ಯೇಸುದಾಸ್ ರಿಂದ ಕೊಲ್ಲೂರಿನಲ್ಲಿ ಚಂಡಿಕಾ ಹೋಮ, ಜನ್ಮ ದಿನಾಚರಣೆ
ಉಡುಪಿ, ಜನವರಿ 10: ಖ್ಯಾತ ಸಂಗೀತಗಾರ ಕೆ.ಜೆ.ಯೇಸುದಾಸ್ ಅವರು ತಮ್ಮ 77ನೇ ಹುಟ್ಟುಹಬ್ಬವನ್ನು ಮಂಗಳವಾರ ಕೊಲ್ಲೂರಿನ ಮೂಕಾಂಬಿಕಾ ದೇವಳದಲ್ಲಿ ದೇವಿಗೆ ಚಂಡಿಕಾ ಹೋಮ ನೆರವೇರಿಸುವ ಮೂಲಕ ಆಚರಿಸಿಕೊಂಡರು.
ಪತ್ನಿ ಪ್ರಭಾ ದಾಸ್ ಅವರೊಂದಿಗೆ ಸೋಮವಾರ ಸಂಜೆ ಕೊಲ್ಲೂರಿಗೆ ಆಗಮಿಸಿದ ಅವರು ದೇವರ ದರ್ಶನ ಪಡೆದರು. ತಮ್ಮ ನೆಚ್ಚಿನ ಗಾಯಕ ಯೇಸುದಾಸ್ ಅವರ ಹುಟ್ಟುಹಬ್ಬದ ಆಚರಣೆಗಾಗಿ ಕೇರಳ ಹಾಗೂ ದೇಶದ ವಿವಿಧ ಭಾಗಗಳಿಂದ ಬಂದಿದ್ದ ಸಾವಿರಾರು ಅಭಿಮಾನಿಗಳು ಮುಂಚಿತವಾಗಿ ಬಂದು ಕ್ಷೇತ್ರದಲ್ಲಿ ಜಮಾಯಿಸಿದ್ದರು.[ಡ್ರೆಸ್ ಕೋಡ್ ಹೇಳಿಕೆ ವಿವಾದ: ಯೇಸುದಾಸ್ ವಿರುದ್ಧ ಎಫ್ ಐಆರ್]
1967ನೇ ಇಸವಿಯಿಂದ ಕೊಲ್ಲೂರಿನ ಮೂಕಾಂಬಿಕಾ ದೇವಿಯ ಅನನ್ಯ ಭಕ್ತರಾಗಿರುವ ಅವರು, 1972ರಿಂದ ನಿರಂತರವಾಗಿ, ಪ್ರತಿ ವರ್ಷದ ಜನವರಿ 10ರಂದು ಇಲ್ಲಿಗೆ ಭೇಟಿ ನೀಡಿ, ದೇವಿಗೆ ಚಂಡಿಕಾಹೋಮದ ನಡೆಸಿದ ನಂತರ ಸಂಗೀತ ಸೇವೆಯನ್ನು ಅರ್ಪಿಸುವುದನ್ನು ಪರಿಪಾಠವನ್ನಾಗಿಸಿಕೊಂಡಿದ್ದಾರೆ.[ಯೇಸುದಾಸ್ ದೇಗುಲ ಪ್ರವೇಶ ಆಗ್ರಹಿಸಿ ಧರಣಿ]
ದೇವಳದ ಪ್ರಧಾನ ಅರ್ಚಕ ಗೋವಿಂದ ಅಡಿಗರ ನೇತೃತ್ವದಲ್ಲಿ ಚಂಡಿಕಾ ಹೋಮದ ಧಾರ್ಮಿಕ ವಿಧಿವಿಧಾನ ನೆರವೇರಿತು. ಚಂಡಿಕಾ ಹೋಮಕ್ಕೆ ಪೂರ್ಣಾಹುತಿ ಸಲ್ಲಿಸುವ ಮುನ್ನ ನಡೆದ ಸಂಗೀತ ಕಛೇರಿಯಲ್ಲಿ ಐದಾರು ಮಲೆಯಾಳಂ ಭಕ್ತಿಗೀತೆಗಳು ಹಾಗೂ ಕನ್ನಡದಲ್ಲಿ 'ಗುರುವಿನ ಗುಲಾಮ ನಾಗುವ ತನಕ ದೊರೆಯದಣ್ಣ ಮುಕುತಿ...'ಎಂಬ ಪುರಂದರ ದಾಸರ ಗೀತೆಯನ್ನು ಹಾಡಿ ತಮ್ಮ ಸೇವೆ ಸಲ್ಲಿಸಿದರು.