ಪೇಜಾವರ ಶ್ರೀ ಪರ್ಯಾಯ: ವಿರೋಧದ ನಡುವೆಯೂ ಭಾಗವಹಿಸುತ್ತೇನೆ
ಮಂಗಳೂರು/ಉಡುಪಿ, ಜ 16: ಶ್ರೀಕೃಷ್ಣ ಮಠದ ಸಂಪ್ರದಾಯಕ್ಕೆ ವಿರುದ್ಧವಾಗಿ ಸಮುದ್ರೋಲ್ಲಂಘನೆ ಮಾಡಿರುವ ಪುತ್ತಿಗೆ ಮಠದ ಶ್ರೀಸುಗುಣೇಂದ್ರ ತೀರ್ಥ ಸ್ವಾಮೀಜಿಯವರನ್ನು ಪರ್ಯಾಯಕ್ಕೆ ಆಹ್ವಾನಿಸುವ ಕುರಿತು ಕೊನೇ ಕ್ಷಣದಲ್ಲಿ ವಿವಾದ ಏರ್ಪಟ್ಟಿದೆ.
ಶಾಂತಿ ಮತ್ತು ಒಗ್ಗಟ್ಟಿನಲ್ಲಿ ನಡೆಯುತ್ತಿರುವ ಪೇಜಾವರ ಶ್ರೀಗಳ ಐತಿಹಾಸಿಕ ಪಂಚಮ ಪರ್ಯಾಯಕ್ಕೆ ತಾನು ಸಾಂಪ್ರದಾಯಿಕವಾದಿಗಳ ವಿರೋಧವಿದ್ದರೂ ಭಾಗವಹಿಸುತ್ತೇನೆ ಎಂದು ಅಷ್ಠಮಠಗಳಲ್ಲಿ ಒಂದಾದ ಪುತ್ತಿಗೆ ಮಠದ ಶ್ರೀಸುಗುಣೇಂದ್ರ ತೀರ್ಥ ಸ್ವಾಮೀಜಿ ಸ್ಪಷ್ಟಪಡಿಸಿದ್ದಾರೆ. (ಪೇಜಾವರರೇ, ಮೊದಲು ಮಡೆಸ್ನಾನ ನಿಲ್ಲಿಸಿ)
ಈ ನಡುವೆ ಶನಿವಾರ (ಜ 16) ಮಂಗಳೂರಿನಿಂದ ದಕ್ಷಿಣಕನ್ನಡ ಮತ್ತು ಕಾಸರಗೋಡು ಜಿಲ್ಲೆಯ ವತಿಯಿಂದ ಮಧ್ಯಾಹ್ನ ಹೊರಟ ಅದ್ದೂರಿ ಪರ್ಯಾಯ ಹೊರೆ ದಿಬ್ಬಣ ಸಂಜೆ ವೇಳೆಗೆ ಉಡುಪಿಗೆ ತಲುಪಿದೆ.
ಪೇಜಾವರ ಶ್ರೀಗಳ ಪರ್ಯಾಯೋತ್ಸವದ ಅಂಗವಾಗಿ ಎರಡು ಜಿಲ್ಲೆಗಳ ಹೊರೆಕಾಣಿಕೆ ಮೆರವಣಿಗೆ, ಪರ್ಯಾಯ ಸ್ವಾಗತ ಸಮಿತಿಯ ಪ್ರಧಾನ ಕಾರ್ಯದರ್ಶಿ ಪ್ರದೀಪ್ ಕಲ್ಕೂರ್ ನೇತೃತ್ವದಲ್ಲಿ ಮಂಗಳೂರಿನ ಶರವು ಮಹಾಗಣಪತಿ ದೇವಸ್ಥಾನದಿಂದ ಹೊರಟಿತು. (ಪರ್ಯಾಯದಲ್ಲಿ ಮಹತ್ವದ ಬದಲಾವಣೆ)
ಹೊರೆ ಕಾಣಿಕೆ ಮೆರವಣಿಗೆಯಲ್ಲಿ ಕದ್ರಿ, ಶರವು, ಉಜಿರೆ ಜನಾರ್ದನ ದೇವಸ್ಥಾನ, ಶ್ರೀರಾಮ ಮಂದಿರ ಉಜಿರೆ, ಕಣ್ವತೀರ್ಥ, ಸಮತಾ ಬಳಗ, ಶಾರದಾ ವಿದ್ಯಾಲಯ, ದಿಯಾ ಕಂಪ್ಯೂಟರ್ಸ್, ನಮ್ಮವರು ಮೊದಲಾದ ಸಂಘಸಂಸ್ಥೆಗಳು ಪಾಲ್ಗೊಂಡಿದ್ದವು. ಪರ್ಯಾಯ ಸಂದರ್ಭದಲ್ಲಿ ಪೇಜಾವರ ಶ್ರೀಗಳಿಗೆ ಬಿರುದು, ಮುಂದಿನ ಪುಟ ಕ್ಲಿಕ್ಕಿಸಿ. (ಚಿತ್ರಕೃಪೆ: ಶ್ರೀನಿಧಿ ತಂತ್ರಿ, ಪ್ರದೀಪ್ ಕಲ್ಕೂರ್, ಐಸಾಕ್ ರಿಚರ್ಡ್)

ಹೊರೆ ಕಾಣಿಕೆ
ಸುಮಾರು ನೂರಕ್ಕೂ ಅಧಿಕ ವಾಹನಗಳಲ್ಲಿ ಅಕ್ಕಿ, ಸಕ್ಕರೆ, ತೆಂಗಿನ ಕಾಯಿ, ಅವಲಕ್ಕಿ, ಸಿಯಾಳ, ತರಕಾರಿ ಇತ್ಯಾದಿ ಸಾಮಾಗ್ರಿಗಳನ್ನೊಳಗೊಂಡ ಮೆರವಣಿಗೆಯು ಮಂಗಳೂರಿನಿಂದ ಮೂಲ್ಕಿಗೆ ತೆರಳಿ, ಕಟೀಲಿನಿಂದ ಬರುವ ಮೆರವಣಿಗೆಯೊಂದಿಗೆ ಜೊತೆಗೂಡಿ ಉಡುಪಿಯಲ್ಲಿ ಶ್ರೀಗಳ ಸಮ್ಮುಖದಲ್ಲಿ ಹೊರೆಕಾಣಿಕೆ ಅರ್ಪಿಸಿದೆ.

ಸಹಕಾರ ನೀಡಿ ಎಂದಿದ್ದೇನೆ- ಪೇಜಾವರ ಶ್ರೀ
5ನೇ ಪರ್ಯಾಯಕ್ಕೆ ನಮ್ಮ ಜೊತೆಗೆ ಸಹಕಾರ ನೀಡಿ ಎಂದು ತಾನು ಪುತ್ತಿಗೆ ಶ್ರೀಗಳನ್ನು ಕೇಳಿಕೊಂಡಿದ್ದೇನೆ. ಪರ್ಯಾಯಕ್ಕೆ ಆಹ್ವಾನಿಸುವುದು ತನ್ನ ಒಬ್ಬನ ನಿರ್ಧಾರವಲ್ಲ. ಎಲ್ಲರ ಜೊತೆ ಚರ್ಚಿಸಿ ಈ ಬಗ್ಗೆ ತೀರ್ಮಾನ ಕೈಗೊಳ್ಳುತ್ತೇನೆ, ಈ ಬಗ್ಗೆ ನಾಳೆಯೊಳಗೆ ಅಂತಿಮ ನಿರ್ಧಾರ ತೆಗೆದುಕೊಳ್ಳುತ್ತೇವೆ ಎಂದು ಪೇಜಾವರ ಶ್ರೀಗಳು ಹೇಳಿದ್ದಾರೆ.

ಪುತ್ತಿಗೆ ಮಠದ ಶ್ರೀಸುಗುಣೇಂದ್ರ ತೀರ್ಥ ಸ್ವಾಮೀಜಿ
ಪತ್ರಿಕಾಗೋಷ್ಠಿಯಲ್ಲಿ ಶನಿವಾರ (ಜ 16) ಮಾತನಾಡಿದ ಪುತ್ತಿಗೆ ಶ್ರೀಗಳು, ತನ್ನನ್ನು ಪೇಜಾವರ ಶ್ರೀಗಳು ಪರ್ಯಾಯಕ್ಕೆ ಆಹ್ವಾನಿಸಿದ್ದು, ತಾನು ಮೆರವಣಿಗೆ ಹಾಗೂ ದರ್ಬಾರ್ ನಲ್ಲಿ ಭಾಗವಹಿಸುತ್ತೇನೆ. ಈ ಸಂದರ್ಭ ಪುತ್ತಿಗೆ ಮಠದ ವತಿಯಿಂದ ಪೇಜಾವರ ಶ್ರೀಗಳಿಗೆ 'ಅಭಿನವ ಶ್ರೀ' ಬಿರುದು ನೀಡಲಾಗುತ್ತದೆ ಎಂದು ಶ್ರೀಗಳು ಹೇಳಿದ್ದಾರೆ. ಪುತ್ತಿಗೆ ಶ್ರೀಗಳ ಹೇಳಿಕೆಯ ಬಗ್ಗೆ ಪೇಜಾವರ ಶ್ರೀಗಳು ಇನ್ನೂ ಸ್ಪಷ್ಟನೆ ನೀಡಿಲ್ಲ.

ಮಾನವ ಪಲ್ಲಕ್ಕಿ
2014ರ ಕಾಣಿಯೂರು ಶ್ರೀಗಳ ಪರ್ಯಾಯದಂತೆ, ಈ ಬಾರಿಯೂ ಪೇಜಾವರ ಶ್ರೀಗಳು ಮತ್ತು ಇತರ ಯತಿಗಳು ಮಾನವ ಹೊರುವ ಪಲ್ಲಕ್ಕಿಯಲ್ಲಿ ಕುಳಿತುಕೊಳ್ಳದೇ ಅಲಂಕರಿಸಿದ ವಾಹನದಲ್ಲಿ ಕೂತು ಮೆರವಣಿಗೆಯಲ್ಲಿ ಸಾಗಲಿದ್ದಾರೆ.

ಅಣ್ಣಾಮಲೈ ಮನವಿ
ಮೆರವಣಿಗೆಯಲ್ಲಿ ಹಲವಾರು ಗಣ್ಯ ವ್ಯಕ್ತಿಗಳು ಮತ್ತು ವೀಕ್ಷಣೆಗೂ ಕೂಡ ಲಕ್ಷಾಂತರ ಸಾರ್ವಜನಿಕರು ಬೇರೆ ಬೇರೆ ಜಿಲ್ಲೆ ರಾಜ್ಯಗಳಿಂದ ಭಾಗವಹಿಸಲಿದ್ದಾರೆ. ಭದ್ರತಾ ದೃಷ್ಟಿಯಿಂದ ಮೆರವಣಿಗೆ ಮತ್ತು ಕಾರ್ಯಕ್ರಮಗಳಲ್ಲಿ ಪಾಲ್ಗೊಳ್ಳಲಿರುವ ಭಕ್ತಾದಿಗಳು, ಸಾರ್ವಜನಿಕರು ಯಾವುದೇ ರೀತಿಯ ಬ್ಯಾಗ್, ಲಗೇಜ್ ಕೈಯಲ್ಲಿಯಾಗಲಿ ಅಥವಾ ಬೆನ್ನಹಿಂಬದಿಯಲ್ಲಿ ತೆಗೆದುಕೊಂಡು ಬರಬಾರದು ಎಂದು ಉಡುಪಿ ಜಿಲ್ಲಾ ಎಸ್ಪಿ ಅಣ್ಣಾಮಲೈ ಸಾರ್ವಜನಿಕರಲ್ಲಿ ಮತ್ತು ಭಕ್ತಾದಿಗಳಲ್ಲಿ ಮನವಿ ಮಾಡಿದ್ದಾರೆ.












Click it and Unblock the Notifications