2018ರ ವೇಳೆಗೆ ತ್ಯಾಜ್ಯ ಮುಕ್ತ ಉಡುಪಿ ಜಿಲ್ಲೆಗೆ ಸಂಕಲ್ಪ
ಉಡುಪಿ, ಆಗಸ್ಟ್ 02 : ತಮಿಳುನಾಡಿನ ವೇಲೂರು ಮಾದರಿಯಲ್ಲಿ ಉಡುಪಿ ಗ್ರಾಮೀಣ ಜಿಲ್ಲೆಯನ್ನು ಹದಿನಾಲ್ಕು ತಿಂಗಳ ಒಳಗೆ ತ್ಯಾಜ್ಯ ಮುಕ್ತಗೊಳಿಸಲು 'ಸ್ವಚ್ಛ ಉಡುಪಿ ಜಿಲ್ಲಾ ಮಿಷನ್ 2018' ರೂಪಗೊಂಡಿದೆ.
ಘನ, ದ್ರವ ತ್ಯಾಜ್ಯವನ್ನು ಸಂಪನ್ಮೂಲವಾಗಿ ಪರಿವರ್ತಿಸುವುದು ಮಾತ್ರವಲ್ಲದೆ ರಸ್ತೆ ಬದಿ ಕಸದ ಡಬ್ಬಿ ಜತೆಗೆ ತ್ಯಾಜ್ಯ ವಿಲೇವಾರಿ ಕೇಂದ್ರಕ್ಕೂ ವಿದಾಯ ಹೇಳುವುದು 'ಸ್ವಚ್ಛ ಉಡುಪಿ ಜಿಲ್ಲಾ ಮಿಷನ್ 2018'ನ ಗುರಿಯಾಗಿದೆ.

ತಮಿಳುನಾಡು ಮೇಲೂರಿನ ಇಂಡಿಯನ್ ಗ್ರೀನ್ ಸರ್ವಿಸ್ ಇದರ ಘನ ಮತ್ತು ದ್ರವ ಸಂಪನ್ಮೂಲ ನಿವಾರಣೆ ಯೋಜನೆ ನಿರ್ದೇಶಕ ಸಿ ಶ್ರೀನಿವಾಸ್ ರೂಪಿಸಿದ ಯೋಜನೆಯನ್ನು ಜಿಲ್ಲೆಯಲ್ಲಿ ಜಾರಿಗೊಳಿಸಲಾಗುತ್ತಿದೆ.
ತ್ಯಾಜ್ಯ ಮುಕ್ತ ಮಾದರಿ ಜಿಲ್ಲೆಯಾಗಿಸುವ ಗುರಿ: ಬಯಲು ಶೌಚ ಮುಕ್ತ ಉಡುಪಿಯನ್ನು ತ್ಯಾಜ್ಯ ಮುಕ್ತ ಮಾದರಿ ಜಿಲ್ಲೆಯಾಗಿ ರೂಪಿಸುವ ಗುರಿ ಇದೆ ಎಂದು ಜಿಲ್ಲಾಧಿಕಾರಿ ಪ್ರಿಯಾಂಕಾ ಮೇರಿ ಫ್ರಾನ್ಸಿಸ್ ಒನ್ಇಂಡಿಯಾ ಕನ್ನಡಕ್ಕೆ ತಿಳಿಸಿದರು.
ಜಿಲ್ಲೆಯಲ್ಲಿ ತ್ಯಾಜ್ಯ ವಿಲೇವಾರಿ ಸಮಸ್ಯೆ ಅಧಿಕವಾಗಿದ್ದು, ಅಗತ್ಯ ಸರಕಾರಿ ಭೂಮಿಯ ಕೊರತೆ ಹಾಗೂ ಸಮರ್ಪಕ ರೀತಿಯಲ್ಲಿ ವಿಲೇವಾರಿ ಮಾಡಲು ಪರಿಣಿತರ ಕೊರತೆಯಿದೆ.
ಜಿಲ್ಲೆಯಲ್ಲಿ ತ್ಯಾಜ್ಯ ನಿರ್ಮೂಲನೆಗೆ ಶಾಶ್ವತ ಪರಿಹಾರ ಕಂಡುಕೊಳ್ಳುವ ನಿಟ್ಟಿನಲ್ಲಿ ಕಾರ್ಯಗ್ರಹ ಆಯೋಜಿಸಿದ್ದು, ತ್ಯಾಜ್ಯವನ್ನು ಸಮರ್ಪಕವಾಗಿ ಬಳಸಿದರೆ ಅದು ಸಂಪನ್ಮೂಲವಾಗಿ ಆದಾಯ ಗಳಿಸಬಹುದಾಗಿದೆ. ತ್ಯಾಜ್ಯ ವಿಲೇವಾರಿಗೆ ಸೂಕ್ತ ಪರಿಹಾರದೊಂದಿಗೆ ಯುವ ಸಂಪನ್ಮೂಲ ಸಜ್ಜಾಗಬೇಕು ಎಂದರು.
ತಮಿಳುನಾಡಿನ ಬೇಲೂರಿನ ಇಂಡಿಯನ್ ಗ್ರೀನ್ ಸರ್ವೀಸ್ ನ ಯೋಜನಾ ನಿರ್ದೇಶಕ ಶ್ರೀ ವಾಸ್ ಮಾತನಾಡಿ, ಉಡುಪಿ ಜಿಲ್ಲೆಯಲ್ಲಿ 2018ರ ಅಕ್ಟೋಬರ್ 02ರೊಳಗೆ ತ್ಯಾಜ್ಯ ಮುಕ್ತ ಜಿಲ್ಲೆಯಾಗಿ ರೂಪಿಸಲು ಕ್ರಿಯಾ ಯೋಜನೆ ರೂಪಿಸಲಾಗಿದೆ ಎಂದರು.












Click it and Unblock the Notifications