ನಾಗರ ಪಂಚಮಿಯಂದು ಉಡುಪಿಯಲ್ಲಿ ಜೀವಂತ ನಾಗನಿಗೆ ಎಳನೀರಿನ ಅಭಿಷೇಕ
ಉಡುಪಿ, ಜುಲೈ 29: ನಾಗರ ಪಂಚಮಿಯಂದು ಎಲ್ಲೆಡೆ ಶಿಲಾ ನಾಗನಿಗೆ ಎಳನೀರು, ಹಾಲಿನ ಅಭಿಷೇಕ ಮಾಡಲಾಗುತ್ತದೆ. ಆದರೆ ಉಡುಪಿ ಜಿಲ್ಲೆಯ ಕಾಪು ಬಳಿಯ ಮಜೂರಿನಲ್ಲಿ ಮಾತ್ರ ಜೀವಂತ ನಾಗನಿಗೆ ಎಳನೀರು ಅಭಿಷೇಕ ಮಾಡುತ್ತಾರೆ. ಏನಿದು ಕಥೆ ಮುಂದೆ ಓದಿ.
ಪ್ರತಿವರ್ಷ ನಾಗರ ಪಂಚಮಿಯಂದು ಜೀವಂತ ನಾಗರ ಹಾವಿನ ನೆತ್ತಿಗೆ ಎಳನೀರು ಸುರಿದು ಸೇವೆ ನಡೆಸುವುದು ಉಡುಪಿಯ ಕಾಪು ಸಮೀಪದ ಮಜೂರಿನ ಗೋವರ್ಧನ ಭಟ್ ನಡೆಸಿಕೊಂಡು ಬಂದ ಸಂಪ್ರದಾಯ. ಅದರಂತೆ ಅವರು ಈ ಬಾರಿ ನಾಗರ ಪಂಚಮಿಗೆ ಮೂರೂ ಜೀವಂತ ಹಾವುಗಳಿಗೆ ಎಳನೀರು ಎರೆದು ಸಂತೃಪ್ತರಾಗಿದ್ದರೆ.

ಇವರು ವೃತ್ತಿಯಲ್ಲಿ ಎಲೆಕ್ಟ್ರೀಶಿಯನ್; ಆದರೆ ಹಾವು ಹಿಡಿಯುವದು ಮತ್ತು ಗಾಯಗೊಂಡ ಹಾವುಗಳನ್ನು ಮನೆಗೆ ತಂದು ಉಪಚರಿಸಿ ಚಿಕಿತ್ಸೆ ನೀಡಿ ಗುಣಮುಖವಾದೊಡನೆ ಕಾಡಿಗೆ ಬಿಡುವುದು ಇವರ ನೆಚ್ಚಿನ ಹವ್ಯಾಸ. ಗಾಯಗೊಂಡು ಹಾವುಗಳು ಭಟ್ಟರ ಚಿಕಿತ್ಸೆಯಲ್ಲಿದ್ದಾಗ ನಾಗರ ಪಂಚಮಿ ಬಂದರೆ ಆ ದಿನ ಆ ಹಾವುಗಳಿಗೆ ಎಳನೀರಿನ ಅಭಿಷೇಕ ದೊರೆಯುತ್ತದೆ. ಈ ವರ್ಷ 175 ಕ್ಕಿಂತ ಹೆಚ್ಚು ಹಾವುಗಳನ್ನು ಹಿಡಿದಿರುವ ಇವರು ಈ ವರ್ಷ ನಾಗರ ಪಂಚಮಿಯಂದು ಮೂರೂ ನಾಗರಗಳು ಮನೆಯಲ್ಲಿದ್ದ ಕಾರಣ ಮೂರಕ್ಕೂ ತನು ಎರೆದಿದ್ದಾರೆ.

ಮೂಲತಃ ನಾಗ ಪಾತ್ರಿಯಾಗಿದ್ದ ಅಜ್ಜ ಅನಂತ ಕೃಷ್ಣ ಭಟ್ ಹಾವು ಹಿಡಿಯುವುದು, ಆರೈಕೆ ಮಾಡುವುದು ಮಾಡುತ್ತಿದ್ದರು. ಅಜ್ಜನಿಂದ ಇದನ್ನು ಕಲಿತ ಗೋವರ್ಧನ ಭಟ್ ಅದನ್ನು ಮುಂದುವರಿಸಿದ್ದಾರೆ. ಮಗ ಮಧುಸೂದನ ಕೂಡ ತಂದೆಯಂತೆಯೇ ಹಾವು ಹಿಡಿಯಬಲ್ಲರು. ಹಿಡಿದ ಹಾವು ಅರೋಗ್ಯವಾಗಿದ್ದರೆ ದೂರದ ಕಾಡಿಗೆ ಬಿಡುತ್ತಾರೆ. ಗಾಯಗೊಂಡಿದ್ದರೆ ಆರೈಕೆ ಮಾಡುತ್ತಾರೆ.
ಆರೈಕೆಯಲ್ಲಿರುವಾಗ ಹಾವುಗಳೇನಾದರೂ ಸತ್ತರೆ ಸಂಸ್ಕಾರ ಮಾಡಿ ಪ್ರಾಯಶ್ಚಿತ್ತವಾಗಿ ಅದರ ಕ್ರೀಯಾ ಕರ್ಮಗಳನ್ನೂ ಮಾಡುತ್ತಾರೆ. ಮನೆ ಪಕ್ಕದ ನಾಗ ಬನದಲ್ಲಿ ನಾಗಾರಾಧನೆಯನ್ನೂ ಮಾಡುವ ಇವರು ಮನೆಯಲ್ಲಿ ಇತರರಿಗಾಗಿ ನಾಗನ ಹೋಮ ಮಾಡುತ್ತಾರೆ. ಇವರ ತಾಯಿ ನೀರಜ, ಪ್ರತ್ನಿ ದೇವಿ, ಪುತ್ರ ಮಧುಸೂದನ, ಪುತ್ರಿ ಶೈಲಾ ಇವರ ಹವ್ಯಾಸಕ್ಕೆ ಸಹಕಾರ ನೀಡುತ್ತಾ ಬಂದಿದ್ದಾರೆ.












Click it and Unblock the Notifications