ಎಸ್ಎಸ್ಎಲ್ಸಿ, ಪಿಯುಸಿ ಪರೀಕ್ಷೆಯಲ್ಲಿ ನಂಬರ್ 1ಇದ್ದ ಉಡುಪಿ ಈಗ ಕೋವಿಡ್ ನಲ್ಲೂ: ಕೃಷ್ಣ,ಕೃಷ್ಣಾ
ಉಡುಪಿ, ಜೂನ್ 2: ಮೇ ಮಾಸಾಂತ್ಯ ಅಥವಾ ಜೂನ್ ಮೊದಲನೇ ವಾರದಲ್ಲಿ ಸಾಮಾನ್ಯವಾಗಿ ಎಸ್ಎಸ್ಎಲ್ಸಿ, ಪಿಯುಸಿ ರಿಸಲ್ಟ್ ಬರುವ ಸಮಯ. ಎಲ್ಲವೂ ಸರಿಯಾಗಿದ್ದರೆ, ಈ ವರ್ಷದಲ್ಲೂ ಅದೇ ಆಗುತ್ತಿತ್ತು.
ಆದರೆ, ಕೊರೊನಾ ಹಾವಳಿಯಿಂದಾಗಿ ಎಸ್ಎಸ್ಎಲ್ಸಿ ಪರೀಕ್ಷೆ ಇನ್ನೂ ಆರಂಭವಾಗಿಲ್ಲ, ಪಿಯುಸಿಯ ಇನ್ನೂ ಒಂದು ವಿಷಯ ಬಾಕಿಯಿದೆ. ಲಾಕ್ ಡೌನ್ ಆರಂಭದ ವೇಳೆ ಮತ್ತು ನಂತರದ ಹಲವು ದಿನಗಳಲ್ಲಿ ಗ್ರೀನ್ ಝೋನ್ ಜಿಲ್ಲೆಗಳೆಲ್ಲಲ್ಲಾ ಈಗ ಕೊರೊನಾ ಸೋಂಕಿತರ ಹಾವಳಿ.
ಅತ್ಯಂತ ಕಟ್ಟುನಿಟ್ಟಿನ ಲಾಕ್ ಡೌನ್ ನಿಯಮದಿಂದ ಸಾರ್ವಜನಿಕ ವಲಯದಲ್ಲಿ ಶಹಬ್ಬಾಸ್ ಪಡೆದುಕೊಂಡಿತ್ತು ಕೃಷ್ಣ ನಗರಿ ಉಡುಪಿಯ ಜಿಲ್ಲಾಡಳಿತ. ಆದರೆ, ಈಗ ಕೊರೊನಾ ಸೋಂಕಿತರ ಸಂಖ್ಯೆ ದಿನದಿಂದ ದಿನಕ್ಕೆ ನಾಗಾಲೋಟದಲ್ಲಿ ಏರಿಕೆಯಾಗುತ್ತಿದೆ.
ಜೂನ್ ಎರಡರಂದು ಈವರೆಗಿನ ಅತಿಹೆಚ್ಚು 388 ಪಾಸಿಟೀವ್ ಕೇಸ್ ಗಳು ರಾಜ್ಯದಲ್ಲಿ ದಾಖಲಾಗಿದೆ. ಅದರಲ್ಲಿ ಉಡುಪಿ ಜಿಲ್ಲೆಯೊಂದರಲ್ಲೇ ಬರೋಬ್ಬರಿ 150 ಕೇಸ್. ಜಿಲ್ಲೆಯಲ್ಲಿ ಏರುತ್ತಿರುವ ಸೋಂಕಿತರ ಸಂಖ್ಯೆಯಿಂದಾಗಿ ಜಿಲ್ಲೆಯ ಜನರಲ್ಲಿ ಆತಂಕ ಮನೆ ಮಾಡಿದೆ.

ಕೃಷ್ಣ ನಗರಿ ಉಡುಪಿ
ಮೂರೇ ಮೂರು ಸೋಂಕಿತರು ಹೊಂದಿದ್ದ ಉಡುಪಿ ಜಿಲ್ಲೆಯಲ್ಲಿ, ಆ ಮೂವರೂ ಗುಣಮುಖರಾಗಿ ಮನೆ ಸೇರಿದ್ದರು. ಆದರೆ, ಯಾವಾಗ ಅಂತರ್ ರಾಜ್ಯ ಪ್ರವಾಸಕ್ಕೆ ಸರಕಾರದಿಂದ ಅನುಮತಿ ಸಿಕ್ಕಿತ್ತೋ, ರಾಜ್ಯದ ಇತರ ಭಾಗಗಳಂತೆ ಉಡುಪಿಯಲ್ಲಿ ಸೋಂಕಿತರ ಪ್ರಮಾಣ ವಿಪರೀತ ಎನ್ನುವಂತೆ ಮೇಲೇರಲಾರಂಭಿಸಿತು.

ಎಸ್ಎಸ್ಎಲ್ಸಿ , ಪಿಯುಸಿ ರಿಸಲ್ಟ್
ರಾಜ್ಯದ ಎಸ್ಎಸ್ಎಲ್ಸಿ , ಪಿಯುಸಿ ರಿಸಲ್ಟ್ ಟೇಬಲ್ ನಲ್ಲಿ ಯಾವತ್ತೂ ಮೊದಲೆರಡು ಸ್ಥಾನವನ್ನು ಸದಾ ಉಳಿಸಿಕೊಂಡು ಬರುತ್ತಿರುವ ಉಡುಪಿ ಜಿಲ್ಲೆ, ಈಗ ಕೋವಿಡ್ ಪಟ್ಟಿಯಲ್ಲೂ ಮೊದಲ ಸ್ಥಾನದಲ್ಲಿರುವುದು ವಿಪರ್ಯಾಸ. ಕಲಬುರಗಿ ಜಿಲ್ಲೆಯನ್ನು ಹಿಂದಕ್ಕೆ ತಳ್ಳಿ ಉಡುಪಿ ಮೊದಲ ಸ್ಥಾನಕ್ಕೇರಿದ ಕುಖ್ಯಾತಿಗೆ ಜಾರಿದೆ.

ಮಹಾರಾಷ್ಟ್ರದಿಂದ ಜನರು ಉಡುಪಿ ಜಿಲ್ಲೆಗೆ
ಮಹಾರಾಷ್ಟ್ರದಿಂದ ಜನರು ಉಡುಪಿ ಜಿಲ್ಲೆಗೆ ಆಗಮಿಸಿದ ನಂತರ ಕೊರೊನಾ ಹಾವಳಿ ಜಾಸ್ತಿಯಾಗಿದೆ. ಜೂನ್ ಒಂದರಂದು 73, ಎರಡರಂದು 150 ಪಾಸಿಟೀವ್ ಕೇಸ್ ದಾಖಲಾಗಿದೆ. ಆ ಮೂಲಕ, 410 ಕೇಸ್ ಜಿಲ್ಲೆಯಲ್ಲಿ ದಾಖಲಾಗುವ ಮೂಲಕ, ಕೋವಿಡ್ ಪಟ್ಟಿಯಲ್ಲಿ ಉಡುಪಿ ಅಗ್ರಸ್ಥಾನಕ್ಕೇರಿದೆ. ಇದರಲ್ಲಿ ಬಿಡುಗಡೆಯಾದವರ ಸಂಖ್ಯೆ 63, ಸಕ್ರಿಯ ಪ್ರಕರಣ 346, ಮೃತ ಪಟ್ಟವರು ಒಂದು.

ಒಟ್ಟು ಕೋವಿಡ್ ಪಟ್ಟಿ
ರಾಜ್ಯದ ಒಟ್ಟು ಕೋವಿಡ್ ಪಟ್ಟಿ (ಜೂನ್ ಎರಡರ ಪ್ರಕಾರ) ಇಂತಿದೆ.
ಒಟ್ಟು ಸೋಂಕಿತರು: 3,796
ಒಟ್ಟು ಬಿಡುಗಡೆಯಾದವರ ಸಂಖ್ಯೆ: 1,403
ಒಟ್ಟು ಸಕ್ರಿಯ ಪ್ರಕರಣ: 2,339
ಮೃತರಾದವರು: 52












Click it and Unblock the Notifications