Udupi: ಪ್ರೇಯಸಿಯೊಡನೆ ಜಗಳವಾಡಿ ಅರ್ಧಕ್ಕೆ ಬಸ್ ನಿಲ್ಲಿಸಿ ಹೋದ ಚಾಲಕ: ಪ್ರಯಾಣಿಕರ ಪರದಾಟ
ಉಡುಪಿ, ಜುಲೈ 05: ಖಾಸಗಿ ಬಸ್ ಚಾಲಕನೊಬ್ಬ ತನ್ನ ಪ್ರೇಯಸಿಯೊಂದಿಗೆ ವಾಗ್ವಾದಕ್ಕಿಳಿದು ಬಸ್ಸನ್ನು ಅರ್ಧದಾರಿಯಲ್ಲಿ ನಿಲ್ಲಿಸಿ ಹೋದ ವಿಚಿತ್ರ ಘಟನೆ ಉಡುಪಿಯಲ್ಲಿ ನಡೆದಿದೆ. ಉಡುಪಿ ನಗರದಿಂದ ಸಂತೆಕಟ್ಟೆಗೆ ತೆರಳುತ್ತಿದ್ದ ಖಾಸಗಿ ಬಸ್ನಲ್ಲಿ ಈ ಘಟನೆ ನಡೆದಿದ್ದು, ಪ್ರಯಾಣಿಕರು ಪರದಾಡಿದ್ದಾರೆ.
ಉಡುಪಿಯಿಂದ ಸಂತೆಕಟ್ಟೆ ಭಾಗಕ್ಕೆ ತೆರಳುತ್ತಿದ್ದ ಖಾಸಗಿ ಬಸ್ಗೆ ನಿಟ್ಟೂರು ಬಳಿ ಬಸ್ ಚಾಲಕನ ಪ್ರೇಯಸಿ ಬಸ್ ಹತ್ತಿದ್ದಾಳೆ. ಈ ವೇಳೆ ಚಾಲಕನ ಪ್ರೇಯಸಿ ಹಾಗೂ ಚಾಲಕನ ಮಧ್ಯೆ ಮಾತಿನ ಚಕಮಕಿ ನಡೆದಿದೆ. ನಿರ್ವಾಹಕ ಸಮಾಧಾನಪಡಿಸಲು ಯತ್ನಿಸಿದರೂ ಸಾಧ್ಯವಾಗಲಿಲ್ಲ. ಇವರಿಬ್ಬರ ವಾಗ್ವಾದದ ಮುಂದೆ ಅವರ ಪ್ರಯತ್ನ ವಿಫಲವಾಯಿತು.

ವಾಗ್ವಾದದ ಮಧ್ಯೆಯೂ ಚಾಲಕ ಬಸ್ಸನ್ನು ಚಲಾಯಿಸುತ್ತಲೇ ಇದ್ದನು. ಕೊನೆಯಲ್ಲಿ ಪ್ರೇಯಸಿಯ ಕಿರಿಕಿರಿಯಿಂದ ರೋಸಿ ಹೋದ ಚಾಲಕ ಬಸ್ಸನ್ನು ಅಂತಿಮವಾಗಿ ಸಂತೆಕಟ್ಟೆಯ ಆಶೀರ್ವಾದ್ ಥಿಯೇಟರ್ ಬಳಿ ನಿಲ್ಲಿಸಿ, ಬಸ್ನಿಂದ ಇಳಿದು ಹೊರಟು ಹೋಗಿದ್ದಾನೆ. ಆತ ಬಸ್ ಇಳಿದುಹೋದ ಬೆನ್ನಲ್ಲೇ ಪೇಯಸಿಯೂ ಬಸ್ಸಿನಿಂದ ಇಳಿದು ಹೊರಟು ಹೋಗಿದ್ದಾಳೆ ಎನ್ನಲಾಗಿದೆ.
ಬಸ್ಚಾಲಕ ಹಾಗೂ ಆತನ ಪ್ರೇಯಸಿಯ ನಡುವಿನ ವಾಗ್ವಾದದಿಂದಾಗಿ ಬಸ್ನಲ್ಲಿದ್ದ ಪ್ರಯಾಣಿಕರು ಪರದಾಡುವಂತಾಯಿತು. ಕೊನೆಗೆ ಪ್ರಯಾಣಿಕರ ಪರಿಸ್ಥಿತಿ ಕಂಡ ಕಂಡಕ್ಟರ್ ಬಸ್ ಓಡಿಸಿಕೊಂಡು ಸ್ಥಳೀಯ ನಿಲ್ದಾಣಕ್ಕೆ ತಂದು ನಿಲ್ಲಿಸಿದ್ದಾನೆ ಎನ್ನಲಾಗಿದೆ. ಬಸ್ ನಿಲ್ಲಿಸಿ ತೆರಳಿದ ಚಾಲಕನ ನಿರ್ಲಕ್ಷ್ಯತನಕ್ಕೆ ಪ್ರಯಾಣಿಕರು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಉಡುಪಿ: ಗುಡ್ಡ ಕುಸಿದು ಮಹಿಳೆ ಸಾವು
ಉಡುಪಿ: ರಾಜ್ಯದ ಹಲವೆಡೆ ಮಳೆಯ ಆರ್ಭಟ ಜೋರಾಗಿದ್ದು, ವರುಣನ ಅಬ್ಬರಕ್ಕೆ ಜನ ಜೀವನ ಅಸ್ತವ್ಯಸ್ತಗೊಂಡಿದೆ. ಉಡುಪಿ ಜಿಲ್ಲೆಯಲ್ಲೂ ಕಳೆದ ಒಂದು ವಾರದಿಂದ ನಿರಂತರ ಮಳೆಯಾಗುತ್ತಿದ್ದು, ಮಳೆಯ ಅವಾಂತರಗಳು ದಿನದಿಂದ ದಿನಕ್ಕೆ ಹೆಚ್ಚಾಗುತ್ತಿದೆ. ಉಡುಪಿ ಜಿಲ್ಲೆಯ ಬೈಂದೂರು ತಾಲೂಕಿನ ಕೊಲ್ಲೂರು ಗ್ರಾಮದ ಸೊಸೈಟಿ ಗುಡ್ಡೆ ಎಂಬಲ್ಲಿ ಮಹಿಳೆಯೊಬ್ಬರು ಗುಡ್ಡ ಕುಸಿದು ಮಣ್ಣಿನಡಿ ಸಿಲುಕಿ ಉಸುರುಗಟ್ಟಿ ಸಾವನ್ನಪ್ಪಿದ್ದಾರೆ. ಹಳ್ಳಿ ಬೇರು ನಿವಾಸಿ ಅಂಬಾ (45) ಮೃತ ದುರ್ದೈವಿ ಎಂದು ಗುರುತಿಸಲಾಗಿದೆ. ಕೊಲ್ಲೂರು ಪೊಲೀಸ್ ಠಾಣೆಯಲ್ಲಿ ವ್ಯಾಪ್ತಿಯಲ್ಲಿ ಘಟನೆ ನಡೆದಿದ್ದು, ಸ್ಥಳೀಯರ ಸಹಾಯದಿಂದ ಮಹಿಳೆಯ ಮೃತದೇಹವನ್ನು ಹೊರ ತೆಗೆಯಲಾಗಿದೆ.












Click it and Unblock the Notifications