ರಾಜ್ಯದಲ್ಲಿ ಸಂಪೂರ್ಣ ಮದ್ಯ ನಿಷೇಧ ಇಲ್ಲ: ಸಿದ್ದರಾಮಯ್ಯ
ಉಡುಪಿ, ನವೆಂಬರ್ 19: ರಾಜ್ಯದಲ್ಲಿ ಸಂಪೂರ್ಣ ಮದ್ಯ ಮಾರಾಟ ನಿಷೇಧಿಸುವ ಯಾವುದೇ ಪ್ರಸ್ತಾವನೆ ಸರಕಾರದ ಮುಂದೆ ಇಲ್ಲ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಸ್ಪಷ್ಟಪಡಿಸಿದ್ದಾರೆ.
ಉಡುಪಿಯಲ್ಲಿ ಡಾ.ಬಿ.ಆರ್. ಶೆಟ್ಟಿ ನಿರ್ಮಿಸಿರುವ ಆಸ್ಪತ್ರೆ ಉದ್ಘಾಟನೆಗೆ ಆಗಮಿಸಿದ ಅವರು ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿ, "ಕೆಪಿಎಂಇ ತಿದ್ದುಪಡಿ ಮಸೂದೆಯನ್ನು ಸೋಮವಾರ ಅಧಿವೇಶನದಲ್ಲಿ ಮಂಡಿಸಲಾಗುವುದು," ಎಂದು ಪ್ರತಿಕ್ರಿಯೆ ನೀಡಿದರು.
"ವೈದ್ಯರ ಹೋರಾಟದಲ್ಲಿ ಯಾರೂ ಸೋತಿಲ್ಲ; ಯಾರೂ ಗೆದ್ದಿಲ್ಲ. ಮಸೂದೆ ಜಾರಿಯಾದರೆ ಅದು ರಾಜ್ಯದ ಜನತೆಯ ಗೆಲುವು," ಎಂದು ಮುಖ್ಯಮಂತ್ರಿಗಳು ವಿಶ್ಲೇಷಿಸಿದರು.

ಇನ್ನು ಉಡುಪಿ ಕೃಷ್ಣ ಮಠದ ಬಗ್ಗೆ ಪ್ರತಿಕ್ರಿಯೆ ನೀಡಿದ ಮುಖ್ಯಮಂತ್ರಿಗಳು, "ನಾನು ಕೃಷ್ಣಮಠಕ್ಕೆ ಹೋಗಲ್ಲ. ಈ ಬಾರಿ ನನಗೆ ಕೃಷ್ಣ ಮಠಕ್ಕೆ ಭೇಟಿ ನೀಡುವಂತೆ ಯಾವುದೇ ಆಹ್ವಾನ ಬಂದಿಲ್ಲ. ಕಾಗಿನೆಲೆ ಸ್ವಾಮೀಜಿ ಮಠಕ್ಕೆ ಬಂದು ಹೋಗಿದ್ದಾರೆ. ನಾನೇನೂ ಯಾರನ್ನೂ ಮಠಕ್ಕೆ ಹೋಗಬೇಡಿ ಎಂದು ಹೇಳಿಲ್ಲ. ಯಾರು ಬೇಕಾದರೂ ಮಠ ದೇವಸ್ಥಾನಕ್ಕೆ ಹೋಗಬಹುದು. ಅದು ಅವರವರ ನಂಬಿಕೆಗೆ ಬಿಟ್ಟದ್ದು. ನಾನು ಉದ್ದೇಶಪೂರ್ವಕವಾಗಿ ಮಠಕ್ಕೆ ಹೋಗದೆ ಇರುವುದಲ್ಲ," ಎಂದು ತಿಳಿಸಿದರು.
'ನನಗೆ ಕೃಷ್ಣ ಮಠದ ಬಗ್ಗೆ ಯಾವುದೇ ದ್ವೇಷ ಇಲ್ಲ. ಪೇಜಾವರ ಶ್ರೀಗಳ ಜೊತೆಯೂ ಯಾವುದೇ ಸಂಘರ್ಷವಿಲ್ಲ. ರಾಜ್ಯದ ಆರೂವರೆ ಕೋಟಿ ಜನರ ಜತೆಗೂ ನಾನು ಚೆನ್ನಾಗಿದ್ದೇನೆ' ಎಂದು ಅವರು ಸ್ಪಷ್ಟಪಡಿಸಿದರು.
"ಈ ಹಿಂದೆ ನಾನು ಮಠಕ್ಕೆ ಹೋಗಿದ್ದೆ. ನಾನು ಶಿವಭಕ್ತನೂ ಹೌದು, ಕೃಷ್ಣ ಭಕ್ತನೂ ಹೌದು. ದೇವನೊಬ್ಬನೇ ನಾಮ ಹಲವು ಎಂದು ನಂಬಿದವನು," ಎಂದು ಸಿದ್ದರಾಮಯ್ಯ ವಿವರಿಸಿದರು.
'ನನ್ನ ವಿರುದ್ಧ ಬಿಜೆಪಿಯವರು ಅಪಪ್ರಚಾರ ಮಾಡಲಿ. ಅದು ಅವರಿಗೇ ನೆಗೆಟಿವ್ ಆಗುತ್ತದೆ. ರಾಜ್ಯದ ಜನ ಎಲ್ಲದನ್ನೂ ತೀರ್ಮಾನ ಮಾಡುತ್ತಾರೆ,' ಎಂದು ಸಿದ್ದರಾಮಯ್ಯ ಆಕ್ರೋಶ ವ್ಯಕ್ತಪಡಿಸಿದರು.
ಇದೇ ವೇಳೇ ಲಿಂಗಾಯತ ಸಮಾವೇಶದ ಬಗ್ಗೆ ಮಾತನಾಡಿದ ಮುಖ್ಯಮಂತ್ರಿಗಳು, "ಇದಕ್ಕೂ ನನಗೂ ಸಂಬಂಧವಿಲ್ಲ. ಅವರು ಡಿಸೆಂಬರ್ 31ರ ಗಡುವು ಕೊಟ್ಟಿರುವ ಬಗ್ಗೆಯೂ ನನಗೆ ಗೊತ್ತಿಲ್ಲ," ಎಂದು ಮಾಹಿತಿ ನೀಡಿದರು.
ಇಂದಿರಾ ಕ್ಯಾಂಟೀನ್ ಕಳಪೆ ಗುಣಮಟ್ಟ ಅಕ್ಕಿ ಪೂರೈಕೆ ಆರೋಪದ ಬಗ್ಗೆ ಪ್ರತಿಕ್ರಿಯೆ ನೀಡಿದ ಅವರು, "ಒಟ್ಟಾರೆ ಈ ಆರೋಪವೇ ಸರಿಯಾದುದಲ್ಲ. ಗ್ರಾಹಕರಿಂದ ಈ ಬಗ್ಗೆ ಯಾವುದೇ ದೂರುಗಳು ಬಂದಿಲ್ಲ," ಎಂದರು.
ಆಸ್ಪತ್ರೆ ಉದ್ಘಾಟನೆ
ನಂತರ ಮುಖ್ಯಮಂತ್ರಿಗಳು ಉಡುಪಿಯ ನಗರ ಭಾಗದಲ್ಲಿ ನಿರ್ಮಿಸಲಾದ ಅರೆ ಸರ್ಕಾರಿ ಆಸ್ಪತ್ರೆ ಕಟ್ಟಡ ಉದ್ಘಾಟಿಸಿದರು.
'ಕೂಸಮ್ಮ ಶಂಭುಶೆಟ್ಟಿ ಸ್ಮಾರಕ ಹಾಜಿ ಅಬ್ದುಲ್ಲಾ ತಾಯಿ ಮತ್ತು ಮಕ್ಕಳ ಆಸ್ಪತ್ರೆ'ಯನ್ನು ದೀಪ ಬೆಳಗಿಸಿ, ರಿಬ್ಬನ್ ಕಟ್ ಮಾಡಿ ಸಿ.ಎಂ ಸಿದ್ದರಾಮಯ್ಯ ಉದ್ಘಾಟನೆ ಮಾಡಿದರು.
ಆರೋಗ್ಯ ಸಚಿವ ರಮೇಶ್ ಕುಮಾರ್, ಆಹಾರ ಸಚಿವ ಯು.ಟಿ ಖಾದರ್, ಬೆಂಗಳೂರು ಅಭಿವೃದ್ಧಿ ಸಚಿವ ಕೆ.ಜೆ ಜಾರ್ಜ್, ಬಿ.ಆರ್.ವೆಂಚರ್ಸ್ ಸಂಸ್ಥೆಯ ಮುಖ್ಯಸ್ಥ ಬಿ.ಆರ್.ಶೆಟ್ಟಿ ಈ ಸಂದರ್ಭ ಉಪಸ್ಥಿತರಿದ್ದರು.












Click it and Unblock the Notifications