ಬುಡಕಟ್ಟು ಜನರಿಗೆ ರಾಜಾಂಗಣದಲ್ಲಿ ಕಲಾಪ್ರದರ್ಶನಕ್ಕೆ ಅವಕಾಶ
ಉಡುಪಿ, ಸೆಪ್ಟೆಂಬರ್ 30: ಕಾಲ ಬದಲಾದಂತೇ ಜನರ ಜೀವನ ಬದಲಾಗುತ್ತದೆ. ಹಳೆಯ ವಸ್ತುಗಳೆಲ್ಲಾ ಮನೆಯ ಛಾವಣಿ ಸೇರಿದರೆ, ನೂತನ ತಂತ್ರಜ್ಞಾನ ಜನರ ಉಪಯೋಗಕ್ಕೆ ಬರುತ್ತಿದೆ. ಅದರಲ್ಲೂ ಹಿಂದಿನ ಜನ ಪೃಕೃತಿಯಿಂದಲೇ ಸಿಗುವ ಕಚ್ಚಾವಸ್ತುಗಳನ್ನು ಬಳಸಿ ವಸ್ತುಗಳನ್ನು ತಯಾರು ಮಾಡಿ ನಿತ್ಯ ಜೀವನಕ್ಕೆ ಉಪಯೋಗಿಸುತ್ತಿದ್ದರು.
ಆದರೆ ಈಗ ಅಂತಹ ವಸ್ತುಗಳು ನೋಡೋಕೆ ಸಿಗುವುದು ಬಹಳ ಅಪರೂಪ. ಆದರೆ ಉಡುಪಿಯ ಶ್ರೀ ಕೃಷ್ಣ ಮಠದ ರಾಜಾಂಗಣ ವಿಶೇಷ ಸಂದರ್ಭಕ್ಕೆ ಸಾಕ್ಷಿಯಾಗಿದೆ. ಮುಳ್ಳಿನ ಗಿಡ ನೋಡಿದರೆ ಸಾಕು ಕಿತ್ತು ಬಿಸಾಡಿ, ಮತ್ತೆ ಹುಟ್ಟದಿರಲಪ್ಪಾ ಅನ್ನುವವರೇ ಹೆಚ್ಚು.
ಇದೇ ಮುಳ್ಳಿನ ಗಿಡದ ಎಲೆಯನ್ನು ಬಳಸಿ, ಕೈ ಉತ್ಪನ್ನ ತಯಾರಿಸಬಹುದು ಎನ್ನುವುದನ್ನು ತೋರಿಸಿಕೊಟ್ಟಿದ್ದಾರೆ ಕರಾವಳಿಯ ಬುಡಕಟ್ಟು ಜನಾಂಗದವರು. ಮುಳ್ಳಿನ ಎಲೆಯನ್ನೇ ಚಾಪೆಯನ್ನಾಗಿಸುವ ಇವರ ವಿಶೇಷ ಕೌಶಲಕ್ಕೆ ಉಡುಪಿಯ ಕೃಷ್ಣ ಮಠ ಸಾಕ್ಷಿಯಾಗಿದೆ.

ಕಾಂಕ್ರೀಟ್ ಕಾಡು, ಆಧುನಿಕ ಬದುಕಿನ ಭರಾಟೆ, ಬ್ಯುಸಿ ಲೈಫ್. ಇವುಗಳ ಮಧ್ಯೆ ಕೆಲವಡೆ ಇನ್ನೂ ಕುಲ ಕಸಬುಗಳು, ಗುಡಿ ಕೈಗಾರಿಕೆಗಳು ಅಳಿಯದೇ ಉಳಿದುಕೊಂಡಿದೆ ಅಂದರೆ ಅದರ ಹಿಂದಿನ ಅದ್ಭುತ ಶಕ್ತಿಗಳೇ ಬುಡಕಟ್ಟು ಜನಾಂಗದವರು.
ಇವರ ಶ್ರಮ ಅಪರಿಮಿತ, ತಾಳ್ಮೆ ಅಗಣ್ಯ. ಇಂತಹ, ವಿಶೇಷ ಕುಲ ಕಸಬನ್ನು ಇಂದಿಗೂ ಮುಂದುವರಿಕೊಂಡು ಬಂದಿದೆ ಉಡುಪಿ ಕಟಪಾಡಿಯ ಗೊಡ್ಡ ಮೊಗೇರಾ ಜನಾಂಗ. ಇವರ ಕುಲ ಕಸುಬನ್ನು ಸಾರ್ವಜನಿಕರಿಗೆ ಪರಿಚಯಿಸಿ ಪ್ರೋತ್ಸಾಹಿಸುವ ಒಳ್ಳೆಯ ಉದ್ದೇಶದಿಂದ ಉಡುಪಿಯ ಕೃಷ್ಣಮಠ ತನ್ನ ರಾಜಾಂಗಣದಲ್ಲಿ ಅವಕಾಶ ಕಲ್ಪಿಸಿದೆ.
ಮುಳ್ಳಿನ ಎಲೆಯಲ್ಲೇ ವಿಶೇಷವಾಗಿ ಚಾಪೆ ಮಾಡಿ ರಾಜಾಂಗಣದಲ್ಲಿ ಮೊಗೇರ ಸಮುದಾಯದ ಜನರು ತಮ್ಮ ಕೈ ಚಳಕ ತೋರಿಸಿದ್ದಾರೆ. ನೀರು ನಿಲ್ಲುವ ಗದ್ದೆಯಲ್ಲಿ ಅಥವಾ ನದಿ ದಡಗಳಲ್ಲಿ ಬೆಳೆಯುವ ಮುಂಡ್ಡಕ್ಕಾ ಗಿಡದ ಎಲೆಗಳನ್ನು ತಂದು ಒಣಗಿಸಿ ನಂತರ ನೀರಿನಲ್ಲಿ ಅದ್ದಿಟ್ಟು ಅದರ ಮುಳ್ಳನ್ನು ತೆಗೆದು, ಅದನ್ನು ನಾಜೂಕಾಗಿ ಪೋಣಿಸಿ ವಿವಿಧ ರೀತಿಯ ಚಾಪೆಯನ್ನು ತಯಾರು ಮಾಡುತ್ತಾರೆ. ಕಣ್ಣಲ್ಲಿ ಕಣ್ಣಿಣ್ಣು ಒಂದರ ಮೇಲೊಂದರಂತೆ ಪೊಣಿಸುವ ಕೌಶಲ್ಯ ವಿಶೇಷ ಹಾಗೂ ಅಪರೂಪ ಕಲೆಯಾಗಿದೆ.

ಮಲಗುವ ಚಾಪೆ, ಪೂಜೆಗೆ ಕುಳಿತುಕೊಳ್ಳುವ ಚಾಪೆ, ತೊಟ್ಟಿಲಿಗೆ ಹಾಕುವ ಚಾಪೆ ಹೀಗೆ ವಿವಿಧ ರೀತಿಯ ಚಾಪೆಗಳನ್ನು ತಯಾರಿಸುದಷ್ಟೇ ಅಲ್ಲದೇ, ಮಹಿಳೆಯರು ಬಳಕೆ ಮಾಡುವ ಬ್ಯಾಗ್ನ್ನು ಇದೇ ಮಂಡಕ್ಕಾ ಗಿಡದಿಂದ ತಯಾರು ಮಾಡಿದ್ದಾರೆ. ಮುಳ್ಳಿನ ಎಲೆಯ ಚಾಪೆಗೆ ಮಾರುಕಟ್ಟೆ ಡಬ್ಬಲ್ ಚಾಪೆಗೆ ಒಳ್ಳೆಯ ಡಿಮ್ಯಾಂಡ್ ಇದೆ. ಮಾರುಕಟ್ಟೆಯಲ್ಲಿ ಡಬಲ್ ಚಾಪೆಗೆ 600 ರೂ. ದರ ಇದೆ.
ಪ್ರಸ್ತುತ ಹಿರಿ ತಲೆಗಳು ಮಾತ್ರ ಈ ಕುಲ ಕಸುಬಿನಲ್ಲಿ ತೊಡಗುತ್ತಿದ್ದು. ಯುವ ಜನತೆ ತೊಡಗಿಸಿಕೊಳ್ಳುತ್ತಿಲ್ಲ. ಶ್ರಮ ಹೆಚ್ಚು, ಕಚ್ಛಾ ವಸ್ತುಗಳ ಕೊರತೆ, ಗ್ರಾಹಕರ ಕೊರತೆಯಿಂದ ಈ ವೃತ್ತಿಯಲ್ಲಿ ಯುವಜನತೆ ಕಾಣಸಿಕೊಳ್ಳುದಿಲ್ಲ. ಪ್ರೋತ್ಸಾಹ ನೀಡಿದರೆ ಯುವ ಜನತೆ ಕೂಡ ಕುಲ ಕಸುಬಿನಲ್ಲಿ ತೊಡಗಿಸಿಕೊಳ್ಳುತ್ತಾರೆ ಅಂತಾರೆ ಗೊಡ್ಡ ಮೊಗೇರಾ ಜನಾಂಗದವರು.
ಈ ಚಾಪೆ ಬಳಸೋದು ಆರೋಗ್ಯಕ್ಕೂ ಉತ್ತಮವಾಗಿದೆ. ಈ ಚಾಪೆಯಲ್ಲಿ ಮಲಗುವುದರಿಂದ ಚರ್ಮ ರೋಗ ಬರಲ್ಲ ಅನ್ನೋದು ವೈಜ್ಞಾನಿಕವಾಗಿಯೂ ರುಜುವಾತಾಗಿದೆ. ಆರೋಗ್ಯಕ್ಕೆ ಅತ್ಯತ್ತಮವಾಗುವ ಮುಳ್ಳಿನ ಎಲೆಯ ಚಾಪೆ ಮಾರುಕಟ್ಟೆಯಲ್ಲಿ ಕಾಣೋದು ಅತೀ ವಿರಳವಾಗಿರುವುದರಿಂದ ಇದರ ಉಪಯೋಗ ಜನರಿಗೂ ಲಭ್ಯವಾಗುತ್ತಿಲ್ಲ.
ಒಟ್ಟಿನ್ನಲ್ಲಿ ಬುಡಕಟ್ಟು ಜನಾಂಗದ ವಿಶಿಷ್ಟ ಕಲೆಗೆ ಬೆಲೆ ಕೊಡುವ ಪರ್ಯಾಯ ಅದಮಾರು ಸ್ವಾಮಿಗಳ ಉತ್ತಮ ಕಾರ್ಯ ಶ್ಲಾಘನೀಯ. ಜನ ಪ್ಲಾಸ್ಟಿಕ್ ಚಾಪೆಗೆ ಅಂಟಿ ಕೊಳ್ಳದೇ ಪಾಕೃತಿಕ ವಸ್ತುವಿನಿಂದ ತಯಾರಿಸಿದ ಚಾಪೆಯನ್ನು ಬಳಸಿದರೆ ದೇಹಕ್ಕೂ ತಂಪು, ಆರೋಗ್ಯಕ್ಕೂ ಉತ್ತಮ. ಕುಲ ಕಸುಬುಗಳನ್ನು ಉಳಿಸಿ ಬೆಳೆಸಿದಂತಾಗುತ್ತೆ.












Click it and Unblock the Notifications