ಮೂರನೇ ಮದುವೆಯಾದ ಭೂಪನಿಂದ ಪತ್ನಿಗೆ ಚಿತ್ರಹಿಂಸೆ, ಪತ್ನಿಯಿಂದ ದೂರು ದಾಖಲು
ಉಡುಪಿ, ಆಗಸ್ಟ್ 30: ವಂಚಿಸಿ ಮೂರನೇ ಮದುವೆಯಾಗಿ, ಬಳಿಕ ಪತ್ನಿಗೆ ವರದಕ್ಷಿಣೆ ಕಿರುಕುಳ, ಚಿತ್ರಹಿಂಸೆ ನೀಡಿದ ಪತಿ ವಿರುದ್ಧ ಪತ್ನಿ ಠಾಣೆ ಮೆಟ್ಟಿಲೇರಿದ್ದಾರೆ.
ಎಂಟು ತಿಂಗಳ ಹಿಂದೆ ವಿವಾಹವಾಗಿದ್ದ ಪತ್ನಿಗೆ ವರದಕ್ಷಿಣೆ ನೀಡುವಂತೆ ಕಿರುಕುಳ ನೀಡಿದ್ದಲ್ಲದೇ ಮನೆಯವರೆಲ್ಲರೂ ಸೇರಿ ಹಲ್ಲೆ ನಡೆಸಿದ ಪ್ರಕರಣ ಇದಾಗಿದೆ. ಈ ಸಂಬಂಧ ನೊಂದ ಪತ್ನಿ ಕುಂದಾಪುರ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ. ಕುಂದಾಪುರ ತಾಲೂಕು ವಕ್ವಾಡಿ ಗ್ರಾಮದ ನೂರ್ ಜಹಾನ್ (25) ಎಂಬಾಕೆ ದೂರು ನೀಡಿದ ಮಹಿಳೆ.
ಈಕೆ ಭಟ್ಕಳದ ರಿಯಾಜ್ ಎಂಬಾತನನ್ನು 2018ರ ಡಿಸೆಂಬರ್ 23ರಂದು ಮದುವೆಯಾಗಿದ್ದರು. ಮದುವೆಯ ಬಳಿಕ ಜಹಾನ್ ಗಂಡನ ಮನೆಯಲ್ಲಿಯೇ ಇದ್ದರು. ಆ ಸಂದರ್ಭದಲ್ಲಿ ಜಹಾನಳ ಗಂಡ ರಿಯಾಜ್, ಮಾವ, ಅತ್ತೆ ಹಾಗು ನಾದಿನಿಯರು ವರದಕ್ಷಿಣಿ ಹಣ, ಚಿನ್ನ ತಂದುಕೊಡುವಂತೆ ಹಿಂಸೆ ನೀಡಿದ್ದಾರೆ.

ಆಗಸ್ಟ್ 27ರಂದು ಇವರೆಲ್ಲರೂ ಸೇರಿಕೊಂಡು ತನ್ನನ್ನು ವರದಕ್ಷಿಣೆ ತರುವಂತೆ ಬೈದು ಹಲ್ಲೆ ನಡೆಸಿದ್ದಾಗಿ ನೂರ್ ಜಹಾನ್ ಪೊಲೀಸರಿಗೆ ನೀಡಿದ ದೂರಿನಲ್ಲಿ ತಿಳಿಸಿದ್ದಾರೆ.
ಈ ಸಂಬಂಧ ಕುಂದಾಪುರದಲ್ಲಿ ಸುದ್ದಿಗೋಷ್ಠಿ ನಡೆಸಿದ ನೂರ್ ಜಹಾನ್, "ಗಂಡ, ಅತ್ತೆ, ಮಾವ, ನಾದಿನಿಯರು ಸೇರಿ ನನಗೆ ನಿರಂತರವಾಗಿ ಚಿತ್ರಹಿಂಸೆ ನೀಡುತ್ತಿದ್ದಾರೆ. ಗಂಡ ರಿಯಾಝ್ ಅವರಿಗೆ ನಾನು ಮೂರನೇ ಹೆಂಡತಿ. ಇದಕ್ಕೂ ಮೊದಲು ಇಬ್ಬರನ್ನು ಮದುವೆಯಾಗಿ ವರದಕ್ಷಿಣೆ ಹಿಂಸೆ ನೀಡಿ ಅವರು ಬಿಟ್ಟು ಹೋಗಿದ್ದರು. ಒಬ್ಬಾಕೆಗೆ ಒಂದು ಮಗು ಕೂಡ ಇದೆ. ಮೊನ್ನೆ ಎಲ್ಲರೂ ಸೇರಿ ನನ್ನ ಮೇಲೆ ಹಲ್ಲೆ ಮಾಡಿದರು. ನಾನು ತಪ್ಪಿಸಿಕೊಂಡು ಹೊರಗೆ ಓಡಿ ಬಂದೆ. ನನಗೆ ನ್ಯಾಯ ಕೊಡಿಸಿ" ಎಂದು ಆಗ್ರಹಿಸಿದ್ದಾರೆ.












Click it and Unblock the Notifications