ದೃಷ್ಟಿ ಹೀನ ಗರುಡನಿಗೆ ಪೇಜಾವರ ಮಠದಲ್ಲಿ ಕಣ್ಣಿನ ಚಿಕಿತ್ಸೆ
Recommended Video

ಉಡುಪಿ, ಫೆಬ್ರವರಿ 13: ಎರಡೂ ಕಣ್ಣುಗಳಿಗೆ ಪೊರೆ ಆವರಿಸಿರುವ ಹಿನ್ನೆಲೆಯಲ್ಲಿ ದೃಷ್ಟಿ ಹೀನವಾಗಿರುವ ಗರುಡ ಪಕ್ಷಿಗೆ ಉಡುಪಿ ಪೇಜಾವರ ಮಠದಲ್ಲಿ ಆರೈಕೆ ಮಾಡಲಾಗುತ್ತಿದೆ. ಗರುಡ ಪಕ್ಷಿಯ ಆರೈಕೆ ಜವಾಬ್ದಾರಿಯನ್ನು ಪೇಜಾವರ ಮಠದ ಕಿರಿಯ ಸ್ವಾಮಿಗಳಾದ ವಿಶ್ವಪ್ರಸನ್ನ ತೀರ್ಥರು ವಹಿಸಿಕೊಂಡಿದ್ದಾರೆ .
ಎರಡು ದಿನಗಳ ಹಿಂದೆ ಉಡುಪಿಯ ಕೃಷ್ಣ ಮಠ ಆವರಣದಲ್ಲಿ ಗರುಡ ಪಕ್ಷಿ ಗಾಯಗೊಂಡು ಬಿದ್ದಿತ್ತು. ಇದಕ್ಕೀಗ ಚಿಕಿತ್ಸೆ ನೀಡಲಾಗುತ್ತಿದೆ.
ಹಾಗೆ ನೋಡಿದರೆ ಗರುಡನ ಕಣ್ಣುಗಳು ಅತ್ಯಂತ ಸೂಕ್ಮ. ಆದರೆ ಗಾಯಗೊಂಡಿರುವ ಈ ಗರುಡನ ಎರಡು ಕಣ್ಣುಗಳ ಮೇಲೆ ಪೊರೆ ಆವೃತವಾಗಿದೆ. ಈ ಹಿನ್ನಲೆಯಲ್ಲಿ ಗರುಡ ಸೂಕ್ಮ ಗೃಹಿಕೆಯನ್ನು ಕಳೆದುಕೊಂಡಿದೆ.
ದೃಷ್ಟಿ ಹೀನವಾಗಿ ಸಂಕಷ್ಟ ಅನುಭವಿಸುತ್ತಿರುವ ಗರುಡನಿಗೆ ಉಡುಪಿಯ ಪ್ರಸಿದ್ಧ ಪ್ರಸಾದ್ ನೇತ್ರಾಲಯದ ನುರಿತ ವೈದ್ಯರ ತಂಡ ಚಿಕಿತ್ಸೆ ನೀಡುತ್ತಿದೆ. ಗರುಡ ಪಕ್ಷಿಯ ಎರಡೂ ಕಣ್ಣುಗಳು ಪೊರೆಯಿಂದ ಆವೃತವಾಗಿದ್ದು, ಸದ್ಯ ಕಣ್ಣಿನ ಪೊರೆ ಕಳಚಲು ಐಡ್ರಾಪ್ ನೀಡಲಾಗಿದೆ.

ಗರುಡನಿಗೆ ಲೆನ್ಸ್?
ಹತ್ತು ದಿನಗಳ ಕಾಲ ಐ ಡ್ರಾಪ್ಸ್ ಹಾಕುವಂತೆ ವೈದ್ಯರು ಸೂಚಿಸಿದ್ದು ಚಿಕಿತ್ಸೆ ಫಲಕಾರಿಯಾಗದೇ ಹೋದಲ್ಲಿ ಕಣ್ಣಿನ ಆಪರೇಷನ್ ನಡೆಸಿ, ಗರುಡನ ಕಣ್ಣಿಗೆ ಲೆನ್ಸ್ ಅಳವಡಿಸಲು ವೈದ್ಯರು ಚಿಂತನೆ ನಡೆಸಿದ್ದಾರೆ.

ಗಾಯಗೊಂಡು ಬಿದ್ದಿತ್ತು ಗರುಡ
ಕೃಷ್ಣ ಮಠದ ಬಳಿ ಗಾಯಗೊಂಡು ಬಿದ್ದಿದ್ದ ಗರುಡ ಪಕ್ಷಿಯನ್ನು ವಿದ್ಯಾರ್ಥಿಗಳು ಎತ್ತಿಕೊಂಡು ಪೇಜಾವರ ಮಠದ ಕಿರಿಯ ಯತಿಗಳ ಬಳಿ ಕೊಂಡೊಯ್ದಿದ್ದರು. ಮೊದಲೇ ಪ್ರಾಣಿ-ಪಕ್ಷಿಗಳೆಂದರೆ ಇಷ್ಟಪಡುವ ಪೇಜಾವರ ಮಠದ ಕಿರಿಯ ಸ್ವಾಮಿಗಳಾದ ವಿಶ್ವಪ್ರಸನ್ನ ತೀರ್ಥರು, ಗರುಡವನ್ನು ಪರೀಶಿಲಿಸಿದಾಗ ಅದು ಹಾರಲಾಗದೇ ನರಳುತ್ತಿರುವುದನ್ನು ಗಮನಿಸಿದ್ದರು.

ಕರಗಿದ ಸ್ವಾಮೀಜಿ ಮನಸ್ಸು
ವಿಷ್ಣುವಿನ ವಾಹನ ಗರುಡ ಹಕ್ಕಿಯ ಸಂಕಷ್ಟ ಕಂಡು ಸ್ವಾಮೀಜಿಯವರ ಮನಕರಗಿದೆ. ಗರುಡನನ್ನು ಉಪಚರಿಸಿದ ಬಳಿಕ ಸ್ವಾಮೀಜಿ ತಕ್ಷಣ ಪಶುಪಾಲನಾ ಕೇಂದ್ರಕ್ಕೆ ಕರೆದೊಯ್ದಿದ್ದಾರೆ. ಆದರೆ ಪಕ್ಷಿಗೆ ಕಣ್ಣು ಕಾಣುತ್ತಿಲ್ಲ ಎಂದು ಗೊತ್ತಾದ ಮೇಲೆ ನೇರವಾಗಿ ಉಡುಪಿಯಲ್ಲಿರುವ ಪ್ರಸಾದ್ ನೇತ್ರಾಲಯಕ್ಕೆ ಕೊಂಡೊಯ್ದು ಚಿಕಿತ್ಸೆ ಕೊಡಿಸಿದ್ದಾರೆ.

ಮಾದರಿಯಾದ ಸ್ವಾಮೀಜಿ
ಸದ್ಯ ಪೇಜಾವರ ಮಠದ ಕಿರಿಯ ಯತಿಗಳು ಗರುಡನ ಪೋಷಣೆಯ ಜವಾಬ್ದಾರಿ ಹೊತ್ತಿದ್ದಾರೆ. ಎಲ್ಲೋ ಬಿದ್ದು ಸತ್ತು ಹೋಗುತ್ತಿದ್ದ ಪಕ್ಷಿಯೊಂದಕ್ಕೆ ಪೇಜಾವರ ಮಠದ ಕಿರಿಯ ಯತಿ ವಿಶ್ವ ಪ್ರಸನ್ನ ತೀರ್ಥರು ಪುನರ್ಜನ್ಮ ನೀಡಿದ್ದಾರೆ. ಮಠದ ಪೂಜೆ ಪುನಸ್ಕಾರದಲ್ಲಿ ಮಾತ್ರ ತೊಡಗಿಕೊಳ್ಳದೇ ಸಾಮಾಜಿಕ ಚಟುವಟಿಕೆಯಲ್ಲೂ ಗುರುತಿಸಿಕೊಂಡಿರುವ ಪೇಜಾವರ ಮಠದ ಕಿರಿಯ ಯತಿ ವಿಶ್ವ ಪ್ರಸನ್ನ ತೀರ್ಥರು ಈ ಮೂಲಕ ಮತ್ತೊಮ್ಮೆ ಮಾದರಿಯಾಗಿದ್ದಾರೆ.












Click it and Unblock the Notifications