'ಒಂದೇ ತಟ್ಟೆಯಲ್ಲಿ ಊಟ ಮಾಡುತ್ತಿದ್ದೆವು': ಹಿಜಬ್ ಹೋರಾಟಗಾರ್ತಿಯ ಆತ್ಮವಿಮರ್ಶೆ
ಉಡುಪಿ, ಫೆ 10: ಜಿಲ್ಲೆಯಲ್ಲಿ ಆರಂಭವಾದ ಹಿಜಾಬ್ ಕಿಡಿ ರಾಜ್ಯದೆಲ್ಲಡೆ ಆವರಿಸುತ್ತಿದೆ, ಬುಧವಾರದಂದು (ಫೆ 9) ಏಕ ಸದಸ್ಯ ಪೀಠದಿಂದ ತೀರ್ಪು ಬರಬಹುದು ಎನ್ನುವ ನಿರೀಕ್ಷೆ ಹುಸಿಯಾಗಿದ್ದು, ತ್ರಿಸದಸ್ಯ ಪೀಠಕ್ಕೆ ವರ್ಗಾವಣೆಯಾಗಿದೆ.
ಮೂರು ದಿನಗಳ ರಜೆ ಘೋಷಣೆ ವಿಸ್ತರಣೆಯಾಗುವ ಸಾಧ್ಯತೆಯಿದ್ದು ಈ ಬಗ್ಗೆ ಶಿಕ್ಷಣ ಸಚಿವ ನಾಗೇಶ್ ಅವರು ಸುಳಿವನ್ನು ನೀಡಿದ್ದಾರೆ. ಹಿಜಾಬ್ ಹೋರಾಟದ ಕಿಚ್ಚು ಸ್ವಲ್ಪಮಟ್ಟಿಗೆ ಕಮ್ಮಿಯಾಗುವ ಲಕ್ಷಣಗಳು ಕಾಣಿಸುತ್ತಿವೆ. ಮುಂಜಾಗ್ರತಾ ಕ್ರಮವಾಗಿ ಬೆಂಗಳೂರಿನಲ್ಲಿ ಹದಿನಾಲ್ಕು ದಿನಗಳ ನಿಷೇಧಾಜ್ಞೆ ಜಾರಿಯಲ್ಲಿದೆ.
ಮಂಡ್ಯದಲ್ಲಿ ಜೈಶ್ರೀರಾಮ್ ಘೋಷಣೆಗೆ ಪ್ರತಿಯಾಗಿ ಅಲ್ಲಾಹು ಅಕ್ಬರ್ ಎಂದು ಘೋಷಣೆ ಕೂಗಿದ್ದ ಮುಸ್ಕಾನ್ ಎನ್ನುವ ವಿದ್ಯಾರ್ಥಿನಿಗೆ 'ಐಕಾನ್ ಲೇಡಿ ಆಫ್ ಹಿಜಾಬ್' ಎನ್ನುವ ಬಿರುದನ್ನು ಕೆಲವು ಸಂಘಟನೆಗಳು ನೀಡಿವೆ. ಈ ವಿದ್ಯಾರ್ಥಿನಿಗೆ ಐದು ಲಕ್ಷ ರೂಪಾಯಿಗಳ ಬಹುಮಾನವನ್ನೂ ಘೋಷಣೆ ಮಾಡಲಾಗಿತ್ತು.
ಇವೆಲ್ಲದರ ನಡುವೆ, ಹಿಜಾಬ್ ಹಕ್ಕಿಗಾಗಿ ಹೋರಾಟ ಮಾಡುತ್ತಿರುವ ಆರು ವಿದ್ಯಾರ್ಥಿನಿಗಳು, ಹಿಜಾಬ್ ಹಾಕದೇ ಓಡಾಡುತ್ತಿರುವ ಫೋಟೋಗಳು ಸಾಮಾಜಿಕ ತಾಣದಲ್ಲಿ ವೈರಲ್ ಆಗುತ್ತಿದೆ. ಈ ವಿದ್ಯಾರ್ಥಿನಿಗಳ ಪೈಕಿ ಕೆಲವರು ಈಗ 'ನೋವಾಗುತ್ತಿದೆ' ಎನ್ನುವ ಆತ್ಮವಿಮರ್ಶೆಯ ಮಾತನ್ನಾಡುತ್ತಿದ್ದಾರೆ.

ಗಂಭೀರ ಆರೋಪವನ್ನು ಮಾಡಿದ್ದ ಉಡುಪಿ ಶಾಸಕ ರಘುಪತಿ ಭಟ್
"ಹೈಕೋರ್ಟ್ ತೀರ್ಪು ಏನು ನೀಡುತ್ತೋ, ಅದರ ಪ್ರಕಾರ ನಾವು ನಡೆಯಬೇಕಾಗುತ್ತದೆ. ಹಿಜಾಬ್ ಹೋರಾಟ ಮಾಡುತ್ತಿರುವ ವಿದ್ಯಾರ್ಥಿನಿಗಳಿಗೆ ಗೌಪ್ಯ ಸ್ಥಳಗಳಲ್ಲಿ ಟ್ರೈನಿಂಗ್ ಅನ್ನು ನೀಡಲಾಗಿತ್ತು. ಮಕ್ಕಳೆಲ್ಲರೂ ಸಮಾನರು, ಕ್ಲಾಸ್ ರೂಂನಲ್ಲೇ ಹಿಜಾಬ್ ಬೇಕು ಎನ್ನುವುದು ಯಾಕೆ? ಇದನ್ನು ಆರಂಭಿಸಿದವರು ಯಾರು? ಆರು ಹೆಣ್ಣು ಮಕ್ಕಳಿಗೆ ಧಾರ್ಮಿಕ ಟ್ರೈನಿಂಗ್ ಅನ್ನು ಕೊಟ್ಟು ತಯಾರು ಮಾಡಲಾಗಿದೆ. ಟ್ರೈನಿಂಗ್ ಮುಗಿಸಿ ಹೊರಬಂದಾಗ, ಹಿಂದೂ ಹೆಣ್ಣೂ ಮಕ್ಕಳನ್ನು ಕಂಡರೆ ಆಕ್ರೋಶ ಬರುವ ರೀತಿ ಅವರಿಗೆ ತರಬೇತಿ ನೀಡಲಾಗಿದೆ"ಎನ್ನುವ ಗಂಭೀರ ಆರೋಪವನ್ನು ಉಡುಪಿ ಶಾಸಕ ರಘುಪತಿ ಭಟ್ ಮಾಡಿದ್ದರು.

ಹಿಜಾಬ್ ರಿಟ್ ಅರ್ಜಿಗೆ ಸಹಿಹಾಕಿದ್ದ ವಿದ್ಯಾರ್ಥಿನಿ ಶಿಫಾ
ಹಿಜಾಬ್ ರಿಟ್ ಅರ್ಜಿಗೆ ಸಹಿಹಾಕಿದ್ದ ವಿದ್ಯಾರ್ಥಿನಿ ಶಿಫಾ ಮಾತನಾಡುತ್ತಾ, "ಅವರೆಲ್ಲಾ ನಮ್ಮ ಫ್ರೆಂಡ್ಸ್, ನಾವೆಲ್ಲಾ ಒಂದೇ ತಟ್ಟೆಯಲ್ಲಿ ಊಟ ಮಾಡಿಕೊಂಡು, ಸಾಮೂಹಿಕ ಭೋಜನವನ್ನು ಮಾಡಿಕೊಂಡಿದ್ದೆವು. ಇವರೆಲ್ಲಾ ಈಗ ನಮ್ಮ ವಿರೋಧಿಗಳು ಎಂದಾಗ ಮನಸ್ಸಿಗೆ ತುಂಬಾ ನೋವಾಗುತ್ತದೆ. ಇಂತಹ ದಿನಗಳು ನಮ್ಮ ಕಾಲೇಜು ಜೀವನದಲ್ಲಿ ಎದುರಿಸಬೇಕಾಗುತ್ತದೆ ಎಂದು ನಾವು ಕನಸು ಮನಸಿನಲ್ಲೂ ಯೋಚಿಸಿರಲಿಲ್ಲ" ಎಂದು ಶಿಫಾ ವಿಷಾದ ವ್ಯಕ್ತ ಪಡಿಸಿದ್ದಾರೆ.

ನಮ್ಮವರೇ ನಮ್ಮ ವಿರುದ್ದ ಇದ್ದಾರೆ ಎಂದು ನಾವು ನಂಬಿರಲಿಲ್ಲ
"ನಮ್ಮವರೇ ನಮ್ಮ ವಿರುದ್ದ ಇದ್ದಾರೆ ಎಂದು ನಾವು ನಂಬಿರಲಿಲ್ಲ, ಅವತ್ತು ಶಾಸಕ ರಘುಪತಿ ಭಟ್ ಅವರು ಅಂತಹ ಹೇಳಿಕೆಯನ್ನು ನೀಡಿದ್ದರಿಂದ ಈ ವಿಷಯ ಇಷ್ಟು ದೊಡ್ಡದಾಗಿ ಬೆಳೆದಿದೆ. ಕೋಮು ದ್ವೇಷಕ್ಕೆ ಆ ಹೇಳಿಕೆಯೇ ಕಾರಣ, ಇಲ್ಲದಿದ್ದರೆ ನಮ್ಮ ರೈಟ್ಸ್ ನಮಗೆ ಈಗಾಗಲೇ ಸಿಗುತ್ತಿತ್ತು. ನಮ್ಮನಮ್ಮಲೇ ದ್ವೇಷವನ್ನು ಹುಟ್ಟುಹಾಕಲಾಗುತ್ತಿದೆ"ಎಂದು ಶಿಫಾ, ಶಾಸಕರ ವಿರುದ್ದ ಆಕ್ರೋಶ ಹೊರಹಾಕಿದ್ದಾರೆ.

ನಮ್ಮ ನ್ಯಾಯಾಂಗ ವ್ಯವಸ್ಥೆಯ ಮೇಲೆ ನಮಗೆ ತುಂಬಾ ನಂಬಿಕೆಯಿದೆ
"ನಮ್ಮ ನ್ಯಾಯಾಂಗ ವ್ಯವಸ್ಥೆಯ ಮೇಲೆ ನಮಗೆ ತುಂಬಾ ನಂಬಿಕೆಯಿದೆ, ನಮ್ಮ ಸಂವಿಧಾನಿಕ ಹಕ್ಕನ್ನು ಮಾತ್ರ ನಾವು ಕೇಳುತ್ತಿದ್ದೇವೆ. ನ್ಯಾಯಮೂರ್ತಿಗಳು ನಮ್ಮ ಅಹವಾಲಿಗೆ ಮನ್ನಣೆಯನ್ನು ನೀಡಿ, ತೀರ್ಪನ್ನು ನಮ್ಮ ಪರವಾಗಿ ನೀಡುತ್ತಾರೆ ಎನ್ನುವ ನಂಬಿಕೆ ನಮಗಿದೆ. ನಮ್ಮ ಹಕ್ಕನ್ನು ಕೇಳಲು ಇಷ್ಟು ದೊಡ್ಡ ಮಟ್ಟದ ಹೋರಾಟ ಮಾಡಬೇಕಾಗಿ ಬಂದಿರುವುದು ದುರಂತ. ಕೋರ್ಟಿನ ಆದೇಶಕ್ಕಾಗಿ ಕಾಯುತ್ತಿದ್ದೇವೆ"ಎಂದು ಇನ್ನೋರ್ವ ಹಿಜಾಬ್ ಹೋರಾಟಗಾರ್ತಿ ಆಲಿಯಾ ಹೇಳಿದ್ದಾರೆ.












Click it and Unblock the Notifications