ಉಡುಪಿ ಶ್ರೀ ಕೃಷ್ಣನ ಗರ್ಭಗುಡಿಗೆ ಸುವರ್ಣ ಶಿಖರ ಪ್ರತಿಷ್ಠಾಪನೆ
ಉಡುಪಿ, ಜೂನ್ 7: ಕೃಷ್ಣ ಮಠದ ಗರ್ಭಗುಡಿಗೆ ಚಿನ್ನದ ಹೊದಿಕೆ ಹಾಗೂ ಸುವರ್ಣ ಗೋಪುರ ಶಿಖರ ಪ್ರತಿಷ್ಠೆಯು ಜೂನ್ 6ಕ್ಕೆ ನೆರವೇರಿತು. ಪರ್ಯಾಯ ಪಲಿಮಾರು ಮಠದ ಶ್ರೀವಿದ್ಯಾಧೀಶ ತೀರ್ಥ ಶ್ರೀ ಮಹತ್ವಾಕಾಂಕ್ಷಿ ಯೋಜನೆಯಾದ ಕೃಷ್ಣ ಮಠದ ಗರ್ಭಗುಡಿಗೆ ಚಿನ್ನದ ಹೊದಿಕೆ ಹಾಗೂ ಸುವರ್ಣ ಗೋಪುರ ಶಿಖರ ಪ್ರತಿಷ್ಠೆಯೊಂದಿಗೆ ಸುವರ್ಣ ಗೋಪುರಕ್ಕೆ ಸಹಸ್ರ ರಜತ ಕಲಶಾಭಿಷೇಕ ಅಷ್ಟ ಮಠಾಧೀಶರ ಉಪಸ್ಥಿತಿಯಲ್ಲಿ ನೆರವೇರಿತು.
ಇಂದು ಸುವರ್ಣ ಗೋಪುರದ ಸಮರ್ಪಣೋತ್ಸವದ ಅಂಗವಾಗಿ ಮೂರು ಸ್ವರ್ಣ ಶಿಖರಗಳ ಪ್ರತಿಷ್ಠೆ, 1008 ಕಲಶಗಳ ಅಭಿಷೇಕ ನಡೆಯಿತು. ಸ್ವರ್ಣ ಗೋಪುರಕ್ಕೆ ಅಟ್ಟಳಿಗೆ ಕಟ್ಟಿ ಅಲ್ಲಿ ನಿಂತು ಅಷ್ಟ ಮಠಾಧೀಶರು ಮೂರೂ ಶಿಖರಗಳಿಗೆ ಅಭಿಷೇಕ ಮಾಡಿದರು. ಪರ್ಯಾಯ ಶ್ರೀಪಲಿಮಾರು ಮಠದ, ಶ್ರೀಪೇಜಾವರ ಮಠದ, ಶ್ರೀ ಅದಮಾರು ಮಠದ ಹಿರಿಯ, ಕಿರಿಯ ಮಠಾಧೀಶರು, ಶ್ರೀಕೃಷ್ಣಾಪುರ, ಶ್ರೀಕಾಣಿಯೂರು ಹಾಗೂ ಶ್ರೀಸೋದೆ ಮಠಾಧೀಶರು ಕಾರ್ಯಕ್ರಮದಲ್ಲಿ ಪಾಲ್ಗೊಂಡರು.
ಸುಮಾರು 40 ಕೋಟಿ ರೂ.ವೆಚ್ಚದ ಈ ಯೋಜನೆಯಲ್ಲಿ ಕೃಷ್ಣ ಮಠದ ಗರ್ಭಗುಡಿಯ ಮೇಲೆ ಚಿನ್ನದ ಹೊದಿಕೆ ಹಾಗೂ ಸ್ವರ್ಣ ಗೋಪುರದ ಪ್ರತಿಷ್ಠಾಪನೆಗೆ ಒಟ್ಟು 100 ಕೆ.ಜಿ.ಗೂ ಅಧಿಕ ಚಿನ್ನ, 900 ಕೆ.ಜಿ.ಬೆಳ್ಳಿ ಹಾಗೂ 300 ಕೆ.ಜಿ.ಯಷ್ಟು ತಾಮ್ರವನ್ನು ಬಳಸಲಾಗಿದೆ.

ತೇಗದ ಮರದ ತೊಲೆಗಳ ಮೇಲೆ ತಾಮ್ರದ ಶೀಟನ್ನು ಹೊದಿಸಿ ಅದರ ಮೇಲೆ ಬೆಳ್ಳಿಯ ಶೀಟನ್ನು ಅಳವಡಿಸಲಾಗಿತ್ತು. ಅದರ ಮೇಲೆ 23 ಕ್ಯಾರೆಟ್ ಚಿನ್ನದ ತಗಡನ್ನು ಹಾಸಲಾಗಿದೆ. ಇದರಿಂದ ಗರ್ಭಗುಡಿಯು ಹಚ್ಚ ಹಳದಿ ಬಣ್ಣದಿಂದ ಮಿರುಗುತ್ತಿದೆ. ತಾಮ್ರದ ತಗಡಿನ ಮೇಲೆ ಶ್ರೀಮಧ್ವಚಾರ್ಯರು ಬರೆದ ಸರ್ವಮೂಲ ಗ್ರಂಥದ ಶ್ಲೋಕಗಳನ್ನು ಕೆತ್ತಲಾಗಿದೆ.
ಸುವರ್ಣ ಗೋಪುರ ಶಿಖರ ಪ್ರತಿಷ್ಠೆ ಹಾಗೂ ಬ್ರಹ್ಮಕಲಶಾಭಿಷೇಕ ಮಹೋತ್ಸವದ ಧಾರ್ಮಿಕ ಕಾರ್ಯಕ್ರಮದ ಅಂಗವಾಗಿ ರಥಬೀದಿಯಲ್ಲಿ ಉಡುಪಿಯ ಕರಾವಳಿ ಪ್ರಾಂತದ ಕುಣಿತ, ಭಜನಾ ಮಂಡಳಿಗಳು ಹಾಗೂ ಜಿಲ್ಲಾ ಭಜನಾ ಮಂಡಳಿಗಳ ಒಕ್ಕೂಟದಿಂದ ಸಂಕೀರ್ತನ ನರ್ತನ ಸೇವೆ ನಡೆಯಿತು. ಇದನ್ನು ಧರ್ಮಸ್ಥಳದ ಹರ್ಷೇಂದ್ರ ಹೆಗ್ಗಡೆ ಉದ್ಘಾಟಿಸಿದರು.
ಮೈಸೂರಿನ ಯದುವೀರಕೃಷ್ಣದತ್ತ ಚಾಮರಾಜ ಒಡೆಯರು ಶ್ರೀಕೃಷ್ಣ ಮಠಕ್ಕೆ ಭೇಟಿ ನೀಡಿದ್ದು, ಪರ್ಯಾಯ ಪಲಿಮಾರು ಮಠಾಧೀಶರಾದ ಶ್ರೀವಿದ್ಯಾಧೀಶ ತೀರ್ಥ ಶ್ರೀ ಅನುಗ್ರಹ ಮಂತ್ರಾಕ್ಷತೆಗಳನ್ನು ನೀಡಿ ಅವರನ್ನು ಗೌರವಿಸಿದರು.












Click it and Unblock the Notifications