ಮಲ್ಪೆ ಮೀನು ವ್ಯಾಪಾರಿ ಕೊಲೆ ಯತ್ನ ಪ್ರಕರಣ; ಐವರ ಬಂಧನ
ಉಡುಪಿ, ಜೂನ್ 11: ಮಲ್ಪೆ ಮೀನುಗಾರಿಕಾ ಬಂದರಿನಲ್ಲಿ ಮೀನು ವ್ಯಾಪಾರಿ ಕೆ.ಮಹಮ್ಮದ್ ರಿಯಾಝ್ ಕೊಲೆಯತ್ನ ಪ್ರಕರಣಕ್ಕೆ ಸಂಬಂಧಿಸಿದಂತೆ ಉಡುಪಿ ಪೊಲೀಸರು 5 ಮಂದಿಯನ್ನು ಬೆಂಗಳೂರಿನಲ್ಲಿ ಬಂಧಿಸಿದ್ದಾರೆ.
ಬಂಧಿತರನ್ನು ಫರಂಗಿಪೇಟೆಯ ಇಸ್ಮಾಯಿಲ್ (45), ಆತನ ಸಹೋದರ ಮುಹಮ್ಮದ್ ಗೌಸ್ (35), ಮುಹಮ್ಮದ್ ಕೈಸರ್ (60), ಮುನೀರ್ (25), ಅನ್ವರ್ (25) ಎಂದು ಗುರುತಿಸಲಾಗಿದೆ. ಬಂಧಿತರ ಪೈಕಿ ಇಸ್ಮಾಯಿಲ್ ಕೊಲೆ ಯತ್ನದ ಪ್ರಮುಖ ಆರೋಪಿಯಾಗಿದ್ದಾನೆ. ಈತ ರಿಯಾಝ್ ಕೊಲೆಗೆ ಸುಪಾರಿ ನೀಡಿದ್ದ ಎನ್ನಲಾಗಿದೆ.
ಜೂನ್ 7 ರಂದು ಮಲ್ಪೆ ಬಂದರಿಗೆ ಮೀನಿನ ವ್ಯಾಪಾರಕ್ಕೆ ಬಂದಿದ್ದ ಮಹಮ್ಮದ್ ರಿಯಾಝ್ ಮೇಲೆ ನಾಲ್ವರು ದುಷ್ಕರ್ಮಿಗಳು ಮಾರಕಾಸ್ತ್ರಗಳಿಂದ ದಾಳಿ ನಡೆಸಿದ್ದರು.

ಮೀನು ವ್ಯಾಪಾರಕ್ಕೆ ಮುಂಜಾನೆ 4:30ರ ಸಮಯದಲ್ಲಿ ಇತರ ಮೂವರೊಂದಿಗೆ ಎಂದಿನಂತೆ ಪಿಕಪ್ ವಾಹನದಲ್ಲಿ ರಿಯಾಜ್ ಉಡುಪಿ ಮಲ್ಪೆ ಮೀನುಗಾರಿಕಾ ಬಂದರಿಗೆ ಬಂದಿದ್ದರು. ಇತರ ಮೂವರು ಚಹಾ ಕುಡಿಯಲು ಇಳಿದು ಹೋಗಿದ್ದ ಸಂದರ್ಭ ರಿಯಾಝ್ ವಾಹನದಲ್ಲೇ ನಿದ್ರೆಗೆ ಜಾರಿದ್ದರು. ಇದೇ ಸಮಯದಲ್ಲಿ ಅವರ ವಾಹನವನ್ನು ಹಿಂಬಾಲಿಕೊಂಡು ಬಂದಿದ್ದ ಕಾರಿನಲ್ಲಿದ್ದ ನಾಲ್ವರು ರಿಯಾಝ್ ಮೇಲೆ ಮಾರಕಾಸ್ತ್ರಗಳಿಂದ ದಾಳಿ ನಡೆಸಿ ಪರಾರಿಯಾಗಿದ್ದರು. ಸ್ಥಳೀಯರು ರಿಯಾಜ್ ಅವರನ್ನು ಮಣಿಪಾಲದ ಖಾಸಗಿ ಆಸ್ಪತ್ರೆಗೆ ದಾಖಲು ಮಾಡಿದ್ದರು.












Click it and Unblock the Notifications