ಬಿಇ ಪದವೀಧರ ಉಡುಪಿ ಕೃಷ್ಣಮಠದ ಉತ್ತರಾಧಿಕಾರಿ
ಉಡುಪಿ, ಜೂ 2: ಶ್ರೀಕೃಷ್ಣನ ಪೂಜಾ ಕೈಂಕರ್ಯಕ್ಕೆ ಆಚಾರ್ಯ ಮಧ್ವರು ಸ್ಥಾಪಿಸಿದ್ದ ಅಷ್ಠಮಠಗಳ ಇತಿಹಾಸದಲ್ಲಿ ಇದೇ ಮೊದಲಬಾರಿಗೆ ಇಂಜಿನಿಯರಿಂಗ್ ಪದವೀಧರರೊಬ್ಬರು ಮಠದ ಉತ್ತರಾಧಿಕಾರಿಯಾಗಲಿದ್ದಾರೆ.
ಅಷ್ಠಮಠಗಳಲ್ಲಿ ಒಂದಾದ ಅದಮಾರು ಮಠದ ನೂತನ ಉತ್ತರಾಧಿಕಾರಿಯಾಗಿ ಉಡುಪಿ ಜಿಲ್ಲೆ ಹಿರಿಯಡ್ಕ ಸಮೀಪದ ಶಿರೂರು ನಿವಾಸಿ ಶ್ರೀಶ ಎಸ್ ಅವರನ್ನು ನೇಮಿಸಲಾಗಿದೆ. ಶ್ರೀಶ ಅವರು ಇಂಜಿನಿಯರಿಂಗ್ ಪದವೀಧರ.
ಗುರುವಾರದಂದು (ಜೂನ್ 19) ಉಡುಪಿ ಸಮೀಪದ ಕುಂಜಾರುಗಿರಿಯ (ಪಾಜಕ ಕ್ಷೇತ್ರ) ದುರ್ಗಾಪರಮೇಶ್ವರಿ ದೇವಿಯ ಸನ್ನಿಧಿಯಲ್ಲಿ ದೀಕ್ಷೆ, ನಾಮಕರಣ ಮತ್ತು ಪಟ್ಟಾಭಿಷೇಕ ಕಾರ್ಯಕ್ರಮಗಳು ನಡೆಯಲಿದೆ. (ಉಡುಪಿ ಕೃಷ್ಣನೇ ಈಗ ಹೊಸ ವಿವಾದದಲ್ಲಿ)
ಜೂನ್ 16ರಿಂದ ವಿವಿಧ ಧಾರ್ಮಿಕ ವಿಧಿವಿಧಾನ ಪ್ರಕ್ರಿಯೆ ನಡೆಯಲಿದೆ. 29 ವರ್ಷದ ಶ್ರೀಶ ಅವರು ಉಡುಪಿ ಮತ್ತು ಮಂಗಳೂರಿನಲ್ಲಿ ಈ ಹಿಂದೆ ಕೆಲ ಕಾಲ ಉದ್ಯೋಗ ನಿರ್ವಹಿಸಿದ್ದರು.

ಶ್ರೀಶ ಮೆಕ್ಯಾನಿಕಲ್ ಇಂಜಿನಿಯರಿಂಗ್
ಮೆಕ್ಯಾನಿಕಲ್ ಇಂಜಿನಿಯರಿಂಗ್ ಆಗಿರುವ ಶ್ರೀಶ ಅವರು ಚಂದ್ರಶೇಖರ ಮತ್ತು ಗೌರಿ ದಂಪತಿಗಳ ಪುತ್ರ. ಶ್ರೀಶ ಅವರ ತಂದೆ ತೀರ್ಥಹಳ್ಳಿಯಲ್ಲಿ ಹೋಟೆಲ್ ಉದ್ಯಮಿಯಾಗಿದ್ದವರು.

ಆಧ್ಯಾತ್ಮದ ಬಗ್ಗೆ ಹೆಚ್ಚಿನ ಒಲವು.
ಉಡುಪಿಯ ಸಂಸ್ಕೃತ ಕಾಲೇಜಿನಲ್ಲಿ ನಿವೃತ್ತ ಪ್ರಾಂಶುಪಾಲರಾಗಿದ್ದ ಪಡುಬಿದ್ರೆ ಲಕ್ಷ್ಮೀನಾರಾಯಣ ಶರ್ಮ ಬಳಿ ವ್ಯಾಕರಣ, ತಾತ್ಪರ್ಯ ಮೊದಲಾದ ಧಾರ್ಮಿಕ ಪಾಠಗಳನ್ನು ಕಲಿತಿರುವ ಶ್ರೀಶ ಅವರಿಗೆ ಚಿಕ್ಕಂದಿನಿಂದಲೇ ಆಧ್ಯಾತ್ಮದ ಬಗ್ಗೆ ಹೆಚ್ಚಿನ ಒಲವು.

ಸ್ವಾಮೀಜಿಗಳ ಪ್ರವಚನದಿಂದ ಪ್ರಭಾವಿತನಾಗಿದ್ದೆ
ಅದಮಾರು ಮಠದ ಶ್ರೀವಿಶ್ವಪ್ರಿಯ ತೀರ್ಥ ಸ್ವಾಮೀಜಿಗಳ ಪ್ರವಚನದಿಂದ ನಾನು ಪ್ರಭಾವಿತನಾಗಿದ್ದೆ. ಶ್ರೀಕೃಷ್ಣನ ಪೂಜೆಗೆ ಅವಕಾಶ ಕಲ್ಪಿಸುವಂತೆ ಸನ್ಯಾಸದೀಕ್ಷೆ ಕೇಳಿದ್ದೆ. ಈಗ ಅದಕ್ಕೆ ಕಾಲ ಕೂಡಿ ಬಂದಿದೆ. ನನ್ನ ಕರ್ತವ್ಯವನ್ನು ಪ್ರಾಮಾಣಿಕವಾಗಿ ಮಾಡಲು ಶಕ್ತಿಮೀರಿ ಪ್ರಯತ್ನಿಸುತ್ತೇನೆ ಎಂದು ಶ್ರೀಶ ಅವರು ಹೇಳಿದ್ದಾರೆ.

ವಿದ್ಯಾಭ್ಯಾಸ
ಪ್ರಾಥಮಿಕ, ಪ್ರೌಢ ಮತ್ತು ಪಿಯುಸಿ ಶಿಕ್ಷಣವನ್ನು ತೀರ್ಥಹಳ್ಳಿಯಲ್ಲಿ ಪಡೆದ ಶ್ರೀಶ, ಶಿವಮೊಗ್ಗದ ನೆಹರೂ ಕಾಲೇಜಿನಲ್ಲಿ ಬಿಇ ಪದವಿಯನ್ನು ಪಡೆದರು. ಶ್ರೀಶ ಅವರಿಗೆ ಮೂವರು ಅಣ್ಣಂದಿರು.

ಗುರುಗಳ ವಿಶ್ವಾಸ
ಶ್ರೀಶ ಅವರಿಗೆ ಆಧ್ಯಾತ್ಮಕದಲ್ಲಿ ಹೆಚ್ಚಿನ ಒಲವು ಇದೆ. ಪದವೀಧರನಾಗಿರುವುದರಿಂದ ತಿಳುವಳಿಕೆ ಕೂಡಾ ಇದೆ. ನಮ್ಮ ಮಠದ ಅಧೀನದಲ್ಲಿ ಶಿಕ್ಷಣ ಸಂಸ್ಥೆಗಳು ಇರುವುದರಿಂದ ಅದನ್ನು ಉತ್ತಮ ರೀತಿಯಲ್ಲಿ ನಿರ್ವಹಿಸಿಕೊಂಡು ಹೋಗುವ ವಿಶ್ವಾಸ ಶ್ರೀಶ ಅವರ ಮೇಲಿದೆ ಎಂದು ಶ್ರೀವಿಶ್ವಪ್ರಿಯ ತೀರ್ಥ ಶ್ರೀಗಳು ಹೇಳಿದ್ದಾರೆ.












Click it and Unblock the Notifications