 ಪುಟಗಳ ಡೆತ್ ನೋಟ್ ಬರೆದಿದ್ದು, ಅದು ಪೊಲೀಸರಿಗೆ ದೊರೆತಿದೆ. ಪತ್ರದಲ್ಲಿ ವಿವೇಕ್ ಉಗ್ರ ಸಂಘಟನೆಯ ಬಗ್ಗೆ ಉಲ್ಲೇಖಿಸಿದ್ದು ನನ್ನ ಸಾವಿಗೆ ಉಗ್ರ ಸಂಘಟನೆ ಕಾರಣ ಎಂದು ಬರೆದಿದ್ದಾನೆ.

ಎಲ್ಲಾ ಜಿಲ್ಲೆಗಳಲ್ಲಿ ಅಸ್ತಿತ್ವವಿದೆ ಸಂಘಟನೆ
"ಮನೆ ಮಂದಿಗೂ ಆ ಉಗ್ರ ಸಂಘಟನೆಯಿದ ಅಪಾಯವಾಗುವ ಸಾಧ್ಯತೆಯಿದ್ದು, ಈ ಹಿಂದೆ ಅವರಿಂದ ನನಗೆ ಕೊಲೆ ಬೆದರಿಕೆಯಿತ್ತು. ಎರಡು ವರ್ಷದ ಹಿಂದೆ ಆಕಸ್ಮಿಕವಾಗಿ ಪರಿಚಯವಾದ ಸಂಘಟನೆ ಅದಾಗಿದ್ದು, ರಾಜ್ಯದ ಎಲ್ಲಾ ಜಿಲ್ಲೆಗಳಲ್ಲಿ ಅವರ ಅಸ್ತಿತ್ವವಿದೆ" ಎಂದು ವಿವೇಕ್ ಡೆತ್ ನೋಟ್ ನಲ್ಲಿ ಹೇಳಿದ್ದಾನೆ.

ಸಂಘಟನೆಗೆ ರಾಜಕೀಯ ಬೆಂಬಲವಿದೆ
"ಮೊಬೈಲ್ ಬಳಸದ ಆ ಸಂಘಟನೆ ಬಗ್ಗೆ ಅನುಮಾನ ಬಂದು ಹಲವು ಮಾಹಿತಿ ಕಲೆ ಹಾಕಿದ್ದು, ಅದು ಅವರಿಗೆ ತಿಳಿದು ತನಗೆ ಕೊಲೆ ಬೆದರಿಕೆ ಹಾಕಿದ್ದರು. ಅವರಿಗೆ ರಾಜಕೀಯ ಬೆಂಬಲವೂ ಇದೆ. ನಾನು ಸಂಗ್ರಹಿಸಿದ ದಾಖಲೆಗಳು, ಫೋಟೋಗಳನ್ನು ಪೊಲೀಸರಿಗೆ, ಮಾಧ್ಯಮಕ್ಕೆ ನೀಡುವ ಆಲೋಚನೆ ಇತ್ತು. ಆದರೆ ಆಗಸ್ಟ್ ತಿಂಗಳಿನಲ್ಲಿ ಆ ಮೊಬೈಲ್ ಕಳೆದುಹೋಗಿದೆ" ಎಂದು ಡೆತ್ ನೋಟ್ ನಲ್ಲಿ ವಿವೇಕ್ ತಿಳಿಸಿದ್ದಾರೆ.

ನಾಲ್ಕು ವಿಶೇಷ ತಂಡ ರಚನೆ
"ಆ ವಿಚಾರ ಗೊತ್ತಾಗಿ ಉಗ್ರ ಸಂಘಟನೆಯ ಸದಸ್ಯರು ತನಗೆ ಬಹಳಷ್ಟು ಹಿಂಸೆ ನೀಡಿದ್ದಾರೆ. ಅವರು ನನ್ನ ಕೊಲೆ ಮಾಡದೇ ಬಿಡುವುದಿಲ್ಲ. ಅವರಿಂದ ನನ್ನ ಮನೆಯವರನ್ನು ಉಳಿಸಿಕೊಳ್ಳಲು ನನ್ನ ಸಾವು ಅವಿವಾರ್ಯ ಆ ಕಾರಣ ಆತ್ಮಹತ್ಯೆ ಮಾಡಿಕೊಳ್ಳುತ್ತಿದ್ದೇನೆ" ಎಂದು ವಿವೇಕ್ ಡೆತ್ ನೋಟ್ ನಲ್ಲಿ ಬರೆದಿದ್ದಾನೆ.
ಈ ಮೂರು ಪುಟಗಳ ಡೆತ್ನೋಟ್ ನಲ್ಲಿರುವ ವಿಚಾರವನ್ನು ಪೊಲೀಸರು ಗಂಭೀರವಾಗಿ ಪರಿಗಣಿಸಿದ್ದಾರೆ. ಪತ್ರದಲ್ಲಿ ಉಲ್ಲೇಖಿಸಿರುವ ಉಗ್ರ ಸಂಘಟನೆ ಬಗ್ಗೆ ಪೊಲೀಸರು ತನಿಖೆ ಆರಂಭಿಸಿದ್ದಾರೆ. ಪ್ರಕರಣ ಭೇದಿಸಲು ನಾಲ್ಕು ವಿಶೇಷ ತಂಡ ರಚನೆ ಮಾಡಲಾಗಿದೆ.












Click it and Unblock the Notifications