ಪೇಜಾವರ ಶ್ರೀಗಳನ್ನು ಭೇಟಿಯಾಗಿ ಧನ್ಯವಾದ ಸಲ್ಲಿಸಿದ ರೋಷನ್ ಬೇಗ್
ಉಡುಪಿ, ಜುಲೈ 24: ಇಂದು ಉಡುಪಿ ಕೃಷ್ಣಮಠಕ್ಕೆ ನಗರಾಭಿವೃದ್ದಿ ಸಚಿವ ರೋಷನ್ ಬೇಗ್ ಭೇಟಿ ಮಾಡಿ ಪೇಜಾವರ ಸ್ವಾಮೀಜಿ ಜೊತೆ ಮಾತುಕತೆ ನಡೆಸಿದರು.
ಕಡಗೋಲು ಕೃಷ್ಣ ದರ್ಶನ ಮಾಡಿದ ಬೇಗ್ ಪೇಜಾವರ ಸ್ವಾಮೀಜಿಗೆ ಗೌರವ ಸಲ್ಲಿಸಿದರು. "ರಂಜಾನ್ ಸಂದರ್ಭ ಪೇಜಾವರ ಸ್ವಾಮೀಜಿ ಇಫ್ತಾರ್ ಕೂಟ ಆಯೋಜಿಸಿದ್ದು ಬಹಳ ಸಂತಸದ ವಿಷಯ. ಇದಕ್ಕಾಗಿ ಅವರಿಗೆ ಧನ್ಯವಾದ ಸಲ್ಲಿಸಲು ನಾನು ಬಂದಿದ್ದೇನೆ," ಎಂದು ರೋಷನ್ ಬೇಗ್ ಹೇಳಿದರು.
"ರಂಜಾನ್ ಮಾಸದ ಕೊನೆಯ ಉಪವಾಸವನ್ನು ಕೃಷ್ಣಮಠದ ಆವರಣದಲ್ಲಿ ಪೂರೈಸಲು ಸ್ಥಳೀಯ ಮುಸ್ಲಿಂ ಸಮುದಾಯದವರಿಗೆ ಆಹ್ವಾನ ನೀಡಿದ್ದರು. ಸ್ವಾಮೀಜಿ ಕರೆ ಸ್ವೀಕರಿಸಿ ದೊಡ್ಡ ಸಂಖ್ಯೆಯಲ್ಲಿ ಮುಸ್ಲಿಂ ಸಮುದಾಯದ ಧರ್ಮಗುರುಗಳು ಮತ್ತು ಮುಖಂಡರು ಇಫ್ತಾರ್ ಕೂಟದಲ್ಲಿ ಭಾಗವಹಿಸಿದ್ದರು. ಈ ಸಂದರ್ಭ ಸ್ವತಃ ಪೇಜಾವರ ಶ್ರೀಗಳೇ ಎಲ್ಲರಿಗೂ ಖರ್ಜೂರವನ್ನು ವಿತರಿಸಿದ್ದರು. ಹೀಗಾಗಿ ನಮ್ಮ ಎಲ್ಲ ಮುಸ್ಲಿಂ ಸಮುದಾಯದ ಪರವಾಗಿ ನಾನು ಪೇಜಾವರ ಶ್ರೀಗಳಿಗೆ ಕೃತಜ್ಞತೆ ಸಲ್ಲಿಸಲ್ಲು ಬಂದಿದ್ದೇನೆ," ಎಂದರು.
"ಕರಾವಳಿಯಲ್ಲಿ ಶಾಂತಿ ಸೌಹಾರ್ದಕ್ಕೆ ಪ್ರಾರ್ಥನೆ ಸಲ್ಲಿಸಿದ್ದೇನೆ. ರಂಜಾನ್ ಗೆ ಸ್ವಾಮೀಜಿ ಇಫ್ತಾರ್ ಕೊಟ್ಟಂತೆ ದೀಪಾವಳಿಗೆ ಮುಸ್ಲಿಂ ಧರ್ಮದ ಗುರುಗಳು ಹಿಂದೂ ಸಹೋದರರನ್ನು ಊಟಕ್ಕೆ ಕರೀಬೇಕು ಎಂದು ವಿವಾದ ಮಾಡುತ್ತಿರುವವರುಗೆ ದೇವರು ಒಳ್ಳೆಬುದ್ದಿ ಕೊಡಲಿ," ಎಂದು ರೋಷನ್ ಬೇಗ್ ಹೇಳಿದರು.