ಅಪಘಾತದಲ್ಲಿ ಗಾಯಗೊಂಡವರ ನೆರವಿಗೆ ಬಂದ ಶ್ರೀರಾಮುಲು
ಉಡುಪಿ, ಸೆಪ್ಟೆಂಬರ್ 28: ಉಡುಪಿಯ ಕುಂಭಾಶಿ ಬಳಿ ಅಪಘಾತಕ್ಕೀಡಾದ ಗಾಯಾಳುಗಳನ್ನು ಸ್ವತಃ ಆರೋಗ್ಯ ಸಚಿವ ಶ್ರೀರಾಮುಲು ಅವರು ತಮ್ಮ ವಾಹನದಲ್ಲೇ ಕರೆದುಕೊಂಡು ಹೋಗಿ ಆಸ್ಪತ್ರೆಗೆ ದಾಖಲಿಸಿದ್ದಾರೆ.
ಕುಂಭಾಶಿ ರಸ್ತೆಯಲ್ಲಿ ಬೈಕ್ ಸವಾರರೊಬ್ಬರು ಲಾರಿಗೆ ಡಿಕ್ಕಿಯಾಗಿ ರಸ್ತೆಗೆ ಬಿದ್ದರು. ಇದೇ ಸಮಯದಲ್ಲಿ ಹಿಂದಿನಿಂದ ಬರುತ್ತಿದ್ದ ಆಟೋ ರಿಕ್ಷಾ ನಿಯಂತ್ರಣ ತಪ್ಪಿ ಡಿವೈಡರ್ ಮೇಲೆ ಪಲ್ಟಿಯಾಯಿತು. ರಿಕ್ಷಾದಲ್ಲಿದ್ದ ಮೂವರು ಪ್ರಯಾಣಿಕರಿಗೆ ಗಾಯಗಳಾಯಿತು. ಇದೇ ವೇಳೆ ಉಡುಪಿಯಿಂದ ಕುಂದಾಪುರಕ್ಕೆ ತೆರಳುತ್ತಿದ್ದ ಶಾಸಕ ರಘುಪತಿ ಭಟ್, ಸಚಿವ ಶ್ರೀರಾಮುಲು ಅಪಘಾತವನ್ನು ನೋಡಿ ಸ್ಥಳಕ್ಕೆ ಬಂದರು. ಗಾಯಾಳುಗಳಿಗೆ ನೀರು ಕುಡಿಸಿ ಸಮಾಧಾನಿಸಿ ಅವರನ್ನು ತಾನೇ ಎತ್ತಿ ಕಾರಿನಲ್ಲಿ ಕೂರಿಸಿದರು ನಂತರ ಆಸ್ಪತ್ರೆಗೆ ದಾಖಲಿಸಿದ್ದಾರೆ.

ಕುಂದಾಪುರದಲ್ಲಿ ನಡೆಯಬೇಕಿದ್ದ ಸರ್ಕಾರಿ ತಾಲೂಕು ಆಸ್ಪತ್ರೆ ಉದ್ಘಾಟನೆಗೆ ತೆರಳುತ್ತಿದ್ದ ಸಚಿವರು ಕಾರ್ಯಕ್ರಮಕ್ಕೆ ಹೋಗುವುದನ್ನು ಬಿಟ್ಟು ಗಾಯಾಳುಗಳ ನೆರವಿಗೆ ಬಂದಿದ್ದಾರೆ. ಆಸ್ಪತ್ರೆಗೆ ಸೇರಿಸಿದ ನಂತರ ಕುಂದಾಪುರಕ್ಕೆ ತೆರಳಿದರು. ಇತ್ತೀಚೆಗೆ ಚಾಮರಾಜನಗರದಲ್ಲಿ ಲಘು ಹೃದಯಾಘಾತವಾಗಿ ರಸ್ತೆಯಲ್ಲಿ ಬಿದ್ದು ಒದ್ದಾಡುತ್ತಿದ್ದ ಮಹಿಳೆಯನ್ನು ತಮ್ಮ ಕಾರಿನಲ್ಲೇ ಆಸ್ಪತ್ರೆಗೆ ಕರೆದೊಯ್ದಿದ್ದ ಘಟನೆಯನ್ನೂ ಇಲ್ಲಿ ನೆನಪಿಸಿಕೊಳ್ಳಬಹುದು.












Click it and Unblock the Notifications